ಆ್ಯಪ್ನಗರ

ಹೋಳಿ ಹಬ್ಬ ಬಂತು, ಲಾಂಗ್‌ ಟ್ರಿಪ್‌ ಹೋಗೋಣ ಅಂದ್ರೆ ವಿಮಾನ ಟಿಕೆಟ್‌ ದರ ಶೇ.100ರಷ್ಟು ಏರಿಕೆಯಾಗಿದೆ!

Vijaya Karnataka Web 17 Mar 2019, 10:33 am
ಹೊಸದಿಲ್ಲಿ: ಹೋಳಿ ಹಬ್ಬದ ಸೀಸನ್‌, 'ಬೋಯಿಂಗ್‌ 737 ಮ್ಯಾಕ್ಸ್‌ 8' ವಿಮಾನಗಳ ಹಾರಾಟಕ್ಕೆ ತಡೆ ಮತ್ತಿತರ ಕಾರಣಗಳಿಂದ ಏರ್‌ಲೈನ್ಸ್‌ಗಳು ತಮ್ಮ ಕೆಲವು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಕಡೆಯ ಕ್ಷಣದ ಬುಕಿಂಗ್‌ನಲ್ಲಿ ವಿಮಾನ ಪ್ರಯಾಣ ದರಗಳು ಶೇ.100ರ ತನಕ ಏರಿಕೆಯಾಗಿವೆ.
Vijaya Karnataka Web spiceJet plane


''ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಇನ್ನಷ್ಟು ದಿನ ಇಂಥದ್ದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ಕೊನೆ ಕ್ಷಣದ ತನಕ ಕಾಯದೇ ಮುಂಗಡವಾಗಿ ಟಿಕೆಟ್‌ಗಳನ್ನು ಬುಕ್‌ ಮಾಡುವುದು ಒಳ್ಳೆಯದು,'' ಎಂದು ಉದ್ಯಮ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

''ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ನಾನಾ ಕಾರಣಗಳಿಂದ ವಿಮಾನಗಳ ಸಂಖ್ಯೆ ಇಳಿಕೆಯಾಗಿದೆ. ಹೀಗಾಗಿ, ರಾತ್ರಿ ಬೆಳಗಾಗುವ ಹೊತ್ತಿಗೆ ವಿಮಾನ ಪ್ರಯಾಣ ದರಗಳು ಜಿಗಿದಿವೆ. ಕಳೆದ ಬುಧವಾರ ದಿಲ್ಲಿ-ಮುಂಬಯಿ, ಮುಂಬಯಿ-ಚೆನ್ನೈ, ಮುಂಬಯಿ-ಕೋಲ್ಕೊತಾ ಮತ್ತು ಮುಂಬಯಿ-ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ಮಾರ್ಗಗಳಲ್ಲಿ ಕಡೇ ಕ್ಷಣದ ಬುಕಿಂಗ್‌ನಲ್ಲಿ ಪ್ರಯಾಣ ದರವು ಶೇ.100ಕ್ಕೂ ಹೆಚ್ಚಿನದಾಗಿ ಏರಿಕೆಯಾಗಿದೆ,'' ಎಂದು ಇಕ್ಸಿಗೊ ಸಹ-ಸಂಸ್ಥಾಪಕ ಮತ್ತು ಸಿಇಒ ಅಲೋಕೆ ಬಾಜ್‌ಪೈ ಹೇಳಿದ್ದಾರೆ.

ಕಳೆದ ವರ್ಷ ಮುಂಬಯಿ-ಚೆನ್ನೈ ನಡುವಿನ ಇಕ್ಸಿಗೊ ವಿಮಾನದ ಪ್ರಯಾಣ ದರ ಈ ಅವಧಿಯಲ್ಲಿ 5,369 ರೂ. ಇದ್ದರೆ, ಈಗ 26,073 ರೂ.ಗೆ ಏರಿಕೆಯಾಗಿದೆ. ಒಟ್ಟಾರೆ, ಎಲ್ಲ ಟಿಕೆಟ್‌ಗಳು ಶೇ.20ರಷ್ಟು ಏರಿಕೆಯಾಗಿವೆ. ಆಯ್ದ ಮಾರ್ಗಗಳಲ್ಲಿ ಟಿಕೆಟ್‌ ದರ ಶೇ.100ರ ತನಕ ಏರಿಕೆಯಾಗಿದೆ.

''ಪ್ರಮುಖವಾಗಿ ಹೋಳಿ, ಶಾಲಾ ಮಕ್ಕಳ ರಜೆ ಅವಧಿ ಸೇರಿದಂತೆ ಇತರೆ ಕಾರಣಗಳಿಂದ ವಿಮಾನ ಪ್ರಯಾಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. ದುಬಾರಿ ಟಿಕೆಟ್‌ ದರಗಳು ಮುಂದುವರಿಯಲಿವೆ,'' ಎನ್ನುವುದು ಯಾತ್ರಾ ಡಾಟ್‌ ಕಾಮ್‌ ಸಿಒಒ ಶರತ್‌ ಢಲ್‌ ಅಭಿಪ್ರಾಯ.

ಇತ್ತೀಚೆಗೆ ಅಡಿಸ್‌ ಅಬಾಬದಲ್ಲಿ ಇಥಿಯೋಪಿಯಾ ವಿಮಾನ ಪತನಗೊಂಡ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ 'ಬೋಯಿಂಗ್‌ 737 ಮ್ಯಾಕ್ಸ್‌ 8' ವಿಮಾನ ಹಾರಾಟವನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ಪರಿಣಾಮ, ಸ್ಪೈಸ್‌ಜೆಟ್‌ ಮತ್ತು ಜೆಟ್‌ ಏರ್‌ವೇಸ್‌ ಮತ್ತಿತರ ಕಂಪನಿಗಳಿಗೆ ತೊಡಕಾಗಿದೆ. ಭಾರತದಲ್ಲಿ ಸ್ಪೈಸ್‌ ಇಂಥ 12 ವಿಮಾನಗಳನ್ನು, ಜೆಟ್‌ 5 ವಿಮಾನಗಳನ್ನು ಬಳಸುತ್ತಿತ್ತು. ಅವುಗಳ ಸಂಚಾರವನ್ನು ಈಗಾಗಲೇ ರದ್ದು ಮಾಡಲಾಗಿದೆ. ಬುಧವಾರ ಒಂದೇ ದಿನ ಸ್ಪೈಸ್‌ಜೆಟ್‌ 14 ವಿಮಾನಗಳ ಹಾರಾಟವನ್ನು ರದ್ದು ಮಾಡಿದೆ. ಗುರುವಾರ ಈ ಸಂಖ್ಯೆ 32 ಅನ್ನು ಮುಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ