ಆ್ಯಪ್ನಗರ

'ಸಂಧಾನದ ಮೇಜಿಗೆ ಬರಲು ಆರ್‌ಬಿಐ ನಿರಾಕರಿಸಿದ್ದೇ ಕಾನೂನು ಕ್ರಮಕ್ಕೆ ಕಾರಣವಾಯ್ತು'

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ನಡುವಣ ಕದನ... ಏನು ಎತ್ತ? ಇಲ್ಲಿದೆ ಸಂಪೂರ್ಣ ವಿವರ

Vijaya Karnataka Web 2 Nov 2018, 5:01 pm
ಹೊಸದಿಲ್ಲಿ: ಭಿನ್ನಮತಗಳ ವಿಚಾರದಲ್ಲಿ ಸರಕಾರದ ಜತೆ ಚರ್ಚಿಸಲು ಆರ್‌ಬಿಐ ಗವರ್ನರ್‌ ಊರ್ಜಿತ್ ಪಟೇಲ್‌ ಅವರು ನಿರಾಕರಿಸಿದ್ದೇ ಸೆಕ್ಷನ್‌ 7ರ ಬಳಕೆಗೆ ಕಾರಣ ಎಂದು ಉನ್ನತ ಮೂಲಗಳು ತಿಳಿಸಿವೆ.
Vijaya Karnataka Web Urjit Patel


'ಅವರು ಭಯಭೀತರಾಗಿದ್ದರು. ಬ್ಯಾಂಕರ್‌ಗಳು, ಉದ್ಯಮ ಮತ್ತು ಮಾರುಕಟ್ಟೆ ಪ್ರಮುಖರಿಗೆ ಆತಂಕವಿರುವ ವಿಷಯಗಳ ಕುರಿತು ಚರ್ಚಿಸಲೂ ಅವರು ಮುಂದಾಗಲಿಲ್ಲ. ಹೀಗಾಗಿ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ. ಕೇಂದ್ರ ಬ್ಯಾಂಕನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡಲು ಇದ್ದ ಏಕೈಕ ಮಾರ್ಗ ಅದಾಗಿತ್ತು' ಎಂದು ಈ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇರುವ ವ್ಯಕ್ತಿಯೊಬ್ಬರು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಆರ್‌ಬಿಐ ಮತ್ತು ಕೇಂದ್ರ ಸರಕಾರದ ನಡುವಣ ಬಿಕ್ಕಟ್ಟಿನ ಕುರಿತು ಟೈಮ್ಸ್‌ ಆಫ್‌ ಇಂಡಿಯಾ ಬಳಗ ಸೋಮವಾರವೇ ವಿಶೇಷ ವರದಿ ಪ್ರಕಟಿಸಿತ್ತು. 'ವಿತ್ತ ಸಚಿವರು ಮತ್ತು ಆರ್‌ಬಿಐ ಗವರ್ನರ್‌ ಮುಖಕ್ಕೆ ಮುಖ ಕೊಟ್ಟು ಮಾತನಾಡಲಾಗದಷ್ಟು ಸಂಬಂಧ ಹಳಸಿತ್ತು. ಅಲ್ಲದೆ ಪರಸ್ಪರ ಸಂವಹನವೂ ಸಂಪೂರ್ಣ ಕಡಿದುಹೋಗಿತ್ತು.

ಏನಿದು 'ಸೆಕ್ಷನ್ 7'?: ಆರ್‌ಬಿಐ ವಿರುದ್ಧ ಬಳಸಲಿರುವ ಕಟ್ಟಕಡೆಯ ಅಸ್ತ್ರ

ಸರಕಾರ 'ಒಂದು ಸಂಧಾನಾತ್ಮಕ ಪ್ರಕ್ರಿಯೆ ಆರಂಭಿಸಿದೆ' ಎಂದು ಮಂಗಳವಾರವೂ ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿತ್ತು. ಇತ್ತೀಚೆಗೆ ಆರ್‌ಬಿಐಗೆ ಬರೆದ ಮೂರು ಪತ್ರಗಳಲ್ಲಿ ಸರಕಾರ ಸೆಕ್ಷನ್‌ 7ನ್ನು ಉಲ್ಲೇಖಿಸಿತ್ತು; ಆದರೆ ವಾಸ್ತವದಲ್ಲಿ ಅದನ್ನು ಜಾರಿಗೊಳಿಸಿರಲಿಲ್ಲ. ಆರ್‌ಬಿಐ ಒಪ್ಪದೇ ಹೋದಲ್ಲಿ ಸೆಕ್ಷನ್‌ 7 ಜಾರಿಯಾಗುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

1934ರಿಂದೀಚೆಗೆ ಆರ್‌ಬಿಐನ 83 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಯಾವುದೇ ಸರಕಾರ ಸೆಕ್ಷನ್‌ 7ನ್ನು ಜಾರಿಗೊಳಿಸಿರಲಿಲ್ಲ.

ಬುಧವಾರದಂದು ಸರಕಾರ ಅತ್ಯಂತ ಎಚ್ಚರಿಕೆಯ ಪದಗಳನ್ನು ಬಳಸಿ ನೀಡಿದ ಹೇಳಿಕೆಯಲ್ಲಿ, 'ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಭಾರತದ ಆರ್ಥಿಕತೆಯ ಅಗತ್ಯಗಳಿಗೆ ಅನುಸಾರ' ಆರ್‌ಬಿಐ ಕೆಲಸ ಮಾಡಬೇಕು ಎಂದು ಹೇಳಿತ್ತು.

ಗವರ್ನರ್‌ ಒಬ್ಬರ ಅಭಿಪ್ರಾಯಕ್ಕೆ ಬದಲಾಗಿ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಾಮೂಹಿಕ ಅಭಿಪ್ರಾಯದಂತೆ ಕೆಲಸ ಮಾಡಬೇಕು ಎಂದು ಸರಕಾರ ಬಯಸಿತ್ತು. ಆದರೆ ಗವರ್ನರ್‌ ಅದಕ್ಕೆ ಸೊಪ್ಪು ಹಾಕಲಿಲ್ಲ. ಆರ್‌ಬಿಐನ 18 ಮಂದಿ ನಿರ್ದೇಶಕರ ಪೈಕಿ 11 ಮಂದಿ ಸ್ವತಂತ್ರವಾಗಿದ್ದು, ಐವರು ಆರ್‌ಬಿಐನ ಅಧಿಕಾರಿಗಳಾಗಿದ್ದಾರೆ. ಇನ್ನಿಬ್ಬರು ವಿತ್ತ ಸಚಿವಾಲಯದ ಅಧಿಕಾರಿಗಳು ನಿರ್ದೇಶಕರಾಗಿದ್ದಾರೆ.

ಸರಕಾರ-ಆರ್‌ಬಿಐ ಹಗ್ಗಜಗ್ಗಾಟ: ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಾಧ್ಯತೆ

ಕಳೆದ ವಾರ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೈಗೊಂಡ ನಾಲ್ಕು ಪ್ರಮುಖ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ನಿರ್ಧರಿಸಲಾಗಿತ್ತು. ಹಾಗಿದ್ದರೂ ಆರ್‌ಬಿಐ, ಬಹುಮತದ ತೀರ್ಮಾನವನ್ನು ಜಾರಿಗೊಳಿಸಲು ಹಿಂದೇಟು ಹಾಕಿತ್ತು.

ಬ್ಯಾಂಕ್‌ಗಳ ಸಾಲ ಸಂಕಷ್ಟಕ್ಕೆ ರಿಸರ್ವ್‌ ಬ್ಯಾಂಕ್‌ ಕಾರಣ: ಅರುಣ್ ಜೇಟ್ಲಿ

ನಿರ್ದೇಶಕ ಮಂಡಳಿಯ ಸುದೀರ್ಘ ಸಭೆಯಲ್ಲಿ 20 ಅಂಶಗಳ ಕಾರ್ಯಸೂಚಿ ಕುರಿತು ಚರ್ಚಿಸಲು ಉದ್ದೇಶಿಸಲಾಗಿತ್ತು. ಆದರೆ ಆರ್‌ಬಿಐ ಗವರ್ನರ್‌ ಆ ವಿಷಯಗಳ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದಿನ ಸಭೆಗೆ ಮುಂದೂಡಲು ಸಲಹೆ ನೀಡಿದರು. ದೀಪಾವಳಿಯ ಬಳಿಕ ನಡೆಯುವ ಈ ಸಭೆಗೆ ನಿರ್ದಿಷ್ಟ ದಿನಾಂಕ ಪ್ರಕಟಿಸಿಲ್ಲ. ಅಷ್ಟು ದಿನಗಳೊಳಗೆ ಭಿನ್ನಮತಗಳಿಗೆ ತೇಪೆ ಹಾಕುವ ಪ್ರಯತ್ನ ಇದಾಗಿತ್ತು ಎನ್ನಲಾಗಿದೆ.

ಆದರೆ ಕೊನೆಗೆ, ಸ್ವತಂತ್ರ ನಿರ್ದೇಶಕರ ಪೈಕಿ ಹಲವರು ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಆರ್‌ಬಿಐ ನವೆಂಬರ್ 19ರಂದು ಸಭೆ ನಡೆಸುವುದಾಗಿ ಪ್ರಕಟಿಸಿತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ