ಆ್ಯಪ್ನಗರ

ಎನ್‌ಪಿಎ: 1.80 ಲಕ್ಷ ಕೋಟಿ ರೂ. ವಸೂಲಿ ಸಂಭವ

ಐಬಿಸಿ ಪರಿಣಾಮ ಬ್ಯಾಂಕ್‌ಗಳ ಸಾಲ ವಸೂಲಿಗೆ ಅನುಕೂಲ | ಎನ್‌ಪಿಎ ವಸೂಲಿಯ ಗುರಿ ಮುಟ್ಟಲಿದೆ ಸರಕಾರ ಪಿಟಿಐ ಹೊಸದಿಲ್ಲಿ

Vijaya Karnataka 29 Oct 2018, 8:08 am
ಹೊಸದಿಲ್ಲಿ: ನೂತನ ದಿವಾಳಿತನ ಸಂಹಿತೆ(ಐಬಿಸಿ) ಕಾಯ್ದೆ ಮತ್ತು ಇತರೆ ಸಾಲ ವಸೂಲಾತಿ ಕ್ರಮಗಳು ಸಕಾರಾತ್ಮಕವಾಗಿದೆ. ಕೇಂದ್ರ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ 1.80 ಲಕ್ಷ ಕೋಟಿ ರೂಪಾಯಿಗೂ ಅಧಿಕ ಕೆಟ್ಟ ಸಾಲಗಳನ್ನು ವಸೂಲಿ ಮಾಡುವ ನಿರೀಕ್ಷೆ ಇದೆ. ವಸೂಲಾಗದ ಸಾಲಗಳ(ಎನ್‌ಪಿಎ) ವಸೂಲಾತಿ ಗುರಿಯನ್ನು ಸರಕಾರ ಈ ವರ್ಷ ಮುಟ್ಟಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Vijaya Karnataka Web Money


ಎನ್‌ಪಿಎ ಹೊರೆಯಿಂದ ಬ್ಯಾಂಕ್‌ಗಳು ತತ್ತರಿಸಿದ್ದು, ಅವುಗಳ ವಸೂಲಿಗೆ ನಾನಾ ಪ್ರಯತ್ನಗಳು ನಡೆದಿವೆ. ಇದಕ್ಕೆ ಪೂರಕವಾಗಿ ದಿವಾಳಿ ಕಾಯ್ದೆಯನ್ನು ಸರಕಾರ ಜಾರಿಗೊಳಿಸಿದ್ದು, ಸಾಲ ವಸೂಲಿ ಪ್ರಕ್ರಿಯೆ ಚುರುಕುಗೊಂಡಿದೆ. ದಿವಾಳಿ ಕಾಯ್ದೆಯನ್ನು ದೊಡ್ಡ ಸಾಲಗಾರರ ಮೇಲೆ ಪ್ರಯೋಗಿಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಸ್ಸಾರ್‌ ಸ್ಟೀಲ್‌ ಮತ್ತು ಭೂಷಣ್‌ ಪವರ್‌ ಆ್ಯಂಡ್‌ ಸ್ಟೀಲ್‌ ವಿರುದ್ಧದ ಸಾಲ ವಸೂಲಾತಿ ಪ್ರಕ್ರಿಯೆಗಳಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಎಸ್ಸಾರ್‌ ಸ್ಟೀಲ್‌ ಪ್ರಕರಣದಲ್ಲಿನ 49,000 ಕೋಟಿ ರೂ. ಸಾಲದಲ್ಲಿ ಶೇ.86ರಷ್ಟು ಸಾಲ ವಸೂಲಿಯಾಗುವ ನಿರೀಕ್ಷೆಯನ್ನು ಬ್ಯಾಂಕ್‌ಗಳು ಹೊಂದಿವೆ. ಬಿನಾನಿ ಸೀಮೆಂಟ್‌ ಮತ್ತು ಜೇಪಿ ಇನ್‌ಫ್ರಾಟೆಕ್‌ ಕಂಪನಿಗಳ ವಿರುದ್ಧವೂ ಪ್ರಕ್ರಿಯೆ ಜಾರಿಯಲ್ಲಿದೆ.

ಬೃಹತ್‌ ಪ್ರಮಾಣದ 12 ಎನ್‌ಪಿಎ ಪ್ರಕರಣಗಳನ್ನು ದಿವಾಳಿ ಪ್ರಕ್ರಿಯೆಗಾಗಿ ಆರ್‌ಬಿಐ ತನ್ನ ಮೊದಲ ಪಟ್ಟಿಯಲ್ಲಿ ಶಿಫಾರಸು ಮಾಡಿತ್ತು. 1 ಲಕ್ಷ ಕೋಟಿ ರೂ.ಗೂ ಅಧಿಕ ಹಣ ವಾಪಸ್‌ ಬರುವ ವಿಶ್ವಾಸವನ್ನು ಬ್ಯಾಂಕ್‌ಗಳು ಹೊಂದಿವೆ. ತಲಾ 5000 ಕೋಟಿ ರೂ.ಗೂ ಅಧಿಕ ಸುಸ್ತಿಸಾಲವನ್ನು ಹೊಂದಿದ್ದ 12 ಖಾತೆಗಳನ್ನು ಆರ್‌ಬಿಐ ಗುರ್ತಿಸಿತ್ತು. ಬ್ಯಾಂಕ್‌ಗಳ ಒಟ್ಟಾರೆ ಎನ್‌ಪಿಎಯಲ್ಲಿ ಇದರ ಭಾಗವೇ ಶೇ.25ರಷ್ಟಿದೆ.

ಸಾಲ ವಸೂಲಿಗೆ ನಡೆಸಲಾಗುತ್ತಿರುವ ಬಿಡ್ಡಿಂಗ್‌ನಲ್ಲಿ ಭೂಷಣ್‌ ಪವರ್‌ ಆ್ಯಂಡ್‌ ಸ್ಟೀಲ್‌ಗೆ ಜೆಎಸ್‌ಡಬ್ಲ್ಯು ಸ್ಟೀಲ್‌ 11,000 ಕೋಟಿ ರೂ. ಬಿಡ್‌, ಟಾಟಾ ಸ್ಟೀಲ್‌ನಿಂದ 17,000 ಕೋಟಿ ರೂ., ಲಿಬರ್ಟಿ ಹೌಸ್‌ನಿಂದ 18,500 ಕೋಟಿ ರೂ. ಬಿಡ್‌ಗಳು ಬಂದಿವೆ. ಈಗ ಜೆಎಸ್‌ಡಬ್ಲ್ಯು ತನ್ನ ಬಿಡ್‌ ಅನ್ನು 19,700 ರೂ.ಗೆ ಪರಿಷ್ಕರಿಸಿದೆ.

ದಿವಾಳಿ ಕಾನೂನು ಜಾರಿಯಿಂದ ಆಗಿರುವ ಯಶಸ್ಸಿನ ಬಗ್ಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇತ್ತೀಚೆಗೆ ತೃಪ್ತಿ ವ್ಯಕ್ತಪಡಿಸಿದ್ದು, ''ದೇಶದಲ್ಲಿ ಹಣಕಾಸು ರಂಗದಲ್ಲಿನ ಬದಲಾವಣೆಗಳ ಬಗ್ಗೆ ಜನರಿಗೆ ಈಗ ಅರಿವಾಗಿದೆ. ಸುಸ್ತಿದಾರರಿಗೆ ಸಾಲ ವಾಪಸ್‌ ಮಾಡದೇ ಬೇರೆದಾರಿ ಇಲ್ಲದಾಗಿದೆ,'' ಎಂದಿದ್ದರು.

2018-19ರ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳು 36,551 ಕೋಟಿ ರೂ. ವಸೂಲಿ ಮಾಡಿವೆ. 2017-18ರಲ್ಲಿ ಬ್ಯಾಂಕ್‌ಗಳು 74,562 ಕೋಟಿ ರೂ. ಸಾಲವನ್ನು ವಸೂಲಿ ಮಾಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ