ಆ್ಯಪ್ನಗರ

ಆರ್‌ಬಿಐ ಮಂಡಳಿಗೆ ಎಸ್‌.ಗುರುಮೂರ್ತಿ, ಸತೀಶ್‌ ಮರಾಠೆ

ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಡಳಿಯ ಅರೆಕಾಲಿಕ ನಿರ್ದೇಶಕರಾಗಿ ಪತ್ರಕರ್ತ ಎಸ್‌.ಗುರುಮೂರ್ತಿ ಮತ್ತು ಸತೀಶ್‌ ಕಾಶಿನಾಥ್‌ ಮರಾಠೆ ಅವರನ್ನು ನೇಮಕ ಮಾಡಲಾಗಿದೆ. ಈ ಇಬ್ಬರನ್ನು ಸಂಪುಟದ ನೇಮಕ ಸಮಿತಿಯ ಅನುಮೋದನೆ ಬಳಿಕ ಕೇಂದ್ರ ಸರಕಾರ ನೇಮಕ ಮಾಡಿದೆ.

Vijaya Karnataka 9 Aug 2018, 11:00 am
ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಡಳಿಯ ಅರೆಕಾಲಿಕ ನಿರ್ದೇಶಕರಾಗಿ ಪತ್ರಕರ್ತ ಎಸ್‌.ಗುರುಮೂರ್ತಿ ಮತ್ತು ಸತೀಶ್‌ ಕಾಶಿನಾಥ್‌ ಮರಾಠೆ ಅವರನ್ನು ನೇಮಕ ಮಾಡಲಾಗಿದೆ. ಈ ಇಬ್ಬರನ್ನು ಸಂಪುಟದ ನೇಮಕ ಸಮಿತಿಯ ಅನುಮೋದನೆ ಬಳಿಕ ಕೇಂದ್ರ ಸರಕಾರ ನೇಮಕ ಮಾಡಿದೆ.
Vijaya Karnataka Web gurumurthy sathish


ನಾಲ್ಕು ವರ್ಷಗಳ ಅಧಿಕಾರಾವಧಿಗೆ ನೇಮಕ ನಡೆದಿದೆ. ಇಬ್ಬರ ನೇಮಕದಿಂದ ಆರ್‌ಬಿಐ ಮಂಡಳಿಯ ನಿರ್ದೇಶಕರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಇದು ಮಂಡಳಿಗೆ ಇರುವ ಗರಿಷ್ಠ ನಿರ್ದೇಶಕರ ಮಿತಿ. ಜತೆಗೆ ಇಬ್ಬರು ಸರಕಾರಿ ಅಧಿಕಾರಿಗಳೂ ಮಂಡಳಿಯಲ್ಲಿ ಇದ್ದಾರೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಈ ನೇಮಕಗಳಿಗೆ ಪ್ರಸ್ತಾವನೆ ಬಂದಿತ್ತು. ಹೊಸ ನಿರ್ದೇಶಕರನ್ನು ಒಳಗೊಂಡ ಆರ್‌ಬಿಐ ಮಂಡಳಿ ಗುರುವಾರ ಸಭೆ ನಡೆಸಲಿದೆ.

ಆರ್‌ಬಿಐ ವಿರುದ್ಧ ಟೀಕಾ ಪ್ರಹಾರ

ಅರ್ಥಶಾಸ್ತ್ರಜ್ಞರಾಗಿ ಗುರ್ತಿಸಿಕೊಂಡಿರುವ ಗುರುಮೂರ್ತಿ ಅವರು, ಆರೆಸ್ಸೆಸ್‌ ಜತೆ ಸಹಯೋಗ ಹೊಂದಿರುವ ಸ್ವದೇಶಿ ಜಾಗರಣ್‌ ಮಂಚ್‌ನಲ್ಲಿ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾರ್ಟರ್ಡ್‌ ಅಕೌಂಟೆಂಟ್‌ ಮತ್ತು ಆರ್ಥಿಕ -ರಾಜಕೀಯ ವಿಷಯಗಳ ಅಂಕಣಕಾರರೂ ಹೌದು. ತಮಿಳು ರಾಜಕೀಯ ವಾರಪತ್ರಿಕೆ 'ತುಘಲಕ್‌'ನ ಸಂಪಾದಕರೂ ಆಗಿದ್ದಾರೆ. ಆರ್‌ಬಿಐ ವಿರುದ್ಧ ಕಳೆದ ವರ್ಷ ಟೀಕಾ ಪ್ರಹಾರ ಮಾಡಿದ್ದ ಗುರುಮೂರ್ತಿ, ''ಭಾರತದ ವ್ಯವಹಾರಗಳನ್ನು ಆರ್‌ಬಿಐ ನಾಶಪಡಿಸುತ್ತಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಕೇಂದ್ರದ ಮೇಲೆ ಒತ್ತಡ ಏರುತ್ತಿದೆ'' ಎಂದು ದೂರಿದ್ದರು. ನೋಟು ಅಮಾನ್ಯದ ನಿರ್ಧಾರವನ್ನು ಆ ಸಂದರ್ಭದಲ್ಲಿ ಬಲವಾಗಿ ಸಮರ್ಥಿಸಿದ್ದರು.

ದೇಶದ ಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಸಹಕಾರ ಭಾರತಿ ಎನ್‌ಜಿಒದ ಮುಖ್ಯಸ್ಥರಾದ ಸತೀಶ್‌ ಕಾಶಿನಾಥ್‌ ಮರಾಠೆ ಅವರು ಬ್ಯಾಂಕ್‌ ಆಫ್‌ ಇಂಡಿಯಾ, ಯುನೈಟೆಡ್‌ ವೆಸ್ಟರ್ನ್‌ ಬ್ಯಾಂಕ್‌, ಜನಕಲ್ಯಾಣ್‌ ಸಹಕಾರಿ ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಎಬಿವಿಪಿಯಲ್ಲಿ ಅವರು ತೊಡಗಿಸಿಕೊಂಡಿದ್ದರು.

''ನಾನು ಇದುವರೆಗೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಯ ನಿರ್ದೇಶಕ ಸ್ಥಾನವನ್ನು ಒಪ್ಪಿಕೊಂಡಿರಲಿಲ್ಲ. ಮುಕ್ತವಾಗಿ ಮಾತನಾಡಲು ನಾನು ಇಷ್ಟಪಡುತ್ತೇನೆ. ಆದರೆ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ನಾನು ಆರ್‌ಬಿಐನಲ್ಲಿರಬೇಕು ಎನ್ನುವ ಒತ್ತಡ ಸೃಷ್ಟಿಯಾಗಿದ್ದು, ಸರಕಾರದ ಆಹ್ವಾನವನ್ನು ಸ್ವೀಕರಿಸಿದ್ದೇನೆ.

ಇಂಥ ನೇಮಕಕ್ಕೆ ಅವಕಾಶ ಇದೆಯೇ?

ಆರ್‌ಬಿಐ ಮಂಡಳಿಗೆ ಅರೆಕಾಲಿಕ ನಿರ್ದೇಶಕರನ್ನು ನೇಮಕ ಮಾಡಲು ಅವಕಾಶವಿದೆ. ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮಿಗಳನ್ನು ಇತ್ತೀಚಿನ ವರ್ಷಗಳಲ್ಲಿ ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಟಾಟಾ ಸನ್ಸ್‌ನ ಎನ್‌.ಚಂದ್ರಶೇಖರನ್‌, ಮಹೀಂದ್ರಾ ಗ್ರೂಪ್‌ನ ಭಾರತ್‌ ದೋಶಿ, ವಿತ್ತತಜ್ಞ ಅಶೋಕ್‌ ಗುಲಾಟಿಯನ್ನು ನೇಮಕ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ