ಆ್ಯಪ್ನಗರ

ಸಿಹಿ ಸುದ್ದಿಯ ನಿರೀಕ್ಷೆಯಲ್ಲಿ ಉದ್ಯೋಗಿಗಳು, ತೆರಿಗೆ ಕಡಿತಕ್ಕೆ ಹಣಕಾಸು ಇಲಾಖೆಗೆ ಶಿಫಾರಸ್ಸು

ವಾರ್ಷಿಕ 5-10 ಲಕ್ಷ ರೂಪಾಯಿ ಆದಾಯ ಪಡೆಯುವ ವ್ಯಕ್ತಿಗಳ ತೆರಿಗೆಯನ್ನು ಶೇಕಡಾ 10ಕ್ಕೆ ಮತ್ತು ರೂ. 10 ರಿಂದ 20 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇಕಡಾ 20ಕ್ಕೆ ಇಳಿಕೆ ಮಾಡುವಂತೆ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದೆ.

Vijaya Karnataka Web 29 Aug 2019, 11:42 am
ನವದೆಹಲಿ: ಅಂದುಕೊಂಡಂತೆ ನಡೆದರೆ ತಿಂಗಳ ಸಂಬಳ ಎಣಿಸುತ್ತಿರುವ ಉದ್ಯೋಗಿಗಳು ಒಂದಷ್ಟು ತೆರಿಗೆ ವಿನಾಯಿತಿ ಪಡೆಯುವ ಸಾಧ್ಯತೆ ಇದೆ. ಆದಾಯ ತೆರಿಗೆಯಲ್ಲಿ ಒಂದಷ್ಟು ಇಳಿಕೆ ಮಾಡುವಂತೆ ಉನ್ನತ ಮಟ್ಟದ ತೆರಿಗೆ ಸಮಿತಿ ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಿದೆ.
Vijaya Karnataka Web sitharaman


ವಾರ್ಷಿಕ 5-10 ಲಕ್ಷ ರೂಪಾಯಿ ಆದಾಯ ಪಡೆಯುವ ವ್ಯಕ್ತಿಗಳ ತೆರಿಗೆಯನ್ನು ಶೇಕಡಾ 10ಕ್ಕೆ ಮತ್ತು ರೂ. 10 ರಿಂದ 20 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇಕಡಾ 20ಕ್ಕೆ ಇಳಿಕೆ ಮಾಡುವಂತೆ ಈ ಸಮಿತಿ ಶಿಫಾರಸ್ಸು ಮಾಡಿದೆ.

ಸದ್ಯ 2.5 ರಿಂದ 5 ಲಕ್ಷದವರೆಗಿನ ಆದಾಯ ಇರುವವರು ಶೇಕಡಾ 5ರಷ್ಟು ತೆರಿಗೆ ಪಾವತಿಸುತ್ತಿದ್ದರೆ, 5 ರಿಂದ 10 ಲಕ್ಷ ಆದಾಯ ಇರುವವರಿಗೆ ಶೇಕಡಾ 20ರಷ್ಟು ತೆರಿಗೆ ಇದೆ. ರೂ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಶೇ. 30ರಷ್ಟು ತೆರಿಗೆ ಇದೆ.

ಸದ್ಯ ಈ ಉನ್ನತ ಮಟ್ಟದ ಸಮಿತಿ ಒಟ್ಟು 5 ರೀತಿಯ ತೆರಿಗೆಗಳಿಗೆ ಶಿಫಾರಸ್ಸು ಮಾಡಿದೆ. ಶೇ. 5, 10, 20, 30 ಮತ್ತು 35ರಂತೆ ತೆರಿಗೆ ಇಡಲು ಸೂಚಿಸಿದೆ. ಸದ್ಯ ಕೇವಲ ಶೇ. 5, 20 ಮತ್ತು 30ರ ದರದಲ್ಲಿ ತೆರಿಗೆಯಿದೆ.

ಸದ್ಯ 5 ಲಕ್ಷ ರೂಪಾಯಿವರೆಗೆ ತೆರಿಗೆ ಹೊಂದಿರುವವರು ತಾವು ಕಟ್ಟಿದ ಆದಾಯ ತೆರಿಗೆಯನ್ನು ವಾಪಸ್‌ ಪಡೆದುಕೊಳ್ಳಲು ಅವಕಾಶವಿದೆ. ಈ ಘೋಷಣೆ 2019ರ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಾಡಿದ್ದರು.


ಇದೀಗ ಕೇಂದ್ರೀಯ ನೇರ ತೆರಿಗೆ ಮಂಡಳಿ ಸದಸ್ಯ ಅಖಿಲೇಶ್‌ ರಂಜನ್‌ ನೇತೃತ್ವದ ಉನ್ನತ ಮಟ್ಟದ ಸಮಿತಿ ತೆರಿಗೆಗಳನ್ನು ಮತ್ತಷ್ಟು ಕಡಿತಗೊಳಿಸುವಂತೆ ವರದಿ ತಯಾರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರಿಗೆ ಸಲ್ಲಿಸಿದೆ. ಆಗಸ್ಟ್‌ 19ರಂದೇ ಈ ವರದಿಯನ್ನು ಸಲ್ಲಿಸಲಾಗಿದೆ ಆದರೆ ಇದನ್ನು ಇನ್ನೂ ಇಲಾಖೆ ಬಹಿರಂಗಗೊಳಿಸಿಲ್ಲ.

ರೂ. 20 ಲಕ್ಷದಿಂದ 2 ಕೋಟಿವರೆಗೆ ಆದಾಯ ಇರುವವರಿಗೆ ಹಾಲಿ ಇರುವ ಶೇಕಡಾ 30ರ ತೆರಿಗೆಯನ್ನೇ ಮುಂದುವರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದ್ದರೆ, ವಾರ್ಷಿಕ 2 ಕೋಟಿಗೂ ಹೆಚ್ಚು ಆದಾಯ ಇರುವವರಿಗೆ ಶೇಕಡಾ 35ರಷ್ಟು ತೆರಿಗೆ ವಿಧಿಸುವಂತೆ ಸೂಚಿಸಿದೆ.

ಜನರ ಜೇಬಿನಲ್ಲಿ ಹೆಚ್ಚಿನ ಹಣ ಇರುವಂತೆ ಮಾಡಿ, ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಮಾಡುವ ಏಕೈಕ ಉದ್ದೇಶದಿಂದ ಈ ಶಿಫಾರಸ್ಸುಗಳನ್ನು ಮಾಡಲಾಗಿದೆ. ಸರ್‌ಚಾರ್ಜ್‌ಗಳನ್ನೂ ತೆಗೆದು ಹಾಕುವಂತೆ ಸಮಿತಿ ಇದೇ ವರದಿಯಲ್ಲಿ ಶಿಫಾರಾಸ್ಸು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ