ಆ್ಯಪ್ನಗರ

ಭಾರತ ಆರ್ಥಿಕ ಹಿಂಜರಿತದಲ್ಲಿದೆ - ಆರ್‌ಬಿಐನ 'ನೌಕಾಸ್ಟ್‌' ವರದಿ

ಏಪ್ರಿಲ್ - ಜೂನ್‌ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ. 24ರಷ್ಟು ಕುಸಿದಿತ್ತು. ಇದೀಗ ಸೆಪ್ಟೆಂಬರ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 8.6ರಷ್ಟು ಕುಸಿಯಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ‘ನೌಕಾಸ್ಟ್‌’ ವರದಿಯಲ್ಲಿ ತಿಳಿಸಿದೆ.

Agencies 12 Nov 2020, 1:47 pm
ಭಾರತದ ಆರ್ಥಿಕತೆ ಸತತ ಎರಡನೇ ತ್ರೈಮಾಸಿಕದಲ್ಲೂ ಕುಸಿತ ಕಾಣಲಿದೆ ಎಂದು ತಜ್ಞರ ತಂಡ ಹೇಳಿದೆ. ಇದರಲ್ಲಿ ಆರ್‌ಬಿಐ ಡೆಪ್ಯುಟಿ ಗವರ್ನರ್‌ ಮೈಖಲ್‌ ಪಾತ್ರ ಕೂಡ ಇದ್ದಾರೆ. ಈ ಮೂಲಕ ದೇಶ ಅಧಿಕೃತವಾಗಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ.
Vijaya Karnataka Web recession


ಸತತ ಎರಡು ತ್ರೈಮಾಸಿಕದಲ್ಲಿ ಆರ್ಥಿಕತೆ ಕುಸಿದರೆ ಅದನ್ನು ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಭಾರತದ ಸದ್ಯಕ್ಕೆ ಇದಕ್ಕೆ ಸಾಕ್ಷಿಯಾಗಿದೆ.

ಸೆಪ್ಟೆಂಬರ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 8.6ರಷ್ಟು ಕುಸಿಯಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಮೊದಲ ‘ನೌಕಾಸ್ಟ್‌’ ವರದಿಯಲ್ಲಿ ತಿಳಿಸಿದೆ. ಏಪ್ರಿಲ್ - ಜೂನ್‌ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ. 24ರಷ್ಟು ಕುಸಿದಿತ್ತು.

ಭಾರತವು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2020-21ರ ಮೊದಲಾರ್ಧದಲ್ಲಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ
ಎಂದು ವರದಿಯು ಹೇಳಿದೆ. ಇದರ ಅಂಕಿ ಅಂಶಗಳನ್ನು ನವೆಂಬರ್‌ 27ರಂದು ಭಾರತ ಸರಕಾರವು ಪ್ರಕಟಿಸಲಿದೆ.

ಒಂದೊಮ್ಮೆ ಈಗ ಕಾಣಿಸಿಕೊಂಡಿರುವ ಚೇತರಿಕೆಯೇ ಮುಂದುವರಿದರೆ ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದಲ್ಲಿ ಆರ್ಥಿಕತೆ ಬೆಳವಣಿಗೆಯ ಹಾದಿಗೆ ಮರಳಲಿದೆ ಎಂದು ವರದಿಯು ಅಂದಾಜಿಸಿದೆ. ಕೊರೊನಾದ ಎರಡನೇ ಅಲೆಯು ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆಯೂ ಈ ವರದಿ ಎಚ್ಚರಿಸಿದೆ.

ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದು, ಗ್ರಾಹಕರು ಖರೀದಿಗಳನ್ನು ಕಡಿಮೆ ಮಾಡಿದ್ದಾರೆ. ಬದಲಿಗೆ ಹಣವನ್ನು ಉಳಿತಾಯ ಮಾಡಲು ಆರಂಭಿಸಿದ್ದಾರೆ. ಪರಿಣಾಮ ಮನೆಗಳ ಆರ್ಥಿಕ ಉಳಿತಾಯ ಏಪ್ರಿಲ್‌ - ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ.21.4ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.7.9ರಷ್ಟು ಹೆಚ್ಚಾಗಿದೆ. ಇದರಲ್ಲಿ ಹೆಚ್ಚಿನ ಪಾಲು ಬ್ಯಾಂಕ್‌ ಠೇವಣಿಗಳಾಗಿವೆ ಎಂದು ವರದಿಯು ಉಲ್ಲೇಖಿಸಿದೆ.

ಈ ಕೊರೊನಾ ಬಿಕ್ಕಟ್ಟು ನಿರ್ಗಮನ ಆಗುವವರೆ ಪರಿಸ್ಥಿತಿ ಹೀಗೆಯೇ ಇರಲಿದೆ ಎಂದು ತಜ್ಞರು ಅಂದಾಜಿಸಿದ್ದು, ವೈರಸ್‌ ಕೇಸುಗಳು ಇಳಿಕೆಯಾಗುತ್ತಿದ್ದಂತೆ, ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ