ಆ್ಯಪ್ನಗರ

ಜೆಟ್‌ ಏರ್‌ವೇಸ್‌ ಉಳಿಸಿ, ಜೀವನ ಉಳಿಸಿ

ಜೆಟ್‌ ಏರ್‌ವೇಸ್‌ ತಾತ್ಕಾಲಿಕವಾಗಿ ತನ್ನ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ ...

Vijaya Karnataka 23 Apr 2019, 5:00 am
ಬೆಂಗಳೂರು: ಜೆಟ್‌ ಏರ್‌ವೇಸ್‌ ತಾತ್ಕಾಲಿಕವಾಗಿ ತನ್ನ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ ಅತಂತ್ರಗೊಂಡಿರುವ ನೂರಾರು ಉದ್ಯೋಗಿಗಳು 'ಜೆಟ್‌ ಏರ್‌ವೇಸ್‌ ಉಳಿಸಿ' ಎಂದು ಸೋಮವಾರ ಟೌನ್‌ಹಾಲ್‌ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web jet airways employees strike in bangalore
ಜೆಟ್‌ ಏರ್‌ವೇಸ್‌ ಉಳಿಸಿ, ಜೀವನ ಉಳಿಸಿ


ಪೈಲಟ್‌, ಎಂಜಿನಿಯರ್‌, ಗಗನಸಖಿ ಸೇರಿದಂತೆ ಹಲವು ಉದ್ಯೋಗಿಗಳು ತಮ್ಮ ಸಮವಸ್ತ್ರದಲ್ಲೇ ಪ್ರತಿಭಟನೆಗೆ ಆಗಮಿಸಿದ್ದರು. 'ಜೆಟ್‌ ಏರ್‌ವೇಸ್‌ ಉಳಿಸಿ, 22 ಸಾವಿರ ಉದ್ಯೋಗಿಗಳು ಮತ್ತು ಅವರನ್ನು ನಂಬಿಕೊಂಡಿರುವ ಕುಟುಂಬ ಸದಸ್ಯರು ಭವಿಷ್ಯ, ಜೀವನ ಉಳಿಸಿ' ಎಂದು ಘೋಷಣೆ ಕೂಗಿದರು.

''ಇಂಧನ ದರ ಏರಿಕೆ, ಡಾಲರ್‌ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ, ತೀವ್ರ ಸ್ಪರ್ಧೆ, ತೆರಿಗೆ ಮತ್ತು ಇನ್ನಿತರ ಶುಲ್ಕಗಳ ಹೆಚ್ಚಳವೂ ಜೆಟ್‌ ಏರ್‌ವೇಸ್‌ಗೆ ಹೊಡೆತ ನೀಡಿದೆ. 25 ವರ್ಷ ಹಳೆಯದಾದ ಈ ಕಂಪನಿ ಈಗ, 26ನೇ ವರ್ಷದತ್ತ ಕಾಲಿಟ್ಟಿದೆ. ಕಾರ್ಯಾಚರಣೆ ಸಂಪೂರ್ಣ ಸ್ಥಗಿತವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 2008ರ ಆರ್ಥಿಕ ಹಿಂಜರಿತದ ವೇಳೆ ಜೆಟ್‌ ಏರ್‌ವೇಸ್‌ ತೀವ್ರ ಸಂಕಷ್ಟದಲ್ಲಿತ್ತು. ಆದರೆ, ಅಂತಹ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಿ ಬೆಳೆದು ಬಂದಿದೆ. ದೇಶದ ಪ್ರೀಮಿಯರ್‌ ಏರ್‌ಲೈನ್‌ ಅನ್ನು ಸರಕಾರ ಉಳಿಸಬೇಕು. ಬಿಡ್ಡಿಂಗ್‌ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿ ವಿಮಾನಗಳು ಮತ್ತೆ ಹಾರಾಡುವಂತೆ ವ್ಯವಸ್ಥೆ ಮಾಡಬೇಕು'' ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜೆಟ್‌ ಏರ್‌ವೇಸ್‌ ಜನರಲ್‌ ಮ್ಯಾನೇಜರ್‌ ಹರೀಶ್‌ ಶೆಣೈ ಹೇಳಿದರು.

''ಕಳೆದ 9 ವರ್ಷಗಳಿಂದ ಜೆಟ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದೇನೆ. ಏರ್‌ಲೈನ್‌ ಜೊತೆಗೆ ವಿಶೇಷ ನಂಟಿದೆ. ಹಾರಾಟ ಸ್ಥಗಿತಗೊಳ್ಳುತ್ತದೆ ಎಂದು ಊಹಿಸಿರಲಿಲ್ಲ. ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ನನಗೆ ಪುಟ್ಟ ಮಗು ಇದೆ. ಮಗು ನೋಡಿಕೊಳ್ಳಬೇಕು. ನಮ್ಮ ಜೀವನ ನಡೆಯಬೇಕು. ಕೆಲಸ, ವೇತನ ಇಲ್ಲದೇ ಜೀವನ ನಡೆಸುವುದು ಹೇಗೆ?'' ಎಂದು ಮಗುವಿನೊಂದಿಗೆ ಪ್ರತಿಭಟನೆಗೆ ಬಂದಿದ್ದ ಮೈತ್ರಿಯಾ ಹೇಳಿದರು.

''ಕಳೆದ 15 ವರ್ಷಗಳಿಂದ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಮಕ್ಕಳ ಶಾಲಾ ಶುಲ್ಕ, ಗೃಹ ಸಾಲಗಳು, ಉಪ ಜೀವನ ನಡೆಸುವುದು ಹೇಗೆ ಎಂಬುದೇ ಚಿಂತೆಯಾಗಿದೆ. ಬೇರೆ ಕಂಪನಿಗೆ ಹೋಗುವುದಕ್ಕೆ ಮನಸ್ಸಿಲ್ಲ. ಆ ರೀತಿಯ ಪ್ರಯತ್ನ ಮಾಡಿದ ಕೆಲವರಿಗೆ ಹೊಸದಾಗಿ ಸೇರುವವರಿಗೆ ನೀಡುವಂತೆ ಕಂಪನಿಗಳು ಆಫರ್‌ ನೀಡುತ್ತಿವೆ. 10-15 ವರ್ಷ ಸೇವೆ ಮಾಡಿದವರು, ಆರಂಭಿಕ ವೇತನಕ್ಕೆ ಕೆಲಸಕ್ಕೆ ಸೇರಲು ಸಾಧ್ಯವೇ?'' ಎಂದು ರಾಜ್‌ ಪ್ರಶ್ನೆ ಮಾಡಿದರು.

ಟಿಕೆಟ್‌ ದರ ಏರಿಕೆ
ಪ್ರಮುಖ ಏರ್‌ಲೈನ್‌ ಜೆಟ್‌ ಏರ್‌ವೇಸ್‌ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕಾರಣ ದಿಲ್ಲಿ-ಮುಂಬೈ, ದಿಲ್ಲಿ-ಬೆಂಗಳೂರು ನಡುವಿನ ಟಿಕೆಟ್‌ ದರ 30 ಸಾವಿರ ರೂ.ವರೆಗೂ ಹೋಗಿದೆ. ಅಲ್ಲದೇ, ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್‌ ದರ 8 ಸಾವಿರ ರೂ. ದಾಟಿದೆ ಎಂದು ಜೆಟ್‌ ಏರ್‌ವೇಸ್‌ ಉದ್ಯೋಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ