ಖಾಸಗಿ ವಲಯದಲ್ಲಿ ಹೂಡಿಕೆಯ ಕೊರತೆ
ಆಟೊಮೇಶನ್ ಇತ್ಯಾದಿ ತಂತ್ರಜ್ಞಾನದ ಪರಿಣಾಮ
ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಅಭದ್ರತೆ
ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಧಾನಿ ಮೋದಿಯವರಿಗೆ ಅತಿ ದೊಡ್ಡ ಸವಾಲಾಗುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಮೋದಿಯವರು ಹೇಳಿದ್ದರು. ಆದರೆ ಖಾಸಗಿ ವಲಯದಲ್ಲಿ ಹೂಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಜರುಗುತ್ತಿಲ್ಲ. ಜತೆಗೆ ಖಾಸಗಿ ವಲಯದಲ್ಲಿ ನಡೆಯುತ್ತಿರುವ ಸಾಮೂಹಿಕ ಉದ್ಯೋಗ ಕಡಿತದ ಪ್ರಕರಣಗಳು ಉದ್ಯೋಗಿಗಳಲ್ಲಿ ಆತಂಕ ಹುಟ್ಟಿಸಿದೆ.
ಭಾರತದ ಅತಿ ದೊಡ್ಡ ಎಂಜಿನಿಯರಿಂಗ್ ಕಂಪನಿಯಾದ ಲಾರ್ಸನ್ ಆ್ಯಂಡ್ ಟೂಬ್ರೊ 14,000 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಒಟ್ಟು ಉದ್ಯೋಗಿಗಳ ಬಲದಲ್ಲಿ ಶೇ.11.2ರಷ್ಟು ಆಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಸ್ಟಾರ್ಟಪ್ಗಳ ವಲಯದಲ್ಲಿ ಭಾರಿ ಉದ್ಯೋಗ ಕಡಿತಗಳು ಉಂಟಾಗಿತ್ತು. ನೋಟು ಅಮಾನ್ಯತೆಯ ನಂತರ ಉತ್ಪಾದನೆ ಮತ್ತು ನಿರ್ಮಾಣ ವಲಯದಲ್ಲಿ ಉದ್ಯೋಗ ನಷ್ಟವಾಗಿತ್ತು. ಈ ವರ್ಷ ಕಾಗ್ನಿಜೆಂಟ್, ವಿಪ್ರೊ ಮುಂತಾದ ಐಟಿ ಕಂಪನಿಗಳು ಉದ್ಯೋಗ ಕಡಿತಗೊಳಿಸಿವೆ.
ಹೀಗಿದ್ದರೂ, ಸರಕಾರ ಮತ್ತು ಖಾಸಗಿ ವಲಯದ ಕಡೆಯಿಂದ ಇದಕ್ಕೆ ನಿರಾಕರಣೆ ಕೂಡ ವ್ಯಕ್ತವಾಗಿದೆ. ಕಾನೂನು ಮತ್ತು ಐಟಿ ಸಚಿವ ರವಿ ಶಂಕರ್ ಪ್ರಸಾದ್ ಅವರು, ಹುದ್ದೆ ನಷ್ಟ ಕುರಿತ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ಹೇಳಿದ್ದಾರೆ. ನಾಸ್ಕಾಮ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪ್ರೈಸಲ್ ಪ್ರಕ್ರಿಯೆಯ ಸಂದರ್ಭ ಅದಕ್ಷರನ್ನು ವಜಾಗೊಳಿಸುವುದು ಸಹಜ ಪ್ರಕ್ರಿಯೆ ಎಂದಿದೆ. ಪ್ರತಿ ವರ್ಷ 1.5 ಲಕ್ಷ ಮಂದಿಗೆ ಈಗಲೂ ಐಟಿ ಕ್ಷೇತ್ರ ಕೆಲಸ ನೀಡಿದೆ ಎನ್ನುತ್ತಿದೆ ನಾಸ್ಕಾಮ್.
ಆದರೆ ಉದ್ಯೋಗಿಗಳನ್ನು ಪ್ರಶ್ನಿಸಿದರೆ, ಉದ್ಯೋಗ ಬಿಕ್ಕಟ್ಟು ತೀವ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ವಿಜಯ ಕರ್ನಾಟಕದ ಸೋದರ ಪತ್ರಿಕೆ ಎಕನಾಮಿಕ್ ಟೈಮ್ಸ್ ಸಮೀಕ್ಷೆಯ ಪ್ರಕಾರ ಉದ್ಯೋಗಿಗಳಲ್ಲಿ ಹುದ್ದೆ ಕಡಿತದ ಆತಂಕ ದಟ್ಟವಾಗಿದೆ. ಸಮೀಕ್ಷೆಯಲ್ಲಿ ಸುಮಾರು 11,000 ಮಂದಿಯನ್ನು ಸಂದರ್ಶಿಸಲಾಗಿದ್ದು, ಅವರ ಪ್ರಕಾರ ಉದ್ಯೋಗ ನಷ್ಟದ ಕುರಿತ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿಲ್ಲ. ಬದಲಿಗೆ ಸದ್ಯದಲ್ಲಿಯೇ ಇದು ನಿಜವಾಗಲಿದೆ ಎಂಬ ಭೀತಿಯು ಅವರಲ್ಲಿದೆ.
ಶೇ.50ರಷ್ಟು ಉದ್ಯೋಗಿಗಳು ತಮ್ಮ ಕಂಪನಿಯಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾತುಕತೆ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಸುಧಾರಿಸುವ ಭರವಸೆಯನ್ನೂ ಅವರು ಕಳೆದುಕೊಂಡಿದ್ದಾರೆ. ಶೇ.62ರಷ್ಟು ಮಂದಿ ತಮ್ಮ ಕರಿಯರ್ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ಹೇಳಿದ್ದಾರೆ.
ಕಾರಣವೇನು?
ಖಾಸಗಿ ವಲಯದಲ್ಲಿ ಹೂಡಿಕೆ ಕಡಿಮೆಯಾಗಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಜತೆಗೆ ಆಟೊಮೇಶನ್ ಮುಂತಾದ ಆಧುನಿಕ ತಂತ್ರಜ್ಞಾನಗಳೂ ಉದ್ಯೋಗವನ್ನು ಕಸಿದುಕೊಳ್ಳುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಆಟೊಮೇಶನ್ ತನ್ನ ಪ್ರಭಾವ ಬೀರುತ್ತಿದೆ. ಆದರೆ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಜಾಸ್ತಿ ಎದ್ದು ಕಾಣುತ್ತಿದೆ.
ಇಟಿ ಜಾಬ್ಸ್ ಡಿಸರಪ್ಷನ್ ಸರ್ವೆ ಪ್ರಕಾರ ಉದ್ಯೋಗ ನಷ್ಟದ ಭೀತಿ ಹಾಗೂ ಹಲವಾರು ಉದ್ಯೋಗಗಳು ಕಣ್ಮರೆಯಾಗುತ್ತಿರುವುದು ವಾಸ್ತವ. ಇದನ್ನು ಎದುರಿಸಲು ಹೊಸ ಬಗೆಯ ಕೌಶಲ್ಯಗಳನ್ನು ಕಲಿಯಬೇಕು. ಶೇ.81ರಷ್ಟು ಮಂದಿ ತಮ್ಮ ಉದ್ಯೋಗದ ಕೌಶಲ್ಯ ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದಿದ್ದಾರೆ.
ಉದ್ಯೋಗಿಗಳು ವೀಸಾ ನೀತಿ ಬಿಗಿ, ನೋಟು ಅಮಾನ್ಯತೆ ಇತ್ಯಾದಿ ನೀತಿ ಬದಲಾವಣೆಗಳ ಬಗ್ಗೆ ಏನೂ ಮಾಡಲಾರರಯು. ಆದರೆ ಅವರವರ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ. ಅನಾಲಿಟಿಕ್ಸ್, ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಮುಂತಾದ ವಿಷಯಗಳಲ್ಲಿ ತಜ್ಞರಾಗಬಹುದು. ಇದಕ್ಕಾಗಿ ತರಬೇತಿ ಪಡೆದುಕೊಳ್ಳಬಹುದು.