ಹೊಸದಿಲ್ಲಿ: ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಗ್ರಾಹಕರಿಗೆ ತನ್ನ ಎಲ್ಲ ಸೇವೆಗಳು ದೊರೆಯಲಿವೆ. ಉಳಿತಾಯ ಮತ್ತು ನಿಶ್ಚಿತ ಠೇವಣಿಗಳ ಬಡ್ಡಿ ದರದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಡಿಬಿಎಸ್ ಬ್ಯಾಂಕ್ ಸೋಮವಾರ ತಿಳಿಸಿದೆ.
ಆರ್ಬಿಐ, ಎಲ್ವಿಬಿಯನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದ (ಡಿಬಿಐಎಲ್) ಜತೆ ಇತ್ತೀಚೆಗೆ ವಿಲೀನಗೊಳಿಸಿದೆ. ಇದು ಸಿಂಗಾಪುರ ಮೂಲದ ಡಿಬಿಎಸ್ ಗ್ರೂಪ್ ಹೋಲ್ಡಿಂಗ್ಸ್ನ ಅಧೀನ ಸಂಸ್ಥೆಯಾಗಿದೆ.
ಕಳೆದ ನವೆಂಬರ್ 27ರಿಂದ ಎಲ್ವಿಬಿಯನ್ನು ಡಿಬಿಎಸ್ ಬ್ಯಾಂಕ್ ಜತೆ ವಿಲೀನಗೊಳಿಸಲಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಸೆಕ್ಷನ್ 45ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆರ್ಬಿಐ, ಎಲ್ವಿಬಿಯನ್ನು ಡಿಬಿಎಸ್ ಬ್ಯಾಂಕ್ ಜತೆಗೆ ವಿಲೀನಗೊಳಿಸಿದೆ. ಡಿಬಿಐಎಲ್ಗೆ ಡಿಬಿಎಸ್ ಗ್ರೂಪ್ 2,500 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.
ಗ್ರಾಹಕರಿಗೆ ಬ್ಯಾಂಕ್ನಿಂದ ಠೇವಣಿಗಳ ಹಿಂತೆಗೆತಕ್ಕೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ನ.27ರಿಂದ ಅನ್ವಯವಾಗುವಂತೆ ರದ್ದುಪಡಿಸಲಾಗಿದೆ. ಬ್ಯಾಂಕಿನ ಎಲ್ಲ ಶಾಖೆಗಳಲ್ಲೂ ಬ್ಯಾಂಕಿಂಗ್ ಸೇವೆಗಳು ಪುನರಾರಂಭವಾಗಿದೆ. ಆನ್ಲೈನ್ ಬ್ಯಾಂಕಿಂಗ್ ಮತ್ತು ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಬ್ಯಾಂಕ್ ತಿಳಿಸಿದೆ.
ಪ್ರತ್ಯೇಕ ನಿಧಿ ಸ್ಥಾಪನೆಗೆ ಸೂಚನೆ:
ವಿಲೀನ ಪ್ರಕ್ರಿಯೆಯಲ್ಲಿ ಷೇರುದಾರರಿಗೆ ಒಂದು ವೇಳೆ ನಷ್ಟ ಸಂಭವಿಸಿದರೆ, ಭರಿಸಲು ಪ್ರತ್ಯೇಕ ನಿಧಿ ತೆಗೆದಿಡುವಂತೆ ಡಿಬಿಎಸ್ ಬ್ಯಾಂಕಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ವಿನೀತ್ ಕೊಠಾರಿ, ನ್ಯಾಯಮೂರ್ತಿ ಎಂಎಸ್ ರಮೇಶ್ ಅವರನ್ನು ಒಳಗೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಈ ಮಧ್ಯಂತರ ಆದೇಶ ಹೊರಡಿಸಿದೆ.