ಆ್ಯಪ್ನಗರ

ಎಲ್‌ಐಸಿ ತೆಕ್ಕೆಗೆ ಐಡಿಬಿಐ ಬ್ಯಾಂಕ್‌ ಸಂಭವ

ಐಡಿಬಿಐ ಬ್ಯಾಂಕ್‌ನಲ್ಲಿನ ದೊಡ್ಡ ಪ್ರಮಾಣದ ಷೇರುಗಳನ್ನು ಭಾರತೀಯ ಜೀವವಿಮಾ ನಿಗಮಕ್ಕೆ(ಎಲ್‌ಐಸಿ) ಮಾರಾಟ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Vijaya Karnataka 24 Jun 2018, 9:41 am
ಮುಂಬಯಿ : ಐಡಿಬಿಐ ಬ್ಯಾಂಕ್‌ನಲ್ಲಿನ ದೊಡ್ಡ ಪ್ರಮಾಣದ ಷೇರುಗಳನ್ನು ಭಾರತೀಯ ಜೀವವಿಮಾ ನಿಗಮಕ್ಕೆ(ಎಲ್‌ಐಸಿ) ಮಾರಾಟ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
Vijaya Karnataka Web lic


ಪ್ರಸ್ತುತ ಐಡಿಬಿಐನ ಶೇ.8ರಷ್ಟು ಷೇರುಗಳನ್ನು ಎಲ್‌ಐಸಿ ಹೊಂದಿದ್ದು, ಹೆಚ್ಚುವರಿಯಾಗಿ ಶೇ.43ರಷ್ಟು ಅಂದರೆ, 10,500 ಕೋಟಿ ರೂ. ಮೌಲ್ಯದ ಷೇರು ಖರೀದಿಗೆ ಮುಂದಾಗಿದೆ. ಇದು ಸಾಧ್ಯವಾದರೆ, ಎಲ್‌ಐಸಿಯು ಶೇ.51ರಷ್ಟು ಷೇರುಗಳನ್ನು ಹೊಂದಿದಂತಾಗಲಿದೆ. ಐಡಿಬಿಐ ಬ್ಯಾಂಕ್‌ನ ನಿಯಂತ್ರಣ ಎಲ್‌ಐಸಿ ಪಾಲಾಗಲಿದೆ. ಇದರೊಟ್ಟಿಗೆ ಭಾರತೀಯ ಬ್ಯಾಂಕಿಂಗ್‌ ವಲಯಕ್ಕೆ ಎಲ್‌ಐಸಿ ಪ್ರವೇಶಿಸಲು ಸಾಧ್ಯವಾಗಲಿದೆ.

ಷೇರು ಖರೀದಿ ಪ್ರಸ್ತಾವನೆಯು ಸರಕಾರದ ಮುಂದಿದ್ದು, ಅನುಮೋದನೆಯನ್ನು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ''ಈಗಾಗಲೇ ಐಡಿಬಿಐ ಬ್ಯಾಂಕ್‌ನ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಎಲ್‌ಐಸಿ ಮಂಡಳಿಯ ಅನುಮೋದನೆ ಸಿಕ್ಕಿದೆ. ಸರಕಾರದ ಅನುಮೋದನೆ ಸಿಕ್ಕಿದ ಬಳಿಕ, ಖರೀದಿ ಪ್ರಕ್ರಿಯೆ ನಡೆಯಲಿದೆ,'' ಎಂದು ಮೂಲಗಳು ತಿಳಿಸಿವೆ.

ಐಡಿಬಿಐ ಬ್ಯಾಂಕ್‌ನಲ್ಲಿ ಷೇರುಗಳ ಪ್ರಮಾಣವನ್ನು ಕಳೆದ ತಿಂಗಳಷ್ಟೇ ಸರಕಾರವು ಶೇ.80.96ರಿಂದ ಶೇ.85.96ಕ್ಕೆ ಹೆಚ್ಚಿಸಿಕೊಂಡಿತ್ತು. ಈ ಷೇರುಗಳನ್ನು ಎಲ್‌ಐಸಿಗೆ ಮಾರಾಟ ಮಾಡಲು ಸಂಪುಟದ ಅನುಮೋದನೆ ಅಗತ್ಯ.

ಐಡಿಬಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಕೆ.ಜೈನ್‌ ಅವರನ್ನು ಆರ್‌ಬಿಐನ ಉಪ ಗವರ್ನರ್‌ ಸ್ಥಾನಕ್ಕೆ ನೇಮಕ ಮಾಡಲಾಗಿದ್ದು, ಅವರು ತಮ್ಮ ಅಧಿಕಾರಾವಧಿಯಲ್ಲಿ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟ್‌ ಚೊಕ್ಕಟಗೊಳಿಸಿದ್ದರು. ಅಲ್ಲದೇ, 20,000ಕೋಟಿ ರೂ. ವಸೂಲಾಗದ ಸಾಲಗಳನ್ನು ಮಾರಾಟ ಮಾಡುವ ಯೋಜನೆಯನ್ನೂ ರೂಪಿಸಿದ್ದರು. ಬ್ಯಾಂಕ್‌ನ ನೂತನ ಎಂಡಿ ಮತ್ತು ಸಿಇಒ ಆಗಿ ಬಿ.ಶ್ರೀರಾಮ್‌ 3 ತಿಂಗಳ ಅವಧಿಗೆ ನೇಮಕಗೊಂಡಿದ್ದಾರೆ.

55,000 ಕೋಟಿ ರೂ. ಎನ್‌ಪಿಎ:

ಅನುತ್ಪಾದಕ ಆಸ್ತಿಗೆ(ಎನ್‌ಪಿಎ) ಸಂಬಂಧಿಸಿದಂತೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಐಡಿಬಿಐ ಬ್ಯಾಂಕ್‌ ಹೆಚ್ಚಿನ ಪಾಲನ್ನು ಹೊಂದಿದೆ. ಫಿಚ್‌ನ ಸ್ಥಳೀಯ ಘಟಕವಾದ ಇಂಡಿಯಾ ರೇಟಿಂಗ್ಸ್‌ ಅ್ಯಂಡ್‌ ರೀಸರ್ಚ್‌ ಪ್ರೈವೇಟ್‌ ಲಿಮಿಟೆಡ್‌, ಕಳೆದ ತಿಂಗಳಷ್ಟೇ ಐಡಿಬಿಐ ಬ್ಯಾಂಕ್‌ನ ರೇಟಿಂಗ್‌ ಅನ್ನು ಕೆಳಹಂತಕ್ಕೆ ಇಳಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಈ ಬ್ಯಾಂಕ್‌ನ ಎನ್‌ಪಿಎ ಹೆಚ್ಚುತ್ತಿದ್ದು, ಮಾರ್ಚ್‌ 31ರ ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ 8,237 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 5,158 ಕೋಟಿ ರೂ. ನಷ್ಟ ದಾಖಲಾಗಿತ್ತು. ಐಡಿಬಿಐನ ಒಟ್ಟು ಎನ್‌ಪಿಎ 55,588 ಕೋಟಿ ರೂ.ನಷ್ಟಿದೆ.

ಬ್ಯಾಂಕ್‌ಗಳ ವಿಲೀನ

ಜಾಗತಿಕ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಲು ಮತ್ತು ಎನ್‌ಪಿಎ ಹೊರೆಯಿಂದ ಬಳಲಿರುವ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನಶ್ಚೇತನಕ್ಕೆ ಕೇಂದ್ರ ಸರಕಾರ ನಾನಾ ಪ್ರಯತ್ನಗಳನ್ನು ನಡೆಸಿದೆ. ಈ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನಗೊಳಿಸಲೂ ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ