ಆ್ಯಪ್ನಗರ

ಅ. 3 ರಿಂದ ದೇಶದ 250 ಜಿಲ್ಲೆಗಳಲ್ಲಿ ಮೆಗಾ 'ಸಾಲ ಮೇಳ'

​ಅಕ್ಟೋಬರ್‌ 3ರಂದು ಸಾಲ ಮೇಳ ಆರಂಭವಾಗಲಿದ್ದು ನಾಲ್ಕು ದಿನಗಳ ಕಾಲ ಚಿಲ್ಲರೆ ಮಾರಾಟ, ಕೃಷಿ, ವಾಹನ, ಉದ್ದಿಮೆ, ಶಿಕ್ಷಣ ಮತ್ತು ವೈಯಕ್ತಿಕ ವಿಭಾಗಗಳಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ತ್ವರಿತವಾಗಿ ಸಾಲ ನೀಡಲಿವೆ.

ET Now 3 Oct 2019, 3:47 pm
ಹೊಸದಿಲ್ಲಿ: ಮೊದಲ ಹಂತದ 'ಸಾಲ ಮೇಳ' ಕಾರ್ಯಕ್ರಮ ಗುರುವಾರದಿಂದ ದೇಶದ 250 ಜಿಲ್ಲೆಗಳಲ್ಲಿ ಆರಂಭವಾಗಲಿದೆ. ಹಬ್ಬದ ಋತುವಿನಲ್ಲಿ ಗ್ರಾಹಕರು ಹಾಗೂ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಮೇಳವನ್ನು ಸರಕಾರ ಹಮ್ಮಿಕೊಂಡಿದೆ.
Vijaya Karnataka Web Loan Mela


ಅಕ್ಟೋಬರ್‌ 3ರಂದು ಸಾಲ ಮೇಳ ಆರಂಭವಾಗಲಿದ್ದು ನಾಲ್ಕು ದಿನಗಳ ಕಾಲ ಚಿಲ್ಲರೆ ಮಾರಾಟ, ಕೃಷಿ, ವಾಹನ, ಉದ್ದಿಮೆ, ಶಿಕ್ಷಣ ಮತ್ತು ವೈಯಕ್ತಿಕ ವಿಭಾಗಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡಲಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ಬ್ಯಾಂಕ್‌ ಆಫ್‌ ಬರೋಡ (ಬಿಒಬಿ) ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳು ಹಬ್ಬದ ಅವಧಿಯ ಲಾಭವನ್ನು ಪಡೆದುಕೊಳ್ಳಲು ಈ ಮೂಲಕ ಮುಂದಾಗಿವೆ.

ಎಸ್‌ಬಿಐ ದೇಶದ 48 ಜಿಲ್ಲೆಗಳಲ್ಲಿ ಸಾಲ ಮೇಳವನ್ನು ಹಮ್ಮಿಕೊಂಡಿದ್ದರೆ, ಬಿಒಬಿ 17 ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಹಮ್ಮಿಕೊಂಡಿದೆ. ಇದೇ ರೀತಿ ದೇಶದಾದ್ಯಂತ 250 ಜಿಲ್ಲೆಗಳಲ್ಲಿ ಸಾಲ ಮೇಳ ನಡೆಯಲಿದೆ.

ಆರಂಭದಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳ ಹಮ್ಮಿಕೊಳ್ಳಲು ಯೋಜನೆ ರೂಪಿಸಿದ್ದವು. ಇದಕ್ಕೆ ತಾವೂ ಜೊತೆಯಾಗುವುದಾಗಿ ಖಾಸಗಿ ಬ್ಯಾಂಕ್‌ಗಳು ಹೇಳಿಕೊಂಡಿದ್ದು, ಅವುಗಳು ಕೂಡ ಈ ಸಾಲಮೇಳದಲ್ಲಿ ಪಾಲ್ಗೊಳ್ಳಲಿವೆ.

ಬ್ಯಾಂಕ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಕ್ರಿಯೆ ಇದಾಗಿದ್ದು, ಹಿಂದೊಮ್ಮೆ ಕೇಂದ್ರದಲ್ಲಿ ಜನಾರ್ಧನ ಪೂಜಾರಿ ಹಣಕಾಸು ಖಾತೆ ರಾಜ್ಯ ದರ್ಜೆ ಸಚಿವರಾಗಿದ್ದಾಗ ಇದೇ ರೀತಿ ಸಾಲ ಮೇಳವನ್ನು ಹಮ್ಮಿಕೊಂಡಿದ್ದರು. ಇದು ಆ ಕಾಲದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.

ಇದೇ ಮಾದರಿಯಲ್ಲಿ ಇದೀಗ ಕೇಂದ್ರ ಸರಕಾರ ಸಾಲ ಮೇಳವನ್ನು ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೈಗೊಂಡಿದೆ. ಈ ರೀತಿಯ ಮೇಳದಲ್ಲಿ ಎಲ್ಲಾ ರೀತಿಯ ಗ್ರಾಹಕರಿಗೆ ಒಂದೇ ಸೂರಿನಡಿ ವಿವಿಧ ರೀತಿಯ ಸಾಲ ಸೌಲಭ್ಯ ಸಿಗಲಿದೆ. ಈ ನಡೆ ನಿಧಾನಗತಿಯಲ್ಲಿರುವ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂಬ ಲೆಕ್ಕಾಚಾರವನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

ಎರಡನೇ ಹಂತದ ಸಾಲ ಮೇಳೆ 150 ಜಿಲ್ಲೆಗಳಲ್ಲಿ ಅಕ್ಟೋಬರ್‌ 21 ರಿಂದ 25ರ ನಡುವೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ