ಆ್ಯಪ್ನಗರ

ಡೀಸೆಲ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊದಲ ರೈಲಿಗೆ ಚಾಲನೆ

ಡೀಸೆಲ್‌ ಎಂಜಿನ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊಟ್ಟ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ...

PTI 20 Feb 2019, 5:00 am
ವಾರಾಣಸಿ: ಡೀಸೆಲ್‌ ಎಂಜಿನ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊಟ್ಟ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಮಂಗಳವಾರ ಚಾಲನೆ ನೀಡಿದ್ದಾರೆ.
Vijaya Karnataka Web Narendra Modi


ಇದುವರೆಗೆ ಡೀಸೆಲ್‌ ಎಂಜಿನ್‌ನಲ್ಲಿ ಸಂಚರಿಸುತ್ತಿದ್ದ ರೈಲನ್ನು ವಿದ್ಯುತ್‌ ಚಾಲಿತ ಲೋಕೊಮೋಟಿವ್‌(ಎಂಜಿನ್‌) ಆಗಿ ಪರಿವರ್ತನೆಗೊಳಿಸಲಾಗಿದೆ. ಇದು ಇಡೀ ವಿಶ್ವಕ್ಕೇ ಭಾರತದ ಸಂಶೋಧನೆಯ ಕೊಡುಗೆಯಾಗಿದೆ.

2,600 ಅಶ್ವಶಕ್ತಿ(ಎಚ್‌ಪಿ) ಸಾಮರ್ಥ್ಯ‌ದ ಎರಡು ಡೀಸೆಲ್‌ ಎಂಜಿನ್‌ಗಳನ್ನು 10,000 ಎಚ್‌ಪಿ ಸಾಮರ್ಥ್ಯ‌ದ ಎರಡು ಎಲೆಕ್ಟ್ರಿಕ್‌ ಎಂಜಿನ್‌ಗಳಾಗಿ ಪರಿವರ್ತನೆ ಮಾಡಲಾಗಿದೆ.

ಸಂಪೂರ್ಣ ಮೇಕ್‌ ಇನ್‌ ಇಂಡಿಯಾದನ್ವಯ ಭಾರತದ ಆರ್‌ಆ್ಯಂಡ್‌ ಡಿಯ ಎಂಜಿನಿಯರ್‌ಗಳು ದಾಖಲೆಯ ಕಡಿಮೆ ಅವಧಿಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಚಿತ್ತರಂಜನ್‌ ಲೊಕೊಮೋಟಿವ್‌ ವರ್ಕ್ಸ್‌(ಸಿಎಲ್‌ಡಬ್ಲ್ಯು) ಮತ್ತು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ನ ಎಂಜಿನಿಯರ್‌ಗಳ ನೆರವಿನಿಂದ ಯೋಜನೆ ತ್ವರಿತವಾಗಿ ಪೂರ್ಣಗೊಂಡಿದೆ. ಎಂಜಿನ್‌ ಎಲೆಕ್ಟ್ರಿಕ್‌ ಆಗಿ ಪರಿವರ್ತನೆಯಾದ ಕಾರಣ, ಪರಿಸರ ಮಾಲಿನ್ಯ ಗಣನೀಯವಾಗಿ ತಗ್ಗಿದಂತಾಗಿದೆ.

ಡೀ-ಕಾರ್ಬನೈಜೇಷನ್‌ ಮತ್ತು ಶೇ.100ರಷ್ಟು ವಿದ್ಯುತ್‌ ಎಂಜಿನ್‌ಗಳನ್ನು ಬಳಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಇದರನ್ವಯ ಯೋಜನೆಯು 2017ರ ಡಿಸೆಂಬರ್‌ನಲ್ಲಿ ಆರಂಭ.

ಪರಿಸರಸ್ನೇಹಿ, ಜೊತೆಗೆ ವೆಚ್ಚ ಉಳಿತಾಯ
ಡೀಸೆಲ್‌ ಎಂಜಿನ್‌ ಅನ್ನು ಎಲೆಕ್ಟ್ರಿಕ್‌ ಎಂಜಿನ್‌ ಆಗಿ ಪರಿವರ್ತಿಸುವುದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದರಿಂದ ರೈಲ್ವೆ ಇಲಾಖೆಗೆ ವೆಚ್ಚ ಉಳಿತಾಯವೂ ಆಗುತ್ತದೆ. ಜೊತೆಗೆ ಪರಿಸರಸ್ನೇಹಿಯೂ ಹೌದು. ಅಲ್ಲದೇ, ಸರಕು ರೈಲುಗಳ ಸರಾಸರಿ ವೇಗವೂ ವೃದ್ಧಿಯಾಗಲಿದೆ.

ವಂದೇ ಭಾರತ್‌ ಟೀಕೆಗೆ ಪ್ರಧಾನಿ ಕಿಡಿ

'ವಂದೇ ಭಾರತ್‌ ಎಕ್ಸ್‌ಪ್ರೆಸ್‌' ರೈಲಿನ ಆರಂಭಿಕ ಪಯಣದ ಅಡಚಣೆ ಕುರಿತು ಲೇವಡಿ ಮಾಡಿದ್ದ ಪ್ರತಿಪಕ್ಷಗಳ ಮುಖಂಡರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದರು.

ವಾರಾಣಸಿಯಿಂದ ದಿಲ್ಲಿಗೆ ವಾಪಸಾಗುವ ಮಾರ್ಗ ಮಧ್ಯೆ ವಂದೇ ಭಾರತ್‌ ರೈಲು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಎಸ್ಪಿ ಮುಖಂಡ ಅಖಿಲೇಶ್‌ ಯಾದವ್‌ ಲೇವಡಿ ಮಾಡಿದ್ದರು. ಉದ್ಘಾಟನೆಗೊಂಡ ಕೆಲವೇ ತಾಸುಗಳಲ್ಲಿ ಈ ತಾಂತ್ರಿಕ ಸಮಸ್ಯೆ ಕಾಣಿಸಿತ್ತು.

ಪ್ರತಿಪಕ್ಷ ಮುಖಂಡ ಲೇವಡಿಯನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ, ''ಸೆಮಿ ಹೈಸ್ಪೀಡ್‌ ರೈಲಿನ ಬಗ್ಗೆ ಕೆಲವರು ವ್ಯಂಗ್ಯವಾಡಿರುವುದು ದುರದೃಷ್ಟಕರ. ಇದರಿಂದ ಈ ಯೋಜನೆಯಲ್ಲಿ ಪಾಲ್ಗೊಂಡ ಎಂಜಿನಿಯರ್‌ ಹಾಗೂ ತಂತ್ರಜ್ಞರಿಗೆ ಅವಮಾನ ಮಾಡಿದಂತಾಗಿದೆ. ಲೇವಡಿಯ ಖಯಾಲಿ ಬೆಳೆಸಿಕೊಂಡಿರುವ ಇಂಥವರ ಬಗ್ಗೆ ಜನ ಸದಾ ಎಚ್ಚರದಿಂದಿರಬೇಕು,'' ಎಂದಿದ್ದಾರೆ.

ಸಾರ್ವಜನಿಕ ರಾರ‍ಯಲಿಯಲ್ಲಿ ಪಾಲ್ಗೊಂಡ ಪ್ರಧಾನಿ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಟೀಕಾಕಾರರು ನಕಾರಾತ್ಮಕವಾದಿಗಳು. ಅವರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗದಂತೆ ಜನರಿಗೆ ಸಲಹೆ ಮಾಡಿದರು.

ಈ ಮೊದಲು ರೈಲಿನ ಆರಂಭಿಕ ಪಯಣವೇ ತಾಂತ್ರಿಕ ಸಮಸ್ಯೆಗೆ ಗುರಿಯಾದ ಕುರಿತು ಅಪಹಾಸ್ಯ ಮಾಡಿದ್ದ ರಾಹುಲ್‌ ಗಾಂಧಿ, ''ಮೋದೀಜಿ, ಮೇಕ್‌ ಇನ್‌ ಇಂಡಿಯಾ ಯೋಜನೆ ಕುರಿತು ಮರು ಚಿಂತನೆ ನಡೆಸಬೇಕಾದ ಅಗತ್ಯ ಇದೆ. ಈ ಯೋಜನೆ ವಿಫಲಗೊಂಡಿದೆ ಎನ್ನುವುದು ಬಹು ಜನರ ಅಭಿಪ್ರಾಯ,'' ಎಂದಿದ್ದರು. ಎಸ್ಪಿ ಮುಖಂಡ ಅಖಿಲೇಶ್‌ ಯಾದವ್‌ ಕೂಡ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ