ಆ್ಯಪ್ನಗರ

ಲೋಕಸಭೆ ಚುನಾವಣೆಗೂ ಮುನ್ನ ರೈತರಿಗೆ 4,000 ರೂ.?

ಪಿಎಂ-ಕಿಸಾನ್‌ ಯೋಜನೆಯಡಿ ಲೋಕಸಭೆ ಚುನಾವಣೆಯೊಳಗೆ ರೈತರ ಖಾತೆಗೆ 4,000 ರೂ.ಗಳನ್ನು ಪಾವತಿಸಲು ಕೇಂದ್ರ ಸರಕಾರ ಸಜ್ಜಾಗುತ್ತಿದೆ. ಈ ಯೋಜನೆಯ ಎರಡು ಕಂತುಗಳನ್ನು ರೈತರ ಖಾತೆಗೆ ಸೇರಿಸುವ ಬಗ್ಗೆ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Vijaya Karnataka Web 14 Feb 2019, 10:30 am
ಹೊಸದಿಲ್ಲಿ : ಪಿಎಂ-ಕಿಸಾನ್‌ ಯೋಜನೆಯ ಎರಡು ಕಂತುಗಳು ಅಂದರೆ, 4,000 ರೂ.ಗಳನ್ನು ಲೋಕಸಭೆ ಚುನಾವಣೆಯೊಳಗೆ ರೈತರ ಖಾತೆಗೆ ಪಾವತಿಸಲು ಕೇಂದ್ರ ಸರಕಾರ ಸಜ್ಜಾಗುತ್ತಿದೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Vijaya Karnataka Web PM Kisan


ರೈತರಿಗೆ ವರ್ಷಕ್ಕೆ 6,000 ರೂ.ಗಳ ನೇರ ನಗದು ಒದಗಿಸುವ ಪಿಎಂ-ಕಿಸಾನ್‌ ಯೋಜನೆಯನ್ನು ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಪ್ರಕಟಿಸಿದ್ದರು. ಕಳೆದ ಡಿಸೆಂಬರ್‌ನಿಂದ ಅದು ಪೂರ್ವಾನ್ವಯವಾಗಲಿದ್ದು, ಮೊದಲ ಕಂತಾಗಿ 2,000 ರೂ. ಅನ್ನು ಮಾರ್ಚ್‌ನಲ್ಲಿ ವಿತರಣೆ ಮಾಡುವುದಾಗಿ ಗೋಯಲ್‌ ಹೇಳಿದ್ದರು. ಏತನ್ಮಧ್ಯೆ, ಲೋಕಸಭೆ ಚುನಾವಣೆಗೂ ಮುನ್ನವೇ ಎರಡು ಕಂತುಗಳನ್ನು ವಿತರಿಸುವ ಯತ್ನಗಳೂ ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2 ಹೆಕ್ಟೇರ್‌ ತನಕ ಜಮೀನ್‌ ಹೊಂದಿದ ಕಿರು ರೈತರಿಗೆ ಯೋಜನೆ ಅನ್ವಯವಾಗಲಿದ್ದು, ಸುಮಾರು 12 ಕೋಟಿ ರೈತರಿಗೆ ಇದರ ಲಾಭ ದೊರೆಯಲಿದೆ. ಅರ್ಹ ರೈತರ ಗುರ್ತಿಸಲು ರಾಜ್ಯಗಳಿಗೆ ಕೇಂದ್ರವು ಈಗಾಗಲೇ ಸೂಚಿಸಿದ್ದು, ಫಲಾನುಭವಿಗಳ ಆರಂಭಿಕ ಪಟ್ಟಿ ಸದ್ಯದಲ್ಲಿಯೇ ಸಿದ್ಧವಾಗಲಿದೆ.

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳು ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದ್ದು, ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು ಸುಲಭವಾಗಲಿದೆ. ಇನ್ನು ಪಿಎಂ-ಕಿಸಾನ್‌ ಮಾದರಿಯದೇ ಯೋಜನೆಗಳನ್ನು ತೆಲಂಗಾಣ, ಒಡಿಶಾ ಮತ್ತು ಜಾರ್ಖಂಡ್‌ ರಾಜ್ಯಗಳೂ ಜಾರಿಗೊಳಿಸಿದ್ದು ಈ ಸಂಬಂಧಿ ಡೇಟಾ ಈಗಾಗಲೇ ಸಿದ್ಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

''ಎರಡು ಕಂತುಗಳನ್ನು ವಿತರಿಸಲು ನಾವು ಸಿದ್ಧ ಇದ್ದೇವೆ. ಲೋಕಸಭೆ ಚುನಾವಣೆಗೂ ಮುನ್ನವೇ ರೈತರಿಗೆ ಈ ಮೊತ್ತ ತಲುಪಿಸುವ ವಿಶ್ವಾಸವನ್ನು ಹೊಂದಿದ್ದೇವೆ,'' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂವಿಧಾನಾತ್ಮಕ ಹುದ್ದೆ ಹೊಂದಿದವರು, ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಸರಕಾರಿ ಅಧಿಕಾರಿಗಳು, ಪಿಎಸ್‌ಯುಗಳಲ್ಲಿ ಸೇವೆ ಸಲ್ಲಿಸಿ ತಿಂಗಳಿಗೆ 10,000 ರೂ. ಗಿಂತಲೂ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತರು, ಆದಾಯ ತೆರಿಗೆ ಪಾವತಿಸುವವರು, ಎಂಜಿನಿಯರ್‌, ವಕೀಲರನ್ನು ಹಾಗೂ ಇಂಥವರನ್ನು ಸದಸ್ಯರನ್ನಾಗಿ ಹೊಂದಿದ ಕುಟುಂಬಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 2019ರ ಫೆ.1ರೊಳಗೆ ಭೂ ದಾಖಲೆಗಳಲ್ಲಿ ಹೆಸರಿರುವ ಕಿರು ರೈತರು ಯೋಜನೆಗೆ ಅರ್ಹರು.

ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದು: ಲೋಕಸಭೆ ಚುನಾವಣೆಯು ಏಪ್ರಿಲ್‌-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ಮುಂದಿನ ತಿಂಗಳು ಯಾವುದೇ ದಿನಾಂಕದಿಂದ ಬೇಕಾದರೂ ಚುನಾವಣೆ ನೀತಿ ಸಂಹಿತೆ ಅನ್ವಯವಾಗುವ ಸಾಧ್ಯತೆ ಇದೆ. ಆದಾಗ್ಯೂ, ನೀತಿ ಸಂಹಿತೆಯಿಂದ ಪಿಎಂ-ಕಿಸಾನ್‌ ಯೋಜನೆ ಜಾರಿಗೆ ಯಾವುದೇ ತೊಡಕಾಗುವುದಿಲ್ಲ. ಏಕೆಂದರೆ ಯೋಜನೆಯು ಪ್ರಸಕ್ತ ಹಣಕಾಸು ವರ್ಷದಿಂದಲೇ ಜಾರಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ