ಆ್ಯಪ್ನಗರ

ಬ್ಯಾಂಕಿಂಗ್‌, ಆಧಾರ್‌, ಪ್ಯಾನ್‌ಗೆ ಹೊಸ ನಿಯಮ

ನೀವು ಇನ್ನೂ ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ಗೆ ಲಿಂಕ್‌ ಮಾಡಿರದಿದ್ದರೆ ತಕ್ಷಣವೇ ಮಾಡಿಟ್ಟುಕೊಳ್ಳಿ. ಸೆಪ್ಟೆಂಬರ್‌ 1ರಿಂದ ಮಾಡದಿದ್ದರೆ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ.

THE ECONOMIC TIMES 1 Sep 2019, 8:54 am
ಟ್ರಾಫಿಕ್‌ ರೂಲ್ಸ್‌ ಮಾತ್ರವಲ್ಲದೆ, ಬ್ಯಾಂಕಿಂಗ್‌, ಅಧಾರ್‌, ಪ್ಯಾನ್‌, ಟಿಡಿಎಸ್‌ ಇತ್ಯಾದಿ ವಿಚಾರಗಳಲ್ಲಿ ಕೆಲ ಹೊಸ ಬದಲಾವಣೆಗಳು ಸೆಪ್ಟೆಂಬರ್‌ 1ರಿಂದ ಜಾರಿಯಾಗಲಿದ್ದು, ಜನ ಸಾಮಾನ್ಯರಿಗೆ ಇದು ಪರಿಣಾಮ ಬೀರಲಿವೆ. ಅವುಗಳ ವಿವರ ಇಂತಿವೆ.
Vijaya Karnataka Web Banking


ನಗದು ಹಿಂತೆಗೆತ:
ಬ್ಯಾಂಕ್‌ಗಳಿಂದ ವಾರ್ಷಿಕ 1 ಕೋಟಿ ರೂ.ಗೂ ಹೆಚ್ಚಿನ ನಗದು ಮೊತ್ತವನ್ನು ಹಿಂಪಡೆದರೆ ಶೇ.2ರಷ್ಟು ಟಿಡಿಎಸ್‌ ಮೇಲ್ತೆರಿಗೆ ಅನ್ವಯವಾಗಲಿದೆ. ಸಹಕಾರಿ ಬ್ಯಾಂಕ್‌ ಅಥವಾ ಅಂಚೆ ಇಲಾಖೆಯಲ್ಲಿ ತೆರೆದ ಖಾತೆಗಳೊಗೂ ಇದು ಅನ್ವಯ. ದೊಡ್ಡ ಮೊತ್ತದ ನಗದು ಹಿಂತೆಗೆತವನ್ನು ನಿರುತ್ತೇಜನಗೊಳಿಸಲು ಹಾಗೂ ನಗದು ಬಳಕೆಯನ್ನು ಕಡಿಮೆ ಮಾಡಲು ಸರಕಾರ ಈ ನಿರ್ಧಾರ ಕೈಗೊಂಡಿದೆ. ಕಪ್ಪು ಹಣ ನಿಯಂತ್ರಣದ ನಿಟ್ಟಿನಲ್ಲಿ ಇದು ಗಮನಾರ್ಹ.

ಪ್ಯಾನ್‌-ಆಧಾರ್‌ ಲಿಂಕ್‌ ಮರೆಯದಿರಿ:
ನೀವು ಇನ್ನೂ ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ಗೆ ಲಿಂಕ್‌ ಮಾಡಿರದಿದ್ದರೆ ತಕ್ಷಣವೇ ಮಾಡಿಟ್ಟುಕೊಳ್ಳಿ. ಸೆಪ್ಟೆಂಬರ್‌ 1ರಿಂದ ಮಾಡದಿದ್ದರೆ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ. ಹೀಗಿದ್ದರೂ ಮಾನ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ಆದರೆ ಆಧಾರ್‌ಗೆ ಲಿಂಕ್‌ ಮಾಡಿದರೆ ಮಾತ್ರ ಸಕ್ರಿಯ ಎನಿಸಲಿದ್ದು, ಬಳಸಬಹುದು.

ಕಿಸಾನ್‌ ಕಾರ್ಡ್‌ ಶೀಘ್ರ ಲಭ್ಯ:
ಸೆಪ್ಟೆಂಬರ್‌ 1ರಿಂದ ಬ್ಯಾಂಕ್‌ಗಳು ಗರಿಷ್ಠ 15 ದಿನಗಳೊಳಗೆ ಕಿಸಾನ್‌ ಕಾರ್ಡ್‌ ವಿತರಣೆ ಮಾಡಲಿವೆ. ಕೇಂದ್ರ ಸರಕಾರ ಈ ಬಗ್ಗೆ ಸೂಚಿಸಿದೆ.

ಜೀವ ವಿಮೆಯಲ್ಲಿ ಟಿಡಿಎಸ್‌: ನಿಮ್ಮ ಜೀವ ವಿಮೆಯ ಮೆಚ್ಯೂರಿಟಿ ಪ್ರಕ್ರಿಯೆಯು ತೆರಿಗೆಗೆ ಅರ್ಹ ಎಂದಿದ್ದರೆ, ಶೇ.5ರ ದರದಲ್ಲಿ ಟಿಡಿಎಸ್‌ ಅನ್ವಯವಾಗಲಿದೆ.

ಸಣ್ಣ ಮೊತ್ತದ ವರ್ಗಾವಣೆಯ ವಿವರ ಸಲ್ಲಿಕೆ: ಇದುವರೆಗೆ ಬ್ಯಾಂಕ್‌ಗಳು 50,000 ರೂ.ಗಿಂತ ಹೆಚ್ಚಿನ ಮೊತ್ತದ ಬ್ಯಾಂಕ್‌ ಹಣಕಾಸು ವರ್ಗಾವಣೆಗಳ ವಿವರಗಳನ್ನು ಅಗತ್ಯ ಇದ್ದರೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದವು. ಆದರೆ ಸೆ.1ರಿಂದ ಈ ಮಿತಿಯನ್ನು ತೆರವುಗೊಳಿಸಲಾಗಿದ್ದು, ಯಾವುದೇ ಸಣ್ಣ ಮೊತ್ತದ ಹಣ ವರ್ಗಾವಣೆಯ ವಿವರಗಳನ್ನೂ ಬ್ಯಾಂಕ್‌ಗಳು ತೆರಿಗೆ ಇಲಾಖೆಗೆ ಒದಗಿಸಬಹುದು.

ಮನೆ ಖರೀದಿ: ನೀವು ಮನೆ/ ಫ್ಲ್ಯಾಟ್‌ ಖರೀದಿಸುವ ವೇಳೆ ಕ್ಲಬ್‌ ಸದಸ್ಯತ್ವ, ಕಾರು ಪಾರ್ಕಿಂಗ್‌ ಇತ್ಯಾದಿ ಸೌಲಭ್ಯಗಳನ್ನು ಪಡೆದರೆ, ಟಿಡಿಎಸ್‌ ಮೊತ್ತದಲ್ಲಿ ಹೆಚ್ಚಳವಾಗಲಿದೆ.

ಎಸ್‌ಬಿಐ ಸಾಲ, ರೆಪೊ ದರ ಅಧಾರಿತ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗೃಹ ಮತ್ತು ಆಟೊ ಸಾಲಗಳು ಆರ್‌ಬಿಐನ ರೆಪೊ ದರವನ್ನು ಅಧರಿಸಿದ ಬಡ್ಡಿ ದರದಲ್ಲಿ ವಿತರಣೆಯಾಗಲಿವೆ. ಇದರ ಪರಿಣಾಮ ಗೃಹ ಮತ್ತು ಆಟೊ ಸಾಲ ಖರೀದಿದಾರರಿಗೆ ಬಡ್ಡಿ ದರ ಇಳಿಕೆಯ ಅನುಕೂಲ ಸಿಗಲಿದೆ.

ಮನೆಯ ನವೀಕರಣ: ಮನೆಯ ನವೀಕರಣ ಅಥವಾ ವಿವಾಹ ಕಾರ್ಯಕ್ರಮ ಇತ್ಯಾದಿಗಳಲ್ಲಿ ವೆಚ್ಚ 50 ಲಕ್ಷ ರೂ. ದಾಟಿದರೆ ಶೇ.5ರಷ್ಟು ಟಿಡಿಎಸ್‌ ಅನ್ವಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ