ಆ್ಯಪ್ನಗರ

ಪೂರ್ಣ ಪ್ರಮಾಣದ ಬಜೆಟ್ ಸುಳಿವು ನೀಡಿದ ಜೇಟ್ಲಿ: ಹೆಕ್ಟೇರ್‌ಗೆ 15 ಸಾವಿರ ರೂ. ನೆರವು

ಫೆ 1ರಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸುತ್ತಿರುವ ಮಧ್ಯಂತರ ಬಜೆಟ್‌, ಲೇಖಾನುದಾನಕ್ಕಿಂತಲೂ ಹೆಚ್ಚು ಮಹತ್ವದ್ದಾಗಿರಲಿದೆ...

THE ECONOMIC TIMES 19 Jan 2019, 8:19 am
ಹೊಸದಿಲ್ಲಿ: ಸಣ್ಣ ಮತ್ತು ಮಧ್ಯಮ ರೈತರಿಗೆ ಹೆಕ್ಟೇರ್‌ಗೆ ವಾರ್ಷಿಕ 10,000 ರೂ. ಪರಿಹಾರ ಪ್ಯಾಕೇಜ್‌ ನೀಡುವ ಕುರಿತು ನೀತಿ ಆಯೋಗವು ಪ್ರಸ್ತಾವನೆ ರೂಪಿಸಿದೆ. ಬೆಳೆ ವಿಮೆ, ವಿದ್ಯುತ್‌, ರಸಗೊಬ್ಬರ ಸೇರಿದಂತೆ ಎಲ್ಲ ಸಬ್ಸಿಡಿಗಳನ್ನು ತೆರವುಗೊಳಿಸಿ ರೈತರಿಗೆ ಆದಾಯ ಖಾತ್ರಿಯಾಗಿ 15,000 ರೂ. ವಿತರಿಸುವ ಬಗ್ಗೆ ಆಯೋಗ ಸಲಹೆ ನೀಡಿದೆ.
Vijaya Karnataka Web Arun Jaitley.


''ಒಂದು ವೇಳೆ ಸಣ್ಣ ಮತ್ತು ಮಧ್ಯಮ ಹಂತದ ರೈತರಿಗೆ ಪರಿಹಾರ ಪ್ಯಾಕೇಜ್‌ ನೀಡಿದರೆ ದೇಶದ ವಿತ್ತೀಯ ಕೊರತೆ 70 ಬೇಸಿಸ್‌ ಪಾಯಿಂಟ್ಸ್‌ ಹಿಗ್ಗಲಿದೆ,''ಎಂದು ಇಂಡಿಯಾ ರೇಂಟಿಂಗ್ಸ್‌ ಆ್ಯಂಡ್‌ ರೀಸರ್ಚ್‌ ಹೇಳಿದೆ.

ಏತನ್ಮಧ್ಯೆ, ಬಜೆಟ್‌ನಲ್ಲಿ ರೈತರಿಗಾಗಿ ವಿಶೇಷ ಪ್ಯಾಕೇಜ್‌ ಘೋಷಣೆಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ರೈತ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಜೇಟ್ಲಿ, ''ದೇಶದಲ್ಲಿ ರೈತವರ್ಗವು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಪ್ರಕಟಿಸಲಾಗುವುದು,'' ಎಂದಿದ್ದಾರೆ. ಆದರೆ ವಿವರಗಳನ್ನು ಈ ಹಂತದಲ್ಲಿ ನೀಡಲಾಗದು ಎಂದಿದ್ದಾರೆ. ವಿತ್ತ ಸಚಿವರ ಮಾತಿಗೆ ಪುಷ್ಟಿ ನೀಡುವಂತೆ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌, ''ಮುಂಬರುವ ವಾರಗಳಲ್ಲಿ ಸರಕಾರವು ಕೃಷಿ ವಲಯಕ್ಕೆ ಪೂರಕವಾದ ತೀರ್ಮಾನಗಳನ್ನು ಪ್ರಕಟಿಸಲಿದೆ,'' ಎಂದಿದ್ದಾರೆ.

ಲೇಖಾನುದಾನಕ್ಕಿಂತಲೂ ಈ ಬಜೆಟ್‌ ಹಿರಿದು: ಜೇಟ್ಲಿ

ಫೆ. 1ರಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸುತ್ತಿರುವ ಮಧ್ಯಂತರ ಬಜೆಟ್‌, ಲೇಖಾನುದಾನಕ್ಕಿಂತಲೂ ಹೆಚ್ಚು ಮಹತ್ವದ್ದಾಗಿರಲಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂಥ ವಿಶೇಷ ಪ್ಯಾಕೇಜ್‌ ಅನ್ನು ಘೋಷಿಸುವ ಸಾಧ್ಯತೆ ಇದೆ.

ಬಜೆಟ್‌ ಮಂಡನೆ ಕುರಿತು ಕಾರ್ಯಕ್ರಮವೊಂದರಲ್ಲಿ ಸುಳಿವು ನೀಡಿದ ಜೇಟ್ಲಿ, ''ಚುನಾವಣೆ ಸಮೀಪದಲ್ಲಿರುವ ಕಾರಣ, ಸರಕಾರ ಮಂಡಿಸುವ ಬಜೆಟ್‌ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್‌ ಅಥವಾ ಲೇಖಾನುದಾನ ಎಂದು ಭಾವಿಸಲಾಗುತ್ತದೆ. ಈ ಹಾದಿಯನ್ನು ನಾವು ಏಕೆ ಬದಲಿಸಬಾರದು? ಪ್ರಮುಖ ಅಂಶಗಳನ್ನೊಳಗೊಂಡ ಮತ್ತು ವಿಶೇಷವಾಗಿ ರೈತ ಸಮುದಾಯಕ್ಕೆ ಹೆಚ್ಚು ಪ್ರಯೋಜನ ನೀಡುವ ಬಜೆಟ್‌ ಇದು ಆಗಿರಲಿದೆ,'' ಎಂದಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ, ಅಲ್ಲಿ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಅವಕಾಶವಿರುವುದಿಲ್ಲ. ಹೀಗಾಗಿ ಸರಕಾರ ಮಧ್ಯಂತರ ಬಜೆಟ್‌ ಅಥವಾ ಲೇಖಾನುದಾನ ಮಂಡಿಸಬೇಕಾಗುತ್ತದೆ. ಆದರೆ ಸಚಿವ ಜೇಟ್ಲಿ ಮಾತ್ರ, ಕೆಲವೊಂದು ಮಹತ್ವದ ಯೋಜನೆಗಳನ್ನು ಒಳಗೊಂಡ ಹೆಚ್ಚು ಪ್ರಮುವೆನ್ನಿಸುವ ಬಜೆಟ್‌ ಅನ್ನೇ ಮಂಡಿಸುವ ಸುಳಿವು ನೀಡಿದ್ದಾರೆ.

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಆದ ಹಿನ್ನಡೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್‌ ಮಂಡಿಸುವ ಒತ್ತಡ ಸರಕಾರದ ಮೇಲಿದೆ. ಆದರೆ, ''ವಿತ್ತೀಯ ಶಿಸ್ತನ್ನು ಪಾಲಿಸಿ, ನಿಯಮದಂತೆಯೇ ಬಜೆಟ್‌ ಮಂಡಿಸಲಾಗುತ್ತದೆ. ಅದರ ಹೊರತು ಚುನಾವಣೆ ಎಂಬ ಉದ್ದೇಶದಲ್ಲಿ ಬಜೆಟ್‌ ಮಂಡಿಸಲಾಗುತ್ತಿಲ್ಲ,'' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ