ಆ್ಯಪ್ನಗರ

ಮಲ್ಯ ಮಾತ್ರವಲ್ಲ ಇನ್ನೂ 58 ವಿತ್ತಪರಾಧಿಗಳ ಬೇಟೆ

ಕೇವಲ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮಾತ್ರವಲ್ಲದೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಶತಾಯಗತಾಯ ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.

Vijaya Karnataka Web 21 Dec 2018, 5:00 am
ಹೊಸದಿಲ್ಲಿ : ಕೇವಲ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮಾತ್ರವಲ್ಲದೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಶತಾಯಗತಾಯ ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.
Vijaya Karnataka Web not just vijay mallya govt trying to get back 58 looters
ಮಲ್ಯ ಮಾತ್ರವಲ್ಲ ಇನ್ನೂ 58 ವಿತ್ತಪರಾಧಿಗಳ ಬೇಟೆ


ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ ಸಿಂಗ್‌ ಈ ಸಂಬಂಧ ಲೋಕಸಭೆಗೆ ವಿವರಗಳನ್ನು ನೀಡಿದ್ದಾರೆ. ಒಟ್ಟು 58 ಆರೋಪಿಗಳ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ. ಇವರ ಪೈಕಿ 16 ಮಂದಿಯ ಗಡಿಪಾರು ಕೋರಿ ಬ್ರಿಟನ್‌, ಯುಎಇ, ಬೆಲ್ಜಿಯಂ, ಈಜಿಪ್ತ್‌, ಅಮೆರಿಕ, ಅಂಟಿಗುವಾ ಮತ್ತು ಬಾರ್ಬುಡಾಗೆ ಮನವಿ ಸಲ್ಲಿಸಲಾಗಿದೆ. ಹಲವು ವಿತ್ತಪರಾಧಿಗಳ ವಿರುದ್ಧ ಪದೇಪದೆ ಗಡಿಪಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಅಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣದ ಮಧ್ಯವರ್ತಿ ಗುಡಿಯಿ ಹಸ್ಚಕೆ ಮತ್ತು ಕಾರ್ಲೊ ಜಿಯೋರ್ಸಾ ಗಡಿಪಾರಿಗೆ ಸಂಬಂಧಿಸಿ ಇಟಲಿಗೆ ಕಳೆದ ಅಕ್ಟೋಬರ್‌ನಲ್ಲಿ ಹೊಸತಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ಹಿಂದೆ 2017ರ ನವೆಂಬರ್‌ ಹಾಗೂ 2018ರ ಜನವರಿಯಲ್ಲಿ ಅರ್ಜಿ ನೀಡಲಾಗಿತ್ತು. ಹಗರಣದ ಆರೋಪಿ, ಮಧ್ಯವರ್ತಿ ಕ್ರಿಸ್ಟಿಯನ್‌ ಮೈಕೆಲ್‌ನನ್ನು ಇತ್ತೀಚೆಗೆ ಯುಎಇನಿಂದ ಗಡಿಪಾರು ಮಾಡಲಾಗಿತ್ತು.
ನೀರವ್‌ ವಿರುದ್ಧ ರೆಡ್‌ ಕಾರ್ನರ್‌
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿ ವಿರುದ್ಧ ಈಗಾಗಲೇ ರೆಡ್‌ಕಾರ್ನರ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಬ್ರಿಟನ್‌ಗೆ ಎರಡು ಬಾರಿ ಹಾಗೂ ಯುಎಇಗೆ ಒಂದು ಸಲ ನೀರವ್‌ ಗಡಿಪಾರು ಮಾಡುವಂತೆ ಮನವಿ ಮಾಡಲಾಗಿದೆ. ಆತನ ಸೋದರ ನಿಶ್ಚಲ್‌ ವಿರುದ್ಧ ಬೆಲ್ಜಿಯಂ ಮತ್ತು ಈಜಿಪ್ತ್‌ಗೆ ಗಡಿಪಾರು ಅರ್ಜಿ ಕಳಿಸಲಾಗಿದೆ. ಮೆಹುಲ್‌ ಚೋಕ್ಸಿ ವಿರುದ್ಧ ಅಂಟಿಗುವಾಗೆ ಮನವಿ ಸಲ್ಲಿಸಲಾಗಿದೆ. ಗುಜರಾತ್‌ ಮೂಲದ ಉದ್ಯಮಿ ಆಶಿಷ್‌ ಜೊಬಾನ್‌ಪುತ್ರ ಹಾಗೂ ಆತನ ಪತ್ನಿ ಪ್ರೀತಿ, ಅಮೆರಿಕದಲ್ಲಿದ್ದು, ಗಡಿಪಾರಿಗೆ ಮನವಿ ಕಳಿಸಲಾಗಿದೆ.
ಲಲಿತ್‌ ವಿರುದ್ಧ ಎಲ್‌ಆರ್‌ ನೋಟಿಸ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಯನ್ನು ಎಲ್‌ ಆರ್‌ ನೋಟಿಸ್‌ (ಲೆಟರ್ಸ್‌ ರೆಗ್ಯುಲೇಟರಿ) ಮೂಲಕ ಬೆನ್ನು ಹತ್ತಲಾಗುತ್ತಿದೆ. ಈಗಾಗಲೇ ಈ ಪತ್ರಗಳನ್ನು ಸಿಂಗಪುರ, ಹಾಂಕಾಂಗ್‌, ಸಂಯುಕ್ತ ಅರಬ್‌ ರಾಷ್ಟ್ರಗಳು ಮತ್ತು ಮಾರಿಷಿಯಸ್‌ಗೆ ಕಳುಹಿಸಲಾಗಿದೆ. ಜತೆಗೆ ಯುಎಇಯಲ್ಲಿ ಇದ್ದಾನೆ ಎನ್ನಲಾದ ಮಧ್ಯವರ್ತಿ ದೀಪಕ್‌ ತಲ್ವಾರ್‌, ಲಂಡನ್‌ನಲ್ಲಿರುವ ಸಂಜಯ್‌ ಭಂಡಾರಿಯ ಬೇಟೆ ನಡೆಯುತ್ತಿದೆ. ತಲ್ವಾರ್‌ನನ್ನು ಪರಸ್ಪರ ಕಾನೂನಾತ್ಮಕ ಸಹಾಯ ಒಪ್ಪಂದ(ಎಂಎಲ್‌ಎಟಿ)ದ ಮೂಲಕ ಕರೆ ತರುವ ಯೋಜನೆ ಇದೆ.

ಯಾರೆಲ್ಲ ಇದ್ದಾರೆ 58 ಮಂದಿಯಲ್ಲಿ?
ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ನೀರವ್‌ ಮೋದಿ ಸೋದರ ನೀಶಲ್‌, ಆಪ್ತನಾದ ಸುಭಾಷ್‌ ಪರಬ್‌, ನಿತಿನ್‌ ಮತ್ತು ಚೇತನ್‌ ಸಂದೇಸರ, ಲಲಿತ್‌ ಮೋದಿ, ಯುರೋಪಿನ ಮಧ್ಯವರ್ತಿ ಗುಯಿಡೊ ರಾಲ್ಫ್‌ ಹಷ್ಕೆ, ಕಾರ್ಲೊ ಜೆರೋಸಾ, ನೀರವ್‌, ಗುಜರಾತ್‌ ಮೂಲದ ಉದ್ಯಮಿ ಆಶಿಶ್‌ ಜೋಬಾನ್‌ ಪುತ್ರ ಮತ್ತು ಪತ್ನಿ ಪ್ರೀತಿ ದೇಸಾಯಿ ಮತ್ತಿತರರು.

ಸಂದೇಸರ ಕುಟುಂಬ

ಗುಜರಾತ್‌ನ ಸಂದೇಸದರ ಕುಟುಂಬಕ್ಕೆ ಸೇರಿದ ಸ್ಟರ್ಲಿಂಗ್‌ ಬಯೋಟೆಕ್‌ 5000 ಕೋಟಿ ರೂ. ವಂಚನೆ ನಡೆಸಿದೆ. ಅದರ ಮಾಲೀಕರಾದ ಚೇತನ್‌, ನಿತಿನ್‌, ದೀಪ್ತಿ ಸಂದೇಸರ ಮತ್ತು ಹಿತೇಶ್‌ ಕುಮಾರ್‌ ಪಟೇಲ್‌ ಅವರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಸಿದ್ಧವಾಗುತ್ತಿದೆ.

ಗುಜರಾತಿನವರೇ ಹೆಚ್ಚು

ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿತ್ತಾಪರಾಧಿಗಳಲ್ಲಿ ಗುಜರಾತ್‌ನವರೇ ಹೆಚ್ಚಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ತಾಯ್ನಾಡಿನವರೆಂಬ ಮಮತೆ ತೋರದೆ ಅವರ ವಿರುದ್ಧ ನಿರ್ದಯ ಕ್ರಮಕ್ಕೆ ಸೂಚನೆ ನೀಡಿರುವುದು ಗಮನಾರ್ಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ