ಆ್ಯಪ್ನಗರ

ಕನಿಷ್ಠ ವೇತನ ಒದಗಿಸುವ ವಿಧೇಯಕಕ್ಕೆ ಅಸ್ತು

ವೇತನ ಸಂಹಿತೆ ವಿಧೇಯಕದಿಂದ 50 ಕೋಟಿ ಕೆಲಸಗಾರರಿಗೆ ಅನುಕೂಲ

PTI 3 Aug 2019, 8:26 am
ಹೊಸದಿಲ್ಲಿ: ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತನ ನಿಗದಿಪಡಿಸುವ 'ವೇತನ ಸಂಹಿತೆ ವಿಧೇಯಕ-2019'ಕ್ಕೆ ಸಂಸತ್ತಿನಲ್ಲಿ ಶುಕ್ರವಾರ ಅನುಮೋದನೆ ದೊರೆತಿದೆ. ಉದ್ಯೋಗಿಗಳಿಗೆ ವೇತನ ವಿತರಣೆಯಲ್ಲಿ ವಿಳಂಬವಾಗುವುದೂ ಸೇರಿದಂತೆ ನಾನಾ ಸಮಸ್ಯೆಗಳನ್ನು ನಿವಾರಿಸಲು ವಿಧೇಯಕ ನೆರವಾಗಲಿದೆ.
Vijaya Karnataka Web Parliment.


ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಸಂಸತ್ತಿನಲ್ಲಿ ಮಾತನಾಡಿ, ''ಈ ವಿಧೇಯಕದಿಂದ ದೇಶದ ಸುಮಾರು 50 ಕೋಟಿ ಕೆಲಸಗಾರರಿಗೆ ಅನುಕೂಲವಾಗಲಿದೆ,'' ಎಂದಿದ್ದಾರೆ. ''ಪ್ರತಿಯೊಬ್ಬ ಕೆಲಸಗಾರನೂ ಘನತೆಯಿಂದ ಬದುಕಲು, ಈ ಐತಿಹಾಸಿಕ ವಿಧೇಯಕವು ನೆರವಾಗಲಿದೆ,'' ಎಂದು ಸಚಿವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ 85 ಸದಸ್ಯರು ಪರವಾಗಿ, ಕೇವಲ 8 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಈ ವಿಧೇಯಕವು ಕಾರ್ಮಿಕರ ಹಿತಾಸಕ್ತಿಗಳಿಗೆ ತೊಡಕಾಗುತ್ತದೆ ಎಂದು ವಿರೋಧ ಪಕ್ಷ ಗಳು ದೂರಿದ್ದವು. ಭಾರತೀಯ ಮಜ್ದೂರ್‌ ಸಂಘವೂ ಈ ವಿಧೇಯಕವನ್ನು ವಿರೋಧಿಸಿತ್ತು.

ಕನಿಷ್ಠ ವೇತನ ಪಾವತಿ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್‌ ಪಾವತಿ ಕಾಯ್ದೆ 1965 ಮತ್ತು ಸಮಾನ ವೇತನ ಕಾಯ್ದೆ 1976 - ಈ ನಾಲ್ಕು ಕಾರ್ಮಿಕ ಸಂಬಂಧಿ ಕಾನೂನುಗಳು ಈ ಹೊಸ ವಿಧೇಯಕದಲ್ಲಿ ಅಡಕ ಮಾಡಲಾಗಿದೆ. ನಾಲ್ಕೂ ಹಳೆಯ ಕಾಯ್ದೆಗಳ ಬದಲಿಗೆ ಹೊಸ ವಿಧೇಯಕವೊಂದೇ ಇನ್ನು ಮುಂದೆ ಇರಲಿದೆ. ಹೊಸ ವಿಧೇಯಕವು 32 ಕೇಂದ್ರ ಕಾರ್ಮಿಕ ನಿಯಮಗಳನ್ನು ಸರಳೀಕರಣಗೊಳಿಸಿದ್ದು, ಉದ್ಯೋಗಿಗಳ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸೂಕ್ತವಾಗಿದೆ. 2017ರ ಆ.10ರಂದು ಈ ವಿಧೇಯವು ಲೋಕಸಭೆಯಲ್ಲಿ ಮಂಡನೆಯಾಗಿತ್ತು. 2018ರ ಡಿ.18ರಂದು ವಿಧೇಯಕದ ಬಗ್ಗೆ ಸ್ಥಾಯಿ ಸಮಿತಿ ತನ್ನ ವರದಿ ನೀಡಿತ್ತು.

ಗೊಂದಲ ನಿವಾರಣೆ
ಈಗಿನ ಕಾರ್ಮಿಕ ಕಾನೂನುಗಳಲ್ಲಿ ವೇತನದ ವ್ಯಾಖ್ಯಾನವನ್ನು 12 ಬಗೆಯಲ್ಲಿ ವ್ಯಾಖ್ಯಾನಿಸಲಾಗಿದ್ದು, ಕನಿಷ್ಠ ವೇತನ ಮತ್ತು ಇತರೆ ಪ್ರಯೋಜನಗಳನ್ನು ಜಾರಿಗೊಳಿಸುವುದು ಕಷ್ಟವಾಗಿತ್ತು. ಹೊಸ ವಿಧೇಯಕವು ವ್ಯಾಖ್ಯಾನವನ್ನು ಸರಳಗೊಳಿಸಿದೆ.

ಕನಿಷ್ಠ ವೇತನ ನಿಗದಿ ಮಾಡಲ್ಲ: ಕೇಂದ್ರ
''ದೇಶದ ಎಲ್ಲ ಕಾರ್ಮಿಕರಿಗೂ ನ್ಯಾಯಬದ್ಧ ಕನಿಷ್ಠ ವೇತನ ಸಿಗಬೇಕು ಎನ್ನುವುದು ಸರಕಾರದ ಉದ್ದೇಶ. ಆದಾಗ್ಯೂ, ಕನಿಷ್ಠ ವೇತನವನ್ನು ಕೇಂದ್ರ ಸರಕಾರವು ನಿಗದಿ ಮಾಡುವುದಿಲ್ಲ. ಕೆಲಸಗಾರರಿಗೆ ಕನಿಷ್ಠ ವೇತನ ನಿಗದಿ ಮಾಡುವ ರಾಜ್ಯಗಳ ಹಕ್ಕನ್ನು ಕೇಂದ್ರವು ಕಸಿಯುವುದಿಲ್ಲ,'' ಎಂದು ಕೇಂದ್ರ ಸಚಿವ ಸಂತೋಷ್‌ ಗಂಗ್ವಾರ್‌ ಸಂಸತ್ತಿಗೆ ಭರವಸೆ ನೀಡಿದ್ದಾರೆ.

ಹೊಸ ವಿಧೇಯಕದ ಪ್ರಕಾರ, ಉದ್ಯೋಗಿಗಳು ಮತ್ತು ಉದ್ಯೋಗದಾತರ ಸಂಘಟನೆಗಳು ಮತ್ತು ರಾಜ್ಯ ಸರಕಾರದ ಪ್ರತಿನಿಧಿಗಳನ್ನು ಒಳಗೊಂಡ ತ್ರಿಪಕ್ಷೀಯ ಸಮಿತಿಯು ವೇತನವನ್ನು ನಿಗದಿ ಮಾಡುತ್ತದೆ. ''ಕನಿಷ್ಠ ವೇತನ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಹಕ್ಕು'' ಎಂದು ಗಂಗ್ವಾರ್‌ ಹೇಳಿದ್ದಾರೆ.

ಹೊಸ ವಿಧೇಯಕದಿಂದ ಏನು ಲಾಭ?

- ತಿಂಗಳು, ವಾರ ಅಥವಾ ದಿನಗಳ ಆಧಾರದಲ್ಲಿ ಏನೇ ಇರಲಿ ವೇತನವನ್ನು ತಡ ಮಾಡುವಂತಿಲ್ಲ. ಇಂಥ ಸಮಸ್ಯೆಗಳನ್ನು ಹೊಸ ಕಾಯ್ದೆಯು ಇತ್ಯರ್ಥ ಪಡಿಸಲಿದೆ.
- ಕನಿಷ್ಠ ವೇತನವು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಲು ವಿಧೇಯಕದಲ್ಲಿ ಆದ್ಯತೆ.
- ವೇತನ ನಿಗದಿಯಲ್ಲಿ ಪುರುಷ, ಮಹಿಳೆ, ಮಂಗಳಮುಖಿಯರು ಸೇರಿದಂತೆ ಪಕ್ಷಪಾತ ಮಾಡುವಂತಿಲ್ಲ.
- ವಲಯ, ವೇತನದ ಸ್ಥರಗಳು ಏನೇ ಇದ್ದರೂ, ಎಲ್ಲ ಉದ್ಯೋಗಿಗಳಿಗೂ ಸಕಾಲಕ್ಕೆ ವೇತನ ನೀಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ