ಆ್ಯಪ್ನಗರ

ಒಂದು ವಾರದಲ್ಲಿ 1.47 ಲಕ್ಷ ಕೋಟಿ ಪಾವತಿಸಿ: ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಸೂಚನೆ

ಕೇಂದ್ರ ಸರಕಾರಕ್ಕೆ ಬಾಕಿ ಮೊತ್ತವನ್ನು ಜನವರಿ 23ರ ಒಳಗೆ ಪಾವತಿ ಮಾಡುವಂತೆ ಭಾರತೀ ಏರ್‌ಟೆಲ್‌ ಮತ್ತು ವೋಡಾಫೋನ್‌ ಐಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ 24ರಂದು ಆದೇಶ ನೀಡಿತ್ತು.

Vijaya Karnataka Web 16 Jan 2020, 9:55 pm
ಹೊಸದಿಲ್ಲಿ: ಕೇಂದ್ರ ಸರಕಾರಕ್ಕೆ ನೀಡಬೇಕಾಗಿದ್ದ 1.47 ಲಕ್ಷ ಕೋಟಿ ರೂ. ಬಾಕಿಯನ್ನು ಒಂದು ವಾರದಲ್ಲಿ ಪಾವತಿಸಿ.....
Vijaya Karnataka Web ಟೆಲಿಕಾಂ
ಟೆಲಿಕಾಂ


ಇದು ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ನೀಡಿರುವ ಸೂಚನೆ.

ಕೇಂದ್ರ ಸರಕಾರಕ್ಕೆ ನೀಡಬೇಕಿದ್ದ 1.47 ಲಕ್ಷ ಕೋಟಿ ರೂ. ಬಾಕಿ ಮೊತ್ತದ ಹೊರೆಯಿಂದ ಬಚಾವಾಗಲು ದೇಶದ ಉನ್ನತ ಟೆಲಿಕಾಂ ಸಂಸ್ಥೆಗಳು ನಡೆಸಿದ ಕೊನೆಯ ಕಾನೂನು ಕಸರತ್ತಿಗೂ ಸುಪ್ರೀಂ ಕೋರ್ಟ್‌ ಗುರುವಾರ ತಡೆ ಹಾಕಿದೆ.

ಶಾಸನಬದ್ಧ ಬಾಕಿ ಮೊತ್ತವನ್ನು ಜನವರಿ 23ರ ಒಳಗೆ ಪಾವತಿ ಮಾಡುವಂತೆ ಭಾರತೀ ಏರ್‌ಟೆಲ್‌ ಮತ್ತು ವೋಡಾಫೋನ್‌ ಐಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ 24ರಂದು ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಸ್‌.ಎ.ನಜೀರ್‌ ಮತ್ತು ಎಂ.ಆರ್‌. ಶಾ ಒಳಗೊಂಡ ತ್ರಿಸದಸ್ಯ ಪೀಠ, ‘‘ಬಾಕಿ ಮೊತ್ತ ಮನ್ನಾ ಬಯಸಲು ಸೂಕ್ತ ಕಾರಣಗಳೇ ಇಲ್ಲ’’ ಎಂದು ಕಂಪನಿಗಳ ಮನವಿಯನ್ನು ಸುಪ್ರೀಂ ತಳ್ಳಿಹಾಕಿತು.

ಮೇಲ್ಮನವಿ ಕುರಿತು ಮುಕ್ತ ಕೋರ್ಟ್‌ ವಿಚಾರಣೆ ನಡೆಸಬೇಕು ಎನ್ನುವ ಅರ್ಜಿದಾರರ ವಾದಕ್ಕೂ ಮನ್ನಣೆ ನೀಡದ ನ್ಯಾಯಪೀಠ, ಎಂದಿನಂತೆ ಇನ್‌-ಛೇಂಬರ್‌ ವಿಚಾರಣೆ ನಡೆಸಿ, ಮೇಲ್ಮನವಿಯಲ್ಲಿಹುರುಳಿಲ್ಲಎಂದು ಹೇಳಿ ಕೊನೆಗೊಳಿಸಿತು.

ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್‌) ಎಂದು ಪರಿಗಣಿಸುವ ಟೆಲಿಕಾಂ ಅಲ್ಲದ ಮೂಲಗಳ ಆದಾಯವನ್ನೂ ಸೇರಿಸಿ ಟೆಲಿಕಾಂ ಕಂಪನಿಗಳ ಶಾಸನಬದ್ಧ ಬಾಕಿ ಮೊತ್ತ ಲೆಕ್ಕಹಾಕುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ 24ರಂದು ತೀರ್ಪು ನೀಡಿತ್ತು. ಎಜಿಆರ್‌ ಸಂಬಂಧಿತ ಬಡ್ಡಿ ಮೇಲಿನ ಶುಲ್ಕ, ದಂಡ ಮತ್ತು ದಂಡದ ಮೇಲಿನ ಬಡ್ಡಿ ಸೇರಿ ಪ್ರಮುಖ ಟೆಲಿಕಾಂ ಕಂಪನಿಗಳ ಒಟ್ಟು ಬಾಕಿ ಮೊತ್ತ ಬೃಹತ್‌ 1.47 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈ ಕುರಿತು ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸಂಸತ್ತಿಗೆ ಮಾಹಿತಿ ಕೂಡ ನೀಡಿದ್ದರು.

92,642 ಕೋಟಿ ರೂ.: ಬಾಕಿ ಉಳಿದ ಲೈಸನ್ಸ್‌ ಶುಲ್ಕ

55,054 ಕೋಟಿ ರೂ.: ತರಂಗಾಂತರ ಬಳಕೆ ಬಾಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ