ಆ್ಯಪ್ನಗರ

ಲಾಕ್‌ಡೌನ್ ಪರಿಣಾಮ: ದೇಶದಲ್ಲಿ ವಿದ್ಯುತ್ ಉಳಿತಾಯದ ಪರ್ವ ಆರಂಭ!

ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾದ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮುಚ್ಚಲ್ಪಟ್ಟಿವೆ. ಅಲ್ಲದೇ ಕೆಲವೇ ಅಗತ್ಯ ಸೇವಾ ಕೈಗಾರಿಕೆಗಳು ಹೊರತುಪಡಿಸಿ ಉಳಿದೆಲ್ಲಾ ಬೃಹತ್ ಉದ್ದಿಮೆಗಳೂ ಬೀಗ ಜಡೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತಿದೆ.

Vijaya Karnataka Web 26 Mar 2020, 5:21 pm
ನವದೆಹಲಿ: ಈ ಜಗತ್ತಿನ ಎಲ್ಲಾ ಭೌತಿಕ ವಸ್ತುಗಳಿಗೂ ಹಾಗೂ ಜೀವಿಗಳಿಗೂ ಎರಡು ಗುಣಗಳಿರುತ್ತವೆ. ಒಂದು ಇಡೀ ಜೀವ ಸಂಕುಲಕ್ಕೆ ಕೆಟ್ಟದ್ದನ್ನು ಮಾಡುವುದು. ಮತ್ತೊಂದು ಜೀವ ಸಂಕುಲಕ್ಕೆ ಒಳ್ಳೆಯದಾಗುವ ಉತ್ತಮ ಕಾರ್ಯಗಳನ್ನು ಮಾಡುವುದು. ಆಯ್ಕೆ ಮಾತ್ರ ಆಯಾ ವಸ್ತುಗಳಿಗೆ ಹಾಗೂ ಜೀವಿಗಳಿಗೆ ಬಿಟ್ಟಿದ್ದು,
Vijaya Karnataka Web Electricity
ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಭಾರೀ ವಿದ್ಯುತ್ ಉಳಿತಾಯವಾಗುತ್ತಿದೆ.


ಅದರಂತೆ ಇಡೀ ಮಾನವ ಸಂಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ಮಾರಕ ಕೊರೊನಾ ವೈರಸ್, ತನ್ನ ಕೆಟ್ಟ ಉದ್ದೇಶದ ನಡುವೆಯೂ ತುಸು ಒಳ್ಳೆಯ ಕಾರ್ಯ ಮಾಡಿದೆ ಎಂದರೆ ನೀವು ನಂಬಲೇಬೇಕು.

ಹೌದು, ಜಗತ್ತಿನಾದ್ಯಂತ ತನ್ನ ಮರಣ ಮೃದಂಗವನ್ನು ಮುಂದುವರೆಸಿರುವ ಮಾರಕ ಕೊರೊನಾ ವೈರಸ್‌ಗೆ ಬೆದರಿ ಎಲ್ಲಾ ದೇಶಗಳು ಲಾಕ್‌ಡೌನ್ ಮೊರೆ ಹೋಗಿವೆ. ಅದರಂತೆ ಭಾರತದಲ್ಲೂ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ.

ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾದ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮುಚ್ಚಲ್ಪಟ್ಟಿವೆ. ಅಲ್ಲದೇ ಕೆಲವೇ ಅಗತ್ಯ ಸೇವಾ ಕೈಗಾರಿಕೆಗಳು ಹೊರತುಪಡಿಸಿ ಉಳಿದೆಲ್ಲಾ ಬೃಹತ್ ಉದ್ದಿಮೆಗಳೂ ಬೀಗ ಜಡೆದಿವೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತಿದ್ದು, ಕಳೆದ ವರ್ಷದ ಮಾರ್ಚ್‌ನಲ್ಲಿದ್ದ ಸರಾಸರಿ 155 ಗಿಗಾ ವ್ಯಾಟ್ ವಿದ್ಯುತ್ ಬೇಡಕೆ ಪ್ರಸಕ್ತ ಮಾರ್ಚ್‌ನಲ್ಲಿ 135 ಗಿಗಾ ವ್ಯಾಟ್‌ಗೆ ಕುಸಿದಿದೆ.

ಷೇರು ಮೌಲ್ಯ ಕಳೆದುಕೊಂಡ ಪ್ರಖ್ಯಾತ ಸಂಸ್ಥೆಗಳು: ಹೂಡಿಕೆಗೆ ಇದು ಸೂಕ್ತ ಸಮಯವೇ?

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಇಂಧನ ವಿನಿಮಯ(ಐಇಎಕ್ಸ್) ಶೇ.1.20 ರಷ್ಟು ವಿದ್ಯುತ್ ಬೇಡಿಕೆ ಕುಸಿದಿದ್ದು, ಸ್ಪಾಟ್ ವಿದ್ಯುತ್ ಬೆಲೆಯನ್ನು ದಾಖಲೆಯ ಕನಿಷ್ಠ ಮಟ್ಟಕ್ಕೆ ತಳ್ಳಿದೆ ಎಂದು ಸ್ಪಷ್ಟಪಡಿಸಿದೆ.

ಕಚೇರಿಗಳು ಮತ್ತು ಕಾರ್ಖಾನೆಗಳ ಮುಚ್ಚುವಿಕೆ, ರಾಜ್ಯಗಳು ವಿದ್ಯುತ್ ಖರೀದಿಯನ್ನು ಕಡಿಮೆ ಮಾಡುವುದು ಮತ್ತು ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕ ರೈಲು ಸೇವೆಗಳನ್ನು ನಿಲ್ಲಿಸಿರುವುದು ವಿದ್ಯುತ್ ಉಳಿತಾಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ತಮಿಳುನಾಡಿನ ಕೈಗಾರಿಕಾ ಕೇಂದ್ರಗಳಿಂದ ಮತ್ತು ಪಂಜಾಬ್ ರೈತರಿಂದ ವಿದ್ಯುತ್ ಬೇಡಿಕೆ ಗಣನೀಯವಾಗಿ ಕುಸಿದಿದೆ. ಆದರೂ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ತಾಪಮಾನದ ಏರಿಕೆಯ ಪರಿಣಾಮವಾಗಿ ವಿದ್ಯುತ್ ಬೇಡಿಕೆ ಅಧಿಕವಾಗಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಇಎಕ್ಸ್ ವ್ಯವಹಾರ ಅಭಿವೃದ್ಧಿಯ ಮುಖ್ಯಸ್ಥ ರೋಹಿತ್ ಬಜಾಜ್,ವಿನಿಮಯ ಕೇಂದ್ರದಲ್ಲಿನ ಮಾರಾಟ ಬಿಡ್‌ಗಳು ಖರೀದಿ ಬಿಡ್‌ಗಳ ಶೇ. 2.5 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಭಯದಿಂದ ಇಡೀ ದೇಶ ಲಾಕ್‌ಡೌನ್ ಆಗಿರುವುದು ವಿದ್ಯುತ್ ಉಳಿತಾಯಕ್ಕೆ ಕಾರಣವಾಗಿರುವುದು ಸಂತಸದ ಸಂಗತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ