ಆ್ಯಪ್ನಗರ

ಹೆಚ್ಚು ವಸೂಲಾಗದ ಸಾಲದ ಮೂಲ 2006 - 08: ರಘುರಾಮ್ ರಾಜನ್‌

ಸಾರ್ವಜನಿಕ ​​​ಬ್ಯಾಂಕ್‌ಗಳ ಅತಿಯಾದ ಆತ್ಮ ವಿಶ್ವಾಸ, ನಿರ್ಧಾರ ಕೈಗೊಳ್ಳುವಲ್ಲಿ ಯುಪಿಎ ಮತ್ತು ಎನ್‌ಡಿಎ ಸರಕಾರಗಳ ನಿಧಾನಗತಿಯ ಧೋರಣೆಗಳ ಪರಿಣಾಮ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ(ಎನ್‌ಪಿಎ) ಹೊರೆ ಉಲ್ಬಣಿಸುವಂತಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ.

Vijaya Karnataka 12 Sep 2018, 10:29 am
ಹೊಸದಿಲ್ಲಿ: ಸಾರ್ವಜನಿಕ ಬ್ಯಾಂಕ್‌ಗಳ ಅತಿಯಾದ ಆತ್ಮ ವಿಶ್ವಾಸ, ನಿರ್ಧಾರ ಕೈಗೊಳ್ಳುವಲ್ಲಿ ಯುಪಿಎ ಮತ್ತು ಎನ್‌ಡಿಎ ಸರಕಾರಗಳ ನಿಧಾನಗತಿಯ ಧೋರಣೆಗಳ ಪರಿಣಾಮ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ(ಎನ್‌ಪಿಎ) ಹೊರೆ ಉಲ್ಬಣಿಸುವಂತಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ.
Vijaya Karnataka Web Raghuram Rajan


ಮುರಳಿ ಮನೋಹರ್‌ ಜೋಷಿ ನೇತೃತ್ವದ ಅಂದಾಜುಗಳ ಕುರಿತ ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ರಾಜನ್‌, ಎನ್‌ಪಿಎ ಏರಿಕೆಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.

''ಆರ್ಥಿಕತೆ ಉತ್ತಮವಾಗಿದ್ದ ಅಂದರೆ 2006-2007ರಲ್ಲಿಯೇ ಅತಿ ಹೆಚ್ಚಿನ ಎನ್‌ಪಿಎ ಸೃಷ್ಟಿಯಾಗಿವೆ. ಅವು ಈಗ ಕೆಟ್ಟ ಸಾಲಗಳಾಗಿ ಪರಿವರ್ತನೆಯಾಗಿವೆ. ಇದಕ್ಕೂ ಮೊದಲು ವಿದ್ಯುತ್‌ ಉತ್ಪಾದನಾ ಘಟಕಗಳೂ ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗೆ ನೀಡಿದ್ದ ಸಾಕಷ್ಟು ಸಾಲಗಳು ಸಕಾಲಕ್ಕೆ ಮರುಪಾವತಿಯಾಗಿದ್ದವು. ದೇಶ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಬ್ಯಾಂಕುಗಳು ದಾರಿತಪ್ಪಿರುವುದನ್ನು ಗಮನಿಸಬಹುದು. ಹಿಂದಿನ ಅಭಿವೃದ್ಧಿಯ ವೇಗವನ್ನು ಆಧರಿಸಿ ಹೆಚ್ಚಿನ ಸಾಲಗಳನ್ನು ಅತಿ ಆತ್ಮವಿಶ್ವಾಸದಿಂದ ಬ್ಯಾಂಕ್‌ಗಳು ನೀಡಿವೆ. ಇದು ಎನ್‌ಪಿಎ ವೃದ್ಧಿಗೆ ಕಾರಣ,'' ಎಂದು ರಾಜನ್‌ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಅನೇಕ ಯೋಜನೆಗಳು ನನೆಗುದಿಗೆ ಬಿದ್ದ ಪರಿಣಾಮ ಸಕಾಲದಲ್ಲಿ ಸಾಲ ವಿತರಣೆಯಾಗದೆ ಎನ್‌ಪಿಎ ಮತ್ತಷ್ಟು ಹೆಚ್ಚಿತು ಎಂದಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ರಾಜನ್‌ ಅವರು, ಮೊದಲ ಬಾರಿಗೆ ಎನ್‌ಪಿಎ ಸಮಸ್ಯೆಯನ್ನು ಗುರುತಿಸಿ ಅದನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದರು. ಈ ಬಗ್ಗೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಹ್ಮಣ್ಯಂ ಪ್ರಶಂಸಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜನ್‌ರಿಂದ ಸಂಸದೀಯ ಸಮಿತಿಯು ಸಲಹೆಗಳನ್ನು ಕೇಳಿತ್ತು. ನಿವೃತ್ತಿ ಬಳಿಕ ರಾಜನ್‌ ಅವರು, ಶಿಕಾಗೊದ ಬೂತ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯಾಂಕ್‌ಗಳ ಅತ್ಯುತ್ಸಾಹ

''ಕೆಲವು ಸಲ ಪ್ರವರ್ತಕರ ಯೋಜನಾ ವರದಿಗಳನ್ನು ಪರಾಮರ್ಶಿಸುವ ಗೋಜಿಗೆ ಹೋಗದ ಬ್ಯಾಂಕ್‌ಗಳು ಸಾಲ ನೀಡಿವೆ. ಉದಾಹರಣೆಯಾಗಿ ಹೇಳುವುದಾದರೆ, ಪ್ರವರ್ತಕರೊಬ್ಬರನ್ನು ಓಲೈಸಲು ಬ್ಯಾಂಕ್‌ನ ಪ್ರತಿನಿಧಿಗಳು ಅತಿಯಾಗಿ ಪ್ರಯತ್ನಿಸಿದ್ದರು. 'ನಿಮಗೆ ಎಷ್ಟು ಸಾಲ ಬೇಕು ತಿಳಿಸಿ' ಎಂದು ಚೆಕ್‌ ಪುಸ್ತಕವನ್ನು ಬ್ಯಾಂಕ್‌ನ ಪ್ರತಿನಿಧಿಯೊಬ್ಬ ಪ್ರವರ್ತಕರ ಮುಂದೆ ಇಟ್ಟಿದ್ದರು. ಪ್ರವರ್ತಕರೇ ಈ ವಿಷಯವನ್ನು ನನಗೆ ತಿಳಿಸಿದ್ದಾರೆ,'' ಎಂದು ರಾಜನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ