ಆ್ಯಪ್ನಗರ

ಆರ್‌ಬಿಐನಿಂದ ಮತ್ತೆ 0.25% ಬಡ್ಡಿ ಇಳಿಕೆ ಸಂಭವ

ಆರ್ಥಿಕತೆ ಉತ್ತೇಜಿಸಲು ಬಡ್ಡಿ ದರ ಇಳಿಸುವಂತೆ ಉದ್ಯಮದ ಒತ್ತಾಯ | ಆರ್‌ಬಿಐನ ಬುಧವಾರದ ಸಭೆಯತ್ತ ಮಾರುಕಟ್ಟೆಯ ಗಮನ

PTI 6 Aug 2019, 5:00 am
ಹೊಸದಿಲ್ಲಿ: ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ತನ್ನ ರೆಪೊ ದರವನ್ನು(ಬಡ್ಡಿ ದರ) ಮತ್ತೆ ಶೇ.0.25ರಷ್ಟು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web rbi likely to cut repo rate by 25 bps
ಆರ್‌ಬಿಐನಿಂದ ಮತ್ತೆ 0.25% ಬಡ್ಡಿ ಇಳಿಕೆ ಸಂಭವ


ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆ ಆ.5ರಿಂದ 7ರ ತನಕ ನಡೆಯಲಿದೆ. ಸಭೆಯ ಕೊನೆಯ ದಿನವಾದ ಬುಧವಾರ, ರೆಪೊ ದರವನ್ನು ಕಡಿತ ಮಾಡುವ ಅವಕಾಶಗಳಿವೆ. ಇದರಿಂದ ದ್ರವ್ಯತೆ ಕೊರತೆಯ ಪರಿಸ್ಥಿತಿ ಸುಧಾರಿಸಲಿದೆ. ಬ್ಯಾಂಕ್‌ಗಳ ಸಾಲಗಳ ಮೇಲಿನ ಬಡ್ಡಿ ಇಳಿಕೆಯಾಗಿ ಆರ್ಥಿಕ ವ್ಯವಹಾರಗಳಿಗೆ ಪುಷ್ಟಿ ಸಿಗಲಿದೆ.

''ಎಂಪಿಸಿ ಈ ಸಲ ಶೇ.0.25ರಷ್ಟು ರೆಪೊ ದರ ಇಳಿಸಬಹುದು ಎನ್ನುವ ವಿಶ್ವಾಸ ನನ್ನಲ್ಲಿದೆ. ಈ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ದೊರೆಯಬೇಕಾಗಿದೆ,'' ಎಂದು ಯುನಿಯನ್‌ ಬ್ಯಾಂಕ್‌ ಸಿಇಒ ಮತ್ತು ಎಂಡಿ ರಾಜಕಿರಣ್‌ ರೈ ಜಿ ಹೇಳಿದ್ದಾರೆ.

ಉದ್ಯಮ ಸಂಸ್ಥೆ ಸಿಐಐ ಸಹ ರೆಪೊ ದರ ಕಡಿತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ''ಆರ್ಥಿಕ ಬೆಳವಣಿಗೆಯ ವೇಗ ಮಂದಗತಿಯಲ್ಲಿದೆ. ಇನ್ನು ಹಣದುಬ್ಬರವು ಆರ್‌ಬಿಐ ಗುರಿಯಾದ ಶೇ.4ಕ್ಕಿಂತಲೂ ಕಡಿಮೆಯೇ ಇದೆ. ಈ ಅಂಶಗಳು ರೆಪೊ ದರ ಇಳಿಕೆಗೆ ಪೂರಕವಾಗಿವೆ,'' ಎಂದು ಹೇಳಿದೆ. ಆದಾಗ್ಯೂ, ಈ ವರೆಗಿನ ರೆಪೊ ದರ ಕಡಿತದ ಲಾಭವನ್ನು ಬ್ಯಾಂಕ್‌ಗಳು ಪೂರ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂದೂ ಸಿಐಐ ದೂರಿದೆ.

''ಆರ್‌ಬಿಐ ಈ ಸಲ ನಗದು ಮೀಸಲು ದರವನ್ನು(ಸಿಆರ್‌ಆರ್‌) ಶೇ.0.50ರಷ್ಟು ಕಡಿತ ಮಾಡಿ, 60,000 ಕೋಟಿ ರೂ.ಗಳನ್ನು ವ್ಯವಸ್ಥೆಗೆ ಬಿಡುಗಡೆ ಮಾಡಬೇಕು. ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂಡವಾಳ ಮರುಪೂರಣ ಮಾಡುವುದರಿಂದ ಸಂಪನ್ಮೂಲ ಕೊರತೆಯಿಂದ ಬಳಲುತ್ತಿರುವ ಬ್ಯಾಂಕ್‌ಗಳಿಗೆ ತುಸು ಹಗುರವಾಗುತ್ತದೆ,'' ಎಂದು ಸಿಐಐ ಹೇಳಿದೆ.

ಉದ್ಯಮ ಸಂಘಟನೆ ಅಸೋಸಮ್‌ ಸಹ ಬಡ್ಡಿ ದರದ ಅಗತ್ಯವನ್ನು ಒತ್ತಿ ಹೇಳಿದೆ. ''ಇನ್ನಷ್ಟು ಹೂಡಿಕೆಗಳ ಮೂಲಕ ಆರ್ಥಿಕ ಬೆಳವಣಿಗೆ ದರ ವೃದ್ಧಿಸಲು ಅಗ್ಗದ ದರದ ಸಾಲಗಳು ಅಗತ್ಯವಾಗಿವೆ. ಗ್ರಾಹಕರ ವೆಚ್ಚಗಳೂ ಹೆಚ್ಚುತ್ತವೆ,'' ಎಂದು ಅಸೋಸಮ್‌ ಅಭಿಪ್ರಾಯಪಟ್ಟಿದೆ.

ಕೃಷಿ ಮತ್ತು ಉತ್ಪಾದನೆ ವಲಯದ ಕಳಪೆ ಸಾಧನೆಯಿಂದಾಗಿ 2018-19ರ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಜಿಡಿಪಿ ಶೇ.5.8ಕ್ಕೆ ಕುಸಿದಿತ್ತು. ಒಟ್ಟಾರೆ ವರ್ಷದ ಜಿಡಿಪಿ ಶೇ.6.8ರಷ್ಟಿತ್ತು. ಕಳೆದ ವರ್ಷ ಶೇ.7.2ರ ಜಿಡಿಪಿ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ