ಆ್ಯಪ್ನಗರ

ರೆಪೋ ದರ ಕಡಿತದಿಂದ ಬಡ್ಡಿದರ ಇಳಿಕೆ: ಸಾಲ ಪಡೆಯಲು ಇದು ಸುವರ್ಣ ಕಾಲ!

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಭಾರೀ ಕಡಿತ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಮಾಡಲಿವೆ. ಹಾಗಾಗಿ, ಕನಸಿನ ಮನೆ ಕಟ್ಟುವವರು, ವಾಹನ ತೆಗೆದುಕೊಳ್ಳುವವರು, ಉದ್ಯಮ ಆರಂಭಿಸುವವರು ಸಾಲ ಪಡೆಯಲು ಇದು ಸಕಾಲವಾಗಿದೆ.

Vijaya Karnataka Web 22 May 2020, 1:34 pm
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರದಲ್ಲಿ ಭಾರೀ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಮಾಡುತ್ತಿವೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಸಾಲ ಪಡೆಯದೆ ಕನಸಿನ ಗೂಡು ಕಟ್ಟಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ದುಬಾರಿಯಾಗುತ್ತಿರುವ ದೈನಂದಿನ ಬದುಕಿನಲ್ಲಿ ಬಂಡವಾಳ ಹೊಂದಿಸುವುದೇ ಕಷ್ಟವಾಗುತ್ತಿದೆ. ಇದೀಗ ಲಾಕ್‌ಡೌನ್‌ನಿಂದ ಮತ್ತಷ್ಟು ಸೊರಗಿರುವ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಹಲವು ಘೋಷಣೆ ಮಾಡಿದೆ.
Vijaya Karnataka Web rbi makes loans cheaper big relief on interest payments
ರೆಪೋ ದರ ಕಡಿತದಿಂದ ಬಡ್ಡಿದರ ಇಳಿಕೆ: ಸಾಲ ಪಡೆಯಲು ಇದು ಸುವರ್ಣ ಕಾಲ!


ರೆಪೋ ದರ ಶೇ.4ಕ್ಕೆ ಇಳಿಕೆ

ದೇಶದಲ್ಲಿ ರೆಪೋ ದರದಲ್ಲಿ 40 ಮೂಲಾಂಶಗಳಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಈ ಮೊದಲ ಶೇ.4.4ರಷ್ಟಿದ್ದ ರೆಪೋ ದರ ಶೇ.4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರೆಪೋ ದರವನ್ನು ಶೇ.3.75ರಿಂದ ಶೇ.3.35ಕ್ಕೆ ಇಳಿಸಿದ್ದು ಬ್ಯಾಂಕ್ ಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ರೆಪೋ ದರವನ್ನು ಕಡಿತಗಳಿಸಿದ್ದರಿಂದ ಸಾಲದ ಮೇಲಿನ ಬಡ್ಡಿದರವು ಕಡಿಮೆಯಾಗಲಿದೆ. ಇದರ ಜೊತೆಗೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಇಎಂಐ ಹಣವು ಕಡಿಮೆಯಾಗಲಿದೆ. ಹೀಗಾಗಿ ಸಾಲವು ಸುಲಭವಾಗಿ ದೊರೆಯಲಿದ್ದು, ಸಾಲ ಪಡೆಯಲು ಇದೊಂದು ಸುವರ್ಣ ಕಾಲವಾಗಿದೆ.

ಕಳೆದ ಮಾರ್ಚ್ ನಲ್ಲೂ ರೆಪೋ ದರ ಕಡಿತ

ಕಳೆದ ಮಾರ್ಚ್ 27ರಂದು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರ್‌ಬಿಐ ರೆಪೋ ದರವನ್ನು 75 ಮೂಲಾಂಶಗಳಷ್ಟು ಕಡಿತಗೊಳಿಸಲಾಗಿತ್ತು. ಇದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಹೂಡಿಕೆ ಮೇಲಿನ ಬಡ್ಡದರವು ಕಡಿಮೆಯಾಗಿತ್ತು. ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡು ಬಂದರೂ ಸಹ ಎರಡನೇ ತ್ರೈಮಾಸಿಕದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯ ಪ್ರಮುಖಾಂಶಗಳು

  • *ಜಾಗತಿಕ ಆರ್ಥಿಕತೆ ಮೇಲೆ ಕೊರೋನಾ ವೈರಸ್‌ ಭೀಕರ ಪರಿಣಾಮ ಬೀರಿದೆ. ಇದರಿಂದಾಗಿ ಏಪ್ರಿಲ್‌ ತಿಂಗಳಲ್ಲೇ ಆಹಾರ ಹಾಗೂ ಹಣದುಬ್ಬರ ಶೇ.8.6ರಷ್ಟು ಏರಿಕೆಯಾಗಿದೆ.
  • *ಬೇಳೆ ಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸುತ್ತಿದೆ. ಸದ್ಯ ದೇಶದಲ್ಲಿ ಉತ್ತಮ ಮುಂಗಾರು ಆರಂಭದ ಮುನ್ಸೂಚನೆ ಇದೆ. ದೇಶದ ಆಹಾರ ಭದ್ರತೆಗೆ ಇದು ಅನುಕೂಲಕಾರಿ.
  • *ಕೊರೊನಾ ವೈರಸ್‌ ಹೊಡೆತಕ್ಕೆ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಶೇ.17ರಷ್ಟು ಕುಸಿತ.
  • * ದೇಶದ ಒಟ್ಟಾರೆ ಆಮದಿನಲ್ಲಿ ಶೇ.5.8ರಷ್ಟು ಕುಸಿತ. ಕಳೆದ 30 ವರ್ಷದಲ್ಲೇ ರಫ್ತು ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ.
  • *ಆಹಾರ ಧಾನ್ಯ ಉತ್ಪಾದನೆ ಶೇ.3.7ರಷ್ಟು ಹೆಚ್ಚಳ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
  • *ದೇಶದ ಜಿಡಿಪಿ ಬೆಳವಣಿಗೆ ಶೂನ್ಯಕ್ಕಿಂತಲೂ ಇಳಿಕೆಯಾಗಿದೆ. 2021ರವರೆಗೂ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕೆಳಗಿಳಿಯಲಿದೆ.
  • *ಲಾಕ್‌ಡೌನ್‌ ಕಾರಣದಿಂದ ಮಾರ್ಚ್‌ನಲ್ಲಿ ಸಿಮೆಂಟ್‌ ಉತ್ಪಾದನೆ ಶೇ. 19ರಷ್ಟು ಕುಸಿತ

ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆಗಳು

ಸೊರಗಿದ ಆರ್ಥಿಕತೆಯನ್ನು ಮೇಲೆತ್ತಲು ಆರ್‌ಬಿಐ 4 ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

  • 1. ಮಾರುಕಟ್ಟೆ ಪುನಶ್ಚೇತನ
  • 2. ರಫ್ತು ಉತ್ತೇಜನ
  • 3. ಕೊರೊನಾದಿಂದ ಆರ್ಥಿಕ ಹೊರೆ ತಗ್ಗಿಸುವುದು
  • 4. ಸಾಲದ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆ.

ಆಗಸ್ಟ್‌ 31ರವರೆಗೆ ಇಎಂಐ ಪಾವತಿ ಅವಧಿ ವಿಸ್ತರಣೆ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಇಎಂಐ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ. ಜೂನ್‌ 1ರಿಂದ ಆಗಸ್ಟ್‌ 31ರವರೆಗೆ ಮೂರು ತಿಂಗಳ ಕಾಲ ಇಎಂಐ ಪಾವತಿಯನ್ನುಅವಧಿಯನ್ನು ವಿಸ್ತರಿಸಿದೆ. ಈ ಮೊದಲು ಮಾರ್ಚ್‌ 1ರಿಂದ ಮೇ 31ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್‌ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್‌ಡೌನ್‌ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ