ಆ್ಯಪ್ನಗರ

50 ಸಾವಿರ ಕೋಟಿ ರೂ. ಕ್ಯಾಶ್‌ ನುಂಗಿದ ದೀಪಾವಳಿ

ನ.9ಕ್ಕೆ ಅಂತ್ಯವಾದ ದೀಪಾವಳಿ ವಾರದ ಅವಧಿಯಲ್ಲಿ 49,420 ಕೋಟಿ ರೂ. ನಗದು ಹಣವನ್ನು ಬ್ಯಾಂಕ್‌ಗಳಿಂದ ಗ್ರಾಹಕರು ಹೊರತೆಗೆದಿದ್ದಾರೆ

Vijaya Karnataka 17 Nov 2018, 9:28 am
ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ದೀಪಾವಳಿ ಸಂದರ್ಭದಲ್ಲಿ ನಗದು ವ್ಯವಹಾರಗಳ ಪ್ರಮಾಣ ಎರಡು ಪಟ್ಟನ್ನೂ ಮೀರಿದೆ. ಡಿಜಿಟಲ್‌ ವ್ಯವಹಾರಗಳ ಜನಪ್ರಿಯತೆ ನಡುವೆಯೂ ಸಾಂಪ್ರದಾಯಿಕ ನಗದು ಬಳಕೆ ತೀವ್ರವಾಗಿ ಹೆಚ್ಚುತ್ತಿರುವುದನ್ನು ಆರ್‌ಬಿಐ ಅಂಕಿಅಂಶಗಳೇ ಸೂಚಿಸಿವೆ.
Vijaya Karnataka Web Money 4


ನ.9ಕ್ಕೆ ಅಂತ್ಯವಾದ ದೀಪಾವಳಿ ವಾರದ ಅವಧಿಯಲ್ಲಿ 49,420 ಕೋಟಿ ರೂ. ನಗದು ಹಣವನ್ನು ಬ್ಯಾಂಕ್‌ಗಳಿಂದ ಗ್ರಾಹಕರು ಹೊರತೆಗೆದಿದ್ದಾರೆ. ಕಳೆದ ವರ್ಷದ ದೀಪಾವಳಿ ವಾರದಲ್ಲಿ 28,170 ಕೋಟಿ ರೂ. ನಗದು ಚಲಾವಣೆಯಲ್ಲಿತ್ತು ಎನ್ನುವುದು ಆರ್‌ಬಿಐನ ಇತ್ತೀಚಿನ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಹಬ್ಬ ಮತ್ತು ಚುನಾವಣೆ ಸಂದರ್ಭಗಳಲ್ಲಿ ನಗದು ವ್ಯವಹಾರಗಳು ಸಹಜವಾಗಿಯೇ ವೇಗ ಪಡೆಯುತ್ತಿವೆ. ''ಕಳೆದ ಅಕ್ಟೋಬರ್‌ನಲ್ಲಿ ಎಟಿಎಂಗಳಲ್ಲಿ ನಗದು ಶೇ.10-12ರಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಶೇ.5-6ರಷ್ಟು ಏರಿಕೆ ದಾಖಲಾಗಿತ್ತು,'' ಎಂದು ಸಿಎಂಎಸ್‌ ಇನ್ಫೋ ಸಿಸ್ಟಮ್‌ ಉಪಾಧ್ಯಕ್ಷ ಅನುಶ್‌ ರಾಘವನ್‌ ಹೇಳಿದ್ದಾರೆ. ದಸರಾ ಮತ್ತು ದುರ್ಗಾ ಪೂಜೆ ಹಿನ್ನೆಲೆಯಲ್ಲಿ ನಗದು ವ್ಯವಹಾರ ಏರಿಕೆಯಾಗಿದೆ. ದೀಪಾವಳಿ ಕಾರಣದಿಂದ ನವೆಂಬರ್‌ನಲ್ಲೂ ನಗದು ವ್ಯವಹಾರ ಹೆಚ್ಚಳವಾಗಿದೆ.

2016ರ ನವೆಂಬರ್‌ 8ರಂದು ನೋಟು ಅಮಾನ್ಯತೆ ಘೋಷಣೆಯಾದ ಮೇಲೆ, ವ್ಯವಸ್ಥೆಯಲ್ಲಿದ್ದ ಶೇ.85ರಷ್ಟು ನಗದು ಕಡಿಮೆಯಾಗಿತ್ತು. ಹೀಗಾಗಿ ಗ್ರಾಹಕರು ಡಿಜಿಟಲ್‌ ವ್ಯವಹಾರದತ್ತ ಗಮನಹರಿಸಲೇ ಬೇಕಾಯಿತು. ಆದರೆ, ನಿಧಾನವಾಗಿ ನಗದು ವ್ಯವಹಾರಗಳತ್ತ ಜನರು ವಾಲುತ್ತಿದ್ದಾರೆ. ನೋಟು ಅಮಾನ್ಯದ ವರ್ಷದೊಳಗೆ ಹಿಂದಿನ ಮಟ್ಟದಷ್ಟೇ ನಗದು ವ್ಯವಹಾರ ಕಂಡು ಬಂದಿದೆ. ಹೊಸ ಅಂಕಿಅಂಶಗಳ ಪ್ರಕಾರ, 20.2 ಲಕ್ಷ ಕೋಟಿ ರೂ. ಮುಟ್ಟಿದೆ. ಜಿಡಿಪಿ ಅನುಪಾತಕ್ಕೆ ಹೋಲಿಸಿದರೆ ನೋಟು ಅಮಾನ್ಯತೆಗೆ ಮುಂದಿದ್ದ ಮಟ್ಟಕ್ಕಿಂತಲೂ ಈಗ ನಗದು ಪ್ರಮಾಣವು ಏರಿಕೆಯಾಗಿದೆ ಎಂದು ವಿತ್ತ ತಜ್ಞರು ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ