ಆ್ಯಪ್ನಗರ

ಆರ್ಥಿಕ ಪ್ರಗತಿಗೆ ವಲಯಾವಾರು ನೆರವು ಘೋಷಣೆ ನಿರೀಕ್ಷೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿದ್ದು, ನಾನಾ ವಲಯಗಳಿಗೆ ಪ್ರತ್ಯೇಕವಾಗಿ ನೆರವಿನ ಪ್ಯಾಕೇಜ್‌ ಅನ್ನು ಸರಕಾರ ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆ ಇದೆ.

Vijaya Karnataka Web 16 Aug 2019, 5:00 am
ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿದ್ದು, ನಾನಾ ವಲಯಗಳಿಗೆ ಪ್ರತ್ಯೇಕವಾಗಿ ನೆರವಿನ ಪ್ಯಾಕೇಜ್‌ ಅನ್ನು ಸರಕಾರ ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆ ಇದೆ.
Vijaya Karnataka Web sector wise package may announce to economic growth
ಆರ್ಥಿಕ ಪ್ರಗತಿಗೆ ವಲಯಾವಾರು ನೆರವು ಘೋಷಣೆ ನಿರೀಕ್ಷೆ


ನಾನಾ ವಲಯಗಳಿಗೆ ವೇಗವಾಗಿ ಹರಡುತ್ತಿರುವ ಹಾಗೂ ವ್ಯಾಪಕ ಸಂಪತ್ತು ಹಾನಿ, ಉದ್ಯೋಗ ನಷ್ಟಕ್ಕೆ ಕಾರಣವಾಗಿರುವ ಆರ್ಥಿಕ ಮಂದಗತಿಯನ್ನು ಉಪಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸು ಸಚಿವೆ ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಸಮಾಲೋಚಿಸಿದರು.

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣ ಪೂರ್ಣಗೊಳಿಸಿದ ಒಡನೆಯೇ ವಿತ್ತ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಪ್ರಧಾನಿ, ಆರ್ಥಿಕ ಮಂದಗತಿಯ ಸ್ವರೂಪ ಮತ್ತು ಅದರ ದೀರ್ಘಕಾಲೀನ ಪರಿಣಾಮದ ಬಗ್ಗೆ ಅಂದಾಜಿಸಿದರು. ಸರಕಾರ ವಲಯಾವಾರು ನೆರವನ್ನು ಶೀಘ್ರ ಪ್ರಕಟಿಸುವ ನಿರೀಕ್ಷೆ ಇದೆ.

ಹಣಕಾಸು ಇಲಾಖೆ ಗಪ್‌ಚುಪ್‌:

ಆರ್ಥಿಕ ಬಿಕ್ಕಟ್ಟು ವ್ಯಾಪಕವಾಗುತ್ತಿರುವುದಕ್ಕೆ ಸಂಬಂಧಿಸಿ ಹಣಕಾಸು ಇಲಾಖೆ ಇದುವರೆಗೂ ಸೂಕ್ತ ವಿವರಣೆಯನ್ನು ಬಹಿರಂಗಪಡಿಸಿಲ್ಲ. ಏನೇನು ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆಯೂ ಚಕಾರವೆತ್ತಿಲ್ಲ. ಈ ಸಂಬಂಧ ಸುದ್ದಿಗಾರರ ಇ-ಮೇಲ್‌ಗಳಿಗೂ ಉತ್ತರ ಸಿಗುತ್ತಿಲ್ಲ. ಆದರೆ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಇಳಿಮುಖವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರ ಸವಕಳಿಯಾಗಿದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಕಳೆದ ತಿಂಗಳು ಹಣಕಾಸು ನೀತಿ ಪರಾಮರ್ಶೆತ ಸಂದರ್ಭ, ದೇಶದ ಆರ್ಥಿಕ ಬಿಕ್ಕಟ್ಟನ್ನೂ ಪ್ರಸ್ತಾಪಿಸಿದ್ದರು. ಆರ್ಥಿಕತೆಯ ಬುನಾದಿಗೆ ತೊಂದರೆಯಾಗದಿದ್ದರೂ, ಮಂದಗತಿಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದಿದ್ದರು. ಹೀಗಿದ್ದರೂ, ಹಣಕಾಸು ಇಲಾಖೆ ಈ ಸಂಬಂಧ ಯಾವುದೇ ವಿವರ ಕೊಟ್ಟಿರಲಿಲ್ಲ.

ಬಿಕ್ಕಟ್ಟು ಮತ್ತಷ್ಟು ಹೆಚ್ಚಳ?


ಆಟೊಮೊಬೈಲ್‌ ವಲಯ ಕಳೆದ ಎರಡು ದಶಕದಲ್ಲೇ ಬಹು ದೊಡ್ಡ ಬಿಕ್ಕಟ್ಟನ್ನು ಎದುರಿಸುವ ಲಕ್ಷಣಗಳು ಕಾಣಿಸಿದೆ. 300ಕ್ಕೂ ಹೆಚ್ಚು ಡೀಲರ್‌ಗಳು ತಮ್ಮ ಮಳಿಗೆಗಳನ್ನು ಮುಚ್ಚಿದ್ದಾರೆ. ಅಂದಾಜು 2.30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರಿಯಲ್‌ ಎಸ್ಟೆಟ್ಟ್‌ ವಲಯದಲ್ಲಿ ಮಾರಾಟವಾಗದೆ ಉಳಿದಿರುವ ಮನೆಗಳ ಸಂಖ್ಯೆ ಏರುತ್ತಿದೆ. ಎಫ್‌ಎಂಸಿಜಿ ಅಂದರೆ ತ್ವರಿತವಾಗಿ ಮಾರಾಟವಾಗುವ ಉತ್ಪನ್ನಗಳ ವಲಯದಲ್ಲೂ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ವಹಿವಾಟು ಮುಗ್ಗರಿಸಿದೆ.

ತೆರಿಗೆ ಸಂಗ್ರಹಕ್ಕೆ ಹಿನ್ನಡೆ:

ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಕೇವಲ ಶೇ.1.4ರಷ್ಟು ಅಲ್ಪ ಏರಿಕೆಯಾಗಿರುವುದು ಸರಕಾರದ ಚಿಂತೆಗೆ ಮತ್ತೊಂದು ಕಾರಣವಾಗಿದೆ. ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ ಶೇ.18ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು. ಆದರೆ ಕೇವಲ ಶೇ.9ರ ಪ್ರಗತಿ ದಾಖಲಿಸಿದೆ.

2.2 ಲಕ್ಷ ಫ್ಲ್ಯಾಟ್‌ಗಳು ಖಾಲಿ:

ದೇಶಾದ್ಯಂತ 2011 ಮತ್ತು ಅದಕ್ಕೂ ಮೊದಲು ನಿರ್ಮಾಣವಾಗಿದ್ದ 2.2 ಲಕ್ಷ ಫ್ಲ್ಯಾಟ್‌ ಗಳು ಮಾರಾಟವಾಗದೆ ಉಳಿದಿವೆ. ಇವುಗಳ ಮೌಲ್ಯ ಅಂದಾಜು 1.56 ಲಕ್ಷ ಕೋಟಿ ರೂ. ಎಂದು ಪ್ರಾಪರ್ಟಿ ಕನ್ಸಲ್ಟೆಂಟ್‌ ಜೆಎಲ್‌ಎಲ್‌ ಇಂಡಿಯಾ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ