ಆ್ಯಪ್ನಗರ

ಪೇಟಿಎಂ ಮುಳುಗಿಸಲು ಪಿತೂರಿ: ಸಂಸ್ಥೆ ಮುಖ್ಯಸ್ಥ ಶರ್ಮಾ ಶಂಕೆ

ಪೇಟಿಎಂ ಕಂಪನಿ ಒಳಗೆ ಭಿನ್ನ ಬಣಗಳು ಸಕ್ರಿಯವಾಗಿವೆ. ಅಂತಹ ಬಣವೊಂದು ರೂಪಿಸಿ ಜಾರಿಗೊಳಿಸಿದ ಪಿತೂರಿಯಲ್ಲಿ ಸೋನಿಯಾ ಬಲಿಪಶುವಾಗಿದ್ದಾರೆ.

Vijaya Karnataka 27 Oct 2018, 10:01 am
ಹೊಸದಿಲ್ಲಿ: ಜತೆಯಲ್ಲಿ ಇದ್ದುಕೊಂಡು, ಆಪ್ತಳಂತೆ ನಟಿಸಿ ಖಾಸಗಿ ಮಾಹಿತಿ ಕಲೆ ಹಾಕಿ, ಬಳಿಕ ಅದನ್ನೇ ಅಸ್ತ್ರ ಮಾಡಿಕೊಂಡು 20 ಕೋಟಿ ರೂಪಾಯಿ ಹಫ್ತಾ ವಸೂಲಿಗೆ ತಂತ್ರ ರೂಪಿಸಿದ್ದ ತಮ್ಮ ಆಪ್ತ ಕಾರ್ಯದರ್ಶಿ ಸೋನಿಯಾ ಧವನ್‌ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪೇಟಿಎಂ ಮುಖ್ಯಸ್ಥ ವಿಜಯ್‌ ಶೇಖರ್‌ ಶರ್ಮಾ, 'ಸೋನಿಯಾ ಒಬ್ಬರಿಂದಲೇ ನಡೆದ ಕೃತ್ಯ ಇದಲ್ಲ ಎನಿಸುತ್ತದೆ. ಕಂಪನಿ ಮುಳುಗಿಸಲು ನಡೆದಿರಬಹುದಾದ ದೊಡ್ಡ ಪಿತೂರಿಯ ಭಾಗವಿದು,'' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web Dhavan- VIjay


''ಸೋನಿಯಾ ಎಸಗಿದ ದ್ರೋಹದಿಂದ ನನಗೆ ಆಘಾತವಾಗಿದೆ. ಪ್ರಕರಣದ ಹಿಂದೆ ಇರುವ ಜನ, ಅದನ್ನು ಕಾರ್ಯರೂಪಕ್ಕಿಳಿಸಲು ಹೊರಟ ವಿಧಾನವನ್ನೆಲ್ಲ ನೋಡಿದರೆ ದಿಗಿಲಾಗುತ್ತದೆ. ಸಮಗ್ರ ತನಿಖೆಯಾದರೆ, ನಿಜವಾದ ಅಪರಾಧಿಗಳು ಹೊರ ಬರುತ್ತಾರೆ'' ಎಂದಿದ್ದಾರೆ.

ವಕೀಲರ ವಾದ: ಸಂಚಿನಲ್ಲಿ ಸೋನಿಯಾ ಸಿಕ್ಕಿ ಬಿದ್ದಿರುವ ಕುರಿತು ಅವರ ಕುಟುಂಬದ ವಕೀಲರು ಬೇರೆಯದ್ದೇ ವಾದ ಮಂಡಿಸಿದ್ದಾರೆ. ''ಪೇಟಿಎಂ ಕಂಪನಿ ಒಳಗೆ ಭಿನ್ನ ಬಣಗಳು ಸಕ್ರಿಯವಾಗಿವೆ. ಅಂತಹ ಬಣವೊಂದು ರೂಪಿಸಿ ಜಾರಿಗೊಳಿಸಿದ ಪಿತೂರಿಯಲ್ಲಿ ಸೋನಿಯಾ ಬಲಿಪಶುವಾಗಿದ್ದಾರೆ. ಇತ್ತೀಚೆಗಷ್ಟೇ ಸೋನಿಯಾ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು. ಆ ಬಗ್ಗೆ ಕೂಡ ಉಳಿದ ಉದ್ಯೋಗಿಗಳಲ್ಲಿ ಅತೃಪ್ತಿ ಇತ್ತು. ಅಂಥವರು ಹೊಟ್ಟೆ ಕಿಚ್ಚಿನಿಂದಲೇ ಈ ಸಂಚು ರೂಪಿಸಿ ಅವರನ್ನು ಸಿಕ್ಕಿಸಿದ್ದಾರೆ,'' ಎಂದು ವಕೀಲರು ತಿಳಿಸಿದ್ದಾರೆ.

ಸೋನಿಯಾ ಅವರಿಗೆ ಬಡ್ತಿ ನೀಡಿದ್ದರ ಬಗ್ಗೆ ವಿಜಯ್‌ ಶೇಖರ್‌ ಅವರ ಕುಟುಂಬ ವರ್ಗದವರಲ್ಲಿಯೇ ಅಸಮಾಧಾನ ಇತ್ತು ಎನ್ನಲಾಗಿದ್ದು, ಇದುವೇ ಇಷ್ಟೆಲ್ಲ ಹಗರಣ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ.

ಸಂಚು ಸಾಗಿದ ಬಗೆ

ಪೇಟಿಎಂ 2010ರಲ್ಲಿ ಸ್ಥಾಪನೆಯಾದ ದಿನದಿಂದಲೂ ಶರ್ಮಾ ಅವರ ಜತೆಗಿದ್ದ ಸೋನಿಯಾ ಧವನ್‌, ತಮ್ಮ ಪತಿ ಹಾಗೂ ಪೇಟಿಎಂ ಹಿರಿಯ ಉದ್ಯೋಗಿ ದೇವೇಂದರ್‌ ಕುಮಾರ್‌ ಜತೆ ಸೇರಿ ಸಂಚು ರೂಪಿಸಿದ್ದರು. ಅದಕ್ಕೆ ಪೂರಕವಾಗಿ ವಿಜಯ್‌ ಶೇಖರ್‌ ಅವರ ಲ್ಯಾಪ್‌ಟಾಪ್‌, ಮೊಬೈಲ್‌, ಕಂಪ್ಯೂಟರ್‌ಗಳಿಂದ ಖಾಸಗಿ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಕದ್ದಿದ್ದರು. ಬಳಿಕ ಕೋಲ್ಕೊತ್ತಾದ ರೋಹಿತ್‌ ಕೋಮಲ್‌ ಎಂಬಾತನಿಗೆ ಅವನ್ನೆಲ್ಲ ರವಾನಿಸಿದ್ದರು. ಆ ಮಾಹಿತಿ ಇಟ್ಟುಕೊಂಡು ವಿಜಯ್‌ ಹಾಗೂ ಆತನ ಸೋದರ ಅಜಯ್‌ ಅವರಿಗೆ ಕರೆ ಮಾಡಿದ್ದ ಕೋಮಲ್‌, 20 ಕೋಟಿ ರೂ. ಬೇಡಿಕೆ ಇಟ್ಟಿದ್ದ. ಇಲ್ಲದೇ ಹೋದರೆ ಅವನ್ನೆಲ್ಲ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಅಜಯ್‌ ತಕ್ಷಣ 2 ಲಕ್ಷ ರೂ. ನೀಡಿದ್ದರು. ಅದರಿಂದ ತೃಪ್ತನಾಗದ ಕೋಮಲ್‌ ಇನ್ನೂ 10 ಕೋಟಿ ರೂ. ಅರ್ಜೆಂಟ್‌ ಆಗಿ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ರೋಸಿ ಹೋದ ಪೇಟಿಎಂ ಮುಖ್ಯಸ್ಥರು ನೋಯ್ಡಾ ಪೊಲೀಸರಿಗೆ ದೂರು ನೀಡಿದ್ದರು. ತರುವಾಯ ನಡೆದ ಕಾರ್ಯಾಚರಣೆಯಲ್ಲಿ ಸೋನಿಯಾ, ದೇವೇಂದರ್‌ ಮತ್ತು ಕೋಮಲ್‌ ಮೂವರನ್ನೂ ಪೊಲೀಸರು ಬಂಧಿಸಿದ್ದರು.

ಸೋನಿಯಾಗೆ 6 ಲಕ್ಷ ಸಂಬಳ!

ಉದ್ಯಮಿ ವಿಜಯ್‌ ಶೇಖರ್‌ ಶರ್ಮಾ ಅವರು 2007ರಲ್ಲಿಯೇ ಅಂದರೆ ಪೇಟಿಎಂ ಶುರುವಾಗುವುದಕ್ಕೆ ಮೂರು ವರ್ಷ ಮೊದಲೇ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದರು. ಆಗ ಆಕೆಯ ಸಂಬಳ ತಿಂಗಳಿಗೆ 15,000 ರೂಪಾಯಿ. ಕಾರ್ಯಕ್ಷಮತೆಯಿಂದ ಕಾಲಕಾಲಕ್ಕೆ ಬಡ್ತಿ ಪಡೆಯುತ್ತ ಹೋದ ಸೋನಿಯಾ, ಕಂಪನಿಯ ಉಪಾಧ್ಯಕ್ಷ ಹುದ್ದೆವರೆಗೂ ಏರಿದ್ದರು. ಈಗ ಆಕೆಯ ವೇತನ ತಿಂಗಳಿಗೆ 6 ಲಕ್ಷ ರೂಪಾಯಿ ದಾಟಿತ್ತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ