ಆ್ಯಪ್ನಗರ

68,000 ಕೋಟಿ ರೂ.ಗೆ ಸಾಲ ಏರಿಕೆ, ಷೇರು ಮಾರಾಟಕ್ಕೆ ಮುಂದಾದ ಟಾಟಾ ಮೋಟಾರ್ಸ್‌

ಆರಂಭದಲ್ಲಿ ಎರಡು ಕಂಪನಿಗಳ ಷೇರುಗಳ ಮಾರಾಟಕ್ಕೆ ಮುಂದಾಗಿರುವ ಟಾಟಾ ಮೋಟಾರ್ಸ್‌, ನಂತರದ ದಿನಗಳಲ್ಲಿ ಪ್ರಮುಖವಲ್ಲದ ಉದ್ದಿಮೆಗಳ ಷೇರನ್ನೂ ಮಾರಾಟ ಮಾಡಲಿದೆ ಎಂಬುದಾಗಿ ತಿಳಿದು ಬಂದಿದೆ.

Agencies 12 Sep 2020, 7:51 pm
ಮುಂಬಯಿ: ಟಾಟಾ ಮೋಟಾರ್ಸ್‌ ತನ್ನ ಟಾಟಾ ಟೆಕ್ನಾಲಜೀಸ್‌ ಲಿ. ಮತ್ತು ಟಾಟಾ ಹಿಟಾಚಿ ಕನ್ಸ್‌ಟ್ರಕ್ಷನ್‌ ಮೆಷಿನರಿ ಕೊ. ಪ್ರೈ. ಲಿ.ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಷೇರು ಮಾರಾಟದ ಮೂಲಕ ಸಂಗ್ರಹವಾಗುವ ಹಣದಿಂದ ಸಾಲ ತೀರಿಸುವುದು ಕಂಪನಿಯ ಯೋಜನೆಯಾಗಿದೆ.
Vijaya Karnataka Web Tata Motors


ಮಾರ್ಚ್‌ನಲ್ಲಿ ಟಾಟಾ ಮೋಟಾರ್ಸ್‌ ಸಾಲ 48,000 ಕೋಟಿ ರೂಪಾಯಿಗಳಾಗಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ (ಜುಲೈ 31ರ ಅಂತ್ಯಕ್ಕೆ) 68,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕೊರೊನಾ ವೈರಸ್‌ ಬಿಕ್ಕಟ್ಟಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಹಣ ಖರ್ಚಾಗಿದ್ದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಇದೀಗ ಷೇರು ಮಾರಾಟಕ್ಕೆ ಕಂಪನಿ ಮುಂದಾಗಿದೆ.

ಮೂರು ವರ್ಷಗಳ ಹಿಂದೆಯೇ ಟಾಟಾ ಟೆಕ್ನಾಲಜೀಸ್‌ನ ಷೇರು ಮಾರಾಟಕ್ಕೆ ಅಮೆರಿಕಾದ ವಾರ್‌ಬರ್ಗ್‌ ಪಿಂಕಸ್‌ ಕಂಪನಿ ಜೊತೆ ಟಾಟಾ ಮಾತುಕತೆ ನಡೆಸಿತ್ತು. ಆದರೆ ಈ ಸಂದರ್ಭದಲ್ಲಿ ಷೇರು ಮಾರಾಟ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಷೇರು ಮಾರಾಟಕ್ಕೆ ಮುಂದಾಗಿದೆ.

ಆರಂಭದಲ್ಲಿ ಎರಡು ಕಂಪನಿಗಳ ಷೇರುಗಳ ಮಾರಾಟಕ್ಕೆ ಮುಂದಾಗಿರುವ ಟಾಟಾ ಮೋಟಾರ್ಸ್‌ ನಂತರದ ದಿನಗಳಲ್ಲಿ ಪ್ರಮುಖವಲ್ಲದ ಉದ್ದಿಮೆಗಳ ಷೇರನ್ನೂ ಮಾರಾಟ ಮಾಡಲಿದೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಗಳು ಹೇಳಿದ್ದಾರೆ.

ಟಾಟಾ ಮೋಟಾರ್ಸ್‌ ಅಧ್ಯಕ್ಷ ಎನ್‌ ಚಂದ್ರಶೇಖರನ್‌ ಕಳೆದ ತಿಂಗಳು ನಡೆದ ಷೇರುದಾರರ ಸಭೆಯಲ್ಲಿ ಕಂಪನಿಯನ್ನು ಮೂರು ವರ್ಷಗಳಲ್ಲಿ ಸಾಲಮುಕ್ತಗೊಳಿಸುವುದಾಗಿ ಹೇಳಿದ್ದರು. ಇದಕ್ಕೆ ಬೇಕಾದ ಕ್ರಮಗಳನ್ನು ಕಂಪನಿ ತೆಗೆದುಕೊಂಳಲು ಆರಂಭಿಸಿದೆ.

ಬ್ರಿಟನ್‌ನಲ್ಲಿರುವ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಘಟಕವೂ ಸೇರಿ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಜಾಗತಿಕ ವಾಹನ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 64ರಷ್ಟು ಕುಸಿತವಾಗಿದ್ದು 91,594 ವಾಹನಗಳಿಗೆ ಇಳಿಕೆಯಾಗಿದೆ.

ಇದರಿಂದ ಆದಾಯದ ಶೇ. 48ರಷ್ಟು ಕುಸಿತವಾಗಿದ್ದು, 31,983 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇದರಿಂದ ಕಂಪನಿ 8,438 ಕೋಟಿ ನಷ್ಟ ಅನುಭವಿಸಿದೆ.

ಇದೀಗ ಕಂಪನಿಯನ್ನು ಸಾಲಮುಕ್ತಗೊಳಿಸಿ ಪ್ರತಿ ಕಂಪನಿಯನ್ನೂ ಸ್ವಾವಲಂಬಿಯಾಗಿಸುವುದು ಟಾಟಾದ ಯೋಜನೆಯಾಗಿದೆ. ಮೊದಲಿಗೆ ಭಾರತದ ವಾಹನೋದ್ಯಮವನ್ನು 2021-22ನೇ ಆರ್ಥಿಕ ವರ್ಷದಲ್ಲಿ ಸಾಲ ಮುಕ್ತಗೊಳಿಸುವುದು, ನಂತರ 2022-23ರಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಘಟಕವನ್ನು ಸಾಲಮುಕ್ತಗೊಳಿಸುವುದು, ಬಳಿಕ 2023-24ರಲ್ಲಿ ಪ್ರಯಾಣಿಕ ಕಾರು ಉದ್ಯಮವನ್ನು ಸಾಲದಿಂದ ಹೊರತರುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಯಾಣಿಕ ಕಾರು ಉದ್ಯಮವನ್ನು ಪ್ರತ್ಯೇಕ ಕಂಪನಿಯಾಗಿ ಮಾರ್ಪಾಡುಗೊಳಿಸಿತ್ತು. ಮತ್ತು ಈ ವ್ಯವಹಾರದ ಸಹಭಾಗಿತ್ವಕ್ಕಾಗಿ ಮಾತುಕತೆಗಳು ನಡೆಯುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ