ಆ್ಯಪ್ನಗರ

ಜೆಟ್‌ ಏರ್‌ವೇಸ್‌ ಉದ್ಯೋಗಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದ ದೇಶ-ವಿದೇಶಗಳ 30ಕ್ಕೂ ಹೆಚ್ಚು ನಗರಗಳಿಗೆ ಜೆಟ್‌ಏರ್‌ವೇಸ್‌ ಸಂಪರ್ಕ ಕಲ್ಪಿಸುತ್ತಿತ್ತು. ದಿಲ್ಲಿ ಮತ್ತು ಮುಂಬೈ ಬಳಿಕ ಬೆಂಗಳೂರು ಜೆಟ್‌ ಏರ್‌ವೇಸ್‌ಗೆ ಅತಿದೊಡ್ಡ ಪ್ರಯಾಣಿಕರ ಮಾರುಕಟ್ಟೆಯಾಗಿತ್ತು.

Vijaya Karnataka Web 20 Apr 2019, 11:24 am
ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತಿತರ ಕಾರಣಗಳಿಂದ ವಿಮಾನಯಾನ ಕಂಪನಿ 'ಜೆಟ್‌ ಏರ್‌ವೇಸ್‌' ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ, ಈ ಸಂಸ್ಥೆಯ ಸುಮಾರು 1 ಸಾವಿರಕ್ಕೂ ಹೆಚ್ಚು ನೌಕರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
Vijaya Karnataka Web Jet Airways


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದ ದೇಶ-ವಿದೇಶಗಳ 30ಕ್ಕೂ ಹೆಚ್ಚು ನಗರಗಳಿಗೆ ಜೆಟ್‌ಏರ್‌ವೇಸ್‌ ಸಂಪರ್ಕ ಕಲ್ಪಿಸುತ್ತಿತ್ತು. ದಿಲ್ಲಿ ಮತ್ತು ಮುಂಬೈ ಬಳಿಕ ಬೆಂಗಳೂರು ಜೆಟ್‌ ಏರ್‌ವೇಸ್‌ಗೆ ಅತಿದೊಡ್ಡ ಪ್ರಯಾಣಿಕರ ಮಾರುಕಟ್ಟೆಯಾಗಿತ್ತು. ಪೈಲಟ್‌ಗಳು, ಕ್ಯಾಬಿನ್‌ ಸಿಬ್ಬಂದಿ, ಎಂಜಿನಿಯರ್‌ಗಳು, ತಂತ್ರಜ್ಞರು, ವಿಮಾನದ ನಿರ್ವಹಣೆ, ಕಾರ್ಗೋ, ಕ್ಯಾಟರಿಂಗ್‌, ಪ್ರಯಾಣಿಕರ ಸೇವೆಗಳು, ಕೌಂಟರ್‌ ಟಿಕೆಟ್‌ ಮಾರಾಟಗಾರರು, ಬೆಲ್‌ಬಾಯ್‌, ಏರ್‌ಲೈನ್‌ ಬಸ್‌ ಚಾಲಕರು ಹೀಗೆ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಐಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪೈಲಟ್‌ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರಿಗೆ ಕೆಲ ತಿಂಗಳಿಂದ ವೇತನ ಸಿಕ್ಕಿಲ್ಲ. ಭವಿಷ್ಯದ ಕುರಿತು ಯೋಚನೆ ಮಾಡುತ್ತಿದ್ದ ಈ ಉದ್ಯೋಗಿಗಳು, ಸರಕಾರದ ಆರ್ಥಿಕ ನೆರವಿನಿಂದ ಹಾರಾಟ ಮುಂದುವರಿಯುತ್ತದೆ ಎಂಬ ನಂಬಿಕೆಯಲ್ಲೇ ಇದ್ದರು. ಆದರೆ, ಎರಡು ದಿನಗಳ ಹಿಂದೆ ಏಕಾಏಕಿ ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಎಲ್ಲರಲ್ಲೂ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

''ಏರ್‌ಲೈನ್‌ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಆದರೆ, ಶೀಘ್ರ ಪುನರಾರಂಭವಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದೇನೆ. ಬೇರೆ ಏರ್‌ಲೈನ್ಸ್‌ನಲ್ಲೂ ಈಗಾಗಲೇ ಕೆಲಸ ಹುಡುಕುತ್ತಿದ್ದೇನೆ. ಆದರೆ, ನನ್ನಂತೆಯೇ ಅತಂತ್ರರಾಗಿರುವ ಸಾಕಷ್ಟು ಜನ ಕೆಲಸ ಹುಡುಕುತ್ತಿದ್ದಾರೆ. ಇತರೆ ಏರ್‌ಲೈನ್ಸ್‌ಗಳಲ್ಲಿ ಹೆಚ್ಚುವರಿಯಾಗಿ ಸಿಬ್ಬಂದಿ ಇದ್ದಾರೆ. ಎಷ್ಟು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ'' ಎಂದು ಕಾರ್ಗೋ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹೆಸರು ಹೇಳಲು ಇಚ್ಛಿಸದ ಉದ್ಯೋಗಿಯೊಬ್ಬರು ಪ್ರಶ್ನಿಸಿದರು.

''ಎರಡು ದಿನಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆದರೆ, ಉದ್ಯೋಗದ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಕಳೆದ ತಿಂಗಳಿನ ವೇತನವೂ ಬಂದಿದೆ. ಆದರೆ, ವಿಮಾನಗಳು ಹಾರಾಡುತ್ತಿದ್ದ ಕಾರಣ ಆತಂಕ ಇರಲಿಲ್ಲ. ಆದರೆ, ಈಗ ಆತಂಕ ಹೆಚ್ಚಾಗಿದೆ'' ಎಂದು ಏರ್‌ವೇಸ್‌ನಲ್ಲಿ ಬೆಲ್‌ಬಾಯ್‌ ಆಗಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಯುವ ಉದ್ಯೋಗಿ ಹೇಳಿದರು. ಸಮಸ್ಯೆಯ ಕುರಿತು ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಹಿರಿಯ ಅಧಿಕಾರಿ ತಿಳಿಸಿರುವ ಕಾರಣ ಹೆಸರು ಬೇಡ ಎಂದು ಯುವ ಉದ್ಯೋಗಿ ಹೇಳಿದರು.

ಜೆಟ್‌ಏರ್‌ವೇಸ್‌ ಬೆಂಗಳೂರು ಕಚೇರಿಗೆ ಸಂಪರ್ಕಿಸಿದಾಗ, ಟಿಕೆಟ್‌ ರದ್ದಾಗಿರುವ ಪ್ರಯಾಣಿಕರ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಸ್ವಲ್ಪ ಕಾಯಿರಿ ಎಂಬ ಸಂದೇಶ ಬಂತು. ನಂತರ ಮಾತನಾಡಿದ ಪ್ರತಿನಿಧಿ ''ನಾವು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಆಡಳಿತ ಮಂಡಳಿ ಎಲ್ಲವನ್ನು ನೋಡಿಕೊಳ್ಳುತ್ತದೆ'' ಎಂದಷ್ಟೇ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ