ಆ್ಯಪ್ನಗರ

ಏನಿದು 'ಸೆಕ್ಷನ್ 7'?: ಆರ್‌ಬಿಐ ವಿರುದ್ಧ ಬಳಸಲಿರುವ ಕಟ್ಟಕಡೆಯ ಅಸ್ತ್ರ

ಆರ್‌ಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಸರಕಾರ ಹೇಳಿದ್ದನ್ನು ಕೇಳಬೇಕಾಗುತ್ತದೆ. ಆರ್‌ಬಿಐ ಕಾಯಿದೆಯಲ್ಲಿನ ಸೆಕ್ಷನ್ 7 ಇದನ್ನೇ ಹೇಳುತ್ತದೆ.

THE ECONOMIC TIMES 31 Oct 2018, 5:41 pm
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಮೂಲಕ ಆರ್‌ಬಿಐ ಕಾಯಿದೆಯಲ್ಲಿನ 'ಸೆಕ್ಷನ್ 7' ಬೆಳಕಿಗೆ ಬಂದಿದೆ. ಈ ಕಾಯಿದೆ ಬಳಸಿ ಆರ್‌ಬಿಐಗೆ ನಿರ್ದೇಶನ ನೀಡವಷ್ಟು ಸಾಮರ್ಥ್ಯ ಕೇಂದ್ರ ಸರಕಾರಕ್ಕೆ ಬಂದಂತಾಗಿದೆ.
Vijaya Karnataka Web rbi


ಇದುವರೆಗೆ ಈ ಕಾಯಿದೆಯನ್ನೂ ಯಾವ ಸರಕಾರವೂ ಪ್ರಯೋಗಿಸಿಲ್ಲ. ಇದೇ ಮೊಲದ ಸಲ ಆರ್‌ಬಿಐ ವಿರುದ್ಧ ಪ್ರಯೋಗಿಸಲಾಗುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‍ಸಿ) ಸಾಲ, ದುರ್ಬಲ ಬ್ಯಾಂಕ್‌ಗಳಿಗೆ ಬಂಡವಾಳ ನೀಡಿಕೆ ಮತ್ತು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡಿರುವ ಸಂಬಂಧ ಸೆಕ್ಷನ್ 7ನ್ನು ಬಳಸಿ ಕೇಂದ್ರ ಸರಕಾರ ಆರ್‌ಬಿಐ ಗವರ್ನರ್ ಊರ್ತಿತ್ ಪಟೇಲ್‌ಗೆ ಹಲವಾರು ಪತ್ರಗಳನ್ನು ಬರೆದಿದೆ.

ಸ್ವಾತಂತ್ರ್ಯಾ ನಂತರ ಇದುವರೆಗೆ ಸೆಕ್ಷನ್ 7ನ್ನು ಕೇಂದ್ರ ಬಳಸಿಲ್ಲ. 2008ರಲ್ಲಿ ಆದ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು 1991ರಲ್ಲಿ ಆದ ಕರಾಳ ದಿನಗಳ ಸಂದರ್ಭದಲ್ಲೂ ಈ ಸೆಕ್ಷನ್ ಬಳಸಿರಲಿಲ್ಲ.

ಇದುವರೆಗೆ ಈ ಸೆಕ್ಷನ್ ಬಳಕೆಯಾಗಿಲ್ಲದ ಕಾರಣ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಆರ್‌ಬಿಐನ ಸ್ವಾಯತ್ತತೆ ಮೇಲೆ ಪರಿಣಾಮ ಬೀರುವ ಮತ್ತು ಸರಕಾರದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ ಆರ್‌ಬಿಐನ ಉಪ ಗವರ್ನರ್ ವಿರಳ್ ಅಚಾರ್ಯ ನೀಡಿರುವ ಹೇಳಿಕೆಗಳಿಂದ ಸರಕಾರ ಸೆಕ್ಷನ್ 7ರ ಕಾಯಿದೆ ಬಳಸುವ ಸಾಧ್ಯತೆಗಳ ಬಗ್ಗೆ ಸುಳಿವು ಸಿಕ್ಕಿತ್ತು. ಆರ್‌ಬಿಐ ವ್ಯವಹಾರದಲ್ಲಿ ಸರಕಾರ ಮೂಗು ತೂರಿಸದಿರುವುದೇ ಉತ್ತಮ ಎಂದು ವಿರಳ್ ಆಚಾರ್ಯ ಸ್ವಲ್ಪ ಖಾರವಾಗಿಯೇ ಹೇಳಿದ್ದರು.

ಆರ್‌ಬಿಐ ಕಾಯಿದೆಯ ಸೆಕ್ಷನ್ 7 ಏನು ಹೇಳುತ್ತದೆ?
ಆರ್‌ಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಸರಕಾರ ಹೇಳಿದ್ದನ್ನು ಕೇಳಬೇಕಾಗುತ್ತದೆ. ಆರ್‌ಬಿಐ ಕಾಯಿದೆಯಲ್ಲಿನ ಸೆಕ್ಷನ್ 7 ಇದನ್ನೇ ಹೇಳುತ್ತದೆ. ಆರ್‌ಬಿಐ ಕಾಯಿದೆಯಲ್ಲಿನ ಸೆಕ್ಷನ್ 7ರಲ್ಲಿ ಈ ರೀತಿ ಹೇಳಲಾಗಿದೆ.

1. ಗವರ್ನರ್‌ ಜತೆಗೆ ಸಂಪರ್ಕಿಸಿ ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಕಾಲಕಾಲಕ್ಕೆ ಬ್ಯಾಂಕ್‌ಗೆ ಕೇಂದ್ರ ಸರಕಾರ ಈ ರೀತಿಯ ನಿರ್ದೇಶನಗಳನ್ನು ನೀಡಬಹುದು.

2. ಕೇಂದ್ರ ನೀಡುವ ಯಾವುದೇ ನಿರ್ದೇಶನದ ವಿಷಯಕ್ಕೆ ಸಂಬಂಧಿಸಿದಂತೆ, ಬ್ಯಾಂಕ್‌ನ ಮೇಲ್ವಿಚಾರಣೆ ಮತ್ತು ಕಾರ್ಯ ನಿರ್ದೇಶನ ಮತ್ತು ಬ್ಯಾಂಕ್‌ನ ವ್ಯವಹಾರಗಳನ್ನು ಕೇಂದ್ರ ನಿರ್ದೇಶಕರ ಮಂಡಳಿಯ ಜವಾಬ್ದಾರಿಗೆ ವಹಿಸಬೇಕು. ಅದು ಬ್ಯಾಂಕ್ ಮಾಡುವ ಎಲ್ಲಾ ಚಟುವಟಿಕೆಗಳ ಅಧಿಕಾರವನ್ನೂ ಹೊಂದಿರುತ್ತದೆ.

3. ಗವರ್ನರ್ ಮತ್ತು ಅವರ ಅನುಪಸ್ಥಿತಿಯಲ್ಲಿ ಉಪ ಗವರ್ನರ್‌ರನ್ನು ಕೇಂದ್ರ ನೇಮಿಸಬಹುದಾಗಿದೆ. ಮೇಲ್ವಿಚಾರಣೆ ಮತ್ತು ಬ್ಯಾಂಕ್ ನಿರ್ವಹಿಸುವ ಎಲ್ಲಾ ಕಾರ್ಯ ನಿರ್ದೇಶನಗಳು ಮತ್ತು ಬ್ಯಾಂಕ್‌ನ ವ್ಯವಹಾರಗಳನ್ನು ನಿರ್ವಹಿಸುವ ಅಧಿಕಾರ ಕೇಂದ್ರಕ್ಕಿರುತ್ತದೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸರಕಾರ ಬ್ಯಾಂಕ್‍ಗೆ ನಿರ್ದೇಶನ ನೀಡಬಹುದು. ಇದನ್ನು ಹೊರತುಪಡಿಸಿದರೆ ಸರಕಾರದಿಂದ ಬ್ಯಾಂಕ್ ಯಾವುದೇ ಆದೇಶ ಪಡೆಯುವಂತಿಲ್ಲ.

ಸರಕಾರ ಸೆಕ್ಷನ್ 7 ಹೇರುತ್ತಿರುವುದೇಕೆ?
ಕಳೆದ ಕೆಲ ಸಮಯದಿಂದ ಸರಕಾರ ಮತ್ತು ಆರ್‌ಬಿಐ ನಡುವೆ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಿಕ್ಕಾಟ ನಡೆಯುತ್ತಿದೆ. ವಸೂಲಾಗದ ಸಾಲದ (ಎನ್‌ಪಿಎ) ವರ್ಗೀಕರಣದಂತಹ ವಿಚಾರಗಳಲ್ಲಿ ಸರಕಾರ ಮತ್ತು ಆರ್‌ಬಿಐ ನಡುವೆ ಭಿನ್ನಾಭಿಪ್ರಾಯಗಳಿವೆ. ಇದೇ ರೀತಿ ಹಲವಾರು ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಘರ್ಷಣೆ ನಡೆಯುತ್ತಿದ್ದು ಸರಕಾರ ಇದೇ ಮೊದಲ ಸಲ ಆರ್‌ಬಿಐ ಕಾಯಿದೆಯಲ್ಲಿನ ಸೆಕ್ಷನ್ 7 ಪ್ರಯೋಗಿಸಲು ಹೊರಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ