ಆ್ಯಪ್ನಗರ

ಅದಾನಿ 4.5 ಲಕ್ಷ ಕೋಟಿ ರೂ. ಸಾಲ ತೀರಿಸುತ್ತಿಲ್ಲವೇಕೆ? ಸುಬ್ರಮಣಿಯನ್‌ ಸ್ವಾಮಿ ಟ್ವೀಟೇಟು

ಈಗಾಗಲೇ ದೇಶದಲ್ಲಿನ 6 ವಿಮಾನ ನಿಲ್ದಾಣಗಳನ್ನು ಅದಾನಿ ಖರೀದಿಸಿದ್ದಾರೆ. ಶೀಘ್ರದಲ್ಲಿಯೇ ತಾವು ಸಾಲ ಪಾವತಿಸಬೇಕಾದ ಬ್ಯಾಂಕ್‌ಗಳನ್ನೂ ಖರೀದಿಸಬಹುದು ಎಂದು ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯವಾಡಿದ್ದಾರೆ.

Agencies 15 Jan 2021, 9:00 pm
ಹೊಸದಿಲ್ಲಿ: "ಗೌತಮ್‌ ಅದಾನಿ ಅವರು ಬ್ಯಾಂಕ್‌ಗಳಿಗೆ ಸಾಲ ಕಟ್ಟದೇ ಉಳಿಸಿಕೊಂಡಿರುವ ಬಾಕಿ ಮೊತ್ತ 4.5 ಲಕ್ಷ ಕೋಟಿ ರೂ. ಆಗಿದೆ. ಈ ನಂಬರ್‌ ತಪ್ಪಾಗಿದ್ದರೆ, ಬೇರೆಯವರು ಸರಿಪಡಿಸಬಹುದು. ಅಂದಹಾಗೇ ಅದಾನಿ ಸಂಪತ್ತು 2016ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ದ್ವಿಗುಣವಾಗುತ್ತಿದೆ. ಆದರೂ ಬ್ಯಾಂಕುಗಳಿಗೆ ಅವರು ಏಕೆ ಸಾಲ ಮರುಪಾವತಿ ಮಾಡುತ್ತಿಲ್ಲ?"
Vijaya Karnataka Web Subramanian Swamy
ಸಂಗ್ರಹ ಚಿತ್ರ


ಇದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರ ಟ್ವೀಟ್‌. "ಈಗಾಗಲೇ ದೇಶದಲ್ಲಿನ ಆರು ವಿಮಾನ ನಿಲ್ದಾಣಗಳನ್ನು ಅದಾನಿ ಖರೀದಿಸಿದ್ದಾರೆ. ಶೀಘ್ರದಲ್ಲಿಯೇ ತಾವು ಸಾಲ ಪಾವತಿಸಬೇಕಾದ ಬ್ಯಾಂಕ್‌ಗಳನ್ನೂ ಖರೀದಿಸಬಹುದು," ಎಂದು ಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

ಕೇಂದ್ರ ಸರಕಾರದ ಇತ್ತೀಚಿನ ಮೂರು ಕೃಷಿ ಕಾನೂನುಗಳು ಅದಾನಿ ಮತ್ತು ಅಂಬಾನಿ ಅವರಿಗೆ ಅನುಕೂಲಕರವಾಗಿವೆ ಎನ್ನುವ ಆರೋಪಗಳ ಮಧ್ಯೆ, ಬಿಜೆಪಿಯವರೇ ಆದ ಸುಬ್ರಮಣಿಯನ್‌ ಸ್ವಾಮಿ ಅವರ ಹೇಳಿಕೆ ಗಮನಸೆಳೆಯುವಂತಿದೆ.

ದೇಶದ ಆರು ಪ್ರಮುಖ ವಿಮಾನ ನಿಲ್ದಾಣಗಳ ಉಸ್ತುವಾರಿ ಗುತ್ತಿಗೆಯನ್ನು 2020ರಲ್ಲಿ ಗೌತಮ್‌ ಅದಾನಿ ನೇತೃತ್ವದ ಕಂಪನಿ ವಹಿಸಿಕೊಂಡಿದೆ. ಪ್ರಸಕ್ತ ವರ್ಷದಲ್ಲಿ ದೇಶದ ಎರಡನೇ ದೊಡ್ಡ ವಿಮಾನ ನಿಲ್ದಾಣವಾದ ಮುಂಬಯಿ ವಿಮಾನ ನಿಲ್ದಾಣದ ಗುತ್ತಿಗೆಯು ಅದಾನಿ ಸಮೂಹದ ಪಾಲಾಗಿದೆ.

ಸಾಲದ ಮೊತ್ತ ಎಷ್ಟು?

ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಸ್ವಾಮಿ ಟ್ವೀಟ್‌ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿವೆ. "ನಿಮ್ಮ ಮಾಹಿತಿ ತಪ್ಪಿದೆ. ಅದಾನಿ ಅವರು ನಾನಾ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೊತ್ತ 1.62 ಲಕ್ಷ ಕೋಟಿ ರೂ. ಆಗಿದೆ. ಅವರ ಸಮೂಹದ ಮಾರುಕಟ್ಟೆ ಬಂಡವಾಳದ ಗಾತ್ರ 4.5 ಲಕ್ಷ ಕೋಟಿ ರೂ. ನೀವು (ಸುಬ್ರಮಣಿಯನ್‌ ಸ್ವಾಮಿ) ತಪ್ಪಾಗಿ ಅರ್ಥೈಸಿದ್ದೀರಿ," ಎಂದು ರಾಹುಲ್‌ ಎಂ ಮಹೇಶ್ವರಿ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ