ಆ್ಯಪ್ನಗರ

ಐಫೋನ್‌ ಉತ್ಪಾದಕ ವಿಸ್ಟ್ರಾನ್‌ನಿಂದ ಕೋಲಾರದಲ್ಲಿ 900 ಕೋಟಿ ರೂ. ಹೂಡಿಕೆ, 8,000 ಉದ್ಯೋಗ ಸೃಷ್ಟಿ

ನರಸಾಪುರ ಕೈಗಾರಿಕಾ ಪ್ರದೇಶದ 43 ಎಕರೆ ಪ್ರದೇಶದಲ್ಲಿ ವಿಸ್ಟ್ರಾನ್‌ ಈಗಾಗಲೇ 3,000 ಕೋಟಿ ರೂ. ಬಂಡವಾಳ ಹೂಡಿದ್ದು, ಇದೀಗ ಮತ್ತೊಂದು ಘಟಕ ನಿರ್ಮಿಸಲು ಮುಂದಾಗಿದೆ. ಅದರಂತೆ ಹೆಚ್ಚುವರಿಯಾಗಿ 900 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ.

Vijaya Karnataka 3 Dec 2020, 8:24 pm
ಕೋಲಾರ: ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಸಿರುವ ಐಫೋನ್‌ ಉತ್ಪಾದಕ ವಿಸ್ಟ್ರಾನ್‌ ಕಾರ್ಪೋರೇಷನ್‌ ಕೊರೊನೋತ್ತರ ಕಾಲದಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದು, 8 ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
Vijaya Karnataka Web Wistron
ಸಾಂದರ್ಭಿಕ ಚಿತ್ರ


ಕೊರೊನಾ ಲಾಕ್‌ಡೌನ್‌ ನಡುವೆಯೂ ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದ ವಿಸ್ಟ್ರಾನ್‌ ಕಂಪನಿ, ಇದೀಗ ಹೆಚ್ಚುವರಿಯಾಗಿ 900 ಕೋಟಿ ರೂ. ಬಂಡವಾಳ ಹೂಡಲು ತೀರ್ಮಾನಿಸಿದೆ.

ದೇಶದಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೆ ಸ್ಪರ್ಧೆವೊಡ್ಡಲು ಹಾಗೂ ಚೀನಾ ಮೇಲಿನ ಅವಲಂಬನೆ ಕಡಿತಗೊಳಿಸಲು ಮುಂದಾಗಿರುವ ಕಂಪನಿ ಹಂತ ಹಂತವಾಗಿ ಚೀನಾದಲ್ಲಿರುವ ಘಟಕಗಳನ್ನು ಭಾರತ ಹಾಗೂ ವಿಯೆಟ್ನಾಂ ರಾಷ್ಟ್ರಗಳಿಗೆ ಸ್ಥಳಾಂತರಿಸುತ್ತಿದೆ. ಐಫೋನ್‌ ಉತ್ಪಾದನಾ ಘಟಕಕ್ಕೆ ಹಂಚಿಕೆಯಾಗಿದ್ದ ಭೂಮಿಯಲ್ಲಿ ಅರ್ಧಷ್ಟು ಭಾಗವನ್ನು ವಿಸ್ಟ್ರಾನ್‌ ಬಳಸಿಕೊಂಡಿದ್ದು, ಅಸ್ತಿತ್ವದಲ್ಲಿರುವ ಸೌಲಭ್ಯ ಹೆಚ್ಚಿಸುವುದರ ಜತೆಗೆ ಎರಡನೇ ಹಂತದ ವಿಸ್ತರಣೆ ಆರಂಭಿಸಿದೆ.

ನರಸಾಪುರ ಕೈಗಾರಿಕಾ ಪ್ರದೇಶದ 43 ಎಕರೆ ಪ್ರದೇಶದಲ್ಲಿ ಮೂರು ಸಾವಿರ ಕೋಟಿ ರೂ. ಬಂಡವಾಳದಲ್ಲಿ ಸ್ಥಾಪನೆಯಾಗಿರುವ ಕಂಪನಿ ಇದೀಗ ಮತ್ತೊಂದು ಘಟಕ ನಿರ್ಮಿಸಲು ಮುಂದಾಗಿದೆ. ಅದರಂತೆ ಹೆಚ್ಚುವರಿಯಾಗಿ 900 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ.

ಮೊದಲ ಹಂತದಲ್ಲಿ 5 ಸಾವಿರ ಮಂದಿಗೆ ಹಾಗೂ ಎರಡನೇ ಹಂತದಲ್ಲಿ 5 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈಗಾಗಲೇ ಐಫೋನ್‌ ಮಾದರಿಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಸ್ಮಾರ್ಟ್‌ ಫೋನ್‌, ಇಂಟರ್‌ನೆಟ್‌ ಉಪಕರಣಗಳು, ಜೈವಿಕ ತಂತ್ರಜ್ಞಾನ ಸಂಬಂಧಿತ ಉಪಕರಣಗಳ ಉತ್ಪಾದನೆಯಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

18 ಸಾವಿರ ಮಂದಿಗೆ ಉದ್ಯೋಗ!

ಕಳೆದ ವರ್ಷ ಕಂಪನಿ 1,947 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. ಅದರಂತೆ ನರಸಾಪುರ ಘಟಕದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿತ್ತು. ಇದೀಗ ಹೆಚ್ಚುವರಿಯಾಗಿ 900 ಕೋಟಿ ಹೂಡಿಕೆ ಮಾಡುವುದರಿಂದ ಮತ್ತೆ 8 ಸಾವಿರ ಮಂದಿಗೆ ಉದ್ಯೋಗ ಸೇರಿ ಒಟ್ಟು 18 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದ್ದು, ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆರಂಭಿಕ ಹಂತದ ಹೂಡಿಕೆಗೆ ಹೋಲಿಸಿದರೆ ಈಗ ಗಣನೀಯ ಹೆಚ್ಚಳ ಕಂಡಿದೆ. ವಿಸ್ಟ್ರಾನ್‌ ಮೊದಲೇ ಯೋಜಿಸಿದ್ದಕ್ಕಿಂತ ಶೇ.50ರಷ್ಟು ಹೆಚ್ಚುವರಿ ಮೊತ್ತವನ್ನು ಹೂಡಿಕೆ ಮಾಡಲು ಮುಂದೆ ಬಂದಿದೆ. ಇದರಿಂದಾಗಿ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಯಾಗುತ್ತವೆ ಎಂದು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದ್ದಾರೆ.

ಪೀಣ್ಯ ಕೈಗಾರಿಕಾ ವಲಯದಲ್ಲೂ ವಿಸ್ಟ್ರಾನ್‌ ಐಫೋನ್‌ ಮೊಬೈಲ್‌ ಜೋಡಣೆ ಘಟಕ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ