ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಯಾವುದೇ ರೀತಿಯ ಆಡಳಿತ ವಿರೋಧಿ ಅಲೆಯಿಲ್ಲ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುವುದು ಶೇ. 200ರಷ್ಟು ನಿಶ್ಚಿತ: ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢವಾದ ಮಾತು.
2018ರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ, ಸವಾಲುಗಳ ಬಗ್ಗೆ ನಡೆಸುವ 'ವಿಕ ಸಂವಾದ' ಸರಣಿಯಲ್ಲಿ ಗುರುವಾರ ಭಾಗವಹಿಸಿದ ಅವರು ಗೆಲುವಿನ ಬಗ್ಗೆ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ನಾಲ್ಕೂವರೆ ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ, ಸಾಧನೆಗಳ ಶ್ರೀರಕ್ಷೆ ಸರಕಾರದ ಬೆನ್ನಿಗಿದೆ. ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ರಚಿಸುವಂತಹ ಸನ್ನಿವೇಶವೂ ಸೃಷ್ಟಿಯಾಗುವುದಿಲ್ಲ. ನಿಚ್ಚಳ ಬಹುಮತ ಖಚಿತ. ಇದರಲ್ಲಿ ಕೊಂಚವೂ ಸಂಶಯ ಬೇಡ ಎಂದು ಹೇಳಿದರು.
''ಕಳೆದ ಚುನಾವಣೆಯ 165 ಭರವಸೆ ಪೈಕಿ 155 ಅನ್ನು ಈಗಾಗಲೇ ಈಡೇರಿಸಲಾಗಿದೆ. ಇದನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಹಾಗೆಯೇ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸದೇ ಇರುವ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಲಾಗಿದೆ. ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ಪರಿಶಿಷ್ಟರ ಅಭ್ಯುದಯಕ್ಕೆ ವಿಶೇಷ ಕಾಯಿದೆ ತಂದಿರುವುದು ಇದಕ್ಕೆ ನಿದರ್ಶನ,'' ಎಂದು ತಿಳಿಸಿದರು.
ಸಾಧನೆಯೇ ಶ್ರೀರಕ್ಷೆ: ಅನ್ನ ಭಾಗ್ಯ, ಕ್ಷೀರ ಭಾಗ್ಯ ಒಳಗೊಂಡಂತೆ ನೀರಾವರಿ, ಕೃಷಿ, ಇನ್ನಿತರ ಕ್ಷೇತ್ರಗಳಲ್ಲಿ ಸರಕಾರದ ಸಾಧನೆಯ ಪಟ್ಟಿ ಮಾಡಿದ ಮುಖ್ಯಮಂತ್ರಿಯವರು, ತಮ್ಮ ಸರಕಾರ ಜನಪರ ಎನ್ನುವುದಕ್ಕೆ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಹತ್ತು ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ ಫಲಿತಾಂಶ ನೆನಪಿಸಿ ಅದೇ ವಿಜಯ ಯಾತ್ರೆ ಮುಂದುವರಿಯಲಿದೆ ಎಂದರು.
ನಮ್ಮದು ಮಿಷನ್ ಅಲ್ಲ ವಿಷನ್
''ಬಿಜೆಪಿಯಂತೆ ನಾವು ಯಾವುದೇ ಮಿಷನ್ ಅನ್ನು ಕಿಸೆಯಲ್ಲಿ ಇಟ್ಟುಕೊಂಡಿಲ್ಲ. ಅವರು ಮಿಷನ್-150, ಪ್ಲಸ್ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ, ನಾವು ವಿಷನ್-2025 ಬಿಡುಗಡೆ ಮೂಲಕ ನವಕರ್ನಾಟಕ ನಿರ್ಮಾಣಕ್ಕೆ ಭೂಮಿಕೆ ನಿರ್ಮಿಸಿದ್ದೇವೆ,''
ವೈಯಕ್ತಿ ಸಂಘರ್ಷವಲ್ಲ
'ಸಿದ್ಧಾಂತ ಹಾಗೂ ಕಾರ್ಯಕ್ರಮದ ಆಧಾರದಲ್ಲೇ ಚುನಾವಣೆ ನಡೆಯಲಿದೆ. ಯಾವುದೇ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಘರ್ಷ ಇದಾಗಿರುವುದಿಲ್ಲ. ವೈಯಕ್ತಿಕ ಟೀಕೆ, ಟಿಪ್ಪಣಿಗೆ ಮಹತ್ವವನ್ನೂ ಕೊಡುವುದಿಲ್ಲ. ನಮ್ಮ ಸರಕಾರದ ವಿರುದ್ಧ ಬಿಜೆಪಿ ನಾಯಕರು ಅನಗತ್ಯ ಆಪಾದನೆ ಹೊರಿಸುತ್ತಿದ್ದಾರೆ. ಅಂತಹ ಆರೋಪ ಮಾಡುವ ನೈತಿಕತೆಯೇ ಅವರಿಗೆ ಇಲ್ಲ,' ಎಂದು ರಾಜಕೀಯ ಎದುರಾಳಿಗಳ ವಿರುದ್ಧವೂ ಚಾಟಿ ಬೀಸಿದರು.
ಏಪ್ರಿಲ್ನಲ್ಲೇ ಚುನಾವಣೆ
ಸರಕಾರ ಭರ್ತಿ 5 ವರ್ಷ ಪೂರೈಸಲಿದೆ. ಮುಂದಿನ ಏಪ್ರಿಲ್ನಲ್ಲೇ ಚುನಾವಣೆ. ಅವಧಿಪೂರ್ಣ ಚುನಾವಣೆ ಇಲ್ಲವೇ ಇಲ್ಲ ಎಂದು ಖಚಿತವಾಗಿ ಹೇಳಿದರು ಸಿದ್ದರಾಮಯ್ಯ.
ಜೆಡಿಎಸ್ ಕೂಡ ಪ್ರತಿಪಕ್ಷ
'ಕಾಂಗ್ರೆಸ್ಗೆ ಬಹುಮತ ಖಚಿತವಾದ್ದರಿಂದ ಜೆಡಿಎಸ್ನೊಂದಿಗೆ ಹೊಂದಾಣಿಕೆ ಪ್ರಶ್ನೆಯಿಲ್ಲ. ಜೆಡಿಎಸ್ ಬಗ್ಗೆ ಮೃಧು ಧೋರಣೆಯೂ ಇಲ್ಲ. ಆ ಪಕ್ಷವನ್ನೂ ಒಂದು ಪ್ರತಿಪಕ್ಷವೆಂದೇ ಸ್ವೀಕರಿಸಲಾಗಿದೆ. ಈ ಹಿಂದೆ ನಾನು ಅದೇ ಪಕ್ಷದಲ್ಲಿದ್ದಾಗ ಜನತಾದಳ ಸೆಕ್ಯೂಲರ್ ಎಂದು ನಾಮಕರಣ ಮಾಡಿದ್ದೆವು. ನಾನು ಹೊರಗೆ ಬಂದ ಮೇಲೆ ಕೋಮುವಾದಿ ಪಕ್ಷದೊಂದಿಗೆ ಅವರು ಸರಕಾರ ರಚಿಸಿದರು. ಹಾಗಾಗಿ ಈಗಲೂ ಜೆಡಿಎಸ್ ಅನ್ನು ಸೆಕ್ಯೂಲರ್ ಎಂದು ಕರೆಯಲಾಗದು,' ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.