ಪ್ರಮೋದ ಹರಿಕಾಂತ ಬೆಳಗಾವಿ
ಕನ್ನಡ, ಮರಾಠಿ ಭಾಷೆ ಹಾಗೂ ಗಡಿ ವಿಷಯವಾಗಿ ಪದೇ ಪದೆ ಸಂಘರ್ಷಗಳಿಗೆ ಕಾರಣವಾಗುತ್ತಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇನ್ನು ಮುಂದೆ ಎಲ್ಲ ಅಧಿಕಾರಿ, ಜನಪ್ರತಿನಿಧಿಗಳು ಕಡ್ಡಾಯವಾಗಿ ನಾಡಗೀತೆ ಕಂಠಪಾಠ ಮಾಡಬೇಕು!
ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಮಹಾರಾಷ್ಟ್ರ ಮೂಲದ ಆಶಾ ಐಹೊಳೆ ಅವರು ಇಂಥದೊಂದು ಆದೇಶ ಹೊರಡಿಸಿದ್ದಾರೆ. ಆ ಮೂಲಕ ಜಿಲ್ಲೆಯ ಎಲ್ಲ ಭಾಷಿಕರು ರಾಜ್ಯದ ನಾಡಗೀತೆಗೆ ಗೌರವ ಕೊಡಬೇಕು ಮತ್ತು ಅದನ್ನು ಹಾಡಲು ಕಲಿಯಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಸರಕಾರಿ ಸಭೆಗಳಲ್ಲಿ ನಾಡಗೀತೆಯ ಮುದ್ರಿತ ಹಾಡು ಬಳಸದಂತೆ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಸರಕಾರಿ ಸಭೆಯಲ್ಲಿ ನಾಡಗೀತೆ ಹಾಡುವುದನ್ನು ರಾಜ್ಯ ಸರಕಾರ ಈ ಹಿಂದೆಯೇ ಕಡ್ಡಾಯಗೊಳಿಸಿದೆ. ಆದರೆ, ಬಹುತೇಕ ಸರಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯ ಮುದ್ರಿತ ಹಾಡು ಪ್ರಸಾರ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಕನ್ನಡ ಭಾಷೆಯಲ್ಲಿರುವ ದಾಖಲೆಯನ್ನೇ ಒಪ್ಪದ ಎಂಇಎಸ್ ಬೆಂಬಲಿತ ಕೆಲ ಸದಸ್ಯರ ಉಪಟಳದಿಂದ ನಾಡಗೀತೆ ಹಾಡಿಸುವುದು ಸವಾಲಾಗಿತ್ತು.
ಇಂಥ ಪ್ರದೇಶದಲ್ಲಿ ಆ ನಾಡಗೀತೆಯನ್ನೇ ಕಂಠಪಾಠ ಮಾಡಿಸುವ ಧೈರ್ಯವನ್ನು ಯಾರೂ ತೋರಿಸಿರಲಿಲ್ಲ. ಆದರೆ, ಈಗಷ್ಟೇ ಕನ್ನಡ ಭಾಷೆ ಕಲಿಯುತ್ತಿರುವ ಮರಾಠಿ ಮೂಲದ ನಾಯಕಿಯೊಬ್ಬರು ಇಂಥ ಸಾಹಸ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಲ್ಲದೆ, ಈ ಆದೇಶ ಬೆಳಗಾವಿ ಜಿಪಂ ಇತಿಹಾಸದಲ್ಲಿಯೇ ಮಹತ್ವದ ದಾಖಲೆ ಎನಿಸಿದೆ. ಕೆಲ ತಿಂಗಳ ಹಿಂದೆ ಪಾಲಿಕೆಯಲ್ಲಿ ನಾಡಗೀತೆ ಹಾಡಿಸಿ ಹಿಂದಿನ ಡಿಸಿ ಎನ್. ಜಯರಾಂ ಗಮನ ಸೆಳೆದಿದ್ದರು.
ಅಪ್ಪಟ ಮರಾಠಿ, ಕನ್ನಡ ಪ್ರೇಮಿ
ಜಿಪಂ ಅಧ್ಯಕ್ಷೆ ಆಶಾ ಐಹೊಳೆಯವರು ಅಪ್ಪಟ ಮರಾಠಿ ಕುಟುಂಬದವರು. ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯವರಾದ ಇವರ ಮಾತೃಭಾಷೆ, ಶಿಕ್ಷಣ ಎಲ್ಲವೂ ಮರಾಠಿ. ಈಗ ಕರ್ನಾಟಕದ ಸೊಸೆಯಾಗಿ ಅಥಣಿಯಲ್ಲಿ ನೆಲೆಸಿದ್ದಾರೆ. ಸ್ನಾತಕೋತ್ತರ ಪದವೀಧರೆ ಆಗಿರುವ ಇವರು ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾದ ಬಳಿಕ ಕನ್ನಡ ಭಾಷೆ ಕಲಿಯಲು ಆರಂಭಿಸಿದ್ದಾರೆ. ಸಭೆಗಳಲ್ಲಿ ಕೆಲ ಸದಸ್ಯರು ಮರಾಠಿಯಲ್ಲಿ ಮಾತನಾಡಿದರೂ, ಅವರಿಗೆ ಕನ್ನಡದಲ್ಲಿಯೇ ಉತ್ತರ ಕೊಡುವ ಮೂಲಕ ಕನ್ನಡ ಪ್ರೇಮ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಂಪಾದಕತ್ವದಲ್ಲಿ ಒಂದು ಕನ್ನಡ ದಿನಪತ್ರಿಕೆಯೂ ಹೊರಬರುತ್ತಿದೆ. ಆ ಮೂಲಕ ಕರ್ನಾಟಕದಲ್ಲಿಯೇ ಹುಟ್ಟಿ, ಬೆಳೆದು ನಾಡದ್ರೋಹಿ ಕೆಲಸ ಮಾಡುತ್ತಿರುವ ಜಿಲ್ಲೆಯ ಕೆಲ ಶಾಸಕರ ಮಧ್ಯೆ ಆಶಾ ಅವರು ಮಾದರಿ ಎನಿಸಿದ್ದಾರೆ.
ಸಭೆಗಳಲ್ಲಿ ಮುದ್ರಿತ ನಾಡಗೀತೆ ಪ್ರಸಾರ ಮಾಡುವಾಗ ಮಧ್ಯದಲ್ಲಿ ವಿದ್ಯುತ್ ಸ್ಥಗಿತವಾದರೆ ಹಾಡು ಅರ್ಧಕ್ಕೇ ನಿಂತು ಹೋಗುತ್ತದೆ. ಅದರಿಂದ ನಾಡಗೀತೆಗೆ ಅವಮಾನ ಮಾಡಿದಂತಾಗುತ್ತದೆ. ಅದಕ್ಕಾಗಿ ಎಲ್ಲರೂ ನಾಡಗೀತೆ ಕಂಠಪಾಠ ಮಾಡಿ ಹಾಡುವ ಮೂಲಕ ರಾಜ್ಯಕ್ಕೆ ಇನ್ನಷ್ಟು ಗೌರವ ಕೊಡಬೇಕು ಎಂದು ಈ ಆದೇಶ ಮಾಡಿದ್ದೇನೆ ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು.