ಚಿಕ್ಕಬಳ್ಳಾಪುರ : ನಗರದ ಹೊರವಲಯದ ಎಸ್ಜೆಸಿಐಟಿಯಲ್ಲಿ ಗುರುವಾರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ‘ಸಂಭ್ರಮ’ ಅದ್ಧೂರಿಯಾಗಿ ನಡೆಯಿತು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ‘ಆ,ನೆ’ ಮುಖ್ಯ.‘ಆ’ ಎಂದರೆ ‘ಆನಂದ’, ‘ನೆ’ ಎಂದರೆ ‘ನೆಮ್ಮದಿ’, ಎಂದು ವ್ಯಾಖ್ಯಾನಿಸಿದರು. ಉನ್ನತ ಶಿಕ್ಷಣ ಪಡೆದ ಟೆಕ್ಕಿಗಳು ತಂದೆತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವ ಸಂಪ್ರದಾಯ ಕಳವಳಕಾರಿಯಾದುದು. ವಿದ್ಯಾವಂತಿಕೆಗೆ ತಕ್ಕಂತೆ ಮಾನವೀಯ ವೌಲ್ಯಗಳಿರದಿದ್ದರೆ ಶಿಕ್ಷಣ ವ್ಯರ್ಥ. ಶಿಕ್ಷಣದ ಗುರಿ ಹಣ ಸಂಪಾದನೆಗಿಂತ ಅಧಿಕವಾಗಿ ಮಾನವೀಯತೆಯಾಗಿರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ವಿದ್ಯಾರ್ಥಿ ಜೀವನದ ಪರಿಪೂರ್ಣ ಸದ್ಬಳಕೆಯಿಂದ ಭವಿಷ್ಯದ ಉತ್ತಮ ಜೀವನ ಲಭ್ಯವೆಂದರು.
ಚಿತ್ರನಟ ಸುಂದರರಾಜ್ ಆಧುನಿಕ ಜೀವನ ಶೈಲಿಯನ್ನು ವಿಮರ್ಶಿಸಿದ ತಮ್ಮ ಹಾಸ್ಯಭರಿತ ಭಾಷಣದಲ್ಲಿ ಯುವಜನತೆ ಫ್ಯಾಷನ್ ಹೆಸರಿನಲ್ಲಿ ದುಬಾರಿ ಬೆಲೆ ತೆತ್ತು ಚಿತ್ರವಿಚಿತ್ರ ಉಡುಪು ಧರಿಸುವುದನ್ನು ಕಿಚಾಯಿಸಿದರು. ಡಿಸೆಲ್ ಪ್ಯಾಂಟ್ ಕೊಡಿಸುತ್ತೇನೆಂದು ಕರೆದೊಯ್ದ ಮೊಮ್ಮಗಳು ಪ್ಯಾಂಟೂ ಅಲ್ಲದ ಚೆಡ್ಡಿಯೂ ಅಲ್ಲದ ಬಟ್ಟೆಗೆ 4,999 ರೂ ನೀಡಿ ಖರೀದಿಸಿದ್ದನ್ನು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಬೆಂಗಳೂರಿನಲ್ಲಿ ಯಾವುದಕ್ಕೂ ಒಂದಿಂಚೂ ಜಾಗವಿಲ್ಲ. ಎಲ್ಲಾ ಕಂಪ್ಯೂಟರಲ್ಲೇ.. ಎಂದು ನಗೆಯುಕ್ಕಿಸಿದರು. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಪರಿಸರ ಉಳಿಸಿ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ಸದಸ್ಯ ಕೆ.ಪಿ.ಶ್ರೀನಿವಾಸಮೂರ್ತಿ, ಪ್ರಿನ್ಸಿಪಾಲ್ ಡಾ.ಮುನಿಕೆಂಚೇಗೌಡ ಹಾಜರಿದ್ದರು.