ಆ್ಯಪ್ನಗರ

ಹಫ್ತಾ ನೀಡುವಂತೆ ಉದ್ಯಮಿಗೆ ಜೀವ ಬೆದರಿಕೆ: ಭೂಗತ ಪಾತಕಿ ಬನ್ನಂಜೆ ರಾಜನ 5 ಸಹಚರರು ಅಂದರ್

ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರು ಬನ್ನಂಜೆ ರಾಜನ ಸೂಚನೆಯಂತೆ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸಂಘಟನೆ (ಸಿಂಡಿಕೇಟ್) ಮಾಡಿಕೊಂಡು ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಹಫ್ತಾ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಹೋದರೆ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು.

Vijaya Karnataka Web 22 Mar 2019, 10:03 pm
ಉಡುಪಿ: ಹಫ್ತಾ ನೀಡುವಂತೆ ಉಪ್ಪೂರು ನಿವಾಸಿ ಉದ್ಯಮಿ ರತ್ನಾಕರ ಶೆಟ್ಟಿ ಅವರಿಗೆ ಫೋನ್‍ನಲ್ಲಿ ಬೇಡಿಕೆವೊಡ್ಡಿ, ಜೀವ ಬೆದರಿಕೆ ಹಾಕಿರುವ ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web bannanje raja


ಮಂಗಳೂರು ಮುಲ್ಕಿ ಕೊಲ್ನಾಡು ಕೆಎಸ್ ರಾವ್ ನಗರ ನಿವಾಸಿಗಳಾದ ಪ್ರಸ್ತುತ ಬೆಂಗಳೂರು ಜೆಪಿ ನಗರದ 2 ನೇ ಹಂತದಲ್ಲಿ ವಾಸವಿರುವ ಶಶಿ ಪೂಜಾರಿ ಯಾನೆ ಶಾಡೋ (28), ರವಿಚಂದ್ರ ಪೂಜಾರಿ ಯಾನೆ ವಿಕ್ಕಿ ಪೂಜಾರಿ (30), ಮಂಗಳೂರು ಪೆರ್ಮಂಕಿ ಉಲಾಯಿಬೆಟ್ಟು ಪಟ್ರಕೋಡಿ ಹೌಸ್ ನಿವಾಸಿ ಹಾಗೂ ಪ್ರಸ್ತುತ ಏಣುಗುಡ್ಡೆ ಗ್ರಾಮದ ಕಟಪಾಡಿ ಬಳಿಯ ಫಾರೆಸ್ಟ್ ಗೇಟ್ ನಿವಾಸಿ ಧನರಾಜ್ ಪೂಜಾರಿ ಯಾನೆ ಧನರಾಜ್ ಯಾನೆ ರಾಕ್ (26), ಕೊಡವೂರು ಗ್ರಾಮದ ಮಲ್ಪೆ ಕೊಳದ ಯಶಸ್ವಿನಿ ಐಸ್ ಪ್ಲಾಂಟ್ ನಿವಾಸಿ ಧನರಾಜ್ ಸಾಲ್ಯಾನ್ ಯಾನೆ ಧನು ಕೊಳ (30) ಹಾಗೂ ಮಲ್ಪೆ ಸರಕಾರಿ ಪಿ.ಯು. ಕಾಲೇಜು ಬಳಿ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಮಿತಿ ಹತ್ತಿರ ನಿವಾಸಿ ಉಲ್ಲಾಸ್ ಶೆಣೈ ಯಾನೆ ಉಲ್ಲಾಸ್ (27) ಬಂಧಿತರು.

ರವಿಚಂದ್ರ ಅಲಿಯಾಸ್ ವಿಕ್ಕಿ ಪೂಜಾರಿ

ಘಟನೆ ವಿವರ: ಉಪ್ಪೂರು ಮೂಲದ ಉದ್ಯಮಿ ರತ್ನಾಕರ ಶೆಟ್ಟಿ ಅವರಿಗೆ ಹಫ್ತಾ ನೀಡುವಂತೆ ಬನ್ನಂಜೆ ರಾಜನ ಸಹಚರರು ಬೆದರಿಕೆವೊಡ್ಡಿದ್ದರು. ಈ ಬಗ್ಗೆ ಮಾ. 13 ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಡಿ.ಸಿ.ಐ.ಬಿ. ತಂಡವನ್ನು ಸನ್ನದ್ಧ ಮಾಡಲಾಯಿತು.

ಶಶಿ ಪೂಜಾರಿ

ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕ ಸಿ. ಕಿರಣ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಕಾರ್ಯತಂತ್ರವನ್ನು ರೂಪಿಸಿ, ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ, ಹಫ್ತಾ ವಸೂಲಿಗೆ ಕರೆ ಮಾಡಿದ ಆರೋಪಿ ಶಶಿ ಪೂಜಾರಿ ಎಂಬಾತನ ಪತ್ತೆಗಾಗಿ ಬೆಂಗಳೂರಿಗೆ ತೆರಳಿತ್ತು.

ಧನರಾಜ್ ಪೂಜಾರಿ


ಬೆಂಗಳೂರಿನ ಜೆ.ಪಿ. ನಗರದಲ್ಲಿ ಸಂಚರಿಸಿ, ಎಂ.ಜಿ. ರಸ್ತೆ, ಸೈಂಟ್ ಮಾಕ್ರ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿರುವ ಪಬ್‍ಗಳಲ್ಲಿ ಪರಿಶೀಲನೆ ಮಾಡಲಾಗಿತ್ತು. ಬ್ರಿಗೇಡ್ ಅಡ್ಡ ರಸ್ತೆಯಲ್ಲಿರುವ ಬಾರೊಂದರ ಬಳಿ ಗುರುವಾರ ರಾತ್ರಿ 10.30 ಕ್ಕೆ 3 ಜನರು ನಿಂತುಕೊಂಡಿದ್ದು, ಅವರನ್ನು ಸುತ್ತುವರಿದು, ಆರೋಪಿಗಳ ಪೈಕಿ ಶಶಿ ಪೂಜಾರಿಯನ್ನು ಫೋಟೊ ನೋಡಿ ಗುರುತಿಸಿ ಹಾಗೂ ರವಿಚಂದ್ರ ಪೂಜಾರಿಯನ್ನು ಅಲ್ಲಿ ಬಂಧಿಸಲಾಗಿತ್ತು.

ಉಲ್ಲಾಸ್ ಶೆಣೈ


ಆರೋಪಿ ಧನರಾಜ್ ಪೂಜಾರಿಯನ್ನು ಉಡುಪಿ ತಾಲೂಕಿನ ಉದ್ಯಾವರದ ಮಠದಂಗಡಿ ಶ್ರೀಸಾಯಿ ಹೌಸ್‍ನಲ್ಲಿ ವಶಕ್ಕೆ ಬಂಧಿಸಿ, ವಿಚಾರಣೆ ಮಾಡಲಾಗಿತ್ತು. ಈ ಮೂವರು ಕೊಟ್ಟಿರುವ ಮಾಹಿತಿಯಂತೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮಲ್ಪೆಯಲ್ಲಿ ಧನರಾಜ್ ಸಾಲ್ಯಾನ್ ಹಾಗೂ ಉಡುಪಿ ಕೋರ್ಟ್ ಬಳಿ ರಸ್ತೆ ಬದಿಯಲ್ಲಿ ಉಲ್ಲಾಸ್ ಶೆಣೈ ಎಂಬುವವರನ್ನು ಬಂಧಿಸಲಾಯಿತು.

ಧನರಾಜ್ ಸಾಲ್ಯಾನ್


ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜ ಈಗಾಗಲೇ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದಾನೆ.

ಈ ಐವರು ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರಾಗಿದ್ದು, ಬನ್ನಂಜೆ ರಾಜನ ಸೂಚನೆಯಂತೆ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸಂಘಟನೆ (ಸಿಂಡಿಕೇಟ್) ಮಾಡಿಕೊಂಡು ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಹಫ್ತಾ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಹೋದರೆ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಇವರ ವಿರುದ್ಧ ಮಂಗಳೂರು ಉತ್ತರ (ಬಂದರು), ಪೂರ್ವ (ಕದ್ರಿ), ಬರ್ಕೆ, ಉರ್ವಾ, ಉಲ್ಲಾಳ, ಉಡುಪಿಯ ಮಣಿಪಾಲ, ಮಲ್ಪೆ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ.

ಈ ರೀತಿಯ ಹಫ್ತಾ ನೀಡುವಂತೆ ಜೀವ ಬೆದರಿಕೆ ಕರೆ ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರು ನೀಡಬಹುದು. ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ. ಘಟಕದ ಎ.ಎಸ್.ಐ. ರವಿಚಂದ್ರ, ಸಿಬ್ಬಂದಿ ಸುರೇಶ್, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ಸಹಕರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ