-ಶ್ರೀಶ್ರೀ ರವಿಶಂಕರ್
ಮೂರನೆಯ ಹಂತದ ಜ್ಞಾನವೆಂದರೆ ಅಂತಃಸ್ಫುರಣೆಯ ಜ್ಞಾನ. ಅನೇಕ ಸಲ ನಿಮ್ಮ ಭಾವನೆಗಳಿಂದ, ನಿಮ್ಮದೆ ರಾಗಗಳಿಂದ ಮತ್ತು ದ್ವೇಷಗಳಿಂದ ನೀವು, ''ಓ! ಇದು ನನ್ನ ಅಂತರಾಳದ ಭಾವನೆ, ಇದು ನನ್ನ ಜ್ಞಾನ,'' ಎನ್ನುತ್ತೀರಿ. ಇಲ್ಲ! ಇದನ್ನು ಮಾಯೆ ಎನ್ನುತ್ತಾರೆ- 'ಯೋಗಮಾಯೆ' ಅದರೊಳಗೆ ಹೊಕ್ಕಬೇಡಿ! ಆತ್ಮದ ಜ್ಞಾನವನ್ನು ಸನ್ಮಾನಿಸಲು ನಿಮ್ಮಿಂದ ಯಾವಾಗ ಸಾಧ್ಯವಾಗುತ್ತದೆ? ನೀವು ಪೂರ್ಣವಾಗಿ ಸ್ತಬ್ಧರಾದಾಗ.
ಆದ್ದರಿಂದ, ಆರಂಭದಲ್ಲಿ ಕೆಲವರಿಗೆ ಮಾತ್ರ ಇದೇಕೆ ಕೆಲಸ ಮಾಡುತ್ತದೆ? ನಿಮಗೇಕೆ ಕೆಲಸ ಮಾಡುವುದಿಲ್ಲ? ಏಕೆಂದರೆ ನಿಮ್ಮಲ್ಲಿ ಸದಾ ಸ್ವಲ್ಪ ರಾಗ ವಿರುತ್ತದೆ, ಸ್ವಲ್ಪ ದ್ವೇಷ ವಿರುತ್ತದೆ. ಕೆಲವು ರಾಗಗಳು ಮತ್ತು ದ್ವೇಷಗಳು ಮತ್ತು ಇದರಿಂದ ನಿಮ್ಮಲ್ಲಿ ಗೊಂದಲವುಂಟಾಗುತ್ತದೆ. ನೀವು ಮಾಡುವ ಖಾಲಿ ಮತ್ತು ಟೊಳ್ಳಾದ ಧ್ಯಾನದಿಂದ ಈ ಹಂತದ ಜ್ಞಾನವನ್ನು, ಅಂತಃಸ್ಫುರಣೆಯನ್ನು ಪಡೆದುಕೊಳ್ಳಲು ಬಹಳ ಬಹಳ ಸಹಾಯಕವಾಗಿರುತ್ತದೆ. ಇದು ಇಂದ್ರಿಯಗಳ ಹಂತವನ್ನು ಮೀರುವಂತದ್ದು, ಬುದ್ಧಿಯನ್ನು ಮೆಟ್ಟಿ ನಿಂತಿರುವಂತದ್ದು. ಈಗ, ಇದನ್ನು ಯಾರಿಗಾದರೂ ಸರಿ, ಹೇಗೆ ವಿವರಿಸಿ ಹೇಳುವುದು? ಇದು ದೊಡ್ಡ ಸಮಸ್ಯೆ. ಆರಂಭದ ಆವಿಷ್ಕಾರವು ಅಂತಃಸ್ಫುರಣೆಯಿಂದ ಬರುತ್ತದೆ. ನಂತರ ಬುದ್ಧಿ ಅದರ ಮೇಲೆ ಆಟವಾಡುತ್ತದೆ ಮತ್ತು ಅದನ್ನು ಮತ್ತಷ್ಟು ಮುಂದಕ್ಕೆ ಬೆಳೆಸುತ್ತದೆ. ಪ್ರತಿಯೊಂದು ಅದ್ಭುತವಾದ ಸಂಗೀತ ಅಥವಾ ಕವಿತೆ ಆ ಸ್ಥಳದಿಂದ ಬಂದಿದೆ. ಪ್ರತಿಯೊಂದೂ ಸಹ! ಇದರಿಂದ ಪ್ರಾಯೋಗಿಕವಾದ ಲಾಭವನ್ನು ಎಲ್ಲರೂ ಪಡೆಯಬೇಕು. ನಿಮ್ಮ ಬುದ್ಧಿ ತೀರ್ಪನ್ನು ನೀಡುತ್ತಲಿರುತ್ತದೆ. ಆದ್ದರಿಂದ ಬುದ್ಧಿಯ ಮೇಲೆ ಪೂರ್ಣವಾಗಿ ಸದಾ ಅವಲಂಬಿಸಿರಬಾರದು. ''ಹೌದು ನನ್ನ ಮನಸ್ಸು ಒಂದಲ್ಲ ಒಂದು ಹೇಳುತ್ತಲಿರುತ್ತದೆ. ಪರವಾಗಿಲ್ಲ ಅದನ್ನು ನಾನು ಲೆಕ್ಕಿಸುವುದಿಲ್ಲ'' ಎನ್ನುವುದು ಮೊದಲ ಹೆಜ್ಜೆ. ಮನಸ್ಸಿನ ಈ ಆಟಗಳಲ್ಲಿ ಮಾರು ಹೋಗಬೇಡಿ. ಅವುಗಳಿಗೆ ಸಾಕ್ಷಿಯಾಗಿ. ಮನೆಯಲ್ಲಿ ಏನಾದರೂ ವಾದ ನಡೆದಾಗ ಅಥವಾ ಸ್ನೇಹಿತರ ನಡುವೆ ಜಗಳ ನಡೆದಾಗ ಏನೋ ಆಗುತ್ತದೆ. ಕೆಲವೊಮ್ಮೆ ಒಂದು ಹೆಜ್ಜೆ ಮುಂದಿಟ್ಟು, ''ಓ! ಇದೇನು? ಇದನ್ನೆಲ್ಲಾ ಬಹಳ ನೋಡಿದ್ದೇನೆ. ಇದರಿಂದ ನಾನು ಬಾಧೆಗೆ ಒಳಗಾಗುವುದಿಲ್ಲ'' ಎನ್ನುತ್ತೀರಿ. ನಿಧಾನವಾಗಿ ಈ ಹಂತಕ್ಕೆ ಪಯಣಿಸುತ್ತೀರಿ. ಎಲ್ಲರ ಜೀವನದಲ್ಲೂ ಇದು ನಡೆಯುತ್ತಿದೆ. ಇಷ್ಟು ಅರಿವಿದ್ದರೆ ಸಾಕು; ಮೂರನೆಯ ಹಂತದ ಜ್ಞಾನದೆಡೆಗೆ ಶೀಘ್ರವಾಗಿ ತೆರಳುತ್ತೀರಿ.
ಅಂತಃಸ್ಫುರಣೆ ಎದ್ದಾಗ ಕುಳಿತು ಲೆಕ್ಕಾಚಾರ ಮಾಡುವುದಿಲ್ಲ. ಅಂತಃಸ್ಫುರಣೆಯೆಂದರೆ, ವಿಚಾರವನ್ನೂ ಮೀರಿ ತಾನಾಗಿಯೆ ಬರುವಂತದ್ದು. ಆರ್ಕಿಮೆಡಿಸ್ ಆಲೋಚಿಸಿ ಆಲೋಚಿಸಿ ದಣಿದ. ಆದರೆ ಏನು ಕೆಲಸ ಮಾಡಲಿಲ್ಲ! ಆದರೆ ವಿಶ್ರಮಿಸಿದಾಗ ದಿಢೀರೆಂದು ಆರ್ಕಿಮೆಡಿಸ್ನ ತತ್ವ ಆತನಿಗೆ ಹೊಳೆಯಿತು.
ಅದೇ ರೀತಿಯಾಗಿ ಅನೇಕ ವಿಜ್ಞಾನಿಗಳು ಆರನೆಯ ಜ್ಞಾನದಿಂದ ಏನೋ ಒಂದನ್ನು ಪಡೆದರು. ಅದು ಅಂತಃಸ್ಫುರಣೆ ಮತ್ತು ಅದನ್ನು ಬೆಳೆಸಬೇಕು. ಆದ್ದರಿಂದ, ಕೇವಲ ನಿಮ್ಮ ಪಂಚೇಂದ್ರಿಗಳ ಮೇಲೆ ಮಾತ್ರ ಅಥವಾ ಬುದ್ಧಿಯ ಮೇಲೆ ಮಾತ್ರ ಅವಲಂಬಿಸಬೇಡಿ. ಅಂತಃಸ್ಫುರುಣೆಯ ಜ್ಞಾನವೂ ಮುಖ್ಯ. ಅದು ಆಳವಾದದ್ದು, ಸತ್ಯಕ್ಕೆ ಸಮೀಪವಾದದ್ದು, ವಾಸ್ತವತೆಗೆ ನಿಲುಕಿರುವಂತದ್ದು. ಇಲ್ಲವಾದರೆ ನೀವು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಸಾಮಾನ್ಯವಾಗಿ ತಪ್ಪಾಗುತ್ತಿರುವುದನ್ನು ಕಾಣುವಿರಿ. ನಿಮ್ಮ ಅಂತಃಸ್ಫುರಣೆ ನಿಮ್ಮ ಕೈಬಿಡುವುದಿಲ್ಲ