ಆ್ಯಪ್ನಗರ

ಜ್ಞಾನದ ನೆಲೆಯಲ್ಲಿ ಕಟ್ಟಿಕೊಂಡ ಬದುಕು ನಿರುಮ್ಮಳ

Vijaya Karnataka Web 25 Aug 2017, 10:44 am
-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ-
Vijaya Karnataka Web bodhivruksha about knowledge
ಜ್ಞಾನದ ನೆಲೆಯಲ್ಲಿ ಕಟ್ಟಿಕೊಂಡ ಬದುಕು ನಿರುಮ್ಮಳ


ಮನಸ್ಸಿನ ಕೊಳಕುಗಳಲ್ಲಿ ಇಂದ್ರಿಯ ಸುಖವೆಂಬುದು ಅತ್ಯಂತ ಪ್ರಬಲವಾದುದು. ಇದರ ಶಕ್ತಿ ಊಹಾತೀತ. ಇದನ್ನು ಮಣಿಸುವವನು ಮತ್ತು ಗೆಲ್ಲುವವನೇ ನಿಜವಾದ ವಿರಕ್ತ. ಜೀವನದಲ್ಲಿ ನಗು, ಅಳು ಬಹಳ ಸಹಜ. ಬಂಧು, ಬಾಂಧವರು, ಆಪ್ತರು, ಕೂಡಿಟ್ಟ ಧನ ಕನಕ ಕಳೆದುಕೊಂಡಾಗ ಜನ ರೋಧಿಸುತ್ತಾರೆ.
ಇನ್ನು ನಗುವಿಗಂತೂ ಲೆಕ್ಕವೇ ಇಲ್ಲ. ಇವೆರಡು ಲೌಕಿಕ ಕಾಮನೆಗಳ ಕಾಪಾಟುಗಳು ಇತರರದು. ಕಷ್ಟಗಳನ್ನು ಕಂಡು ಮರುಗುವುದು ಹಾಗೂ ಅದನ್ನು ಹೋಗಲಾಡಿಸಲು ಪ್ರಯತ್ನಿಸುವುದು. ಎಲ್ಲ ಜೀವಿಗಳ ಸುಖ ಶಾಂತಿಗಾಗಿ ಹಾರೈಸುವುದು. ಇತರರ ಯಶಸ್ಸು ಮತ್ತು ಸಂಪತ್ತು ಕಂಡು ಸಂತೋಷ ಪಡುವುದು ನಮಗೆ ಕರಗತವಾಗುವುದೇ ಇಲ್ಲ. ಮನಸ್ಸಿನ ಧ್ಯಾನವೊಂದಿದ್ದರೆ ಸುಖ ದುಃಖಗಳ ಪರಿಣಾಮಗಳನ್ನು ಮತ್ತು ನಮ್ಮೊಳಗಿನ ಕೊಳಕು ತೊಡೆದುಕೊಳ್ಳಲು ಸಾಧ್ಯ. ನಮ್ಮ ಸ್ವಾಭಿಮಾನ ಮತ್ತು ಅಹಂಕಾರಗಳು ಇತರರ ಬಗ್ಗೆ ದ್ವೇಷ, ಆಸೆಗಳ ಬಗ್ಗೆ ಚಡಪಡಿಕೆ. ನಮ್ಮ ಬದುಕನ್ನು ತಿಂದು ಹಾಕುತ್ತದೆ.
‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಪಂಚಶೀಲಗಳನ್ನು ಪ್ರತಿಪಾದಿಸಿದ. ತನ್ನದಲ್ಲದ್ದನ್ನು ಪಡೆಯದೇ(ಕದಿಯದೇ) ಇರುವುದು, ಪ್ರಾಣಿ ಹತ್ಯೆ ಮತ್ತು ಹಿಂಸೆ ಮಾಡದೇ ಇರುವುದು. ಮಾದಕ ಪದಾರ್ಥ ಸೇವನೆಯಿಂದ ದೂರವಿರುವುದು. ಇವುಗಳನ್ನು ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳುತ್ತಾನೆ. ಗೌತಮ ಬುದ್ಧನ ನಲವತ್ತೈದು ವರ್ಷಗಳ ಉಪದೇಶದಲ್ಲಿ ಮನುಷ್ಯನ ಮನಸ್ಸುಗಳ ಕೊಳಕುಗಳ ದಿಗ್ದರ್ಶನ ಮಾಡಿಸಿ ಭಾರತೀಯರ ಪುರಾತನ, ಚರಿತ್ರೆ, ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ, ಪಂಚತಂತ್ರ, ಶರಣರ ವಚನ ಚಳುವಳಿವರೆಗೂ ನಮ್ಮ ಕಣ್ಣಿಗೆ ಕಾಣುವ ಬಹುದೊಡ್ಡ ವಿಪತ್ತು ಎಂಬುದು ಮನುಷ್ಯನ ಮನಸ್ಸಿನ ಕೊಳಕುಗಳು ಮತ್ತು ದುಃಖ.
ಉತ್ತಮ ನಡತೆ, ಮಾತು, ಏಕಾಗ್ರತೆ, ಗಮನ ಪ್ರಯತ್ನ, ಉದ್ಯೋಗ ಸರಿಯಾದ ದೃಷ್ಟಿಗಳ ಮೂಲಕ ನಾವು ರೂಪುಗೊಂಡಲ್ಲಿ ಸುಂದರ ಜೀವನ ಸಾಗಿಸಬಹುದು. ಇಡೀ ವಿಶ್ವದಾದ್ಯಂತ ಇಂದು ಮನುಷ್ಯನ ಮನೋವಿಕಾರಗಳು ಕಲ್ಪನೆಗೂ ಮೀರಿ ನಿಂತಿವೆ. ಹಿಂಸೆ, ಲೋಲುಪತೆ, ತಕ್ಷಣಕ್ಕೆ ಅಂದುಕೊಂಡದ್ದನ್ನು ಈಡೇರಿಸಿಕೊಳ್ಳುವ ಹಪಾಹಪಿಯಲ್ಲಿ ಮನುಷ್ಯರ ಬದುಕು ಸಂಘರ್ಷಗಳ ಸರಮಾಲೆಯಾಗಿದೆ.
ಒಬ್ಬೊಬ್ಬನು ಸಾಧಕನಾಗಬೇಕು. ಸಾಧಕಿಯಾಗಬೇಕು. ಲೋಕದ ಹಿತವನ್ನು ಬಯಸುವ ಸಮಾಜಮುಖಿಯಾಗಬೇಕು. ಭಾರತಕ್ಕೆ ತತ್ವ ದರ್ಶನ, ಆದರ್ಶಗಳ ಕೊರತೆ ಇಲ್ಲ. ಕಾಶ್ಮೀರದಿಂದ ಹಿಮಾಲಯದವರೆಗೂ ಸಹಸ್ರಾರು ಸಂತರು ಸಿಗಬಲ್ಲರು. ಆದರೆ, ಸಾಧಕರ ಸಂಖ್ಯೆ ಮಾತ್ರ ವಿರಳ. ಮುಂದುವರಿದ ದೇಶಗಳಲ್ಲಿ ಗಮನಿಸಿದಾಗ ಭಾರತ ಎಲ್ಲಿ ಸೋತಿದೆ ಎಂಬುದು ಗೊತ್ತಾಗುತ್ತದೆ. ನಾವು ಪರಿಸರದ ಕೊಳಕು ಮತ್ತು ಮನಸ್ಸಿನ ಕೊಳಕು ಇವೆರಡರ ನಡುವೆ ಸಿಕ್ಕು ಒದ್ದಾಡುತ್ತಿದ್ದೇವೆ. ಇದಕ್ಕೆ ಕಾರಣ ಅಜ್ಞಾನ. ಅಜ್ಞಾನ ಹೋಗಲಾಡಿಸಲು ಇದು ಸಕಾಲ. ಬದುಕನ್ನು ಆರೋಗ್ಯಕರ ಮಾರ್ಗದಲ್ಲಿ ಮುಂದುವರಿಸಲು ಪ್ರೇರಣೆ ನೀಡುವುದೇ ಜ್ಞಾನ. ಅದೇ ಬದುಕನ್ನು ತಪ್ಪು ಮಾರ್ಗದಲ್ಲಿ ಕೊಂಡೊಯ್ಯಲು ಪ್ರೇರಣೆ ನೀಡುವ ಚಿಂತನೆ ಮತ್ತು ಕ್ರಿಯೆ ಅಜ್ಞಾನ. ಅಜ್ಞಾನದ ನೆಲೆಯಲ್ಲಿ ಕಂಡುಕೊಂಡ ಬದುಕು ಹೆಚ್ಚು ತಲ್ಲಣ ಹುಟ್ಟು ಹಾಕುತ್ತದೆ. ಜ್ಞಾನದ ನೆಲೆಯಲ್ಲಿ ಕಟ್ಟಿಕೊಂಡ ಬದುಕನ್ನು ನಿರುಮ್ಮಳವಾಗಿಸುತ್ತದೆ.
ಧಿ-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ