ಯಾರದೋ ಮನೆಯಲ್ಲಿರುವ ಸಂಗೀತಮಯ ಬೆಡ್ರೂಮ್ ನೋಡಿ ಬಂದು ಗುಡಿಸಲಲ್ಲಿ ಮಲಗಿದರೆ ನಿದ್ರೆ ಹೇಗೆ ಬರುತ್ತದೆ? ಭಾರತದಲ್ಲಿ ಹುಟ್ಟುವ ಬದಲು ಅಮೆರಿಕಾದಲ್ಲಿ ಹುಟ್ಟಿದ್ದರೆ, ದಿಲ್ಲಿಯ ಅಧಿಕಾರಿಗಳ ಮನೆಯಲ್ಲಿ ಅಥವಾ ಮುಂಬೈನ ಸಿರಿವಂತರ ಮನೆಯಲ್ಲಿ ಹುಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ಎಂದರೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದಾದರು ಹೇಗೆ? ಭಾರತದಲ್ಲಿ ಹುಟ್ಟಿದ ಮೇಲೆ ಅಮೆರಿಕಾದಲ್ಲಿ ಹುಟ್ಟುವುದು ಹೇಗೆ? ನಾವಿರುವ ದೇಶವೇ ಅಮೆರಿಕಾ ಅಥವಾ ಸ್ವರ್ಗ ಎಂದು ಭಾವಿಸಿದರೆ ಆಗುವುದಿಲ್ಲವೇ? ಕೇವಲ ನೂರು, ಎರಡುನೂರು ವರುಷಗಳ ಹಿಂದೆ ಈ ದೇಶದ ಜನಸಂಖ್ಯೆ ಸುಮಾರು ಮೂವತ್ತು ಕೋಟಿ. ಇಂದು ನೂರಾ ಇಪ್ಪತ್ತು ಕೋಟಿ ದಾಟಿದೆ. ಹೀಗಾದರೆ ಬದುಕುವುದು ಹೇಗೆ? ನಮ್ಮ ದೇಶದ ವಿಸ್ತಾರವಾದ ಹೊಳೆ ಕೃಷ್ಣೆಯನ್ನು ಮರೆತು ಒಂದು ದೊಡ್ಡ ಹಳ್ಳದಂತಿರುವ ಇಂಗ್ಲೆಂಡ್ನ ಥೇಮ್ಸ್ ನದಿಯನ್ನು ನೆನೆದರೆ ಹೇಗೆ? ನನ್ನ ದೇಹ ತೂಕ ಇಲ್ಲವೆಂದು ಕೆಲವರು ನರಳಾಡುತ್ತಾರೆ. ಆದರೆ ಕೇವಲ ಹತ್ತು ಗ್ರಾಂ ತೂಕದ ಹಕ್ಕಿ ಮುಗಿಲೆತ್ತರದಲ್ಲಿ ಹಾರುತ್ತ ಹಾಡುತ್ತ ಬದುಕಿರುವುದನ್ನು ಮರೆಯುತ್ತಾರೆ. ನಾಲ್ಕು ಪಾವಟಿಗೆಯನ್ನು ಹತ್ತುವುದಕ್ಕೆ ಲಿಪ್ಟ್ ಬಳಸುತ್ತಾರೆ. ಲಿಫ್ಟ್ ಎಂದರೆ ಎತ್ತುವುದು, ಮನುಷ್ಯನನ್ನು ಯಾರಾದರೂ ನಾಲ್ಕು ಜನ ಎತ್ತುವುದು ಈಗಲ್ಲ ಕೊನೆಗೆಂಬುದನ್ನು ಮರೆಯುತ್ತಾರೆ. ಮಗನಿಗೆ ಪರೀಕ್ಷೆಯಲ್ಲಿ 98 ಅಂಕ ಬಂದರೆ 100 ಬರಲಿಲ್ಲ ಎನ್ನುವುದು, ಕಬ್ಬು ಎಕರೆಗೆ ನೂರು ಟನ್ ಬಂದಾಗ ಎರಡು ನೂರರ ಕನಸು ಕಾಣುವುದು ಎಷ್ಟು ಯೋಗ್ಯ? ಇದಕ್ಕೆ ಹಪಹಪಿತನವೆಂದು ಕರೆಯುತ್ತಾರೆ. ಇದರಿಂದ ಮಾನವನಿಗೆಂದೂ ಸುಖ-ಶಾಂತಿ ದೊರೆಯದು.
ನಾವು ನಮ್ಮ ಹೊಲ-ಮನೆಗಳಿಗೆ ಸೀಮೆಯನ್ನು ಹಾಕಿಕೊಂಡಿದ್ದೇವೆ. ಇದು ನನ್ನ ಮನೆ, ನನ್ನ ಹೊಲವೆಂದು ಹೇಳುತ್ತೇವೆ. ವ್ಯಾವಹಾರಿಕ ಅನುಕೂಲತೆಗಾಗಿ, ದುಡಿಯಲು, ಬದುಕಲು ಇದೆಲ್ಲವೂ ಸರಿ. ಆದರೆ ನಿಜವಾಗಿಯೂ ಈ ಪ್ರಪಂಚವೆಲ್ಲವೂ ಪರಮಾತ್ಮನದ್ದೇ ಆಗಿದೆ. ಈ ಹೊಲಮನೆಗಳೆಲ್ಲ ನಮ್ಮವುಗಳೇ ಆಗಿದ್ದರೆ ನಾವು ಇಹಲೋಕವನ್ನು ಪರಲೋಕಕ್ಕೆ, ಶಿವನ ಲೋಕಕ್ಕೆ ಹೋಗುವಾಗ ಅವು ನಮ್ಮ ಜೊತೆಗೆ ಬರಬೇಕಾಗಿತ್ತು. ಅದೆಂದಾದರೂ ಸಾಧ್ಯವೆ? ಇಲ್ಲವೇ ಇಲ್ಲ! ಅಂತೆಯೇ ಒಬ್ಬ ಸುಭಾಷಿತಕಾರರು ಹೇಳುತ್ತಾರೆ.
ಧನಾನಿ ಭೂಮೌ ಪಶವೋ ಹಿ ಗೋಷ್ಠೇ ನಾರೀ ಗೃಹದ್ವಾರೇ |
ಸಖಾ ಸ್ಮಶಾನೇ ಪರಲೋಕಮಾರ್ಗೇ
ಧರ್ಮಾನುಗೋ ಗಚ್ಛತಿ ಜೀವ ಏಕಃ ||
ಅಂತ್ಯಕಾಲದಲ್ಲಿ ಮನುಷ್ಯನ ಸಿರಿಸಂಪದವೆಲ್ಲಾ ಇಲ್ಲಿಯೇ ಉಳಿಯುತ್ತದೆ. ದನಕರುಗಳೆಲ್ಲ ಕೊಟ್ಟಿಗೆಯಲ್ಲಿರುತ್ತವೆ. ಹೆಂಡತಿ ಮನೆಯ ಬಾಗಿಲಲ್ಲಿರುತ್ತಾಳೆ. ಮಿತ್ರರು ಸ್ಮಶಾನದವರೆಗೆ ಬರುತ್ತಾರೆ. ಜೀವಾತ್ಮನೊಬ್ಬನೇ ತಾನು ಗಳಿಸಿದ ಧರ್ಮದೊಂದಿಗೆ ಪರಲೋಕದತ್ತ ಹೆಜ್ಜೆ ಹಾಕುತ್ತಾನೆ. ಇದು ಜೀವನದ ಕಟು ಸತ್ಯವಾಗಿರುವಾಗ ಮನುಷ್ಯನು ನಶ್ವರ ಸಿರಿಗಾಗಿ ಸುಮ್ಮನೇ ಹಪಹಪಿಸುವುದು, ಅತಿಯಾಶೆ ಪಡುವುದು ಸರಿಯೇ? ಎಂದೆಂದಿಗೂ ಸರಿಯಲ್ಲ. ಅಂತೆಯೇ ನಮ್ಮ ಋುಷಿಮುನಿಗಳು ಸಾವಿರ ಸಾವಿರ ವರುಷಗಳ ಹಿಂದೆಯೇ ಅತಿಯಾಶೆ ಪಡಬೇಡವೆಂದು ಎಚ್ಚರಿಸಿದರು!
ಆಧಾರ : ಈಶ ಪ್ರಸಾದ