Please enable javascript.ಸದ್ಯದ ಚರ್ಚೆ: ಭಾಷಾ ಮಾಧ್ಯಮ ಚರ್ಚೆಗೆ ಇಲ್ಲಿ ತಿರುವಿರಬಹುದೇ? - ಸದ್ಯದ ಚರ್ಚೆ: ಭಾಷಾ ಮಾಧ್ಯಮ ಚರ್ಚೆಗೆ ಇಲ್ಲಿ ತಿರುವಿರಬಹುದೇ? - Vijay Karnataka

ಸದ್ಯದ ಚರ್ಚೆ: ಭಾಷಾ ಮಾಧ್ಯಮ ಚರ್ಚೆಗೆ ಇಲ್ಲಿ ತಿರುವಿರಬಹುದೇ?

Vijaya Karnataka Web 8 Jun 2014, 4:00 am
Subscribe

ಶಿಕ್ಷಣ ಕಾಯಿದೆಯಡಿಯಲ್ಲಿ ತನಗಿರುವ ಆಧಿಕಾರ ಬಳಸಲು ತೊಂದರೆ ಏನೆಂಬುದನ್ನು ರಾಜ್ಯ ಸರಕಾರ ಕಂಡುಕೊಳ್ಳಬೇಕಿದೆ.

ಸದ್ಯದ ಚರ್ಚೆ: ಭಾಷಾ ಮಾಧ್ಯಮ ಚರ್ಚೆಗೆ ಇಲ್ಲಿ ತಿರುವಿರಬಹುದೇ?
ರಾಜ್ಯ ಸರಕಾರಕ್ಕೆ ಭಾಷಾನೀತಿಯನ್ನು ನಿಗದಿಪಡಿಸುವ ಅಧಿಕಾರವಿಲ್ಲ ಎಂಬುದಾಗಿ ಎಲ್ಲ ಕಡೆ ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟಿನ ಈಚಿನ ತೀರ್ಪು, ಮಗು ಯಾವ ಭಾಷೆಯ ಮೂಲಕ ಕಲಿಯಬೇಕು ಎಂಬುದನ್ನು ನಿಗದಿಪಡಿಸುವ ಅಧಿಕಾರವನ್ನು ಸರಕಾರ ಪಡೆದಿಲ್ಲವೆಂದು ಹೇಳುತ್ತದೆಂದು ವಿವರಿಸಲಾ–ಗಿದೆ. ಕಲಿಕೆಯ ಮಾಧ್ಯಮವನ್ನು ನಿಗದಿಪಡಿಸುವುದು ಮತ್ತು ಕಲಿಕೆಯ ಮಾಧ್ಯ–ಮವನ್ನು ಆಯ್ಕೆ ಮಾಡಿಕೊಳ್ಳುವುದು ಇವೆರಡೂ ಬೇರೆ ಬೇರೆ ಸಂಗತಿಗಳು. ಹಲವು ಆಯ್ಕೆಗಳನ್ನು ಸರಕಾರ ಗೊತ್ತು ಮಾಡಬಹುದು. ಆದರೆ ಅವುಗಳಲ್ಲಿ ತಮಗೆ ಬೇಕಾದುದನ್ನು ಮಗುವಿಗಾಗಿ ಪಾಲಕರು ಆಯ್ಕೆ ಮಡಲು ಅಧಿಕಾರ ಇದೆ ಎಂದು ತಿಳಿಯುವುದೇ ಸರಿ. ಇದನ್ನು ಇನ್ನಷ್ಟು ವಿವರವಾಗಿ ನೋಡೋಣ.

ಕರ್ನಾಟಕ ರಾಜ್ಯ ವಿಧಾನ ಮಂಡಲವು 1983ರಲ್ಲಿ ಅಂಗೀಕರಿಸಿದ ಕರ್ನಾಟಕ ರಾಜ್ಯ ಶಿಕ್ಷಣ ಕಾಯ್ದೆಗೆ ಹನ್ನೆರಡು ವರುಷಗಳ ಬಳಿಕ 1995–ರಲ್ಲಿ ರಾಷ್ಟಪತಿಗಳು ಅಂಕಿತ ಹಾಕಿದ್ದಾರೆ. ಈ ಹನ್ನೆರಡು ವರುಷಗಳ ಅವಧಿಯಲ್ಲಿ ಹಲವು ತಕರಾರುಗಳನ್ನು ಎತ್ತಲಾಗಿದ್ದು, ಅವೆಲ್ಲವನ್ನೂ 1995ರಿಂದ ಜಾರಿಗೆ ಬಂದಿರುವ ಕಾಯ್ದೆಯಲ್ಲಿ ಅಳವಡಿಸಲಾಗಿದೆ. ಈ ತಕರಾರುಗಳನ್ನು ಯಾರು ಎತ್ತಿದರು ಎಂಬುದನ್ನು ಈಗ ಚರ್ಚಿ–ಸುವುದು ಬೇಡ. ಸೇರ್ಪಡೆ ಮಾಡಲಾದ ತಿದ್ದುಪಡಿಗಳ ಬಗೆಗೆ ಕಾಯ್ದೆಯ ಮೊದಲಲ್ಲೇ ವಿವರಣೆ ಇದೆ. ಮುಖ್ಯವಾಗಿ ರಾಜ್ಯ ಸರಕಾ–ರದ ಅಧಿಕಾರದ ವಲಯದಿಂದ ಹೊರಗೆ ಉಳಿಯುವ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳಿಗೆ ಕಾಯ್ದೆಯ ವ್ಯಾಪ್ತಿಯಿಂದ ವಿನಾಯತಿ ಒದಗಿಸುವ ಉದ್ದೇಶ ಈ ತಿದ್ದುಪಡಿಗಳಿಗೆ ಇದೆ. ಗೋಕಾಕ್ ಚಳುವಳಿಯ ಬಳಿಕ ಮತ್ತು 1986ರ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆಯ ಬಳಿಕ ಕರ್ನಾಟಕದಲ್ಲಿ ಈ ಬಗೆಯ ಶಾಲೆಗಳು ಹೆಚ್ಚಾದವು ಎಂಬುದಕ್ಕೂ ಮೇಲೆ ಹೇಳಿದ ತಿದ್ದುಪಡಿಗೂ ನೇರವಾದ ಸಂಬಂಧವಿದೆ. ಅನುದಾನ ಪಡೆಯದ ಶಾಲೆಗಳು ಎಂಬ ಗುಂಪಿನಲ್ಲಿ ಈ ಎಲ್ಲ ಬಗೆಯ ಶಾಲೆಗಳೂ ಸೇರುತ್ತವೆ ಎಂಬುದನ್ನು ಗಮನಿಸಬೇಕು.

ಈ ಕಾಯ್ದೆಯ ಮೊದಲ ಅಧ್ಯಾಯದ 7(ಸಿ)ಯಲ್ಲಿ ರಾಜ್ಯ ಸರಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದು ಕಲಿಕೆಯ ಮಾಧ್ಯಮವಾಗಿರಬೇಕು ಎಂಬುದನ್ನು ನಿಗದಿಪಡಿಸುವ ಅಧಿಕಾರವನ್ನು ಪಡೆದಿದೆ ಎಂದು ತಿಳಿಸಲಾಗಿದೆ. ಇಂತದೇ ಭಾಷೆ ಎಂಬುದು ಈ ಕಾಯ್ದೆಯ ಈ ಭಾಗದಲ್ಲಿ ನಮೂದಿತವಾಗಿಲ್ಲವಾದರೂ ಆ ಭಾಷಾ ಮಾಧ್ಯಮ ಯಾವುದಿರಬೇಕು ಎಂಬ ನಿರ್ದೇಶನವನ್ನು ಶಾಲೆಗಳಿಗೆ ನೀಡುವ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿದೆ ಎಂಬುದು ಈ ಕಾಯ್ದೆಯನ್ನು ಓದಿದವರಿಗೆ ತಿಳಿಯುವ ಸಂಗತಿಯಾ–ಗಿದೆ. ನನಗೆ ತಿಳಿದಂತೆ 1983ರ ಈ ಕಾಯ್ದೆಯ ಈ ಭಾಗವನ್ನು ತಿದ್ದುಪಡಿ ಮಾಡಲಾಗಿಲ್ಲ ಮತ್ತು ಇದನ್ನು ಈವರೆಗೆ ಯಾವುದೇ ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿಲ್ಲ.

ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ‌್ಪು ಈ ಕಾಯ್ದೆ ಜಾರಿಗೆ ಬರುವ ಮುನ್ನ, ಅಂದರೆ 1994ರಲ್ಲಿ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಕುರಿತಾಗಿದೆ. ಇಪ್ಪತ್ತು ವರುಶಗಳ ಕಾಲ ವಿವಿಧ ನ್ಯಾಯಾ–ಲಯಗಳಲ್ಲಿ ಸರಕಾರದ ಈ ಆದೇಶವನ್ನು ಮಾತ್ರ ಪ್ರಶ್ನಿಸಲಾಗಿದೆ. ಸರಕಾರವೂ ಕೂಡ ತನ್ನ ಆದೇಶ ಸರಿಯಾಗಿದೆ ಎಂದು ವಾದಿಸುತ್ತಾ ಬಂದಿದೆ. ಸುಪ್ರೀಂ ಕೋರ್ಟ್ ತನ್ನ ಈಚಿನ ತೀರ‌್ಪನ್ನು ನೀಡುವ ಸಂದರ‌್ಭ–ದಲ್ಲಿ ಎತ್ತಿದ ಐದು ಪ್ರಶ್ನೆಗಳಲ್ಲಿ ತಾಯ್ನುಡಿಯಲ್ಲೇ ಕಲಿಯಬೇಕೆಂದು ಅಲ್ಪಸಂಖ್ಯಾತರಿಗೆ ಒತ್ತಾಯ ಮಾಡುವ ಅಧಿಕಾರವು ರಾಜ್ಯ ಸರಕಾರಕ್ಕೆ ಇದೆಯೇ ಎಂದು ಕೇಳಿಕೊಂಡಿದೆ. ತನ್ನ ತೀರ‌್ಪಿನಲ್ಲಿ ರಾಜ್ಯ ಸರಕಾರದ ಅಧಿಕಾರವನ್ನು ಮುಂಚೂಣಿಗೆ ತಂದಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಬದಲಿಗೆ, ತಮ್ಮ ಮಗುವಿನ ಕಲಿಕೆ ಯಾವ ಭಾಷೆಯ ಮೂಲಕ ಆಗಬೇಕು ಎಂಬುದನ್ನು ನಿರ‌್ಧರಿಸುವ ಹಕ್ಕು ಆ ಮಗುವಿನ ಪಾಲಕರಿಗೆ ಇರಬೇಕೆಂದು ಹೇಳಿದೆ. ಈ ಹಕ್ಕು ಪಾಲಕರಿಗೆ ಇರುವುದು ದಿಟವಾದರೆ ಅದನ್ನು ಮುಂದುವರೆಸಿದರೆ ಕಲಿಕೆಯಲ್ಲಿ ಇಂತದೇ ವಿಷಯಗಳನ್ನು ನಿಗದಿಪಡಿಸಿ ಅದನ್ನೇ ಓದಬೇಕೆಂದು ನಿಗದಿಪಡಿಸುವ ಅಧಿಕಾರವೂ ಸರಕಾರಕ್ಕೆ ಇಲ್ಲವೆಂದು ಹೇಳಲೂಬಹುದು.

ಮೇಲೆ ಹೇಳಿದ ರಾಜ್ಯ ಸರಕಾರದ 1983ರ ಕಾಯ್ದೆಯ ಒಂದನೇ ಅಧ್ಯಾಯದ 7(ಅ)ದಲ್ಲಿ ಕಲಿಕೆಯ ಪಠ್ಯಕ್ರಮ, ಪಠ್ಯವಿಷಯ, ಪಠ್ಯ–ಪುಸ್ತಕ ಇವೆಲ್ಲವನ್ನೂ ನಿಗದಿಪಡಿಸುವ ಅಧಿಕಾರ ಸರಕಾರಕ್ಕೆ ಇದೆ. ಮುಂದೆ ಈ ಅಧಿಕಾರವೂ ಸರಕಾರಕ್ಕೆ ಇಲ್ಲವೆಂದು ವಾದಿಸುವುದಕ್ಕೆ ಮುಂದಾಗುವ ಸಾಧ್ಯತೆ ಇದೆ. ಅದಿರಲಿ, 1994ರ ಸರಕಾರದ ಆದೇಶ–ವನ್ನು ಪ್ರಶ್ನಿಸಿದ ಹೈಕೋರ್ಟ್ ದಾವೆಗಳಲ್ಲಾಗಲೀ, ಸುಪ್ರೀಂ ಕೋರ್ಟ್‌ನ ಎದುರು ಮಂಡಿತವಾದ ದಾವೆಯಲ್ಲಾಗಲೀ, ಅದರ ಮುಂದೆ ನಡೆದ ಎರಡೂ ಪಕ್ಷದ ವಾದಗಳಲ್ಲಿ ಆಗಲೀ, ತೀರ‌್ಪಿನಲ್ಲಾ–ಗಲೀ... ಎಲ್ಲೂ ಕರ‌್ನಾಟಕ ಸರಕಾರದ ಶಿಕ್ಷಣ ಕಾಯ್ದೆಯ ಉಲ್ಲೇಖವೇ ಇಲ್ಲದಿರು–ವುದನ್ನು ಗಮನಿಸಬಹುದು. ಈ ಕಾಯ್ದೆಯು ಸರಕಾರಕ್ಕೆ ನೀಡಿರುವ ಅಧಿಕಾರವನ್ನು ಈವರೆಗೆ ಎಲ್ಲಿಯೂ ತಳ್ಳಿಹಾಕಿಲ್ಲ–ವಾದ್ದರಿಂದ ಕಲಿ–ಕೆಯು ಯಾವ ಭಾಷೆಯ ಮೂಲಕ ಆಗಬೇಕೆಂಬು–ದನ್ನು ನಿಗದಿ–ಪಡಿಸುವ ಅಧಿಕಾರ ಸರಕಾರಕ್ಕೆ ಇದೆ ಎಂದೇ ತಿಳಿಯಬೇಕಲ್ಲವೇ?
1994ರ ತನ್ನ ಆದೇಶವನ್ನು ಹೊರಡಿಸುವ ಹೊತ್ತಿನಲ್ಲಿ ಶಿಕ್ಷಣ ಕಾಯ್ದೆ ರಾಷ್ಟ್ರಪತಿಗಳ ಅಂಗೀಕಾರವನ್ನು ಪಡೆದಿರಲಿಲ್ಲವಾದ್ದರಿಂದ ಸದರಿ ಆದೇಶದಲ್ಲಿ ತನಗಿರುವ ಅಧಿಕಾರವನ್ನು ರಾಜ್ಯ ಸರಕಾರ ಎತ್ತಿ ಹೇಳುವಂತಿರಲಿಲ್ಲ. ಆದರೆ ಈಗ ಆ ಕಾಯ್ದೆ ಜಾರಿಗೆ ಬಂದು ಹತ್ತೊಂಬತ್ತು ವರುಶಗಳ ಬಳಿಕವೂ ತನಗೆ ಆ ಅಧಿಕಾರ ಇಲ್ಲವೆಂದು ಸರಕಾರವೇ ತಿಳಿಯುವಂತಾಗಿರುವದು ಸರಿಯೇ? ಇಲ್ಲವೇ ಇದರಲ್ಲಿ ಏನಾದರೂ ಕಾನೂನಿನ ತೊಡಕುಗಳಿವೆಯೇ ಎಂಬುದನ್ನು ಬಲ್ಲವರು ತಿಳಿಸಬೇಕು. ಜನರಿಗೆ ಅದು ಗೊತ್ತಾಗಬೇಕಾಗಿದೆ.
ಶಿಕ್ಷಣವನ್ನು ಮಗುವಿನ ಹಕ್ಕು ಎಂದು ತಿಳಿಸುವ ಕಾಯ್ದೆಯನ್ನು ಕೇಂದ್ರ ಸರಕಾರ ಅಂಗೀಕರಿಸಿದೆ; ರಾಜ್ಯ ಸರಕಾರವೂ ತನ್ನದೇ ಕಾಯ್ದೆಯ ಮೂಲಕ ಅದನ್ನು ಅನುಮೋದಿಸಿದೆ. ಈ ಕಾಯ್ದೆಯು ತರಬಹುದಾದ ಬಿಕ್ಕಟ್ಟುಗಳಿಗೆ ತುದಿಮೊದಲಿಲ್ಲ. ಈಗಉಂಟಾಗಿರುವ ಗೊಂದಲ ಕೂಡ ಈ ಹೊಸ ಪರಿಸ್ಥಿತಿಯಲ್ಲಿ ಬೇರೆಯೇ ನೆಲೆಗಳನ್ನು ತಲುಪಬಹುದೆಂದು ತೋರುತ್ತಿದೆ. ಸಂವಿಧಾನ ರಚನೆಯ ಸಭೆಯು ಶಿಕ್ಷಣವನ್ನು ಹಕ್ಕು ಎಂದು ಪಡಿಗಣಿಸುವ ಪ್ರಸ್ತಾವವನ್ನು ತುಂಬ ವಿವರ–ವಾಗಿ ಪರಿಶೀಲಿಸಿದೆ. ಆಗ ನಡೆದಿರುವ ಚರ್ಚೆಗಳಲ್ಲಿ ಮಂಡಿತವಾಗಿ–ರುವ ಸೂಕ್ಷ್ಮ ಸಂಗತಿಗಳನ್ನು ಗಮನಿಸಿದರೆ, ಸಂವಿಧಾನ ರಚಿಸಿದವರ ಮುಂಗಾಣ್ಕೆಯನ್ನು ಮನಗಾಣಬಹುದು. ಆ ಸಭೆಯು ಕಲಿಕೆಯನ್ನು ಮಗುವಿನ ಮೂಲಭೂತ ಹಕ್ಕು ಎಂದು ಪರಿಗಣಿಸಲಿಲ್ಲ. ಬದಲಿಗೆ ಕಲಿಕೆಯ ಅವಕಾಶಗಳನ್ನು ಒದಗಿಸುವ ಹೊಣೆ ರಾಜ್ಯ ಸರಕಾರಗಳದ್ದು ಎಂದು ಹೇಳಿತು, ಅದನ್ನೇ ಸಂವಿಧಾನದಲ್ಲಿ ಅಳವಡಿಸಿತು. ಈಗ ಸಂವಿ–ಧಾನ ತಿದ್ದುಪಡಿಯ ಮೂಲಕ ಇದೆಲ್ಲವನ್ನೂ ತಲೆಕೆಳಗು ಮಾಡಲಾ–ಗಿದೆ. ಏನೇ ಇರಲಿ, ರಾಜ್ಯ ಸರಕಾರ ತಾನೇ ಒಪ್ಪಿರುವ 1983ರ ಕಾಯ್ದೆಯ ಅಡಿಯಲ್ಲಿ ತನಗಿರುವ ಆಧಿಕಾರವನ್ನು ಬಳಸಲು ಏನು ತೊಂದರೆಗಳಿವೆ ಎಂಬುದನ್ನು ಚರ್ಚಿಸಬೇಕು.

ರಾಜ್ಯ ಸರಕಾರಕ್ಕೆ ತನ್ನ ಶಾಲೆಗಳಲ್ಲಿ ಮತ್ತು ಅನುದಾನ ಪಡೆಯುವ ಶಾಲೆಗಳಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ (ಹೊಸ ವ್ಯವಸ್ಥೆಯಲ್ಲಿ ಐದನೆಯ ತರಗತಿಯವರೆಗೆ) ಕಲಿಕೆಯು ಯಾವ ಭಾಷೆಯ ಮೂಲಕ ಆಗಬೇಕೆಂಬುದನ್ನು ನಿಗದಿಪಡಿಸುವ ಅಧಿಕಾರ 1983(95)ರ ಕಾಯ್ದೆಯಲ್ಲೇ ಇದೆ ಮತ್ತು ಸುಪ್ರೀಂ ಕೋರ್ಟ್ ಕೂಡ ಅದನ್ನು ಅಲ್ಲಗಳೆದಿಲ್ಲ. ಇನ್ನು ಸರಕಾರದ ಅಧಿಕಾರವನ್ನು ಅದು ಅನುದಾನ ಕೊಡುತ್ತಿಲ್ಲ ಎಂಬ ಗುರಾಣಿಯನ್ನು ಹಿಡಿದು ಎದುರಿಸುತ್ತಿ–ರುವ ಶಾಲೆಗಳನ್ನು ಅನುದಾನ ಕಾಯ್ದೆ ಅಡಿಗೆ ತರಲು ಮುಂದಾಗ–ಬೇಕು. ಈ ನಾಡಿನಲ್ಲಿ ಕಲಿಕೆಯ ವ್ಯವಸ್ಥೆಗೆ ಸರಕಾರದೊಡನೆ ಕೈ ಜೋಡಿ–ಸುವ ಯಾರೇ ಆಗಲಿ, ಅವರು ಸರಕಾರದ ಶರತ್ತುಗಳಿಗೆ ಬದ್ಧರಾಗಿರಲೇ–ಬೇಕಲ್ಲವೇ? ಆನುದಾನ ಪಡೆಯದ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳಿಗೆ ಮನ್ನಣೆ ನೀಡುವ ಮೊದಲು ಸರಕಾರವೇ ವಿಧಿಸಿರುವ ಶರತ್ತುಗಳನ್ನು ಆ ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೊದಲು ಸರಿಯಾಗಿ ಪಾಲಿಸಿವೆಯೇ ಎಂಬು–ದನ್ನು ಗಮನಿಸಿದರೆ ಈಗಿರುವ ಗೋಜಲು ಬಹುಪಾಲು ಕಡಿಮೆಯಾ–ಗುತ್ತದೆ. ನಗರಗಳ ಹೊರಗೆ ತೆರೆಯಲಾಗುತ್ತಿರುವ ಈ ಬಗೆಯ ಶಾಲೆಗಳಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿರಲು ಸರಕಾರದ ಅಧಿಕಾರಿಗಳೇ ಕಾರಣ.

1994ರ ಆದೇಶದಲ್ಲಿ ಕಲಿಕೆಯ ಮಾಧ್ಯಮವು (ಒಂದರಿಂದ ನಾಲ್ಕನೆಯ ತರಗತಿಯವರೆಗೆ) ಕನ್ನಡ ಇಲ್ಲವೇ ತಾಯ್ನಡಿ–ಯಲ್ಲಿರ–ಬೇಕು ಎಂದು ಹೇಳಲಾಗಿದೆ. ತಾಯ್ನುಡಿ ಎಂಬ ಮಾತನ್ನು ವಿವಿಧ ಆಧಾರಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಅದನ್ನು ಅಲ್ಪಸಂಖ್ಯಾ–ತರ ಭಾಷೆ ಎಂದು ವ್ಯಾಖ್ಯಾನಿಸಿದೆ. ಈ ವ್ಯಾಖ್ಯಾನವು ಸರಿಯೋ ಅಲ್ಲವೋ ಎಂಬುದನ್ನು ಬದಿಗಿರಿಸೋಣ. ಈಗ ರಾಜ್ಯ ಸರಕಾರವು ತನಗಿರುವ ಅಧಿಕಾರವನ್ನು ಮಂಡಿಸುವ ಹೊತ್ತಿನಲ್ಲಿ ತಾಯ್ನುಡಿ ಎಂಬ ಪದವನ್ನು ಬಳಸದೆ, ಕನ್ನಡ ಇಲ್ಲವೇ ರಾಜ್ಯದ ಜನ–ಸಮು–ದಾಯಗಳು ಆಡುವ ಭಾಷೆ ಎಂದು ತಿಳಿಸುವುದು ಸರಿಯಾದ ದಾರಿ ಎಂದುತೋ–ರುತ್ತದೆ. ಜೊತೆಗೆ, ಕಲಿಕೆಯ ಮಾಧ್ಯಮಗಳಾಗಿ ಬಳಕೆಯಾಗುವ ಜನಸಮುದಾಯದ ಭಾಷೆಗಳ ಪಟ್ಟಿಯೊಂದನ್ನೂ ನಿಗದಿಪಡಿಸಬೇಕಾ–ಗುತ್ತದೆ. ಈ ದಾರಿಯು ಸರಿಯೋ ಅಲ್ಲವೋ ಎಂಬುದನ್ನು ಬಲ್ಲವರು ತಿಳಿಸಬೇಕು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ