ಆ್ಯಪ್ನಗರ

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರಪ್ಪ

ಪಕ್ಷ ಹಾಗೂ ವೈಯಕ್ತಿಕ ನೆಲೆಗಾಗಿ ನಡೆಸಿದ ಹೋರಾಟದಿಂದ ಹಿಡಿದು, ಅಧಿಕಾರ ಗ್ರಹಣಕ್ಕೆ ಹಾಗೂ ಉಳಿವಿಗಾಗಿ ಯಡಿಯೂರಪ್ಪ ನಡೆಸಿದ್ದು ಅವಿರತ ಹೋರಾಟ. ರಾಜ್ಯ ರಾಜಕಾರಣದಲ್ಲಿ ಇಷ್ಟೊಂದು ಸಂಘರ್ಷಮಯ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಇನ್ನೊಬ್ಬರಿಲ್ಲ. ಸಿಡುಕಿನ ಸ್ವಭಾವದವರಾದರೂ ಇನ್ನೊಬ್ಬರಿಗೆ ಕೆಡುಕು ಬಯಸದ ವ್ಯಕ್ತಿತ್ವ. ರಾಜ್ಯದಲ್ಲಿ ಕೇವಲ 2 ಸ್ಥಾನ ಮಾತ್ರ ಗೆಲ್ಲುವುದಕ್ಕೆ ಸೀಮಿತವಾಗಿದ್ದ ಬಿಜೆಪಿ ತನ್ನ ಸಂಖ್ಯಾ ಬಲವನ್ನು ಶತಕದ ಗಡಿದಾಟಿಸುವಷ್ಟರ ಮಟ್ಟಿಗೆ ಬೆಳೆಯುವುದರ ಹಿಂದೆ ಯಡಿಯೂರಪ್ಪ ಶ್ರಮ ಗಣನೀಯ.

Vijaya Karnataka 27 Jul 2019, 5:00 am
ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರ ಬದುಕಿನ ಹಾದಿಯೇ ಸಂಘರ್ಷ ಹಾಗೂ ಹೋರಾಟ.
Vijaya Karnataka Web BSY1


ಪಕ್ಷ ಹಾಗೂ ವೈಯಕ್ತಿಕ ನೆಲೆಗಾಗಿ ನಡೆಸಿದ ಹೋರಾಟದಿಂದ ಹಿಡಿದು, ಅಧಿಕಾರ ಗ್ರಹಣಕ್ಕೆ ಹಾಗೂ ಉಳಿವಿಗಾಗಿ ಯಡಿಯೂರಪ್ಪ ನಡೆಸಿದ್ದು ಅವಿರತ ಹೋರಾಟ. ರಾಜ್ಯ ರಾಜಕಾರಣದಲ್ಲಿ ಇಷ್ಟೊಂದು ಸಂಘರ್ಷಮಯ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಇನ್ನೊಬ್ಬರಿಲ್ಲ. ಸಿಡುಕಿನ ಸ್ವಭಾವದವರಾದರೂ ಇನ್ನೊಬ್ಬರಿಗೆ ಕೆಡುಕು ಬಯಸದ ವ್ಯಕ್ತಿತ್ವ. ರಾಜ್ಯದಲ್ಲಿ ಕೇವಲ 2 ಸ್ಥಾನ ಮಾತ್ರ ಗೆಲ್ಲುವುದಕ್ಕೆ ಸೀಮಿತವಾಗಿದ್ದ ಬಿಜೆಪಿ ತನ್ನ ಸಂಖ್ಯಾ ಬಲವನ್ನು ಶತಕದ ಗಡಿದಾಟಿಸುವಷ್ಟರ ಮಟ್ಟಿಗೆ ಬೆಳೆಯುವುದರ ಹಿಂದೆ ಯಡಿಯೂರಪ್ಪ ಶ್ರಮ ಗಣನೀಯ.

ನಾಲ್ಕನೇ ಬಾರಿಗೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರೂ, ಅವರ ಆಳ್ವಿಕೆ ಅವಧಿ ಮಾತ್ರ ಮೂರುವರೆ ವರ್ಷಕ್ಕಿಂತ ಹೆಚ್ಚಿಲ್ಲ. ಮೊದಲ ಬಾರಿಗೆ 9 ದಿನ, ಎರಡನೇ ಬಾರಿಗೆ 3 ವರ್ಷ, ಮೂರನೇ ಬಾರಿಗೆ 3 ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ದೇಶದಲ್ಲಿ ಕೃಷಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಗೂ ಅವರು ಭಾಜನರಾಗಿದ್ದರು. ಶೇ.1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ನಿರ್ಣಯವನ್ನು ತಮ್ಮ ಅವಧಿಯಲ್ಲಿ ತೆಗೆದುಕೊಂಡರು. ಇದೆಲ್ಲದಕ್ಕಿಂತ ಮಿಗಿಲಾಗಿ ಡಿ.ವಿ.ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ.

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬಷ್ಟರ ಮಟ್ಟಿಗೆ ಅವರ ಹೋರಾಟದ ವೈಖರಿ ಪ್ರಕರವಾಗಿತ್ತು. ಇಷ್ಟೆಲ್ಲದರ ಮಧ್ಯೆಯೂ ಅವರ ಮೂರು ವರ್ಷದ ಅಧಿಕಾರಾವಧಿಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಡಿನೋಟಿಫಿಕೇಶನ್‌ ಭೂತ ಅವರನ್ನು ಅವಿರತವಾಗಿ ಕಾಡಿತು. ಆದರೆ ಕಾನೂನು ಹೋರಾಟದಲ್ಲಿ ಈ ಎಲ್ಲ ಆರೋಪಗಳಿಂದ ಅವರು ಮುಕ್ತರಾಗಿದ್ದರೂ, ಈ ಬಾರಿಯ ಅಧಿಕಾರವಾಧಿ ಮಾತ್ರ ಅವರಿಗೆ ಸವಾಲಿನದಾಗಿದೆ. ರಾಜಕೀಯ ಹಾಗೂ ಜೀವನದ ಇಳಿವಯಸ್ಸಿನಲ್ಲಿರುವ ಯಡಿಯೂರಪ್ಪ ಪರಿಶುದ್ಧ ಆಡಳಿತ ನೀಡಿ ತಾನೊಬ್ಬ ಪುಟವಿಟ್ಟ ಚಿನ್ನ ಎಂದು ಸಾಬೀತುಪಡಿಸಿಕೊಳ್ಳುವುದಕ್ಕೆ ಇದೊಂದು ಸುವರ್ಣಾವಕಾಶವಾಗಿದೆ.

ಹೋರಾಟದ ಹಾದಿ
- 1975-80ರ ಅವಧಿಯಲ್ಲಿ ಶಿಕಾರಿಪುರದ ನೀರು, ವಿದ್ಯುತ್‌,ರಸ್ತೆ, ಸ್ವಚ್ಚತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಹೋರಾಟ ಆರಂಭ.
- 1983ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶ. ಶಿವಮೊಗ್ಗದಲ್ಲಿ ರೈತರ ಸಾಲಮನ್ನಾಕ್ಕೆ ಹೋರಾಟಕ್ಕೆ ಬಗ್ಗಿದ ಸರಕಾರ.
- 1991ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರಧ್ವಜ ಹಾರಿಸಲು ಸವಾಲೊಡ್ಡಿದಾಗ ಡಾ .ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಶ್ರೀನಗರದ ಲಾಲ್‌ ಚೌಕದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ತಂಡದ ಸದಸ್ಯ.
- ಹುಬ್ಬಳ್ಳಿ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಾಗ, ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಲು ಶಪಥ.
- ಜೀತಮುಕ್ತರ ಪರಿಹಾರಕ್ಕಾಗಿ ಶಿಕಾರಿಪುರದಲ್ಲಿ ಐದು ತಿಂಗಳು ನಿರಂತರ ಹಗಲು-ರಾತ್ರಿ ಧರಣಿ. ಸರಕಾರ ಸ್ಪಂದಿಸದ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದ ಯಾತ್ರೆ.
- ಗುಂಡುರಾವ್‌ ಮುಖ್ಯಮಂತ್ರಿ ಅವಧಿಯಲ್ಲಿ ನಡೆದ ಕೂಲಿಗಾಗಿ ಕಾಳು ಯೋಜನೆ ದುರುಪಯೋಗದ ವಿರುದ್ಧ ಹೋರಾಟ.
- 'ಸಿ' ಮತ್ತು 'ಡಿ' ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ ರೈತರ ಪರ ನಿಂತ ಬಿಎಸ್‌ವೈ.
- 1974ರಲ್ಲಿ ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ.
- 1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ.
- ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ಇನ್ನೊಂದು ಬಾರಿ ರೈತ ಜಾಥಾ. ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಐದು ಐತಿಹಾಸಿಕ ದಾಖಲೆಯಾಯಿತು.
- ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ.
- 1998ರಲ್ಲಿ ಸಾವಿರಾರು ರೈತರೊಂದಿಗೆ ತಲಕಾವೇರಿಯಿಂದ ಕೃಷ್ಣರಾಜಸಾಗರದವರೆಗೆ ರೈತಜಾಥಾ.
- 2002ರಲ್ಲಿ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ. ಒಂದು ವಾರಕಾಲ ಹಗಲು- ರಾತ್ರಿ ಧರಣಿ.
- 2002ರಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ಸಾವಿರಾರು ರೈತರೊಂದಿಗೆ ಶಿಕಾರಿಪುರ ಮತ್ತು ಶಿವಮೊಗ್ಗದ ಎಪಿಎಂಸಿ ಎದುರು ಧರಣಿ.
- ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆಗೆæ ಒತ್ತಾಯಿಸಿ ಬೆಂಗಳೂರಲ್ಲಿ ನಿರಂತರ ಒಂಬತ್ತು ದಿನಗಳ ಕಾಲ ಹಗಲುರಾತ್ರಿ ಹೋರಾಟ.
- ಸಿದ್ದರಾಮಯ್ಯ ಸರಕಾರದ ಶಾದಿಭಾಗ್ಯ ಯೋಜನೆ ವಿರುದ್ಧ ಸದನದಲ್ಲೇ ವಾಸ್ತವ್ಯ.

ವೈಯಕ್ತಿಕ ವಿವರ
ಹೆಸರು: ಬಿ.ಎಸ್‌.ಯಡಿಯೂರಪ್ಪ
ಜನ್ಮ ದಿನಾಂಕ: 27.02.1943
ಜನ್ಮಸ್ಥಳ: ಬೂಕನಕೆರೆ, ಕೆ.ಆರ್‌.ಪೇಟೆ ತಾಲೂಕು, ಮಂಡ್ಯ ಜಿಲ್ಲೆ
ತಂದೆ: ಸಿದ್ಧಲಿಂಗಪ್ಪ
ತಾಯಿ: ಪುಟ್ಟಮ್ಮ
ಪತ್ನಿ: ಮೈತ್ರಾದೇವಿ
ಪುತ್ರರು: ರಾಘವೇಂದ್ರ, ವಿಜಯೇಂದ್ರ
ಪುತ್ರಿಯರು: ಅರುಣಾದೇವಿ, ಪದ್ಮಾವತಿ, ಉಮಾದೇವಿ
ವಿದ್ಯಾಹರ್ತೆ: ಬಿ.ಎ.ಪದವಿ
ಹವ್ಯಾಸ: ಓದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ