ಆ್ಯಪ್ನಗರ

ಕುದುರೆ ಏರಿ ನೋಡಿ, ಸವಾರಿ ಮಾಡಿ ನೋಡು! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 77

ಅಂಕಣಕಾರ ಶ್ರೀನಾಥ್ ಭಲ್ಲೆ ಅವರು ತಮ್ಮ ಅಮೆರಿಕ ಅನುಭವ ಕಥಾನಕವನ್ನು ವಿಜಯ ಕರ್ನಾಟಕ ವೆಬ್ ಓದುಗರ ಮುಂದಿಡುತ್ತಿದ್ದಾರೆ. ಈ ಭಾಗದಲ್ಲಿ ಅವರು ಕುದುರೆ ಸವಾರಿ ಹಾಗೂ ಕುದುರೆಗಳ ಮನಸ್ಥಿತಿ ಕುರಿತಾಗಿ ವಿವರಿಸಿದ್ದಾರೆ.

Authored byಶ್ರೀನಾಥ್ ಭಲ್ಲೆ | Vijaya Karnataka Web 23 Sep 2022, 12:36 pm
ಒಮ್ಮೆ ಕಚೇರಿಗೆ ತೆರಳಿ ಲಾಗಿನ್ ಆಗಿ ಈಮೈಲ್ ನೋಡಿದಾಗ ಕಣ್ಣಿಗೆ ಬಿದ್ದಿದ್ದು ನಮ್ಮದೇ ಮ್ಯಾನೇಜರ್ ಅವರ ಈಮೈಲ್. ಮೊದಲ ಆದ್ಯತೆ ಅವರಿಗೆ ತಾನೇ? ಏನಂತೆ ವಿಷಯ ಅಂತ ಓದಿದೆ. ಸತ್ಯಮೇವ ಜಯತೇ ಏನೂ ಅರ್ಥವಾಗಲಿಲ್ಲ, ಕಾರಣ ಇಷ್ಟೇ, ಅದು ಕೇಳದ ವಿಚಾರವಾಗಿ ಇರಲಿಲ್ಲ. ಮತ್ತೊಮ್ಮೆ ಓದಿದೆ. ಏನೋ ಎಡವಟ್ಟಾಗಿದೆ ಅಂತ ಅರ್ಥವಾಯ್ತು. ಸುತ್ತೀ ಬಳಸಿ ಏನೋ ಹೇಳುತ್ತಿದ್ದಾರೆ ಅಂತ ಅರ್ಥವಾಯ್ತು. ಕೊನೆಯಲ್ಲಿ ಒಂದು ವಾಕ್ಯವಂತೂ ಸ್ಪಷ್ಟವಾಯ್ತು. 'ನನ್ನ ಆಫೀಸ್ ರೂಮಿನ ಬಾಗಿಲು ಜಡಿದಿರುತ್ತದೆ, ಏನಾದರೂ ವಿಪರೀತ ಅರ್ಜೆಂಟ್ ಅಂತ ಇದ್ದರೆ ಮೊದಲಿಗೆ ಈಮೈಲ್ ಕಳಿಸಿ. ಆಮೇಲೆ ನನ್ನ ಒಪ್ಪಿಗೆಯ ಮೇರೆಗೆ ಬಾಗಿಲು ತಟ್ಟಿ ಒಳಬನ್ನಿ'. ಇಷ್ಟೆಲ್ಲಾ ಆದ ಮೇಲೆ ಖಂಡಿತ ಏನೋ ಆಗಿದೆ ಅಂತ ಅರ್ಥವಾಯ್ತು.
Vijaya Karnataka Web horse
ಕುದುರೆ ಏರಿ ನೋಡಿ, ಸವಾರಿ ಮಾಡಿ ನೋಡು! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 77


ಈ ಹಿಂದೆ ಒಬ್ಬರ ಈಮೈಲ್ ತಮ್ಮ ಮಗ ತೀರಿಕೊಂಡ ಎಂಬ ಅರ್ಥದಲ್ಲಿ ಬಂದಿತ್ತು. ಮಗ ತೀರಿಕೊಂಡ ಎಂಬ ವಿಷಯ ಅರುಹುವ ರೀತಿಯಲ್ಲಿ ಗಾಢವಾಗಿ ಇರಲಿಲ್ಲ ಅಂತ ಅರ್ಥವಾಯ್ತು, ಏಕೆಂದರೆ ಒಂದೆರಡು ದಿನ ತಾವು ಲಭ್ಯವಿಲ್ಲ ಎಂಬ ರೀತಿ ಬರೆದಿದ್ದರು. ಕೊಂಚ ಆಳವಾಗಿ ಅರ್ಥೈಸಿಕೊಂಡ ಮೇಲೆಯೇ ಗೊತ್ತಾಗಿದ್ದು ಅದು ಅವರ ಮನೆಯ ಮಗನಂತಿದ್ದ ಶ್ವಾನ ಲೋಕ ತ್ಯಜಿಸಿತ್ತು ಅಂತ. ಬೀದಿ ನಾಯಿಗೆ ಕಲ್ಲು ಹೊಡೆದು ಮಾತ್ರ ಅಭ್ಯಾಸವಿದ್ದ ನನಗೆ ಅಂದಿನ ದಿನಗಳಲ್ಲಿ ಇದರ ತೀವ್ರತೆ ಅರ್ಥವಾಗಿರಲಿಲ್ಲ. ಆ ನಂತರದ ದಿನಗಳಲ್ಲಿಯೇ ಪ್ರಾಣಿ ಪ್ರೇಮ, ಪಕ್ಷಿ ಪ್ರೇಮ ಎಂಬೆಲ್ಲಾ ವಿಚಾರಗಳು ಗೊತ್ತಾಗಿದ್ದು.

Oncall Support ಕೆಲಸದ ದಿನಗಳು: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 75
ಇರಲಿ, ನಮ್ಮ ಮ್ಯಾನೇಜರ್ ವಿಷಯಕ್ಕೆ ವಾಪಸ್ ಬಂದರೆ, ಇದಾವುದೋ ದೊಡ್ಡ ವಿಷಯ ಅಂತ ಗೊತ್ತಾಯ್ತು. ಶ್ವಾನ, ಬೆಕ್ಕು ಇತ್ಯಾದಿಗಳಿಗಿಂತ ದೊಡ್ಡ್ ಸೈಜಿನದ್ದೇ ಪ್ರಾಣಿ ಇರಬೇಕು. ಗಾಢತೆಯ ರೇಂಜಿಗೆ ಆನೆ ಇರಬಹುದಾ ಅಂದುಕೊಂಡೆ. ಯಾರಿಗೆ ಗೊತ್ತು? ಕೆಲವರು ಹಾವನ್ನು ಸಾಕಿದರೆ, ಕೆಲವರು ಮೊಸಳೆ ಪಾಲನೆಯನ್ನೂ ಮಾಡುತ್ತಾರೆ. ಕೆಲವರು ಪಿಟ್ ಬುಲ್ ಜಾತಿಯ ನಾಯಿಗಳನ್ನೂ ಸಾಕುವವರಿದ್ದಾರೆ. ಈ ಹಿಂದೆ ಒಮ್ಮೆ ಹೇಳಿದಂತೆ, ಬಾಡಿಗೆ ಅಪಾರ್ಟ್ಮೆಂಟ್'ನಲ್ಲಿ ಇರುವಾಗ ನಮ್ಮ ಮನೆಯ ಮೇಲಿರುವ ಮಹಾನುಭಾವ ಒಮ್ಮೆ ಬೆಳಿಗ್ಗೆ ಬೆಳಿಗ್ಗೆ ಬಾಗಿಲು ಬಡಿದು 'ನಮ್ಮ ಮನೆ ಹಾವು ಎಲ್ಲಿಯೋ ಹೋಗಿರಬೇಕು, ಮನೆಯಲ್ಲಿ ಕಾಣ್ತಿಲ್ಲ, ನಿಮ್ಮ ಮನೆಗೆ ಬಂದಿದೆಯಾ?' ಅಂದಿದ್ದ. ಅದೇನೋ ತಮ್ಮ ಮಗನೋ ಮಗಳೋ ನಿಮ್ಮ ಮನೆಗೆ ಆಟಕ್ಕೆ ಬಂದಿದೆಯಾ ಎಂದು ಕೇಳುವಂತೆ.

ಮ್ಯಾನೇಜರ್ ಕೇಸಿನಲ್ಲಿ ಇಂಥಾ ಪ್ರಾಣಿಗಳು ಇರುವಂತೆ ಅನ್ನಿಸಿರಲಿಲ್ಲ. ಆಗ ಥಟ್ಟನೆ ನೆನಪಾಗಿದ್ದು ಅವರು ಹಿಂದೊಮ್ಮೆ ಹಂಚಿಕೊಂಡ ಒಂದು ವಿಷಯ. ಒಮ್ಮೆ ಅವರು ಮೂರು ಘಂಟೆಗೇ ಕಚೇರಿಯಿಂದ ತೆರಳಿದ್ದರು. ನಮಗೆಲ್ಲಾ ಈಮೈಲ್ ಕಳಿಸಿದ್ದರು. 'ನನ್ನ ಯಜಮಾನ ಬೇರೆ ಊರಿಗೆ ಹೋಗಿದ್ದಾನೆ, weather report ಪ್ರಕಾರ ಇಂದು ಸಂಜೆ ನಾವಿರುವ ಕಡೆ ಗುಡುಗು ಮಿಂಚಿನ ಸಹಿತ ಮಳೆ ಇದೆ. ನಮ್ಮ ಕುದುರೆಗಳನ್ನು Stable ನಲ್ಲಿ ಸುರಕ್ಷಿತಗೊಳಿಸಬೇಕು' ಅಂತ. ಅವರಲ್ಲಿ ನಾಲ್ಕೋ ಐದೋ ಕುದುರೆಗಳು ಇದ್ದವು ಅಂತ ನೆನಪಾಯ್ತು. ಮತ್ತೊಮ್ಮೆ ಈಮೈಲ್ ಓದಿದ ಮೇಲೆ ಖಚಿತವಾಯ್ತು, ಅವರ ಒಂದು ಕುದುರೆ ಲೋಕ ಬಿಟ್ಟಿದೆ ಅಂತ.

ಅಮೆರಿಕನ್ನರ ಮಾತಿಗೆ ಬೆಪ್ಪುತಕ್ಕಡಿ ಸನ್ನಿವೇಶ; ಶ್ರೀನಾಥ್ ಭಲ್ಲೆ ಅನುಭವ ಕಥನ- ಭಾಗ 74
ಸಾಮಾನ್ಯವಾಗಿ ಒಂದೊಳ್ಳೆಯ ಕುದುರೆ ಎಂದರೆ ಮೂರರಿಂದ ನಾಲ್ಕು ಸಾವಿರ ಡಾಲರ್ ಆಗುತ್ತದೆ ಅಂತೆ. ದೊಡ್ಡ ಮನುಷ್ಯರ ಮನೆಯ ಕುದುರೆಗಳು ಲಕ್ಷಾಂತರ ಡಾಲರ್ ಕೂಡ ಆಗಬಹುದು. ನಮಗ್ಯಾಕಪ್ಪಾ ಈ ದೊಡ್ಡ ಕುದುರೆ ಚೇಷ್ಟೆ?


ಈ ಕುದುರೆಗಳು ಬಲು ಎತ್ತರ, ಬಲಿಷ್ಠ, ವೇಗಿ ಮತ್ತು ಕೆಲವು ವಿಚಾರಗಳಿಗೆ ಭೀತರಾಗುತ್ತವೆ. ಸಲೀಸಾಗಿ ಕಣ್ಣುಗುಡ್ಡೆ ಹೊರಳಿಸಿ ಆ ಕಡೆ ಈ ಕಡೆ ನೋಡುವ ಖಯಾಲಿಯೇ ಈ ಕುದುರೆ ಚೇಷ್ಟೆ ಆಗಿರೋದ್ರಿಂದ ಕಣ್ಣಿನ ಬದಿಗಳಿಗೆ ಪಟ್ಟಿಗಳೂ ಇವೆ. ಕುದುರೆಯನ್ನು ಹತ್ತಿ ಕೂರುವಾಗ ಎಡಬದಿಯಿಂದ ಹತ್ತಬೇಕು. ಬೈಕಿನ ಮೇಲೆ ಏರಿ ಕುಳಿತುಕೊಳ್ಳುವಂತೆ ಬಲಗಾಲನ್ನು ಎತ್ತಿ ಬಲಬದಿಯಲ್ಲಿ ತಂದು saddleಗೆ ಕೂರಿಸಬೇಕು. ಮೊದಲಿಗೆ ಕುದುರೆ ಬಲು ಎತ್ತರ. ಕೂರುವಾಗ ಆ ಎತ್ತರ ಏರಬೇಕಲ್ಲಾ ಅಂತ ಹೆದರಿಕೊಂಡು ಬಲಗಾಲನ್ನು ಕೂರಿಸುವಾಗ ಅಕಸ್ಮಾತ್ ಕುದುರೆ ಬದಿಗೆ ಒದ್ದರೆ ಕಷ್ಟ. ಲಗಾಮು ನಿಮ್ಮ ಕೈಲಿ ಇಲ್ಲಾ ಎಂದರೆ ಕುದುರೆ ಬೆದರಿ ಓಡಲೂ ಬಹುದು ಅಥವಾ ನಿಮ್ಮನ್ನೇ ನಾಣ್ಯದಂತೆ ಚಿಮ್ಮಿಸಬಹುದು. ನೃತ್ಯ ಶುರು ಮಾಡಿದರೆ ಮಹಾ ಕಷ್ಟ. ಇವೆಲ್ಲಾ ಆಗುವ ಸಂಭವನೀಯತೆ ಇದೆ ಎಂದೇ ಹೆಲ್ಮೆಟ್ ಕಡ್ಡಾಯ.

ಅಮೆರಿಕದ ಹೆಂಗಸರು 'ಹಾಗೇಕೆ' ಬಟ್ಟೆ ಧರಿಸುತ್ತಾರೆ? ಶ್ರೀನಾಥ್ ಭಲ್ಲೆ ಅನುಭವ ಕಥನ - ಭಾಗ 73
ಸರಿ ಕುದುರೆ ಏರಿದ್ದೂ ಆಯ್ತು. ಲಗಾಮು ಕೂಡಾ ಕೈಲಿದೆ. ಕುದುರೆಯೂ ಮುಂದಕ್ಕೆ ಸಾಗಿದೆ. ಕೂತಿರುವಾ ಬೆನ್ನು ನೇರವಾಗಿರಲಿ ಅಥವಾ ಕೊಂಚ ಹಿಂದೆ ಸರಿದಿರಲಿ. ಎರಡೂ ಕಾಲುಗಳ ಬದಿಯ ಮೂಳೆಗಳು ಕುದುರೆಗೆ ಒತ್ತಿರಬೇಕು ಎನ್ನುತ್ತಾರೆ. ಕುದುರೆಗಳು ಸಾಗುವಾಗ ಮೂತ್ರ ವಿಸರ್ಜನೆ ಮಾಡಿದರೆ ಅಥವಾ ಲದ್ದಿ ಹಾಕಿದರೆ ಅವಕ್ಕೆ ಒತ್ತಡವಾಗಿದೆ ಅಂತ ಅರ್ಥ. ವಿಪರೀತ ದಣಿದ ಇಂಥಾ ಕುದುರೆಗಳಿಗೆ ವಿಶ್ರಾಂತಿ ಅಗತ್ಯವಿದೆ. ಇರಲಿ ಬಿಡಿ, ಈಗ ಹೋಗುತ್ತಿರುವ ಕುದುರೆ ನಿಲ್ಲಬೇಕು ಎಂದಾಗ ಮೆಲ್ಲನೆ ಲಗಾಮು ಎಳೆಯಬೇಕು ಆಗ ಕುದುರೆ ತಾ ನಿಲ್ಲಬೇಕು ಎಂದು ಅರ್ಥವಾಗುತ್ತದಂತೆ. ಇದೊಂದು ಉಗಿಬಂಡಿ ಎಂದೇ ಅರ್ಥೈಸಿಕೊಳ್ಳಿ. ಥಟ್ಟನೆ ಹೇಗೆ ರೈಲುಬಂಡಿ ನಿಲ್ಲುವುದಿಲ್ಲ ಹಾಗೆ ಅಂದುಕೊಳ್ಳುವುದು ಕ್ಷೇಮ ಏಕೆಂದರೆ ನಿಲ್ಲಿಸುವ ಭರದಲ್ಲಿ ಲಗಾಮನ್ನು ಜೋರಾಗಿ ಎಳೆದು ಹಿಂಸೆ ಮಾಡಬಾರದು. ಕುದುರೆಗಳು ಸೂಕ್ಷ್ಮ ಹಾಗಾಗಿ ಗಟ್ಟಿ ದನಿಯಲ್ಲಿ ಕಿರುಚಾಡಿರಿ ಆಯ್ತಾ? ಎಲ್ಲಾ ಆಯಿತು ಎಂದಾಗ ಇಳಿಯುವ ಮುನ್ನ ಒಮ್ಮೆ ಅದನ್ನು ಮೃದುವಾಗಿ ತಟ್ಟಿ 'ಥಾಂಕ್ ಯೂ' ಹೇಳಿ.

ಕಳೆದ ವರ್ಷದಲ್ಲಿ ಒಂದೆಡೆ ಹೋಗಿದ್ದಾಗ ಕುದುರೆ ಸವಾರಿಗೆ ಅಂತ ಹೋಗುವ ಮುನ್ನ ಕಲಿತ ಪಾಠಗಳಿವು. ನಾನು ಕುದುರೆ ಇರಲಿಲ್ಲ ಬದಲಿಗೆ ಮಗರಾಯ ಮತ್ತು ಮಡದಿ ಹೋಗಿದ್ದರು. ಭೀತವಾಯ್ತು ಮತ್ತು ಕೊಂಚ ಬೆನ್ನು ನೋವು ಕೂಡಾ ಬಂತು ಎಂದಿದ್ದರು. ಯಾವುದೇ ಹೊಸ ವಿದ್ಯೆಯಾದರೂ ದೇಹ ಅಡ್ಜಸ್ಟ್ ಆಗಬೇಕಲ್ಲವೇ? ಒಂದು ದಿನ ನೋವಿತ್ತು ಆಮೇಲೆ ಮಾಯ. ಇಂತಿಷ್ಟು ಕುದುರೆ ಕಥೆ.
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ