ಆ್ಯಪ್ನಗರ

'ಸಂಪದ' ಬರಹ ಯಾನದ ಜೊತೆ 'ಕಲಿ ನಲಿ'..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 38

ಲೇಖಕ ಶ್ರೀನಾಥ್ ಭಲ್ಲೆ ಅವರು ತಮ್ಮ ಅಮೆರಿಕ ಅನುಭವ ಕಥಾನಕವನ್ನು ಕಂತುಗಳಲ್ಲಿ ಓದುಗರ ಮುಂದೆ ಇಡುತ್ತಿದ್ದಾರೆ. ಈ ಬಾರಿ ಅವರು ಅಮೆರಿಕದಲ್ಲಿ ತಮ್ಮ ಸಾಹಿತ್ಯ ಕೃಷಿ ಸಾಗಿಬಂದ ಹಾದಿಯನ್ನು ವಿವರಿಸಿದ್ದಾರೆ.

Authored byಶ್ರೀನಾಥ್ ಭಲ್ಲೆ | Vijaya Karnataka Web 24 Dec 2021, 9:00 am
ಮುಂದಿನ ದಿನಗಳಲ್ಲಿ ನನಗೆ ಪರಿಚಯವಾದುದೇ 'ಸಂಪದ'. ಶ್ರೀಯುತರಾದ ಹರಿಪ್ರಸಾದ್ ನಾಡಿಗ್ ಅವರ ನೇತೃತ್ವದ ಸಂಪದ ಒಂದು ಅದ್ಭುತವಾದ ಜ್ಞಾನ ತಾಣವೇ ಸರಿ. 'ಹೊಸ ಚಿಗುರು, ಹಳೆ ಬೇರು' ಎಂಬ ಟ್ಯಾಗ್ ಲೈನ್ ಹೊತ್ತ ಈ ತಾಣ ಒಂದು ಜ್ಞಾನ ಭಂಡಾರವೇ ಆಗಿತ್ತು. ವಿಭಿನ್ನ ಲೇಖನಗಳ ಖನಿಜ ಈ ಸಂಪದವಾದರೆ, ಕೃಷಿ ಸಂಪದ, ಹರಿದಾಸ ಸಂಪದ ಎಂದೆಲ್ಲಾ ಬೇರೆ ಬೇರೆ ವಿಭಾಗಗಳೂ ಇದ್ದು ವಿಭಿನ್ನ ರೀತಿಯಲ್ಲಿ ಜ್ಞಾನ ಪಸರಿಸುತ್ತಿತ್ತು ಎಂದರೆ ಸುಳ್ಳಾಗಲಾರದು.
Vijaya Karnataka Web bhalle
'ಸಂಪದ' ಬರಹ ಯಾನದ ಜೊತೆ 'ಕಲಿ ನಲಿ'..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 38


ಈ ತಾಣಕ್ಕೆ ಸೇರಿದ ಮೇಲೆ ಮೊದಲಲ್ಲಿ, ಪ್ರತಿ ಬಾರಿಯಂತೆ, ಕಾರ್ಯಾಚರಣೆಯನ್ನು ಗಮನಿಸಿದ್ದೆ. ಯಾವುದೇ ಒಂದು ಜಾಗವಾಗಲಿ, ಅಲ್ಲೊಂದು ರೀತಿ - ರಿವಾಜು ಇರುತ್ತದೆ. ಅಲ್ಲಿನ ನಿಯಮಾವಳಿಗೆ ತಕ್ಕಂತೆ ಇರಬೇಕಾದುದು ಧರ್ಮ. ನಾನು ನಡೆದದ್ದೇ ಹಾದಿ ಎಂದಾಗಲಿ, ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂಬುದೆಲ್ಲಾ ಸಿನಿಮಾದಲ್ಲಿನ ಒರಟು ಹೀರೋಗೆ ಸರಿ ಅಷ್ಟೇ. ಅವನು ಮಾರುಕಟ್ಟೆಯಲ್ಲಿ ನಾಲ್ಕಾರು ಜನರನ್ನು ಬಡಿದು ಹಾಕಿ ಒಂದಿಪ್ಪತ್ತು ತರಕಾರಿ ಗಾಡಿಯನ್ನು ಬುಡಮೇಲು ಮಾಡಿದರೂ, ಮಡಕೆ ಅಂಗಡಿಯಲ್ಲಿನ ನೂರಾರು ಮಡಕೆ ಒಡೆದರೂ, ಹೋಟೆಲ್ ಒಂದಕ್ಕೆ ನುಗ್ಗಿ ಅಲ್ಲಿರುವ ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಒಡೆದು ಚೂರು ಮಾಡಿದರೂ ತುಂಡು ಲಂಗದ ಹೀರೋಯಿನ್ ಅವನಿಗೆ ಒರಗಿ ನಿಲ್ಲುತ್ತಾಳೆ. ಆದರೆ ನಿಜ ಜೀವನದಲ್ಲಿ ಹಾಗಲ್ಲಾ ಅಲ್ಲವೇ?

ಅಮ್ಮನೆಂಬ ಅಮೂಲ್ಯ ಆಸ್ತಿಯನ್ನೇ ಕಳೆದುಕೊಂಡ ಆ ಕ್ಷಣಗಳು.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 33
ಸಂಪದದಲ್ಲಿನ ಬರಹಗಾರರ ಜ್ಞಾನದ ಆಳ - ಅಗಲ ಪರಿಚಯವಾದಂತೆ ನನಗೆಷ್ಟು ಗೊತ್ತು ಅಂತ ಅರ್ಥವಾಗಿತ್ತು. ಹಲವಾರು ದಿಗ್ಗಜರನ್ನು ಅಲ್ಲಿ ಭೇಟಿಯಾದೆ. ಮುಂದೊಂದು ದಿನ ಭಾರತಕ್ಕೊಮ್ಮೆ ಭೇಟಿ ನೀಡಿದ್ದೆ. ತಲುಪಿದ ಎರಡನೆಯ ದಿನವೇ ಸಂಪದಿಗರು ಭೇಟಿಯಾಗುತ್ತಿರುವ ವಿಷಯ ತಿಳಿಯಿತು. ಸ್ನೇಹಿತನಿಗೆ ಕರೆ ಮಾಡಿ, ಅವನೊಂದಿಗೆ ಬಸವನಗುಡಿಯಲ್ಲಿ ನಡೆಯುತ್ತಿರುವ ಪುಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಅಲ್ಲಿದ್ದವರಾರಿಗೂ ನನ್ನ ಮುಖ ಪರಿಚಯ ಆಗಿರಲಿಲ್ಲ. ಕೊನೆಯ ಬೆಂಚಿನವನಾಗಿ ಕೂತಿದ್ದೆ ಬಿಡಿ. ಆಮೇಲೆ ಮೈಕ್ ತೆಗೆದುಕೊಂಡು ನನ್ನ ಪರಿಚಯ ಮಾಡಿಕೊಂಡೆ. ಇಂದಿಗೂ ವಾಟ್ಸಪ್‌ನಲ್ಲಿ ಸ್ನೇಹ ಮುಂದುವರೆದಿದೆ.

ಸಂಪದದಲ್ಲಿ ಗೋಪಿನಾಥರ ಹಾಸ್ಯ ಬರಹ, ಹಂಸಾನಂದಿಯವರ ಕರ್ನಾಟಕ ಸಂಗೀತ ಕುರಿತ ಬರಹ, ಸುರೇಶರ 'ಸಖೀ'ಗೀತ, ಮಂಜಣ್ಣವರ ಭದ್ರತಾ ದಳ ಕುರಿತಾದ ಬರಹಗಳು, ಅನಿಲ್ ಅವರ ಛಾಯಾಚಿತ್ರಗಳು, ಡಾ. ಮೀನಾ ಅವರ ಹಾಸ್ಯ ಬರಹಗಳು, ಮಂಜುನಾಥರ ಅನುಭವ ಬರಹಗಳು, ಪಾರ್ಥರ ಸ್ನೇಹ ಹೀಗೆ ಹೇಳುತ್ತಾ ಸಾಗಿದರೆ ಬೇಕಾದಷ್ಟಿದೆ. ಇನ್ನೂ ಸಾಕಷ್ಟು ಸ್ನೇಹಿತರಿದ್ದಾರೆ. ಎಲ್ಲರೂ ಭಿನ್ನ, ಎಲ್ಲವೂ ಭಿನ್ನ. ಏಕತೆಯಲ್ಲಿ ಅನೇಕತೆ, ಅನೇಕತೆಯಲ್ಲಿ ಏಕತೆ. ಕೆಲವರು ಹಿರಿಯರು, ಹಲವರು ಕಿರಿಯರು. ಆದರೇನು ಬರಹದಲ್ಲಿ ವಯಸ್ಸಿನ ತಾರತಮ್ಯವಿಲ್ಲದೆ ಪಳಗಿದ ಕೈಗಳೇ ಅವರುಗಳು. ಹಲವಾರು ವೈವಿಧ್ಯ ಬರಹಗಳಿಂದ, ನಡೆಗಳಿಂದ ನಾನು ಕಲಿತಿದ್ದು ಬಹಳ. ಅಂದು ಸಂಜೆ ಕೆಲವರನ್ನು ಭೇಟಿ ಮಾಡಿದ್ದೆ. ಒಂದಿಬ್ಬರನ್ನು ನಂತರದಲ್ಲಿ. ಕೆಲವು ವರ್ಷಗಳ ಹಿಂದೆ, ಮಂಜಣ್ಣನವರನ್ನು ನಾನು ದುಬೈಗೆ ಹೋಗಿದ್ದಾಗ ಮತ್ತೊಮ್ಮೆ ಭೇಟಿಯಾಗಬೇಕಿತ್ತು. ಆದರೆ ನನಗೆ ಸಮಯವಾಗಲಿಲ್ಲ. ಆ ಸಮಯ ಬರುವುದೂ ಇಲ್ಲ. ಇನ್ನೆಂದೂ ಭೇಟಿಯೂ ಆಗಲಾರದು. ಸಮಯ ಇರೋದಿಲ್ಲ, ಆದರೆ ಮಾಡಿಕೊಳ್ಳಬೇಕು ಎಂಬುದೇ ಕಲಿಕೆ.

ವರ್ಜೀನಿಯ ಟೆಕ್‌ನಲ್ಲಿ ಅರ್ಧ ಗಂಟೆಯಲ್ಲಿ ಉರುಳಿ ಬಿದ್ದಿತ್ತು 32 ಹೆಣ, ಕಾರಣ ಇಂದಿಗೂ ನಿಗೂಢ; ಅಮೆರಿಕ ಅನುಭವ ಕಥನ - 34
ಇದೆಲ್ಲದರ ಮಧ್ಯೆ, ನಮ್ಮ ನಗರದಲ್ಲಿ ಮತ್ತೊಂದು ಕೆಲಸಕ್ಕೆ ಕೈಜೋಡಿಸಿದ್ದೆ. ಅದುವೇ 'ಕಲಿ ನಲಿ' ಕಾರ್ಯಕ್ರಮ. ಸಂಘದ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಒಂದು ಆಲೋಚನೆ ಮೂಡಿಸಿಕೊಂಡು, ನನ್ನ ಮಗನನ್ನೂ ಸೇರಿಸಿ ಹಲವು ಮಕ್ಕಳಿಗೆ ಕನ್ನಡ ಕಲಿಸುವ ಒಂದು ಯತ್ನ ಮಾಡಿದ್ದೆವು. ಕಡಿಮೆ ಮಕ್ಕಳು ಇದ್ದುದರಿಂದ ಒಬ್ಬರು ಪ್ರಮುಖ ಶಿಕ್ಷಕರು ತರಗತಿ ನಡೆಸುತ್ತಿದ್ದರು. ಮತ್ತೊಬ್ಬರು backup ಶಿಕ್ಷಕರು ಇದ್ದರು. ನಾನು ಯಥಾ ರೀತಿ ಸಂಘದ ವತಿಯಿಂದಲೂ ಮತ್ತು ವೈಯುಕ್ತಿಕವಾಗಿಯೂ ಬೆಂಬಲಿಗನಾಗಿದ್ದೆ. ಜೊತೆಗೆ ತರಗತಿಯ ಕೊನೆಯಲ್ಲಿ ಮಕ್ಕಳಿಗೆ ಕಥೆ ಹೇಳುತ್ತಿದ್ದೆ. ಒಂದೆರಡು ವರುಷಗಳು ನಡೆಸಿದೆವು. ಮುಖ್ಯ ಶಿಕ್ಷಕರು ಬೇರೊಂದು ಊರಿಗೆ ಹೊರಟು ಹೋದರು. ಇದೇ ಸಮಯದಲ್ಲಿ, ಈಗಾಗಲೇ ಹೇಳಿದಂತೆ, ಕಂಪನಿಯಲ್ಲೂ ಅಡಚಣೆಗಳಾಗಿ ನನಗೂ ಸಮಯ ಕೊಡಲಾಗಲಿಲ್ಲ.

ಕನ್ನಡದ ಬಗ್ಗೆ ಹೇಳುವಾಗ 'ಕನ್ನಡ ಸಾಹಿತ್ಯ ರಂಗ'ದ ಬಗ್ಗೆ ಹೇಳದಿದ್ದರೆ ಹೇಗೆ? ದೇಶದ ಉದ್ದಗಲಕ್ಕೂ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಘ ಸಂಸ್ಥೆಗಳು ಇದ್ದರೂ ಒಂದು ಕೊರತೆ ಅಂತ ಇದ್ದರೆ ಅದು 'ಸಾಹಿತ್ಯ'. ಹತ್ತಾರು ಘಂಟೆಗಳು ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ, ಒಂದು ಕವಿಗೋಷ್ಠಿ ಅಥವಾ ಸಾಹಿತ್ಯ ಚರ್ಚೆ ಎಂದ ಕೂಡಲೇ, ಇದು ನನ್ನ ಕಪ್ಪಿನ ಚಹಾ ಅಲ್ಲ ಎಂದು ನಿಲುವು ತಳೆವ ಮಂದಿಯೇ ಅಧಿಕ. ಈ ಕೊರತೆಯನ್ನು ತುಂಬಲೆಂದೇ ಹುಟ್ಟಿಕೊಂಡ ಸಂಸ್ಥೆ 'ಕನ್ನಡ ಸಾಹಿತ್ಯ ರಂಗ'. ಸಂಸ್ಥೆ ನಡೆಸುವ ಚಟುವಟಿಕೆಗಳು ಅನೇಕ. ಸಮ್ಮೇಳನ ನಡೆಯುವ ಎರಡೂ ದಿನಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶ ಎಂದರೆ ಸಮಯದ ಶಿಸ್ತು.

ಶೂಟೌಟ್‌ನಿಂದ ಹಿಡಿದು ಆರ್ಥಿಕ ಕುಸಿತದವರೆಗೆ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 35
ಇದುವರೆಗೆ ಸಾಹಿತ್ಯ ರಂಗದ ಕಾರ್ಯಕ್ರಮಕ್ಕೆ ಸರ್ವಮಾನ್ಯರಾದ ಡಾ. ಪ್ರಭು ಶ೦ಕರ, ಪ್ರೊ. ಬರಗೂರು ರಾಮಚ೦ದ್ರಪ್ಪ, ಪ್ರೊ. ಅ. ರಾ. ಮಿತ್ರ, ಡಾ. ಸುಮತೀ೦ದ್ರ ನಾಡಿಗ, ಶ್ರೀಮತಿ ಭುವನೇಶ್ವರಿ ಹೆಗಡೆ ಮೊದಲಾದ ಸಾಹಿತ್ಯ ಲೋಕದ ಅತಿರಥ ಮಹಾರಥರು ಅತಿಥಿಗಳಾಗಿ ಭಾಗವಹಿಸಿದ್ದಾರೆ. 2009ರ ವಸಂತ ಸಾಹಿತ್ಯೋತ್ಸವವು ರಾಕ್ವಿಲ್, ಮೇರಿಲ್ಯಾಂಡ್‌ನಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದವರು ಡಾ. ವೀಣಾ ಶಾ೦ತೇಶ್ವರ, ಮತ್ತು ಶ್ರೀಮತಿ ವೈದೇಹಿ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ ಎಂಬುದೇ ನನಗೆ ಸಂತಸ ತಂದಿರುವ ವಿಷಯ. ನನಗೆ ನೆನಪಿರುವಂತೆ ಅಂದು ನಮ್ಮ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಇತ್ತು. ಅವರ ಪುಸ್ತಕದ ಲೇಖನಗಳ ಬಗ್ಗೆ ಕಿರು ಪರಿಚಯ ಮಾಡಿಕೊಡುವ ಸಲುವಾಗಿ ನಾನು ಸ್ಟೇಜ್ ಏರಿದ್ದೆ. ಹಲವಾರು ಹಿರಿಯ ಬರಹಗಾರರ ಜೊತೆ ರಂಗದ ಮೇಲೆ ಆಸೀನನಾಗಿದ್ದೇ ನನ್ನ ಸೌಭಾಗ್ಯ.

ಇಲ್ಲಿ ಒಂದು ಸೂಕ್ಷ್ಮ ಗಮನಿಸಬೇಕಾದುದು ಎಂದರೆ, ಅತಿಥಿಗಳಾಗಿ ಆಗಮಿಸಿದ್ದ ಗಣ್ಯರು ಕಾರ್ಯಕ್ರಮಗಳಲ್ಲಿ ‘ಭಾಗವಹಿಸಿದ್ದರು’, ಕೇವಲ ಉಪಸ್ಥಿತರಿದ್ದರು ಎಂದು ಹೇಳಿಲ್ಲ. ಅಂದು ಡಾ. ವೀಣಾ ಶಾಂತೇಶ್ವರ ಅವರ ಮಾತುಗಳನ್ನು ಕೇಳಿದ್ದೆ. ಅಂದು ವೈದೇಹಿಯವರು ತಮ್ಮದೇ ಒಂದು ಕಥೆಯನ್ನು ಓದುವ ಪರಿಯನ್ನು ಕಂಡು ಮೂಕಾಗಿದ್ದೆ. ಕಥೆ ಎಂದರೆ ಕೇವಲ ಅಕ್ಷರಗಳಲ್ಲ, ಪದಗಳಲ್ಲ ಅಥವಾ ಬರೀ ಭಾವನೆಗಳೇ ಅಲ್ಲ, ಬದಲಿಗೆ ಓದುಗನನ್ನು ಸೆಳೆದು ತಂದು ಪಾತ್ರಗಳ ನಡುವೆ ನಿಲ್ಲಿಸಿ ಅಥವಾ ಪಾತ್ರವನ್ನೇ ಮಾಡಿ ಆ ಸಂದರ್ಭವನ್ನು ಅನುಭವಿಸುವಂತೆ ಮಾಡುವುದು ಎಂದು. ಕಲಿಯೋದು ಬಹಳಾ ಇದೆ.

ಈ ಮಧ್ಯೆ ಮಹಾರಾಷ್ಟ್ರದ ಸ್ನೇಹಿತನೊಬ್ಬ ಕರೆ ಮಾಡಿದ. ಗಣಪತಿ ಹಬ್ಬದ ಪ್ರಯುಕ್ತ ಅವನೊಂದು ನಾಟಕ ಮಾಡುತ್ತಿದ್ದ. ಆ ಕಾರ್ಯಕ್ರಮದ ವಿಡಿಯೋ ಮಾಡಬೇಕಿತ್ತು ಅಂತ. ಒಂದೂವರೆ ಘಂಟೆಯ ಕಾರ್ಯಕ್ರಮದ ವಿಡಿಯೋ ಮಾಡಿ ಕೊಟ್ಟಿದ್ದೆ. ನನ್ನ ಆಸಕ್ತಿ ಗುರುತಿಸಿ ನನಗೆ ಆ ಕೆಲಸ ವಹಿಸಿದ್ದು ಒಂದು ಕಾರಣವಾದರೆ, ಭಾಷೆ ಗೊತ್ತಿಲ್ಲದೇ ಇರುವುದರಿಂದ ನಗೋದು ಅಥವಾ ಅಳೋದು ಅಂತ ಮಾಡದೆ ವಿಡಿಯೋ ಕಡೆಯೇ ಗಮನ ನೀಡುತ್ತೇನೆ ಎಂಬುದೂ ಮತ್ತೊಂದು ಕಾರಣ.

ಉದ್ಯೋಗ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 36
ಒಂದಂತೂ ನಿಜ ಬಿಡಿ, ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ನನಗೆ ಬಹಳ ಪ್ರಿಯ. ಹಲವಾರು ಮಕ್ಕಳ ಕಾರ್ಯಕ್ರಮಗಳಿಗೆ ನಿಷ್ಠೆಯಿಂದ ವಿಡಿಯೋಗ್ರಫಿ ಮಾಡಿದ್ದೇನೆ. ಹೀಗೇಕೆ ಹೇಳಿದೆ ಎಂದರೆ, ಒಮ್ಮೆ ಹೀಗೆ ವಿಡಿಯೋ ಮಾಡುವಾಗ, ನನ್ನ ಪಕ್ಕದಲ್ಲಿ ಒಬ್ಬ ಧಡೂತಿ ಮಹಿಳೆ, ನಿಂತುಕೊಂಡು ವಿಡಿಯೋ ಮಾಡುತ್ತಿದ್ದರು. ಅದೇನಾಯ್ತೋ ಗೊತ್ತಿಲ್ಲ, ನನ್ನ ಮೇಲೆ ಧಡಾರ್ ಅಂತ ಬಿದ್ದು ಬಿಡೋದೆ. 'ನೀವು ಬಿದ್ದರೆ ಬೀಳಿ, ಯಾವಾಗ ಬೇಕಾದರೂ ಎದ್ದೇಳಿ, ನಾನು ನನ್ನ ಕೆಲಸ ಮುಂದುವರೆಸುತ್ತೇನೆ' ಅಂತ ನನ್ನ ವಿಡಿಯೋ ಕೆಲಸ ಮುಂದುವರೆಸಿದ್ದೆ. ಅದೇನೋ ಗೊತ್ತಿಲ್ಲ, ರಾತ್ರಿಯೆಲ್ಲಾ ಮೈ ಕೈ ನೋಯುತ್ತಿತ್ತು. ಅದ್ಯಾವ angleನಲ್ಲಿ ಬಿದ್ದರೋ ಗೊತ್ತಿಲ್ಲ.

ಮರುದಿನ ನನ್ನಾಕೆಯ ಸ್ನೇಹಿತೆಯ ಪತಿ ದೇವ ಕರೆ ಮಾಡಿದ. ನೀನು ವಿಡಿಯೋ ಮಾಡಿದ್ದೀಯಾ ಅಂತ ಗೊತ್ತಾಯ್ತು, ನನಗೊಂದು ಕಾಪಿ ಕೊಡ್ತೀಯಾ ಅಂತ ಕೇಳಿದ. ಸರಿಯಪ್ಪಾ ಸಂಜೆ ಮನೆಗೆ ಬಾ ಅಂತಂದೆ. ಅದು ಯಾರು ನನಗೆ ಗೊತ್ತಿರಲಿಲ್ಲ. ಸಂಜೆ ಬಂದವ ನನ್ನನ್ನು ಕಂಡ ಕೂಡಲೇ ಹಾಯ್ ಅನ್ನೋದು ಬಿಟ್ಟು, 'ಹೆಂಗೈತೆ ಮೈಗೆ' ಅಂತ ಹಿಂದಿಯಲ್ಲಿ ಕೇಳಿದ್ದ. ನಾನು ಅಚ್ಚರಿಯಿಂದ ನೋಡಿದಾಗ ಹೇಳಿದ್ದ 'ಅದೇನ್ ಸೈಜು ಮಾರಾಯ ಆಕೆ! ನಿನ್ನ ಮೇಲೆ ಬಿದ್ದರೂ ನೀನು ವಿಡಿಯೋ ಮಾಡೋದು ಬಿಡಲಿಲ್ಲವಲ್ಲ ! ವಾಹ್' ಅಂದ..!

ಮುಂದಿನ ವಾರ ಮತ್ತೆ ಸಿಗುತ್ತೇನೆ ಅಂತ ಹೇಳುತ್ತಾ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ.
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ