ಆ್ಯಪ್ನಗರ

ಸಪ್ತಸಾಗರದಾಚೆಯೂ ದೀಪಾವಳಿ ಸಂಭ್ರಮ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 31

ಲೇಖಕ ಶ್ರೀನಾಥ್‌ ಭಲ್ಲೆ ಅವರು ತಮ್ಮ ಅಮೆರಿಕ ಅನುಭವವನ್ನು ಸರಣಿ ರೂಪದಲ್ಲಿ ವಿಜಯ ಕರ್ನಾಟಕ ವೆಬ್ ಓದುಗರ ಮುಂದುಡುತ್ತಿದ್ದಾರೆ. ಈ ಸರಣಿಯಲ್ಲಿ ಅವರು ಗ್ರೀನ್‌ ಕಾರ್ಡ್‌ ಪಡೆದ ಸುಸಂದರ್ಭ ಹಾಗೂ ದೀಪಾವಳಿ ಹಬ್ಬದ ಸಂಭ್ರಮ ವಿವರಿಸಿದ್ದಾರೆ.

Authored byಶ್ರೀನಾಥ್ ಭಲ್ಲೆ | Vijaya Karnataka Web 5 Nov 2021, 3:24 pm
ನಾಗನಾಥ್ ಸಂಜೆಯ ಟ್ರಾಫಿಕ್ ದಾಟಿಕೊಂಡು ನಮ್ಮ ಮನೆಗೆ ಬರುವಷ್ಟರಲ್ಲಿ ಹತ್ತು ನಿಮಿಷಗಳಾದವು. ಸಾಮಾನ್ಯವಾಗಿ ಐದಾರು ನಿಮಿಷದಲ್ಲಿ ತಲುಪುತ್ತಿದ್ದವ ಟ್ರಾಫಿಕ್ ಎಂದು ಹತ್ತು ನಿಮಿಷಕ್ಕೆ ಬಂದ.
Vijaya Karnataka Web Bhalle
ಸಪ್ತಸಾಗರದಾಚೆಯೂ ದೀಪಾವಳಿ ಸಂಭ್ರಮ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 31


ಫೋನಿನಲ್ಲೇ ವಿಷಯ ಹೇಳಿದ್ದರಿಂದ ಮತ್ತೊಮ್ಮೆ ಅವನಿಗೆ ಹೇಳುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಬಂದಿದ್ದ ಪತ್ರವನ್ನು ಅವನ ಕೈಗೆ ಕೊಟ್ಟೆ. ಅಡುಗೆ ಮನೆಯಿಂದ ಕಾಫಿ ತರುವಾಗ 'ಹೇಯ್ ! ಕಂಗ್ರಾಜುಲೇಷನ್ಸ್' ಎಂದಿದ್ದ. ಕಾಫಿಯನ್ನು ಕುಡಿಯುತ್ತಾ ಪಾರ್ಟಿ ಎಲ್ಲಿ ಕೊಡಿಸ್ತೀಯಾ ಹೇಳು ಅಂತ ಕೇಳಿದ್ದ. ಆಗ ನನಗೂ ಒಂದು ಐಡಿಯಾ ಬಂದಿತ್ತು. ಹೌದು, ಗ್ರೀನ್ ಕಾರ್ಡ್ approve ಆಗಿತ್ತು. ಸತ್ಯವಾಗಿ ಹೇಳುವುದಾದರೆ ಅದೆಷ್ಟೋ ಜನರು ದಿನನಿತ್ಯದಲ್ಲಿ status ಏನು ಎಂದು ಬೆಂಬಿಡದೇ ಅನುಸರಿಸುತ್ತಾ ತುದಿಗಾಲಲ್ಲಿ ಕಾಯುವ ಈ ಗ್ರೀನ್ ಕಾರ್ಡ್ ಒಂದರ್ಥದಲ್ಲಿ ನಿರಾಯಾಸವಾಗಿಯೇ ಸಿಕ್ಕಿತ್ತು ಎಂದರೆ ತಪ್ಪೇನಿಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಅರ್ಜಿ ಹಾಕಿದ್ದು ಆ ನಂತರ ಮರೆತಿದ್ದು ಅಷ್ಟೇ ನಾವು ಮಾಡಿದ್ದು.

ಪ್ರಮುಖವಾಗಿ ನಾನು ಈಗ ಕೆಲಸ ಮಾಡುತ್ತಿರುವ ಕಂಪನಿಯನ್ನು ಬದಲಿಸಬೇಕು ಎಂದರೆ ಈ ಗ್ರೀನ್ ಕಾರ್ಡ್ ಸಹಾಯಕ್ಕೆ ಬರುತ್ತದೆ. ಅರ್ಥಾತ್ ಬೇರಾವ ಕಂಪನಿಯವರು ನನ್ನನ್ನು sponsor ಮಾಡಬೇಕು ಅಂತಿಲ್ಲ. ಒಂದರ್ಥದಲ್ಲಿ ಸ್ವತಂತ್ರರು. ಜೊತೆಗೆ ಮುಂದಿನ ಆರು ವರ್ಷದಲ್ಲಿ ಪೌರರೂ ಆಗಬಹುದು, ಮತ ಚಲಾಯಿಸಬಹುದು. ಮುಂದಿನ ಓದಿಗೆ ಅಂತ ಒಂದು ಯೂನಿವರ್ಸಿಟಿಗೆ ಹೋಗಬೇಕು ಎಂದರೂ ಕೊಂಚ ಕಡಿಮೆ ಹಣಕ್ಕೆ ಓದನ್ನು ಮುಂದುವರೆಸಬಹುದು. ಹೀಗೆ ಹತ್ತು ಹಲವು ಅನುಕೂಲಗಳು ಇರುತ್ತದೆ. ಅದೇನೇ ಇರಲಿ, ಅಮೆರಿಕ ಜೀವನದ ಮತ್ತೊಂದು ಮಜಲು ಮುಗಿದಿತ್ತು.

ನಾವಿದ್ದ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿದ್ದ ಸ್ನೇಹಿತರು ನಿಧಾನವಾಗಿ ಒಬ್ಬೊಬ್ಬರೇ ಖಾಲಿಯಾಗತೊಡಗಿದ್ದರು. ಹೆಚ್ಚು ಕಮ್ಮಿ ನಾವುಗಳು ಒಂದೇ ಸಮಯದಲ್ಲಿ ಬಂದಿದ್ದು. ಆಗ ಬಂದವರು ನನಗಿಂತಾ ಮೊದಲೇ ಗ್ರೀನ್ ಕಾರ್ಡ್‌ಗೆ ಅರ್ಜಿ ಹಾಕಿದ್ದರಿಂದ ಅವರ ಮ೦ಜೂರಾತಿಗಳು ಬರಲು ತೊಡಗಿತ್ತು. ಹಾಗೆ ಬಂದವರು ತಳವೂರುವ ನಿಟ್ಟಿನಲ್ಲಿ ಸ್ವಂತ ಮನೆ ಮಾಡಿಕೊಳ್ಳುತ್ತಿದ್ದಂತೆಯೇ ಒಬ್ಬೊಬ್ಬರೇ ಅಪಾರ್ಟ್ಮೆಂಟ್ ಬಿಟ್ಟು ಹೊರಡಲು ಆರಂಭಿಸಿದ್ದರು ಎಂದಿದ್ದೆ. ಬಿಟ್ಟು ಹೊರಡುವುದೆಲ್ಲಾ ತಪ್ಪಲ್ಲಾ! ಬಿಟ್ಟು ಹೊರಡುವುದು ಜೀವನದಲ್ಲಿ ಅಭಿವೃದ್ದಿಯ ಸಂಕೇತವೂ ಆಗಬಹುದು. ಒಂದು ವಿಷಯವನ್ನು ಹಲವಾರು ಕಿಟಕಿಗಳಿಂದ ನೋಡಬಹುದು ಅಲ್ಲವೇ?

ಈ ಹಿಂದೆಯೇ ಮಗರಾಯನ ದೋಸ್ತ್ ಹಂಸಿಕಾ ಬಗ್ಗೆ ಹೇಳಿದ್ದೆ ಅಲ್ಲವೇ? ನಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹೋದವರಲ್ಲಿ ಅವರೂ ಒಬ್ಬರು. ನಮ್ಮಿಂದ ಕೇವಲ ಮೂರು ಮೈಲು ದೂರವೇ ಇರುವ ಸ್ವಂತ ಮನೆಗೆ ಹೋದರು. ದೂರವಾಗಿದ್ದು ದೇಹಗಳು ಮಾತ್ರ ಹೃದಯಗಳಲ್ಲ. ಮನೆಗಳು ದೂರ ಇದ್ದರೂ ಮನಗಳು ಹತ್ತಿರವೇ ಇತ್ತು. ನಾವು ಹೋಗೋದು, ಅವರುಗಳು ಬರೋದು ನಿತ್ಯೋತ್ಸವವೇ ಆಗಿತ್ತು. ಅವರುಗಳು ಅಲ್ಲಿಗೆ ಹೋದ ಮೇಲೆ ಒಂದಷ್ಟು ಆಚರಣೆಗಳನ್ನು ರೂಢಿಗೆ ತಂದುಕೊಂಡೆವು.


ನಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಅನುಮತಿ ಇರಲಿಲ್ಲ. ನಮ್ಮದೇ ಮನೆಯಂತಾದ ಮೇಲೆ ಅದಕ್ಕೆ ಅನುಮತಿ ಇದ್ದರೂ ಬರೀ ಬೆಳಕಿನ ಪಟಾಕಿಗಳಿಗೆ ಮಾತ್ರ ಅನುಮತಿ ಇರುತ್ತಿತ್ತು. ಯಾವುದೇ ಸದ್ದಿನ ಪಟಾಕಿ ಸಿಡಿಸುವಂತಿರಲಿಲ್ಲ. ಬೆಳಕಿನ ಪಟಾಕಿಗಳಿಗೂ ಒಂದಷ್ಟು ರೂಲ್ಸ್ ಇತ್ತು. ಸುರುಸುರು ಬತ್ತಿ, ಹೂ ಕುಂಡಗಳೇ ಮೊದಲಾದ ಹೊತ್ತುರಿದು ಆರಿದ ನಂತರ ಅವನ್ನು ನೀರಿನಲ್ಲಿ ಅದ್ದಿ ಇಡಬೇಕು. ರಸ್ತೆಯಲ್ಲಿ ಯಾವ ಹೊತ್ತುರಿದ ಪಟಾಕಿಯನ್ನೂ ಬಿಡುವಂತಿಲ್ಲ ಮತ್ತು ಚಿಂದಿ ಕಾಗದಗಳನ್ನು ಬಿಡುವಂತೆ ಇಲ್ಲ. ಮೊದ ಮೊದಲಲ್ಲಿ ನಮ್ಮ ಮನೆಗಳ ಮುಂದೆ ಸೀರಿಯಲ್ ಲೈಟುಗಳನ್ನು ಹಾಕುತ್ತಿದ್ದಾಗ ಯಾಕೆ? ಏನು? ಎಂಬ ಆಸಕ್ತಿಯಿಂದ ಇಲ್ಲಿನ ಜನರು ಕೇಳುತ್ತಿದ್ದರು. ಇಂದು ಭಾರತೀಯ ಹಬ್ಬಗಳ ಬಗ್ಗೆ ಅರಿವು ಹೆಚ್ಚಿದ್ದು, ಹ್ಯಾಪಿ ದಿವಾಲಿ' ಎಂದು ಸ್ಪಷ್ಟವಾಗಿ ಶುಭಾಶಯಗಳನ್ನು ತಿಳಿಸುತ್ತಾರೆ.

ಮಾಸ್ಟರ್ ಹಿರಣ್ಣಯ್ಯ ಅವರ ಹಿರಿತನ ಮೂಡಿಸಿದ ಬೆರಗು: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 28
ಪ್ರತೀ ವರ್ಷವೂ ಹಂಸಿಕಾಳ ಮನೆಯಲ್ಲೇ ದೀಪಾವಳಿ ಆಚರಣೆ ನಡೆಯುತ್ತಿತ್ತು. ಸ್ಥಳೀಯ ಅಂಗಡಿಯಿಂದ ಎಲ್ಲರೂ ಪಟಾಕಿಗಳನ್ನು ತಂದು ಸಂಭ್ರಮಿಸುತ್ತಿದ್ದೆವು. ಭಾರತಾದ್ಯಂತ ಇರುವ ರಾಜ್ಯಗಳ ಮಂದಿ ನಮ್ಮ ವಲಯದ ಸ್ನೇಹಿತರು, ಅವರವರ ಸ್ಪೆಷಲ್ ಸಿಹಿ - ಖಾರಗಳನ್ನು ತಂದು ಮಿಕ್ಕವರಿಗೆ ಹಂಚುತ್ತಿದ್ದುದು ಉಂಟು. ಹಬ್ಬದ ಬಗ್ಗೆ ಮಕ್ಕಳಿಗೂ ಅರಿವು ಮೂಡಿದ್ದು, ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಇಂದಿಗೂ, ಮಕ್ಕಳು ದೊಡ್ಡವರಾಗಿ ಬೇರೆ ನಗರದ ಕಾಲೇಜುಗಳಲ್ಲೇ ಇದ್ದರೂ ದೀಪಾವಳಿಗೆ ತಪ್ಪದೇ ಮನೆಗೆ ಬರುತ್ತಾರೆ ಮತ್ತು ಭಾಗವಹಿಸುತ್ತಾರೆ.

ಹಂಸಿಕಾಳ ಮನೆಯಲ್ಲಿ ಒಟ್ಟಾಗಿ ಸಂಭ್ರಮಿಸುತ್ತಿದ್ದುದು ಎಂದರೆ ಡಿಸೆಂಬರ್ 31. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವು ಎಲ್ಲರ ಮನದಲ್ಲೂ ಹೊಸತನವನ್ನೂ ಮೂಡಿಸುತ್ತಿತ್ತು. ಸಂಜೆಯಿಂದಲೇ ಅಲ್ಲಿ ಸೇರಿ, ಹಲವಾರು ರೀತಿಯ ಆಟಗಳು, ಊಟ - ತಿಂಡಿ - ಕಾಫಿ, ಫೋಟೋಗಳನ್ನು ತೆಗೆದುಕೊಳ್ಳುವುದು ನಡೆಯುತ್ತಿತ್ತು. ಕೆಲವೊಮ್ಮೆ ಸೂಟು - ಬೂಟು, ಕೆಲವೊಮ್ಮೆ ಮತ್ತೊಂದು ರಾಜ್ಯದ ದಿರಿಸು ಹೀಗೆ. ರಾತ್ರಿಯ ಊಟದ ನಂತರ ಟಿವಿ ಹಾಕಿ ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ನಡೆಯುವ ಕಾರ್ಯಕ್ರಮ ನೋಡುತ್ತಿದ್ದೆವು. ಬಾಲ್ ಡ್ರಾಪ್ ಸಮಯ ಬರುತ್ತಿದ್ದಂತೆಯೇ ಎಲ್ಲರಲ್ಲೂ ಉತ್ಸುಕತೆ ಹೆಚ್ಚುತ್ತಿತ್ತು. ಶುಭಾಶಯಗಳನ್ನು ಹಂಚಿಕೊಳ್ಳೋದು ಸಾಮಾನ್ಯವಾಗಿತ್ತು.

ಆರಂಭದಲ್ಲಿ ಅವಕಾಶ ವಂಚಿತ.. ಈಗ ರಂಗ ಪ್ರತಿಭೆ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 29
ಸ್ಥಳೀಯ ದೇವಸ್ಥಾನದ ಎರಡು ಪ್ರಮುಖ ಆಚರಣೆಗಳಲ್ಲಿ ಸದಾ ಭಾಗವಹಿಸುತ್ತಿದ್ದೆವು. ಒಂದು, ಶ್ರೀನಿವಾಸ ಕಲ್ಯಾಣೋತ್ಸವ ಮತ್ತೊಂದು ಎಂದರೆ ಗಣೇಶ - ಗೌರಿ. ಸ್ಥಳೀಯ ಮಹಾರಾಷ್ಟ್ರದ ಸಂಘದವರು ಉಸ್ತುವಾರಿ ವಹಿಸಿಕೊಂಡು ದೇವಸ್ಥಾನದ ಒಂದು ಬದಿಯಲ್ಲಿ ಪ್ರತೀ ವರ್ಷ ಒಂದೊಂದು ಥೀಮ್ ಆಯ್ದುಕೊಂಡು ಅದರಂತೆ ರಚನೆಗಳನ್ನು ಮಾಡಿ ಗಣೇಶನನ್ನು ಕೂರಿಸುವುದು ಪದ್ಧತಿ. ಒಮ್ಮೆ ಕೈಲಾಸದ ರಚನೆ ಮಾಡಿದ್ದರು, ಇತ್ತೀಚೆಗೆ ಗಣೇಶ - ಸುಬ್ರಮಣ್ಯ ಕಥೆಯಲ್ಲಿ ಗಣೇಶನು ಪಾರ್ವತಿ - ಪರಮೇಶ್ವರ ಸುತ್ತ ಸುತ್ತುವ ಕಥೆಯ ಥೀಮ್ ಮಾಡಿದ್ದರು. ಚತುರ್ಥಿಯ ದಿನದಿಂದ ಪ್ರತಿನಿತ್ಯ ವಿಶೇಷ ಪೂಜೆ ಇರುತ್ತದೆ. ಪ್ರತಿ ದಿನ ಒಬ್ಬರಲ್ಲಾ ಒಬ್ಬರು sponsor ಮಾಡುವವರು ಇರುತ್ತಾರೆ. ನಮ್ಮ ಗುಂಪಿನ ಸದಸ್ಯರೂ ಒಂದು ದಿನ ಸೇರಿಕೊಂಡು ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ, ಬಂದಿರುವ ಭಕ್ತರಿಗೆ ಪ್ರಸಾದ ಹಂಚುವುದನ್ನು ಇಂದಿಗೂ ಮಾಡುತ್ತಿದ್ದೇವೆ.

ಕನ್ನಡ ಸಂಘದವರಾಗಿ ನಾವು ಪ್ರತೀ ವರ್ಷ ತಪ್ಪದೇ ಯುಗಾದಿ ಮತ್ತು ದೀಪಾವಳಿ - ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. ದೇವಸ್ಥಾನದ ಕಮ್ಯೂನಿಟಿ ಹಾಲ್‌ನಲ್ಲಿ ಸೇರೋದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸೋದು ಬಹಳ ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಇದೇ ರಂಗದಲ್ಲಿ ನಾನು ಹಲವಾರು ನಾಟಕಗಳಲ್ಲಿ ಸ್ಟೇಜ್ ಏರಿರೋದು ಅಂತ ಮುಂಚೆಯೇ ಹೇಳಿದ್ದೆ. ಇಷ್ಟೆಲ್ಲಾ ಸಂದರ್ಭಗಳಲ್ಲಿ ಆಚರಣೆಗಳನ್ನು ತಪ್ಪದೆ ನಡೆಸಿಕೊಂಡು ಬಂದಿರುವ ನಮಗೆ ಒಂದು ಹಬ್ಬದ ಆಚರಣೆ ಮಿಸ್ ಆಗಿದೆ ಅನ್ನಿಸಿದ್ದು ಸುಳ್ಳಲ್ಲ. ಅದು ಯಾವುದು? ಈ ಆಚರಣೆ ಕಾರ್ಯಗತವಾಗಿದ್ದು ಹೇಗೆ? ಇದರಲ್ಲಿ ನನ್ನ ಪಾತ್ರವೇನು? ಗ್ರೀನ್ ಕಾರ್ಡ್ ಕೈಗೆ ಬಂದ ನಮ್ಮ ಜೀವನದಲ್ಲಿ ಆದ ಬದಲಾವಣೆ ಏನು? ಇದನ್ನೆಲ್ಲಾ ಹೇಳಲು ಮುಂದಿನ ವಾರ ಬರುತ್ತೇನೆ. ಅರೇ ! ಇದೆಲ್ಲದರ ಮಧ್ಯೆ ಅಮ್ಮನ ಆರೋಗ್ಯದ ಬಗ್ಗೆ ಹೇಳಲೇ? ಬೇಡವೇ?
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ