ಆ್ಯಪ್ನಗರ

ಮರಾಠಿಗರ ಅಸ್ಮಿತೆಗಾಗಿ ಹುಟ್ಟಿಕೊಂಡ ಶಿವಸೇನೆ ನಡೆದು ಬಂದ ದಾರಿ

1960ರಲ್ಲಿ ಬಾಳ್‌ ಠಾಕ್ರೆ ನೇತೃತ್ವದಲ್ಲಿ ಹುಟ್ಟಿಕೊಂಡ ಶಿವಸೇನೆ ಮೂರು ತಲೆಮಾರನ್ನು ಕಂಡಿದೆ. ಆದರೆ ವರ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಆದಿತ್ಯ ಠಾಕ್ರೆಯನ್ನು ಹೊರತು ಪಡಿಸಿದರೆ ಬೇರಾರು ಚುನಾವಣೆ ನಿಂತು ಗೆದ್ದ ಇತಿಹಾಸವಿಲ್ಲ.

Vijaya Karnataka Web 12 Nov 2019, 5:27 pm
80ರ ದಶಕ, ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರಭಾವಿಯಾಗಿ ಬೆಳೆದ ಕಾಲ. 1926ರಲ್ಲಿ ಪುಣೆಯಲ್ಲಿ ಜನಿಸಿದ ಬಾಳ್‌ ಠಾಕ್ರೆ, 50ರ ದಶಕದಲ್ಲಿ ಮುಂಬಯಿಯ ಪತ್ರಿಕೆಯೊಂದರಲ್ಲಿ ರಾಜಕೀಯ ಕಾರ್ಟೂನಿಸ್ಟ್‌ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. 1960ರಲ್ಲಿ ಶಿವಸೇನೆಯನ್ನು ರಚಿಸಿಕೊಂಡರು. ಈ ಸಂಘಟನೆಯ ಮೂಲ ಉದ್ದೇಶ, 'ಮರಾಠಿ ಮಾನುಸ್‌' ಅಥವಾ ಮರಾಠಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವುದಾಗಿತ್ತು.
Vijaya Karnataka Web Bal Thakhery


ಮುಂಬಯಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಟೆಲ್‌ ಉದ್ಯಮವೂ ಸೇರಿದಂತೆ ಎಲ್ಲ ವಲಯಗಳಲ್ಲಿ ಬೇರುಬಿಟ್ಟಿದ್ದ ದಕ್ಷಿಣ ಭಾರತೀಯರು ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಮರಾಠಿಗರ ಆಕ್ರೋಶವನ್ನು ಬಂಡವಾಳವಾಗಿ ತಮ್ಮ ಬೆಂಬಲಕ್ಕೆ ಠಾಕ್ರೆ ಬಳಸಿಕೊಂಡರು. ಕನ್ನಡಿಗರೂ ಸೇರಿದಂತೆ ದಕ್ಷಿಣ ಭಾರತೀಯರು, ಬಿಹಾರಿಗಳು, ಉತ್ತರ ಭಾರತೀಯರು ಇವರ ದಾಳಿಗೆ ತುತ್ತಾದರು. ತಾವು ಸ್ವತಃ ಯಾವುದೇ ಚುನಾವಣೆಗೆ ನಿಲ್ಲದಿದ್ದರೂ, ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಉಗ್ರ ಹಿಂದುತ್ವದ ಪ್ರತಿನಿಧಿ ಎನಿಸಿಕೊಂಡು ಮಹಾರಾಷ್ಟ್ರದಾದ್ಯಂತ ಮಾತ್ರವಲ್ಲ ದೇಶದೆಲ್ಲೆಡೆ 'ಹುಲಿ' ಎಂದೇ ಪ್ರಸಿದ್ಧರಾದರು. 1992ರಲ್ಲಿ ಸಾಮ್ನಾದಲ್ಲಿ ಪ್ರಚೋದನಕಾರಿ ಸಂಪಾದಕೀಯವನ್ನು ಬರೆದು ರಾಜ್ಯದಲ್ಲಿ ಕೋಮುಗಲಭೆ ಹುಟ್ಟು ಹಾಕಿ 1,000 ಮಂದಿಯ ಸಾವಿಗೆ ಕಾರಣರಾದ ಆರೋಪವೂ ಇವರ ಮೇಲಿದೆ.

ಇಂದಿರಾ ಹೇರಿದ್ದ ತುರ್ತು ಪರಿಸ್ಥಿತಿಯನ್ನೂ ಸಮರ್ಥಿಸಿದ್ದ ಠಾಕ್ರೆ ಕಾಂಗ್ರೆಸ್‌ ಜತೆಗಿದ್ದರು!

ಬಾಳ್‌ ಠಾಕ್ರೆ ಅವರ ಮರಣಾನಂತರ ಅವರ ಪುತ್ರ ಉದ್ಧವ ಠಾಕ್ರೆ ಶಿವಸೇನೆಯ ಸುಪ್ರೀಂ ಲೀಡರ್‌ ಆದರು. ಬಿಜೆಪಿಯನ್ನು ಟೀಕಿಸುವ ಹಾಗೂ ಬೆಂಬಲಿಸುವ ರಾಜಕಾರಣವನ್ನು ಜಾರಿಯಲ್ಲಿಟ್ಟರು. 2019ರ ವೇಳೆಗೆ, ಸಾಕಷ್ಟು ಬಾರಿ ಬಿಜೆಪಿಯ ರಾಜಕಾರಣದ ಸಿಹಿ- ಕಹಿ ಉಂಡಿದ್ದ ಉದ್ಧವ್‌ಗೆ, ರಾಜಕೀಯ ಮಹತ್ವಾಕಾಂಕ್ಷೆ ಮೂಡಿತ್ತು. ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಅವರಿಗಿದೆ ಎಂದು ಪಕ್ಷದ ಕೆಲ ಮೂಲಗಳು ಬಹಿರಂಗಪಡಿಸಿದ್ದವು. ಅದಕ್ಕೆ ತಕ್ಕಂತೆಯೇ ಶಿವಸೇನೆ ಸಿಎಂ ಪಟ್ಟಕ್ಕೆ ಹಠ ಹಿಡಿಯಿತು. ಇದೇ ಚುನಾವಣೆಯಲ್ಲಿ ಉದ್ಧವ್‌ ತಮ್ಮ ಮಗನನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದಾರಲ್ಲದೆ, ಆತನನ್ನೂ ರಾಜ್ಯ ರಾಜಕಾರಣದಲ್ಲಿ ತರಬೇತುಗೊಳಿಸುತ್ತಿದ್ದಾರೆ.

ಶರದ್‌ ಪವಾರ್‌ ತೋಡಿದ ಖೆಡ್ಡಾಗೆ ಬಿದ್ದ ಬಿಜೆಪಿ, ಶಿವಸೇನೆಯೆಂಬ ಮದಗಜಗಳು!

ಮೋದಿಯನ್ನು ಟೀಕಿಸುತ್ತಿದ್ದ ವೈಖರಿ ನೋಡಲೆಂದೇ ಜನ ಸೇರುತ್ತಿದ್ದರು!
ಬಾಳ್‌ ಠಾಕ್ರೆ ಅವರ ಅಣ್ಣನ ಮಗ ರಾಜ್‌ ಠಾಕ್ರೆ, 2006ರಲ್ಲಿ ಶಿವಸೇನೆಯಿಂದ ಬೇರೆಯಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ರಚಿಸಿಕೊಂಡು, 2014ರ ಚುನಾವಣೆಯಲ್ಲಿ 110 ಸ್ಥಾನಗಳಲ್ಲಿ ಸ್ಪರ್ಧಿಸಿದರು. ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದ್ದರು. ಆದರೆ ಚುನಾವಣೆ ಪ್ರಚಾರಗಳಲ್ಲಿ ಇವರು ಮೋದಿಯನ್ನು ಟೀಕಿಸುತ್ತಿದ್ದ ವೈಖರಿಯನ್ನು ನೋಡಲೆಂದೇ ಜನ ಸೇರುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ