ಹೃದಯಸ್ಪರ್ಶಿ: ನಿಷ್ಪಾಪಿ ಹೆಣ್ಣು ಮಗಳಿಗೆ ನೇಣು ಬಿಗಿಯುತ್ತಿರುವ ಇರಾನ್
ಜೆನಾಬ್ಳ ಒಡಲ ತಲ್ಲಣ ಕುಟುಂಬಕ್ಕಾಗಲಿ, ಪೊಲೀಸ್, ನ್ಯಾಯಾಲಯ, ಸರಕಾರಕ್ಕಾಗಲಿ ಗೊತ್ತೇ ಆಗುತ್ತಿಲ್ಲ
ಹೃದಯಸ್ಪರ್ಶಿ: ಮೇರಿ ಜೋಸೆಫ್
ಇರಾನ್ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದೆ. ಈ ಬಾರಿಯೂ ಮಾನವ ಹಕ್ಕುಗಳ ಉಲ್ಲಂಘನೆಯೇ ಪ್ರಮುಖ ವಿಷಯ. ಗಲ್ಲುಶಿಕ್ಷೆಗೆ ಗುರಿಯಾಗಿರುವ ಯುವತಿಯೊಬ್ಬಳ ಪ್ರಕರಣದಲ್ಲಿ ಇರಾನ್ ಸರಕಾರ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಗಾಳಿಗೆ ತೂರಿದೆ ಎಂದು ಕೂಗೆಬ್ಬಿಸಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್, ಸಾಕ್ಷ ್ಯಗಳ ಸಹಿತ ವ್ಯಾಪಕ ಚಳವಳಿ, ಪ್ರಚಾರ ನಡೆಸುತ್ತಿದೆ. ಅದೀಗ ಜಗತ್ತಿನಾದ್ಯಂತ ತಲ್ಲಣಗಳನ್ನು ಮೂಡಿಸಿದೆ.
ಇದಕ್ಕೆ ಕಾರಣವಾದದ್ದು ಜೆನಾಬ್ ಸೆಕಾವಂದ್ ಎಂಬ 22 ರ ಯುವತಿಯ ಮನಮಿಡಿಯುವ ಕಥೆ. ಪತಿಯನ್ನೇ ಹತ್ಯೆಗೈದವಳು ಎಂಬ ಆರೋಪದ ಹಣೆಪಟ್ಟಿ ಕಟ್ಟಿಕೊಂಡ ಆಕೆಗೆ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಭಾರಿ ಆಂದೋಲನ ನಡೆಸುತ್ತಿದೆ. ಜೆನಾಬ್ಳ ವಿಷಯದಲ್ಲಿ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಕೆಯ ವಯಸ್ಸನ್ನು ಗಣನೆಗೆ ತೆಗೆದುಕೊಂಡಾದರೂ
ಗಲ್ಲಿನಿಂದ ವಿಮುಕ್ತಿಗೊಳಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಇದೇ ರೀತಿ ಗಲ್ಲಿಗೇರಿಸಲ್ಪಟ್ಟ ರೆಯ್ಹಾನ ಜಬ್ಬಾರಿ ಎಂಬ ಯುವತಿಯ ಪ್ರಕರಣ ಅಂದು ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡಿತ್ತು. ಆಕೆಯನ್ನು ಗಲ್ಲಿಗೇರಿಸದಂತೆ ಮಾನವ ಹಕ್ಕು ಸಂಘಟನೆಗಳು ಚಳವಳಿಗಳನ್ನೂ ನಡೆಸಿದ್ದವು. ಇಡೀ ಜಗತ್ತೇ ಪ್ರಕರಣದ ವಿರುದ್ಧ ಹುಯಿಲೆಬ್ಬಿಸಿದರೂ, ಗಲ್ಲು ಶಿಕ್ಷೆ ಮಾತ್ರ ರದ್ದಾಗಲಿಲ್ಲ. ಕೊನೆಗೆ ಧೈರ್ಯದಿಂದ ಸಾವನ್ನು ಎದುರಿಸಿದ ಆ ಯುವತಿ ತನ್ನ ತಾಯಿಗೆ ಕಳುಹಿಸಿದ ಹೃದಯಸ್ಪರ್ಶಿಧ್ವನಿಮುದ್ರಿತ ಸಂದೇಶವನ್ನು ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಇಂಗ್ಲಿಷ್ಗೆ ಅನುವಾದಿಸಿ ಬಿಡಗಡೆಗೊಳಿಸಿದ್ದರು. ಅದು ಬಿಡುಗಡೆಯಾದದ್ದೇ ಜಗತ್ತಿನಾದ್ಯಂತದ ಮಾಧ್ಯಮಗಳಲ್ಲಿ ಅದು ಚರ್ಚಾ ವಿಷಯವಾಗಿತ್ತು. ಆ ಘಟನೆ ಎಲ್ಲರ ಎದೆ ನಡುಗಿಸಿತ್ತು. ಯೌವ್ವನವಿನ್ನೂ ಮಾಸಿರದ, ಆ ಧೈರ್ಯಶಾಲಿ ಯುವತಿಯ ಸಾವನ್ನು ವಿಶ್ವದ ಜನ ತಮ್ಮವಳದ್ದೇ ಸಾವು ಎಂಬಂತೆ ಚರ್ಚಿಸಿ ಕಣ್ಣೀರ್ಗರೆದು ಶ್ರದ್ಧಾಂಜಲಿ ಸಲ್ಲಿಸಿದ್ದರು. ಈಗ ಮತ್ತದೇ ಕೂಗು, ಮತ್ತದೇ ನೋವು, ಮತ್ತದೇ ತಲ್ಲಣಗಳು ಮರುಕಳಿಸಿದೆ. ಜನರ ಚಿತ್ತ ಇದೀಗ ಜೆನಾಬ್ಳತ್ತ ನೆಟ್ಟಿದೆ.
ಒಂದು ಗಲ್ಲುಶಿಕ್ಷೆಯ ವಿರುದ್ಧ ಇಡೀ ಜಗತ್ತೇ ಕೂಗೆಬ್ಬಿಸಿದರೂ ಅದು ಇರಾನ್ನ ನ್ಯಾಯಾಲಯದ ಕಿವಿಗೆ ಮಾತ್ರ ಎಂದೂ ಕೇಳಿಸದು. ಬಾಲಾಪರಾಧಿಗಳ ವಿಷಯದಲ್ಲೂ ಅಲ್ಲಿನ ನೆಲದ ಕಾನೂನು ಯಾವುದೇ ದಯೆ, ದಾಕ್ಷಿಣ್ಯ ಹೊಂದಿಲ್ಲ. ಸೂಕ್ತ ವಿಚಾರಣೆಯಾಗಲಿ, ಆರೋಪಿಗಳ ಅಹವಾಲುಗಳಿಗೆ ಸ್ಪಂದಿಸುವಷ್ಟು ವಿಶಾಲ ಮನಸ್ಸು ಅಲ್ಲಿನ ಆಡಳಿತಕ್ಕಾಗಲಿ, ನ್ಯಾಯಾಲಯಕ್ಕಾಗಲಿ ಇಲ್ಲವೇ ಇಲ್ಲ. ಹತ್ಯೆ ಮಾಡಿದವರು ಯಾರೇ ಆಗಲಿ, ಶಿಕ್ಷೆಗೆ ಅರ್ಹರು ಎಂಬ ಕಠಿಣ, ಆತುರದ ನಿರ್ಧಾರದ ಮುಂದೆ ಎಲ್ಲರ ದನಿಯೂ ಕ್ಷೀಣಿಸುತ್ತದೆ. ಈಗ ನಡೆಯುತ್ತಿರುವುದೂ ಅದೇ. ಅದಕ್ಕೇ ಯಾವುದೇ ಕ್ಷ ಣದಲ್ಲಾದರೂ ಜೆನಾಬ್ಳ ಗಲ್ಲುಶಿಕ್ಷೆ ಜಾರಿಯಾಗಬಹುದು. ವರ್ಷವೊಂದಕ್ಕೆ ಅದೆಷ್ಟೋ ಜೀವಗಳು ಗಲ್ಲುಶಿಕ್ಷೆಗೊಳಗಾಗಿ ಜೀವತ್ಯಾಗ ನಡೆಸುತ್ತಿರುವ ಇರಾನ್ನಲ್ಲಿ ಇವೆಲ್ಲ ಗಂಭೀರ ವಿಷಯವೇ ಅಲ್ಲ.
ಹತ್ಯೆ ಪ್ರಕರಣಗಳಲ್ಲಿ ವಿಚಾರಣೆಯ ಆಳಕ್ಕಿಳಿಯದೆ ಅಂತಿಮವಾಗಿ ಕಟ್ಟಕಡೆಯ ಶಿಕ್ಷೆಯಾದ ಗಲ್ಲುಶಿಕ್ಷೆಯನ್ನೇ ವಿಧಿಸುತ್ತಿರುವ ಅಲ್ಲಿನ ನ್ಯಾಯಾಲಯಗಳ ಕ್ರಮ ಹೊರಜಗತ್ತಿಗೆ ತಿಳಿಯದ ವಿಷಯವೇನಲ್ಲ. ಕಾನೂನಿನ ಕಪಿಮುಷ್ಟಿಯಿಂದ ಹೊರಬರಲಾರದೆ ಅದೆಷ್ಟೋ ಯುವತಿಯರು ಅಲ್ಲಿ ಜೀವ ಕಳೆದುಕೊಂಡಿದ್ದಾರೆ. ಜೆನಾಬ್ ಕಥೆಯೂ ಭಿನ್ನವಾಗಿರಲಿಲ್ಲ. ಹಾಗೆಂದು ಮಾನವ ಹಕ್ಕುಗಳ ಸಂಘಟನೆಗಳು ಕೈಕಟ್ಟಿ ಕುಳಿತುಕೊಳ್ಳುವಂತೆಯೂ ಇಲ್ಲ.
ಇಷ್ಟಕ್ಕೂ ಜೆನಾಬ್ಳ ಕಥೆ ಕೇಳಿದರೆ ಕನಿಕರ ಹುಟ್ಟದೇ ಇರದು. ಮನೆಯಲ್ಲಿನ ಕಿತ್ತು ತಿನ್ನುವ ಬಡತನ ತಾಳಲಾರದೆ ಇರಾನ್ನ ಕುರ್ದಿಷ್ ಯುವತಿ 14 ರ ಹರೆಯದ ಜೆನಾಬ್, ತಾನು ಪ್ರೀತಿಸಿದ ಯುವಕ ಹುಸೇನ್ನೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಳು. ಹೊಟ್ಟೆ ತುಂಬಾ ಊಟ, ನೆಮ್ಮದಿಯ ಬದುಕು ಆಕೆಯನ್ನು ಹೀಗೆ ಮನೆಬಿಟ್ಟು ಓಡಿಹೋಗುವಂತೆ ಮಾಡಿತ್ತು. ಸುಂದರ ಕನಸುಗಳೊಂದಿಗೆ ಹುಸೇನ್ನನ್ನು ವಿವಾಹವಾದ ಆ ಬಾಲಕಿಗೆ ದಿನಕಳೆದಂತೆ ವಾಸ್ತವದ ಅರಿವಾಗಿತ್ತು. ತಾನು ಪ್ರೀತಿಸಿದ, ತನ್ನನ್ನೂ ಅದೇ ಪರಿ ಪ್ರೀತಿಸಿದ ಹುಸೇನ್ನ ನಿಜ ಬಣ್ಣ ಬಯಲಾಗತೊಡಗಿತ್ತು. ಆತ, ತನ್ನನ್ನು ನಂಬಿ, ಮನೆಮಂದಿಯನ್ನು ತೊರೆದು ಓಡಿಬಂದ ಪತ್ನಿಯನ್ನು ದಿನನಿತ್ಯ ಹಿಂಸಿಸುವಷ್ಟು ನಿರ್ದಯಿ, ಹಿಂಸೆಯ ಪ್ರಮಾಣ ಉತ್ತುಂಗಕ್ಕೇರುತ್ತಿದ್ದಂತೆ, ಆಕೆ ಬೇರೆ ದಾರಿ ಕಾಣದೆ ಪೊಲೀಸರ ಬಳಿ ದೂರು ದಾಖಲಿಸಿದರೂ, ಅದನ್ನವರು ಗಣನೆಗೇ ತೆಗೆದುಕೊಳ್ಳಲಿಲ್ಲ. ಗಂಡನ ಪೀಡೆಯನ್ನು ಸಹಿಸಿ ಸುಸ್ತಾದ ಜೆನಾಬ್, ವಿಚ್ಛೇದನಕ್ಕಾಗಿ ಪತಿ ಬಳಿ ಪರಿಪರಿಯಾಗಿ ಕೋರಿದರೂ, ಅದಕ್ಕೂ ಆತ ಸಮ್ಮತಿಸಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಹುಸೇನ್ ತೀರಿಕೊಂಡ. ವಿಚಾರಣೆ ನಡೆಸಿದ ಪೊಲೀಸರು, ಪತಿಯನ್ನು ಕೊಂದ ಆರೋಪವನ್ನು ಜೆನಾಬ್ ಮೇಲೆ ಹೊರಿಸಿ, ಬಂಧಿಸಿದರು. ತನ್ನ ಮೇಲಿನ ಆರೋಪವನ್ನೆಲ್ಲ ಬಾಲಕಿ ತಳ್ಳಿಹಾಕಿದರೂ, 20 ದಿನಗಳ ಜೈಲುವಾಸದಲ್ಲಿ ಪೊಲೀಸರ ಕ್ರೂರ ಹಿಂಸೆಗೆ ಗುರಿಯಾದ ಆ ಅಸಹಾಯಕ ಹೆಣ್ಣುಮಗಳು ಕೊನೆಯಲ್ಲಿ ಪತಿಯನ್ನು ಹತ್ಯೆಮಾಡಿರುವುದಾಗಿ ಒಪ್ಪಿಕೊಳ್ಳಲೇಬೇಕಾಯಿತು. ಈ ಅವಧಿಯಲ್ಲಿ ಒಂದು ಬಾರಿಯೂ ವಕೀಲರನ್ನು ಭೇಟಿಯಾಗುವ ಅವಕಾಶವನ್ನು ಪೊಲೀಸರು ಆಕೆಗೆ ನೀಡಲಿಲ್ಲ.
ತನ್ನ ಮೇಲೆ ತನ್ನ ಮೈದುನ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಆತನೇ ತನ್ನ ಪತಿ ಹುಸೇನ್ ಕೊಲೆಗೆ ಕಾರಣ, ಪೊಲೀಸರ ಬಲವಂತಕ್ಕೆ ತನಗೆ ತಪ್ಪನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ನ್ಯಾಯಾಲಯದಲ್ಲಿ ಜೇನಬ್ ಪರಿಪರಿಯಾಗಿ ಕೋರಿದರೂ, ನ್ಯಾಯಾಲಯ ಅದಾವುದನ್ನೂ ಕೇಳಿಸಿಕೊಳ್ಳಲೇ ಇಲ್ಲ. ನ್ಯಾಯಯುತವಾದ ವಿಚಾರಣೆ ನಡೆಸದ ಕೋರ್ಟ್ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿತು. ಅಲ್ಲಿ ದಿನದೂಡುತ್ತಿರುವಾಗಲೇ ಜೆನಾಬ್, ಜೈಲುವಾಸಿಯೊಬ್ಬರನ್ನೇ ಮದುವೆಯಾಗಿ ಗರ್ಭಿಣಿಯಾದಳು. ಇರಾನ್ನ ಕಾನೂನಿನ ಪ್ರಕಾರ ಗರ್ಭಿಣಿಯನ್ನು ಗಲ್ಲಿಗೇರಿಸುವುದು ಅಕ್ರಮವಾದ್ದರಿಂದ ಆಕೆಯ ಶಿಕ್ಷೆಯ ಜಾರಿ ಮುಂದೂಡಲ್ಪಟ್ಟಿತು. ಗಲ್ಲುಶಿಕ್ಷೆಯ ಆತಂಕದಲ್ಲಿದ್ದ ಆಕೆಯ ಆರೋಗ್ಯ ಹದಗೆಟ್ಟಿತು. ಕಳೆದ ಸೆಪ್ಟೆಂಬರ್ 30ರಂದು ಆಕೆ ನಿರ್ಜೀವ ಮಗುವಿಗೆ ಜನ್ಮ ನೀಡಿದಳು. ಆದರೂ ನ್ಯಾಯಾಲಯ ಆಕೆಯ ಬಗ್ಗೆ ಅನುಕಂಪ ತೋರಲಿಲ್ಲ. ಹದಗೆಟ್ಟ ಆರೋಗ್ಯಸ್ಥಿತಿಯನ್ನೂ ಲೆಕ್ಕಿಸದೆ ಆಕೆಯನ್ನು ಮಾರನೇ ದಿನವೇ ಆಸ್ಪತ್ರೆಯಿಂದ ಜೈಲಿಗೆ ವರ್ಗಾಯಿಸಿ ಗಲ್ಲುಶಿಕ್ಷೆ ಜಾರಿಗೆ ಬೇಕಾದ ಎಲ್ಲಾ ಕಾನೂನು ಕ್ರಮಗಳನ್ನು ಮುಂದುವರಿಸಿತು. ಯಾವುದೇ ಕ್ಷ ಣದಲ್ಲಾದರೂ, ಆಕೆಯ ಗಲ್ಲುಶಿಕ್ಷೆ ಜಾರಿಯಾದೀತು.
ಇದೀಗ ಈ ಹಂತದಲ್ಲಿ ಆಕೆಯ ಗಲ್ಲುಶಿಕ್ಷೆಯನ್ನು ರದ್ದುಪಡಿಸಲು ಕೋರಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಬೀದಿಗಿಳಿದಿದೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಮಾತ್ರವಲ್ಲದೆ, ಹ್ಯೂಮನ್ ರೈಟ್ಸ್ ವಾಚ್ ಹಾಗೂ ಇತರ ಮಾನವ ಹಕ್ಕು ಸಂಘಟನೆಗಳು ಈ ವಿಷಯದಲ್ಲಿ ಟ್ವೀಟ್ ಮಾಡುವ ಮೂಲಕ ಜೆನಾಬ್ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿವೆ.
''ಜೆನಾಬ್ ಪತಿಯಿಂದ ಹಿಂಸೆ ಅನುಭವಿಸಿ ನ್ಯಾಯಕ್ಕಾಗಿ ಬೇಡಿಕೊಂಡಾಗ ಯಾರೂ ಆಕೆಯ ನೆರವಿಗೆ ಬರಲಿಲ್ಲ. ಆಕೆಯ ಮೈದುನ ಅತ್ಯಾಚಾರ ಎಸಗಿದಾಗಲೂ ಯಾರೂ ಕಣ್ಣೆತ್ತಿಯೂ ನೋಡಲಿಲ್ಲ. ಕಟ್ಟಕಡೆಯಲ್ಲಿ ಆಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಾಗಲೂ ಪ್ರಕರಣದ ಕುರಿತು ನ್ಯಾಯಯುತವಾದ ವಿಚಾರಣೆ ನಡೆಯಲೇ ಇಲ್ಲ ಎಂದ ಆಮ್ನೆಸ್ಟಿ ತೀವ್ರವಾಗಿ ಆರೋಪಿಸಿದೆ. ಇರಾನ್ ಕೂಡ ಸಹಿ ಹಾಕಿರುವ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನೀತಿಗೆ ವಿರುದ್ಧವಾಗಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಲಾಗಿದೆ'' ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ತನ್ನ ವಾದವನ್ನು ಮುಂದಿಟ್ಟಿದೆ.
''ಸೆರೆಮನೆಯಲ್ಲಿ ಆಕೆಗೆ ಅಗೌರವ ತೋರಲಾಗಿತ್ತಲ್ಲದೆ ವಕೀಲರನ್ನು ಭೇಟಿ ಮಾಡುವ ಅವಕಾಶವನ್ನೂ ನಿರಾಕರಿಸಲಾಯಿತು. ಒಂದು ವೇಳೆ ನ್ಯಾಯಯುತವಾದ ವಿಚಾರಣೆಯಲ್ಲಿ ಆಕೆ ತಪ್ಪಿತಸ್ಥಳೇ ಎಂದು ಸಾಬೀತಾಗಿದ್ದಲ್ಲಿ ಆಕೆ ಗಲ್ಲುಶಿಕ್ಷೆಗೆ ಅರ್ಹಳೇ ಅಲ್ಲ. ಬಂಧನಕ್ಕೊಳಗಾಗಿದ್ದ ಸಮಯದಲ್ಲಿ ಆಕೆಗೆ ಕೇವಲ 17 ವರ್ಷವಾಗಿದ್ದರಿಂದ ಆಕೆಯೂ ಬಾಲಾಪರಾಧಿಗಳ ಸಾಲಿಗೆ ಸೇರುತ್ತಾಳೆ. ಇದು ಇರಾನ್ ಸಹಿ ಹಾಕಿದಂತಹ ಅಂತಾರಾಷ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ'' ಎಂದು ಸಂಸ್ಥೆ ಆರೋಪಿಸಿದೆ.
ಇದು, ಇರಾನ್ನಲ್ಲಿ ಮಹಿಳೆಯರನ್ನು, ಯುವತಿಯರನ್ನು ಪೊಲೀಸರು ಹಾಗೂ ನ್ಯಾಯಾಲಯ ನಡೆಸಿಕೊಳ್ಳುತಿರುವ ಪರಿಗೆ ಸ್ಪಷ್ಟ ನಿದರ್ಶನವಾಗಿದೆ. ಜೆನಾಬ್ಳದ್ದು ಕೇವಲ ಒಂದು ಉದಾಹರಣೆ ಮಾತ್ರ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಪಟ್ಟಿಯಲ್ಲಿ ಚೀನಾ ನಂತರದ ಸ್ಥಾನ ಇರಾನ್ನದು ಎಂದು ಆಮ್ನೆಸ್ಟಿಯ ಅಂಕಿ ಅಂಶಗಳು ಬಹಿರಂಗಪಡಿಸುತ್ತವೆ. ಕಳೆದ ವರ್ಷ ಒಂದು ಸಾವಿರ ಜನರನ್ನು ಇರಾನ್ ಗಲ್ಲುಶಿಕ್ಷೆಗೆ ಗುರಿಪಡಿಸಿದೆ. ಈ ವರ್ಷದ ಆಗಸ್ಟ್ವರೆಗೆ 230 ಮಂದಿ ಅಲ್ಲಿ ಜೀವತೆತ್ತಿದ್ದಾರೆ. ಜೇನಾಬ್ ಸೇರಿದಂತೆ 160 ಬಾಲಾಪರಾಧಿಗಳು ಗಲ್ಲುಶಿಕ್ಷೆಗೆ ಕಾಯುತ್ತಾ ಇರಾನ್ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು ಆಮ್ನೆಸ್ಟಿ ಹೇಳುತ್ತಿರುವಾಗ ಇಡೀ ಜಗತ್ತೇ ಬೆಚ್ಚಿಬೀಳುತ್ತಿದೆ.