ಕೆ.ವೆಂಕಟೇಶ
ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅದ್ಭುತ ಸಾಧನೆ ಮಾಡುವ ಭಾರತದ ಯಾವುದೇ ಕ್ರೀಡಾಪಟು ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂ ಎಂದೇ ಹೇಳಬೇಕು. ಏಕೆಂದರೆ ಇಲ್ಲಿ ಆಟೋಟ ಎಂಬುದು ಬಾಲ್ಯದ ನಂತರ ಮರೆಯಲೇಬೇಕಾದ ಕನಸು. ಶಾಲೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರತೊಡಗಿದಂತೆ ಅಟ ಹಿಂದೆ ಬೀಳುತ್ತದೆ. ಪುಸ್ತಕಗಳು ಹೆಗಲೇರಿ ಎಲ್ಲದರ ಮೇಲೆ ವ್ಯಾಪಿಸಿಕೊಳ್ಳುತ್ತವೆ. ಆಟದಲ್ಲಿ ಜೀವನವನ್ನು ಕಂಡುಕೊಳ್ಳುವ ಹೆಣ್ಣಿಗಂತೂ ಅಡಿಗಡಿಗೂ ಅಡ್ಡಿ ಆತಂಕಗಳು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ಟೆನಿಸ್ ನಲ್ಲಿ ಸಾನಿಯಾ, ಬಾಡ್ಮಿಂಟನ್ ನಲ್ಲಿ ಸೈನಾ, ಸಿಂಧು ಅದ್ಭುತ ಯಶಸ್ಸು ಗಳಿಸಿದ್ದಾರೆ. ನಮ್ಮ ಮಹಿಳಾ ತಂಡ, ಇಂಗ್ಲೆಂಡ್ನಲ್ಲಿ ನಡೆದ ವರ್ಲ್ಡ್ಕಪ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಎರಡನೇ ಸ್ಥಾನ ಗಳಿಸಿತು. ನಮ್ಮ ಹುಡುಗಿಯರು ಹಾಕಿಯಲ್ಲಿ ಏಷ್ಯಾಕಪ್ ಎತ್ತಿ ಹಿಡಿದರು. ಈ ಯಶಸ್ಸಿನ ಕಥನಗಳು ಕ್ರೀಡೆಯತ್ತ ಹೆಣ್ಣು ಮಕ್ಕಳು ತಿರುಗಿ ನೋಡುವಂತೆ ಮಾಡಿದೆ. ಇದೀಗ ಅಮೆರಿಕದ ಅನಾಹೀಮ್ನಲ್ಲಿ ನಡೆದ ವಿಶ್ವವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಣಿಪುರದ ಹುಡುಗಿ ಸೈಕೋಮ್ ಮೀರಾಬಾಯಿ ಚಾನು(23) ಬಂಗಾರದ ಸಾಧನೆ ಮಾಡಿದ್ದಾರೆ. ಕಳೆದ 22 ವರ್ಷಗಳಿಂದ ವಿಶ್ವವೇಟ್ಲಿಫ್ಟಿಂಗ್ನಲ್ಲಿ ಭಾರತದ ಪದಕದ ಬರವನ್ನು ಅವರು ನೀಗಿದ್ದಾರೆ. 1994, 1995ರಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಚಿನ್ನ ಗೆದ್ದಿದ್ದರು. 96ರಲ್ಲಿ ಕಂಚು ಗಳಿಸಿದ್ದರು. ಸ್ನ್ಯಾಚ್ನಲ್ಲಿ 85 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ನಲ್ಲಿ 109 ಕೆಜಿ ಒಟ್ಟು 194 ಕೆಜಿ ಭಾರ ಎತ್ತಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೇವಲ ಒಂದು ಕೆಜಿ ಅಂತರದಲ್ಲಿ ಹಿಂದೆ ಬಿದ್ದ ಥಾಯ್ಲೆಂಡಿನ ಸುಕ್ಚಾರೋನ್ ತುನ್ಯ ಬೆಳ್ಳಿ ಗಳಿಸಿದರು.
ಎರಡು ದಶಕಗಳ ನಂತರ ಚಿನ್ನ ಗೆದ್ದಿದ್ದು ದೊಡ್ಡ ವಿಕ್ರಮ ಎಂಬುದು ನಿಜ. ಆದರೆ ಚಾನು ಅವರ ಈ ಆಟದ ನೈತಿಕತೆಗೂ ಭೀಮ ಬಲವನ್ನು ತಂದುಕೊಟ್ಟಿದ್ದಾರೆ. ಏಕೆಂದರೆ ಉದ್ದೀಪನ ಮದ್ದು ಸೇವನೆಯ ದೊಡ್ಡ ಕಳಂಕಕ್ಕೆ ಭಾರ ಎತ್ತುವ ಪಟುಗಳು ಗುರಿಯಾಗಿದ್ದರು. ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಒಟ್ಟು 791 ಆಟಗಾರರ ಪೈಕಿ 192 ಮಂದಿ ಭಾರ ಎತ್ತುವ ಪಟುಗಳೇ ಇದ್ದರು. ಚೀನಾ ಮತ್ತು ಟರ್ಕಿ ಸೇರಿದಂತೆ 9 ದೇಶದ ಪಟುಗಳನ್ನು ಈ ಚಾಂಪಿಯನ್ಶಿಪ್ನಿಂದ ಹೊರಗಿಡಲಾಗಿತ್ತು. ಈ ದೇಶಗಳ ಘಟಾನುಘಟಿ ಸ್ಪರ್ಧಿಗಳು ಉದ್ದೀಪನಾ ಮದ್ದು ಸೇವನೆಯಲ್ಲಿ ಸಿಕ್ಕು ಬಿದ್ದಿದರಿಂದ ಅಂತಾರಾಷ್ಟ್ರೀಯ ಭಾರ ಎತ್ತುವ ಒಕ್ಕೂಟ ಇವರ ಮೇಲೆ ನಿಷೇಧ ಹೇರಿತ್ತು.
ಇಂಥ ವಿಷಮ ಸನ್ನಿವೇಶದಲ್ಲಿ ಚಾನು ಅವರ ಸಾಧನೆ ದೊಡ್ಡ ನೈತಿಕ ಸ್ಥೈರ್ಯವನ್ನು ಆಟಕ್ಕೆ ತಂದುಕೊಟ್ಟಿದೆ. ರಿಯೋ ಒಲಿಂಪಿಕ್ಸ್ನಲ್ಲಿ ಅವರು ಕಳಾಹೀನ ಪ್ರದರ್ಶನ ನೀಡಿದ್ದರು. ಈ ಸೋಲು, ಅವಮಾನದ ಹೊರೆಗಳು ಎಷ್ಟು ತೀವ್ರವಾಗಿರುತ್ತದೆಯೆಂದರೆ ಅವುಗಳನ್ನು ಇಳಿಸಿ ಬಾರ್ಬೆಲ್ ಅನ್ನು ಮೇಲೆತ್ತುವುದಕ್ಕೆ ದೊಡ್ಡ ಮಟ್ಟದ ಚಲ, ಬಲ ಬೇಕಾಗುತ್ತದೆ. ಅಪಾರ ಪರಿಶ್ರಮ, ಕಠಿಣ ತರಬೇತಿಯಿಂದ ಅವರು ಈ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಮೀರಾಬಾಯಿ ಸಾಧನೆಯ ಹಾದಿಯನ್ನು ಗಮನಿಸಿದರೆ ಅದೊಂದು ಹಾವು ಏಟಿಯಾಟದಂತೆ ಕಾಣುತ್ತದೆ. 2014ರಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಅವರು 11ನೇ ಸ್ಥಾನ ಗಳಿಸಿದ್ದರು. ಮೂರು ವರ್ಷಗಳಲ್ಲಿ ಅವರು ಒಂದನೇ ಸ್ಥಾನಕ್ಕೆ ಬಂದಿದ್ದಾರೆ.
ಕಳೆದ ವರ್ಷ ಆಸೀಸ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ನಲ್ಲಿ ಅವರು ಒಟ್ಟು 189 ಕೆಜಿ ಎತ್ತಿ ಚಿನ್ನ ಗೆಲ್ಲುವುದರ ಮೂಲಕ ಜಯದ ಹಾದಿಗೆ ಮರಳಿದ್ದರು. ರಿಯೋ ದುಃಸ್ವಪ್ನ ಮರೆಯಾಗತೊಡಗಿತ್ತು. ಭಾರ ಎತ್ತುವ ಸ್ಪರ್ಧೆಗಳು ಮೇಲ್ನೋಟಕ್ಕೆ ಸಾದಾ ಸೀದಾ ಎಂದೆನಿಸುತ್ತದೆ. ಬಲವಿದ್ದವರಿಗೆ ಗೆಲುವು ಎಂಬುದೇ ಇಲ್ಲಿನ ಮೂಲ ತತ್ವ. ಇದು ನಿಜ. ಆದರೆ ತಾಂತ್ರಿಕ ಕ್ಷಮತೆ ಕೂಡ ನಿರ್ಣಾಯಕವಾಗಿರುತ್ತದೆ. ತಮ್ಮ ದೇಹ ತೂಕಕ್ಕಿಂತ ದುಪ್ಪಟ್ಟಾಗಿರುವ ಬಾರ್ಬೆಲ್ ಅನ್ನು ಎತ್ತಿ ಹಿಡಿದುಕೊಳ್ಳುವಾಗ ಕೊಂಚ ಅಲುಗಾಟ, ವಾಲಾಟ, ಜಾರು, ಅಳಕು ಕೂಡ ನಿಷ್ಫಲ ಎಂದೆನಿಸಿಕೊಳ್ಳುತ್ತದೆ. ದೇಹದ ಶಾಖ, ಬಲವನ್ನು ಒಮ್ಮೆಲೆ ಒಗ್ಗೂಡಿಸಿಕೊಂಡು ಭಾರವನ್ನು ಮೇಲಕ್ಕೆ ಎತ್ತಬೇಕಾಗುತ್ತದೆ. ಇದಲ್ಲದೆ ಊಟ ತಿಂಡಿಯ ಮೇಲೆ ನಿರಂತರವಾಗಿ ನಿಗಾ ಇಡಬೇಕಾಗುತ್ತದೆ. ದೇಹ ತೂಕ ಇಳಿದರೆ ಬೇರೆ ತೂಕ ವಿಭಾಗಕ್ಕೆ ಹೋಗಬೇಕಾಗುತ್ತದೆ. ಹೀಗೆ ತಾಂತ್ರಿಕ ಮತ್ತು ಜೈವಿಕ ಕ್ಷಮತೆ ಎರಡನ್ನೂ ಕಾಯ್ದುಕೊಳ್ಳಬೇಕು. ತಾಂತ್ರಿಕ ಕ್ಷಮತೆಯಲ್ಲಿ ಕೊಂಚ ದುರ್ಬಲವಾಗಿದ್ದ ಚಾನು ಈ ಕೂಟದಲ್ಲಿ ಫರ್ಫೆಕ್ಷನ್ ತೋರಿದರು.
ಇಂಫಾಲದಿಂದ 200 ಕಿ.ಮೀ ದೂರದ ನಬಾಕೋಸಿಂಗ್ ಎಂಬ ಕುಗ್ರಾಮದ ಹುಡುಗಿ ಚಾನು. ಚಿಕ್ಕಂದಿನಲ್ಲೇ ತೂಕ ಎತ್ತುವ ಪೋಟಿಗಿಳಿಯುತ್ತಿದ್ದಳು. 14ನೇ ವರ್ಷಕ್ಕೆ ತನ್ನ ದಿಕ್ಕು -ದಾರಿ ಈ ಕ್ರೀಡೆಯಲ್ಲೇ ಎಂಬುದು ನಿಕ್ಕಿ ಮಾಡಿಕೊಂಡಳು. ಆನಂತರ ಅವರ ರಾಷ್ಟ್ರೀಯ ತರಬೇತಿ ಶಿಬಿರಗಳೇ ಆಕೆಯ ಶಾಲೆಯಾಯ್ತು.
ಕರ್ಣಂ ಮಲ್ಲೇಶ್ವರಿ ಅವರು 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದರು. ಇದಕ್ಕೂ ಹಿಂದೆ 90ರ ದಶಕದಲ್ಲಿ ಈ ಆಟ ಹೆಚ್ಚು ಮಹಿಳೆಯರ ಗಮನವನ್ನು ಸೆಳೆದಿರಲಿಲ್ಲ. ಮಲ್ಲೇಶ್ವರಿ ಅವರು ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನ, ಎರಡು ಕಂಚು ಹಾಗೂ ಕುಂಜುರಾಣಿ ದೇವಿ (ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 7 ಬಾರಿ ಬೆಳ್ಳಿ ಪದಕ ವಿಜೇತೆ)ಯರ ಸಾಧನೆಗಳಿಂದ ಈಗ ಹೆಚ್ಚು ಹೆಚ್ಚು ಮಹಿಳೆಯರ ತಮ್ಮ ತೋಳ್ಬಲವನ್ನು ತೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್ ಅವರು ಮೀರಾ ಅವರನ್ನು ಅಭಿನಂದಿಸಿದ್ದಾರೆ. ಕ್ರೀಡೆಯ ಖ್ಯಾತನಾಮರು ಆಕೆಯ ಚಲವನ್ನು ಕೊಂಡಾಡಿದ್ದಾರೆ. ಕಂಪನಿಯೊಂದು 8 ಲಕ್ಷ ರೂ ಕಾರನ್ನು ಉಡುಗೊರೆಯಾಗಿ ನೀಡಿದೆ. ತನ್ನ ಗುರಿ ಹಾಗೂ ಹಾದಿ ಟೋಕಿಯೊ ಒಲಿಂಪಿಕ್ಸ್ ಎನ್ನುತ್ತಾರೆ ಚಾನು.
.................
ಚಿನ್ನದ ಕಾಣಿಕೆ
22 ವರ್ಷಗಳ ಪದಕದ ಬರವನ್ನು ನೀಗಿಸಿದ ಚಾನು, ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ತೆರಳುವಾಗ ಸೋದರಿ ಶ್ರೇಯಾ ಮದುವೆ ಇತ್ತು. '' ನ. 22ಕ್ಕೆ ಲಗ್ನ ಗೊತ್ತಾಗಿತ್ತು. ಆರೆ 12ಕ್ಕೇ ನಾನು ಕ್ಯಾಲಿಫೋರ್ನಿಯಾದಲ್ಲಿದ್ದೆ. ಕಳೆದ ವರ್ಷ ರಿಯೋದಲ್ಲಿ ಆದ ಪರಾಭವದ ನೆನಪು ಪದೇಪದೆ ಕಾಡುತ್ತಿತ್ತು. ಅದರಿಂದ ಹೊರ ಬರಬೇಕಾದರೆ ನನಗೊಂದು ದೊಡ್ಡ ಗೆಲುವು ಅನಿವಾರ್ಯವಾಗಿತ್ತು. ಮದುವೆಗೆ ಇರೋಲ್ಲ. ಅಮೆರಿಕಕ್ಕೆ ಹೊರಟೆ ಎಂದಾಗ ಮನೆಯಲ್ಲಿದ್ದವರೆಲ್ಲ ಕೋಪಿಸಿಕೊಂಡರು. ಆದರೆ ಪದಕದೊಂದಿಗೆ ಮರಳುವೆ. ನನ್ನ ತಂಗಿಗೆ ಚಿನ್ನದ ಕಾಣಿಕೆ ಕೊಡುವೆ ಎಂದು ಹೇಳಿದೆ. ನನ್ನ ನುಡಿ ಸುಳ್ಳಾಗಲಿಲ್ಲ. ನಿನ್ನನ್ನು ಸನ್ಮಾನಿಸಲು ಇಡೀ ಹಳ್ಳಿ ಕಾಯುತ್ತಿದೆ ಎಂದು ಅಮ್ಮ ಹೇಳಿದಾಗ ಜೀವನ ಸಾರ್ಥಕ ಎಂದೆನಿಸಿತು,''