ಮಾಯಾ ಲಾಂದ್ರ: ಕನಕನ ಕಿಂಡಿಯಿಂದ ಈ ಲೋಕವ ನೋಡಿದಾಗ..
''ಲೈಕ್ ಮತ್ತು ಲವ್ ನಡುವಿನ ವ್ಯತ್ಯಾಸವೇನು?'' ಮೊನ್ನೆ ಗುಂಪಿನಲ್ಲಿ ಗೆಳೆಯನೊಬ್ಬ ಪ್ರಶ್ನಿಸುತ್ತಿದ್ದ ತಲೆಗೊಂದರಂತೆ ಉತ್ತರಗಳು ಬಂದವು...
ಮಾಯಾ ಲಾಂದ್ರ: ರಾಘವೇಂದ್ರ ಜೋಶಿ
''ಲೈಕ್ ಮತ್ತು ಲವ್ ನಡುವಿನ ವ್ಯತ್ಯಾಸವೇನು?''
ಮೊನ್ನೆ ಗುಂಪಿನಲ್ಲಿ ಗೆಳೆಯನೊಬ್ಬ ಪ್ರಶ್ನಿಸುತ್ತಿದ್ದ. ತಲೆಗೊಂದರಂತೆ ಉತ್ತರಗಳು ಬಂದವು. ಎಷ್ಟು ನಿಜವೋ ಗೊತ್ತಿಲ್ಲ, ಇದೇ ಪ್ರಶ್ನೆಯನ್ನು ಭಕ್ತನೊಬ್ಬ ಉದ್ಯಾನವನದಲ್ಲಿ ತಿರುಗಾಡುತ್ತಿದ್ದ ಬುದ್ಧನಿಗೂ ಕೇಳಿದ್ದನಂತೆ. ಹಸನ್ಮುಖಿ ಬುದ್ಧ ಎದುರಿಗಿದ್ದ ಹೂವನ್ನು ತೋರಿಸುತ್ತ, ''ಈ ಹೂವು ನೋಡು, ಎಷ್ಟು ಮುದ್ದಾಗಿದೆ. ಇದು ನಿನಗೆ ಲೈಕಾದರೆ ಕಿತ್ತಿಟ್ಟುಕೊಳ್ತೀಯ. ಲವ್ವಾದರೆ ಪ್ರತಿದಿನ ಅದಕ್ಕೆ ನೀರು ಹಾಕ್ತೀಯ..'' ಅಂತ ಎರಡು ವಾಕ್ಯಗಳಲ್ಲಿ ಮಾತು ಮುಗಿಸಿದನಂತೆ.
ಇದೇ ಥರ ಈ ಲೋಕದಲ್ಲಿ ಎಲ್ಲವೂ ಎರಡು ಮಾತುಗಳಲ್ಲಿ ಮುಗಿಯುವಂತಿದ್ದರೆ ಎಷ್ಟು ಚೆಂದಿತ್ತು ಅಂತ ಅಂದುಕೊಳ್ಳುತ್ತಿರುತ್ತೇನೆ. ಆದರೆ ಅನೇಕ ಸಂದರ್ಭಗಳಲ್ಲಿ ಎಲ್ಲವನ್ನೂ ಬ್ಲಾಕ್ ಅಂಡ್ ವೈಟ್ನಲ್ಲಿ ವಿವರಿಸಲು ಸಾಧ್ಯವಾಗುವದಿಲ್ಲ. ಮೊನ್ನೆ ಒಂದಿಷ್ಟು ಸ್ನೇಹಿತರು ಮತ್ತು ಪ್ರಗತಿಪರರು ಸೇರಿಕೊಂಡು 'ಉಡುಪಿ ಚಲೋ' ಅಂತನ್ನುವ ಚಳುವಳಿಯನ್ನು ಉಡುಪಿಯಲ್ಲಿ ಸಂಘಟಿಸಿದರಷ್ಟೇ. ಅದು ಆಹಾರದ ಆಯ್ಕೆ ಮತ್ತು ಭೂಮಿಯ ಹಕ್ಕಿಗಾಗಿ ಒತ್ತಾಯ ಮಾಡುವಂಥ ಚಳುವಳಿ. ಹಸಿವು ಅಂತನ್ನುವದು ಜಗತ್ತಿನ ನಿತ್ಯ ಸಮಸ್ಯೆಯಾದರೆ, ಆಹಾರ ಅದಕ್ಕಿರುವ ಏಕೈಕ ಪರಿಹಾರ. ಹೀಗಿರುವಾಗ ಆಹಾರ ಅನ್ನುವದೆಲ್ಲ ಆಯಾ ಮನುಷ್ಯನ ವೈಯಕ್ತಿಕ ಆಯ್ಕೆಯಾಗಿರಬೇಕೇ ಹೊರತು ಅದನ್ನು ಇನ್ಯಾರೋ ನಿರ್ದೇಶಿಸುವದು ತಪ್ಪಾಗುತ್ತದೆ. ಅದರಲ್ಲೂ ಈ ವೈಯಕ್ತಿಕ ಆಯ್ಕೆ ಅನ್ನುವದೆಲ್ಲ ಆಯಾ ಮನುಷ್ಯನ ದೈಹಿಕ ಮತ್ತು ಮಾನಸಿಕ ದೃಢತೆ, ಆಯಾ ಪ್ರದೇಶದ ಹವಾಗುಣ ಮತ್ತು ಆಯಾ ಪ್ರದೇಶದ ಆಹಾರದ ಲಭ್ಯತೆಗಳ ಮೇಲೆ ನಿಂತಿರುವಂಥದ್ದು. ಇನ್ನು ಭೂಮಿ ಅನ್ನುವದೆಲ್ಲ ಮನುಷ್ಯನ ಮೂಲಭೂತ ಅವಶ್ಯಕತೆಯಾಗಿರುವ ವಸತಿ ಮತ್ತು ಕೃಷಿಗೆ ನೇರವಾಗಿ ಸಂಬಂಧಿಸಿರುವಂಥದ್ದು.
ಹೀಗಿರುವಾಗ ಒಂದಿಷ್ಟು ಜನ ತಮ್ಮ ಆಹಾರ ಮತ್ತು ಭೂಮಿಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಭೆ ಏರ್ಪಡಿಸಿದರೆ ಅದನ್ನುಸ್ವಾಗತಿಸುವದು ಮಾನವೀಯ ಘನತೆಯ ನೆಲೆಯಲ್ಲಿ ಒಪ್ಪುವಂಥದ್ದೇ. ಒಂದು ಸಂತುಲಿತ ನಾಗರಿಕ ಸಮಾಜ ನಿರ್ಮಾಣವಾಗುವ ಹಂತಗಳ ಪೈಕಿ ಇದೂ ಒಂದು. ಆದರೆ ಒಮ್ಮೊಮ್ಮೆ ಚಳುವಳಿಗಳು ಇದ್ದಕ್ಕಿದ್ದಂತೆ ದಿಕ್ಕುತಪ್ಪಿಸಿಕೊಳ್ಳುತ್ತವೆ. ಮೂಲ ಉದ್ದೇಶ ಮರೆತುಹೋಗಿ ಇನ್ಯಾವುದೋ ತರ್ಕ ಹುಟ್ಟಿಕೊಳ್ಳುತ್ತದೆ. ಆ ತರ್ಕವೇ ಚಳುವಳಿಯ ಉದ್ದೇಶದ ಮೇಲೆ ಸವಾರಿ ಮಾಡತೊಡಗುತ್ತದೆ. ಮೊನ್ನೆ ಆಗಿದ್ದೂ ಇದೇ. ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಇದ್ದಕ್ಕಿದ್ದಂತೆಯೇ ಕೃಷ್ಣಮಠದ ಪಂಕ್ತಿಭೋಜನದ ಬಗ್ಗೆ ತಕರಾರು ಎತ್ತಲಾಯಿತು. ಬ್ರಾಹ್ಮಣ, ದಲಿತ ಎನ್ನುವ ಭೇದಭಾವ ಎಣಿಸದೇ ಎಲ್ಲರನ್ನೂ ಸಮಾನಪಂಕ್ತಿಯಲ್ಲಿ ಕೂರಿಸಬೇಕು, ಇದು ಎರಡುತಿಂಗಳೊಳಗೆ ನಡೆಯುವಂತಾಗಬೇಕು, ಇಲ್ಲದಿದ್ದಲ್ಲಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕಲಾಗುತ್ತದೆ ಅಂತನ್ನುವ ಘೋಷಣೆಯಾಯಿತು.
ಇದೊಂದು ಕಿಡಿ ಸಾಕಿತ್ತು. ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ವಾದವಿವಾದ ಶುರುವಾಯಿತು. ಯಾರೋ ದಲಿತರನ್ನುಟೀಕಿಸಿದರು. ಇನ್ಯಾರೋ ಬ್ರಾಹ್ಮಣರನ್ನು ಹೀಯಾಳಿಸಿದರು. ಇನ್ನೊಂದಿಷ್ಟು ಜನ ಕೃಷ್ಣಮಠದ ಪೇಜಾವರರನ್ನು ಟ್ರೋಲ್ ಮಾಡಿದರು. ಅಂತರ್ಜಾಲವನ್ನು ನಿರ್ವಹಿಸುವಷ್ಟು 'ಸುಶಿಕ್ಷಿತ'ವಾಗಿರುವ ಮನುಷ್ಯರು ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೇ ಅಂತ ಗುಮಾನಿಸುವಷ್ಟು ಈ ಎಲ್ಲ ಹೀಯಾಳಿಕೆಗಳು ಅಸಂಬದ್ಧ ಮತ್ತು ಅಸಮಂಜಸವಾಗಿದ್ದವು.
ಎಷ್ಟು ವಿರೋಧಾಭಾಸ ನೋಡಿ. ಒಂದೆಡೆ, ಭಗವಂತನೆಂಬುವನು ಯಾವತ್ತೂ ಭಕ್ತನ ಜಾತಿಯನ್ನು ಗಮನಿಸಿ ತನ್ನ ಕರುಣೆಯನ್ನುದಯಪಾಲಿಸುವದಿಲ್ಲ ಅನ್ನುವಂಥ ಮಹಾನ್ ತತ್ವವನ್ನು ಸಾರಲೆಂದೇ ಕನಕನ ಕಿಂಡಿಯನ್ನು ಸೃಷ್ಟಿಸಿದೆವು. ಅದಕ್ಕೆ ತದ್ವಿರುದ್ಧವಾಗಿ ಇನ್ನೊಂದೆಡೆ ಪಂಕ್ತಿಭೇದಭಾವ ಅನುಕರಿಸಿದೆವು. ಅದೇಥರ ಒಂದೆಡೆ, ಅಂಬೇಡ್ಕರ್ ವಿಚಾರಧಾರೆಗಳ ಕೋಟ್ಗಳನ್ನು ಎಲ್ಲೆಂದರಲ್ಲಿ ಪುಂಖಾನುಪುಂಖವಾಗಿ ಬರೆದುಕೊಂಡೆವು. ಇನ್ನೊಂದೆಡೆ, ಸ್ವಾಭಿಮಾನವನ್ನೂ ಬದಿಗೊತ್ತಿ ಸಹಪಂಕ್ತಿ ಭೋಜನಕ್ಕಾಗಿ ಹಾತೊರೆದೆವು. ಇಲ್ಲಿ ಯಾವುದು ಪ್ರಸ್ತುತ? ಯಾವುದು ಅಪ್ರಸ್ತುತ? ಬ್ರಾಹ್ಮಣನಲ್ಲದಿದ್ದರೂ ಕೇವಲ ಶುದ್ಧಭಕ್ತಿಯಿಂದ ತನ್ನೆಡೆಗೆ ಮುಖತಿರುಗಿಸುವಂತೆ ಮಾಡಿದ ಕನಕನ ಆತ್ಮವಿಶ್ವಾಸ ನಮಗೆ ಯಾವತ್ತೂ ಪ್ರಸ್ತುತವಾಗಬೇಕು. ಅದೇ ರೀತಿ, ಗೌರವವಿಲ್ಲದ ಜಾಗದ ಧೂಳು ಕೂಡ ತುಳಿಯಲಾರೆ ಅಂದ ಅಂಬೇಡ್ಕರ್ ಸ್ವಾಭಿಮಾನ ಕೂಡ.
ಇಷ್ಟಕ್ಕೂ ಸಾಮಾಜಿಕ ಜಾಲತಾಣಗಳಲ್ಲಿನ ಇಂಥ ತಿಕ್ಕಾಟಗಳ ಬಗ್ಗೆ ನನಗೆ ಸ್ಪಷ್ಟ ತಿರಸ್ಕಾರವಿದೆ. ಅಗೋಚರ ಭಗವಂತನ ಬಗ್ಗೆ ಮತ್ತು ಗೋಚರವಾಗುವ ಚಳುವಳಿಗಳ ಬಗ್ಗೆ ನನ್ನ ನಿಲುವು ಬೇರೆಯಿದೆ. ಪ್ರೈಮರಿಯಲ್ಲಿ ದೇವರನ್ನು ಅರ್ಧ ಭಯ ಇನ್ನರ್ಧ ಭಕ್ತಿಯಿಂದ ಪೂಜಿಸುತ್ತಿದ್ದ ನಾನು ಹೈಸ್ಕೂಲಿಗೆ ಬರುತ್ತಲೇ ಪೂಜೆ ನಿಲ್ಲಿಸಿದ್ದೆ. ಕಾಲೇಜಿಗೆ ಬಂದಾಗ 'ಭೂಮಿತಾಯಾಣೆ ನೀ ಇಷ್ಟ ಕಣೇ..' ಅನ್ನುತ್ತ ಭಗವಂತನ ಅಸ್ತಿತ್ವವನ್ನೇ ಧಿಕ್ಕರಿಸತೊಡಗಿದೆ. ಆಮೇಲಾಮೇಲೆ ಬೆಂಗಳೂರಿಗೆ ಬಂದ ಮೇಲೆ ವೆಂಗಾ ಬಾಯ್ಸ…, ಶಕೀರಾ, ಈಗಲ್ಸ್ ತಂಡದ ಹಾಡುಗಳು 'ಹಲೋ' ಹೇಳಿದವು. ಈಗ ಎಲ್ಲವನ್ನೂ, ಎಲ್ಲರನ್ನೂ ಒಪ್ಪಿಕೊಂಡಿದ್ದೇನೆ. ಒಂದರ್ಥದಲ್ಲಿ ವೃಂದಾವನದಲ್ಲಿ ನಿಂತುಕೊಂಡು, ''ಮಾಯ್ ಹಾರ್ಟ್ ಗೋಸ್ ಶಲಲಲಾ..'' ಅಂತ ವೆಂಗಾಬಾಯ್ಸ್ ಹಾಡನ್ನೂ ಭಕ್ತಿಯಿಂದ ಹಾಡಿದರೂ ರಾಯರು ಕರುಣಿಸುತ್ತಾರೆ ಎಂಬಲ್ಲಿಗೆ ಬಂದು ನಿಂತಿದ್ದೇನೆ!
ಹೀಗಿರುವಾಗ 'ಉಡುಪಿ ಚಲೋ'ದಂಥ ಚಳುವಳಿಗಳು ತಮ್ಮ ಪ್ರಿಯಾರಿಟಿಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸಬೇಕಿದೆ. ಯಾಕೆಂದರೆ ಸಾಮಾಜಿಕ ತಾಣಗಳಲ್ಲಿನ ಜಗಳಗಳು ಎಲ್ಲರನ್ನೂ ದಾರಿತಪ್ಪಿಸಬಲ್ಲವು. ಎಲ್ಲಕ್ಕಿಂತ ಹೆಚ್ಚಾಗಿ, ಸಮಾಜದ ಎಲ್ಲ ಜನರೂ ಇಂಥ ಅಭಿಯಾನಗಳನ್ನು ಸ್ವಾಗತಿಸಬೇಕು ಅಂದುಕೊಳ್ಳುತ್ತಿರುವಾಗ ಈ ವ್ಯಂಗ್ಯ-ಕುಹಕಗಳು ಅವರೆಲ್ಲರನ್ನೂ ಹಿಂಜರಿಯುವಂತೆ ಮಾಡಬಲ್ಲವು. ಹೆಸರಿಗೇನೋ ನಮ್ಮದು ಜಾತ್ಯತೀತ ರಾಷ್ಟ್ರ . ಆದರೆ ಅದು ಎಂಥ ಸುಳ್ಳು ಅಂತ ಎಲ್ಲರಿಗೂ ಗೊತ್ತಿದೆ. ಹೀಗಿದ್ದಾಗ, ಬರುವ ಸೆಕೆಂಡ್ ಸ್ಯಾಟರ್ ಡೇ ಒಳಗಾಗಿ ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಅಂತ ಹೊರಡುವದು ಅವಸರದ ನಡೆಯಾಗುತ್ತದೆ. ಇಲ್ಲಿ ಎಲ್ಲದಕ್ಕೂ ಅದರದ್ದೇ ಆದ ಒಂದು ಸೂತ್ರವಿದೆ. ಅದು ಕಾಲದ್ದು. ಹಿಂದೊಮ್ಮೆ ಅಂಗವೈಕಲ್ಯತೆಯನ್ನು ಬಣ್ಣಿಸುವದರ ಬಗ್ಗೆ ಇಂಗ್ಲೀಷ್ನಲ್ಲೊಂದು ಪ್ರಯೋಗ ನಡೆಯಿತು. ಮೊದಲಿಗೆ ಅಂಗವೈಕಲ್ಯ ಹೊಂದಿದವರನು ha್ಞdಜ್ಚಿappಛಿd ಅಂತಲೇ ಸಂಬೋಧಿಸುತ್ತಿದ್ದರು. ಬರಬರುತ್ತ ಆ ಪದ dಜಿsaಚ್ಝಿಛಿd ಅಂತಾಗಿ ಮುಂದೊಮ್ಮೆ ಅದು ್ಚha್ಝ್ಝಛ್ಞಿಜಛಿd ಎನ್ನುವಲ್ಲಿಗೆ ಬಂದು ನಿಂತಿತು. ಇಂಥದೊಂದು ಪದಪಲ್ಲಟ ಏಕಾಏಕಿ ಆಗಿದ್ದಲ್ಲ. ಅದರ ಹಿಂದೆ ಸಂವೇದನಗಳ ಮಿಡಿತವಿರುತ್ತದೆ ಮತ್ತು ಅದು ಸಮಯ ಬೇಡುತ್ತದೆ. ಮೂರ್ನಾಲ್ಕು ದಶಕಗಳ ಹಿಂದೆ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯುವಾಗಲೂ ತನ್ನ ಕೊಡಪಾನ ಮತ್ತು ತಾನು ನಿಂತಿದ್ದ ಜಾಗಕ್ಕೆ ಪ್ರೋಕ್ಷ ಣೆ ಮಾಡಿಯೇ ನೀರು ಹಿಡಿಯುತ್ತಿದ್ದ ನನ್ನಮ್ಮ, ಇವತ್ತು ಮನೆಗೆ ಬಂದವರ್ಯಾರಿಗೂ ಜಾತಿ ಕೇಳಿ ಊಟ ಬಡಿಸುವದಿಲ್ಲ. ಈ ಬದಲಾವಣೆ ಇದ್ದಕ್ಕಿದ್ದಂತೆ ಆಗಿದ್ದಲ್ಲ ಅಂತ ಮಾತ್ರ ಹೇಳಬಲ್ಲೆ.
ಇದೆಲ್ಲದರ ಮಧ್ಯೆ ಒಂದು ಸಿನೆಮಾ ಬಗ್ಗೆ ಹೇಳಬೇಕೆನಿಸಿದೆ. ಈ ಚಿತ್ರದ ನಾಯಕಿ ಬಡವಿ ಮತ್ತು ನಿರ್ಗತಿಕಳು. ಎಲ್ಲ ಅಪಸವ್ಯಗಳ ನಡುವೆಯೂ ಆಕೆ ತನ್ನ ವಿದ್ಯಾಭ್ಯಾಸ ಮುಗಿಸಿ ಖಗೋಳಶಾಸ್ತ್ರವನ್ನು ಅಭ್ಯಸಿಸುವ ಖ್ಯಾತ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಭೂಮಿಯಿಂದ ದೂರವಿರುವ ಗ್ರಹಗಳಲ್ಲಿ ಜೀವರಾಶಿ ಇದೆಯೇ ಅಂತ ಪ್ರಯೋಗ ನಡೆಸುತ್ತಿರುವ ತಂಡದಲ್ಲಿ ಈಕೆ ಕೆಲಸಕ್ಕಿದ್ದಾಳೆ. ಪ್ರತಿದಿನ ಯಾವುದ್ಯಾವುದೋ ಮೆಸೇಜುಗಳನ್ನು ಸಂಕೇತಗಳಲ್ಲಿ ತನ್ನ ಟ್ರಾನ್ಸ್ಮೀಟರ್ನಿಂದ ಹರಿಬಿಡುವದು, ಅದು ಯಾವುದಾದರೂ ಗ್ರಹಕ್ಕೆ ತಲುಪಿ ಅಲ್ಲಿಂದ ಏನಾದರೂ ಉತ್ತರ ಬರುತ್ತದಾ ಅಂತ ಪರೀಕ್ಷಿಸುವದು ಆಕೆಯ ಕೆಲಸ. ಹೀಗಿರುವಾಗ ಯಾವುದೋ ಒಂದುರಾತ್ರಿ ಇದ್ದಕ್ಕಿದ್ದಂತೆ ನಮ್ಮ ಹೀರೋಯಿನ್ ಕೆಲಸ ಮಾಡುತ್ತಿದ್ದ ರೇಡಿಯೋ ಟೆಲಿಸ್ಕೊಪ್ ಸದ್ದು ಮಾಡತೊಡಗುತ್ತದೆ. ಹೀರೋಯಿನ್ಗೆ ರೋಮಾಂಚನ. ದೂರದ ಯಾವುದೋ ಗ್ರಹದಿಂದ ಮೆಸೇಜ್ ಬಂದಂತಿದೆ. ಆದರೆ ಮೆಸೇಜು ಗೂಢವಾಗಿದೆ. ಅದು ಕೋಡಿಂಗ್ ಆಗಿರುವಂಥದ್ದು. ಅದನ್ನು ಡೀಕೋಡ್ ಮಾಡಬೇಕು. ಅದಕ್ಕಾಗಿ ಎಷ್ಟೋ ದಿನ ಶ್ರಮಿಸುತ್ತಾಳೆ. ಕೊನೆಗೊಂದು ದಿನ ಸಂಸ್ಥೆಯ ನೂರಾರು ಜನರೆದುರಿಗೆ ಅನ್ಯಗ್ರಹದಿಂದ ಬಂದಿರುವ ಮೆಸೇಜನ್ನು ಒಡೆಯುತ್ತಾಳೆ. ಅದೊಂದು ಧ್ವನಿ ರೂಪದ ಮೆಸೇಜ್. ಅದು ಇಷ್ಟರಲ್ಲೇ ಭೂಮಿಯಲ್ಲಿರುವ ಮನುಷ್ಯರನ್ನು ನಾಶಪಡಿಸುತ್ತೇವೆಂದು ಹೇಳುತ್ತಿದೆ!
ಸ್ಪೇಸ್ ಸೆಂಟರಿನಲ್ಲಿದ್ದ ವಿಜ್ಞಾನಿಗಳೆಲ್ಲ ಬೆಚ್ಚಿ ಬೀಳುತ್ತಾರೆ. ಇದು ಭೂಮಿಗೆ ಒದಗಿ ಬಂದಿರುವ ಸಂಕಟವೆಂದೇ ಭಾವಿಸುತ್ತಾರೆ. ದೇಶದ ಮಿಲಿಟರಿ, ಪ್ರಧಾನಿ ಎಲ್ಲರಿಗೂ ವಿಷಯ ಗೊತ್ತಾಗುತ್ತದೆ. ಇಡೀ ದೇಶ ತತ್ತರಿಸುತ್ತದೆ. ಕೊನೆಗೊಮ್ಮೆ ಇದೇ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ವೃದ್ಧನೊಬ್ಬ ಬಂದು ಆ ಸಂದೇಶವನ್ನು ಆಲಿಸುತ್ತ ಮುಗುಳ್ನಗುತ್ತಾನೆ. ಅಸಲಿಗೆ ಆಗಿದ್ದಿಷ್ಟು: ಈ ಸ್ಪೇಸ್ ಸೆಂಟರ್ ಅನಾದಿಕಾಲದಿಂದ ಅನೇಕ ಸಂದೇಶಗಳನ್ನು ಹಾರಿಬಿಡುತ್ತಿತ್ತು. ಒಮ್ಮೊಮ್ಮೆ ಒಳ್ಳೆಯ ಸಂದೇಶಗಳು, ಒಮ್ಮೊಮ್ಮೆ ಚಿತ್ರಗೀತೆಗಳು, ಒಮ್ಮೊಮ್ಮೆ ಫಿಲ್ಮೀ ಡೈಲಾಗುಗಳೂ ಸಂದೇಶಗಳಾಗಿ ಹಾರಿಹೋಗಿವೆ. ಹೀಗಿದ್ದಾಗ ಯಾವತ್ತೋ ಒಬ್ಬ ಆಸಾಮಿ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರ್ ಮಾಡಿದ್ದ ಯುದ್ಧದಾಹಿ ಭಾಷಣದ ತುಣುಕನ್ನೂ ರೆಕಾರ್ಡ್ ಮಾಡಿ ಅದನ್ನೊಂದು ಸಂದೇಶದಂತೆ ಹಾರಿಬಿಟ್ಟಿದ್ದಾನೆ. ಆ ಸಂದೇಶವೋ ವ್ಯೋಮದಲ್ಲಿ ಸಂಚರಿಸುತ್ತಾ ಯಾವುದೋ ಅನ್ಯಗ್ರಹಕ್ಕೆ ತಲುಪಿ, ಅಲ್ಲಿನವರು ಅದನ್ನು ತಮ್ಮದೇ ಕೋಡಿಂಗ್ ವಿಧಾನದಲ್ಲಿ ಸಂಸ್ಕರಿಸಿ ವಾಪಾಸು ಇಲ್ಲಿಗೆ ಕಳಿಸಿದ್ದಾರೆ. ಮತ್ತೀಗ ಅದನ್ನು ಕೇಳಿದ ಇವರೆಲ್ಲ ಬೆದರಿ ಕುಳಿತಿರುವ ಚಿತ್ರಣದೊಂದಿಗೆ ಈ ಸಿನೆಮಾ ಇನ್ನೇನೋ ಸುಖಾಂತ ತಲುಪುತ್ತದೆ.
ಅಮೇರಿಕಾದ ಖಗೋಳತಜ್ಞ ಕಾರ್ಲ್ ಸೇಗನ್ ಬರೆದ 'ಕಾಂಟ್ಯಾಕ್ಟ್' ಕಾದಂಬರಿಯಿಂದ ಹೆಣೆಯಲಾದ ಈ ಚಿತ್ರವನ್ನು ವರ್ತಮಾನಕ್ಕೆ ತಕ್ಕಂತೆ ರೂಪಾಂತರ ಮಾಡಿದ್ದೇನೆ. ಎಲ್ಲರೂ ಸುಖವಾಗಿರೋಣ ಅನ್ನುವ ಹಂಬಲವಿರುವ ನಾವು ಯಾವತ್ತೂ ಹಿಟ್ಲರನ ಭಾಷಣದ ತುಣುಕನ್ನು ನಮ್ಮ ಪಕ್ಕದವರಿಗೆ ರವಾನಿಸಕೂಡದು ಅನ್ನುವದರೊಂದಿಗೆ..