ಆ್ಯಪ್ನಗರ

ರೀವೈಂಡ್‌ 2018: ಮೀಟೂ ಏಟು, ರಫೇಲ್, ಅಯೋಧ್ಯೆ ಘಾಟು

ಸದ್ದು ಮಾಡಿದ ಸುದ್ದಿಗಳಿಗೆ 2018ಲ್ಲಿ ಬರ ಇರಲಿಲ್ಲ...

Vijaya Karnataka 27 Dec 2018, 9:33 am
ಸದ್ದು ಮಾಡಿದ ಸುದ್ದಿಗಳಿಗೆ ಈ ವರ್ಷ ಬರ ಇರಲಿಲ್ಲ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅಭಿವ್ಯಕ್ತಿಸುವ ಮಿ ಟೂ, ಅಯೋಧ್ಯೆ ವಿವಾದ, ಪತ್ರಕರ್ತ ಕಶೋಗಿ ಕೊಲೆ, ಸಿಬಿಐ, ಆರ್‌ಬಿಐ ರಗಳೆ, ಅಯ್ಯಪ್ಪ ದೇಗುಲ ಪ್ರವೇಶ, ಡೊನಾಲ್ಡ್‌ ಟ್ರಂಪ್‌, ಮಹದಾಯಿ ಯೋಜನೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ... ಹೀಗೆ ಬಹಳಷ್ಟು ಸುದ್ದಿಗಳು ದೊಡ್ಡ ವ್ಯಾಪ್ತಿಯನ್ನು ಪಡೆದುಕೊಂಡವು, ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟವು. ಕೆಲವು ಸುದ್ದಿಗಳು ಪ್ರಭಾವಿಗಳ ತಲೆದಂಡಕ್ಕೆ ಕಾರಣವಾದರೆ, ಇನ್ನು ಕೆಲವು ಸದ್ದು ಮಾಡಿದ್ದಷ್ಟೇ ಬಂತು.
Vijaya Karnataka Web 2018 Rewind


ಎಲ್ಲೆಡೆ ಮಿ ಟೂನದ್ದೇ ಸದ್ದು

2018ರಲ್ಲಿ ಭಾರಿ ಸದ್ದು ಮಾಡಿದ ಸುದ್ದಿ ಇದು. ಬಾಲಿವುಡ್‌ನ ನಟಿ ತನುಶ್ರೀ ದತ್ತ ಅವರು ಖ್ಯಾತ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವ ಮೂಲಕ ಚರ್ಚೆಗೆ ದಾರಿ ಮಾಡಿಕೊಟ್ಟರು. ಆರೋಪ ಮಾಡಿದ ಕೆಲವೇ ದಿನದಲ್ಲಿ ಮಿ ಟೂ ಎಂಬ ಅಭಿಯಾನ ಇಡೀ ದೇಶವನ್ನು ಪಸರಿಸಿತು. ವಿಶೇಷವಾಗಿ ರಾಜಕಾರಣ, ಮನರಂಜನೆ ಮತ್ತು ಪತ್ರಿಕೋದ್ಯಮದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮಿ ಟೂ ಅಭಿಯಾನದಡಿ ಮಾಹಿತಿ ಹೊರಹಾಕಿದರು. ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿದ್ದ ಎಂ.ಜೆ.ಅಕ್ಬರ್‌ ವಿರುದ್ಧ 10ಕ್ಕೂ ಹೆಚ್ಚು ಪತ್ರಕರ್ತೆಯರು ಆರೋಪ ಮಾಡಿದರು. ಅಂತಿಮವಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜ್ಯದ ಪ್ರತಿಭಾವಂತ ನಟಿ ಶ್ರುತಿ ಹರಿಹರನ್‌ ಅವರು, ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಯಿತು.

ನಿಲ್ಲದ ಅಯೋಧ್ಯೆ ವಿವಾದ

100 ವರ್ಷಗಳ ಹಳೆಯ ಅಯೋಧ್ಯೆ ವಿವಾದ 2018ರಲ್ಲಿ ಬಗೆಹರಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸುಪ್ರಿಂ ಕೋರ್ಟ್‌ ವಿಚಾರಣೆಯನ್ನು 2019ರ ಜನವರಿಯಲ್ಲಿ ಆರಂಭಿಸುವುದಾಗಿ ಹೇಳಿತು. ಇದರಿಂದ ಕೆರಳಿದ ಹಿಂದೂಪರ ಸಂಘಟನೆಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಕೆಲಸಕ್ಕೆ ಮುಂದಾದವು. ಸುಗ್ರೀವಾಜ್ಞೆ ಮೂಲಕ ಇದೇ ವರ್ಷ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಲು ದೇಶಾದ್ಯಂತ ಜನಾಗ್ರಹ ಸಭೆಗಳನ್ನು ಕೈಗೊಳ್ಳಲಾಯಿತು. ಆದರೆ, ಕೇಂದ್ರ ಸರಕಾರ ಮಾತ್ರಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧವಾಗಿರುವುದಾಗಿ ಹೇಳುವ ಮೂಲಕ ಎಲ್ಲವನ್ನೂ ಅಲ್ಲಗಳೆಯಿತು.

ಸಿಬಿಐ, ಆರ್‌ಬಿಐ

ದೇಶದ ಪರಮೋನ್ನತ ತನಿಖಾ ಸಂಸ್ಥೆಯಾದ ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಅಕ್ಟೋಬರ್‌ನಲ್ಲಿ ಜಗಜ್ಜಾಹೀರಾಯಿತು. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ತಾನ ಮತ್ತು ನಿರ್ದೇಶಕ ಅಲೋಕ್‌ ವರ್ಮಾ ನಡುವಿನ ತಿಕ್ಕಾಟವೇ ಇದಕ್ಕೆ ಕಾರಣ. ಆಸ್ತಾನ ವಿರುದ್ಧ ಲಂಚದ ಆರೋಪ ಹೊರಿಸಿ, ದೂರು ನೀಡಲು ಅಲೋಕ್‌ ವರ್ಮಾ ಮುಂದಾದರು. ಆಗಸ್ಟ್‌ನಲ್ಲಿ ಅಲೋಕ್‌ ವಿರುದ್ಧ ಆಸ್ತಾನ ಅವರು ಸಂಪುಟ ಕಾರ್ಯದರ್ಶಿಗೆ ದೂರು ನೀಡಿದ್ದರು. ಇವರ ಜಗಳ ಇಡೀ ಸಂಸ್ಥೆಯ ಮರ್ಯಾದೆಯನ್ನು ಹರಾಜಿಗಿಟ್ಟಿತು. ಇನ್ನು ಆರ್‌ಬಿಐ ಮತ್ತು ಸರಕಾರದ ನಡುವಿನ ಗುದ್ದಾಟವೂ ಗಮನ ಸೆಳೆಯಿತು. ಮೀಸಲು ನಿಧಿಗೆ ಬೇಡಿಕೆ ಇಟ್ಟಿದ್ದ ಕೇಂದ್ರ ಸರಕಾರದ ವಿರುದ್ಧ ಮುನಿಸಿಕೊಂಡು, ವೈಯಕ್ತಿಕ ಕಾರಣ ನೀಡಿ ಗವರ್ನರ್‌ ಉರ್ಜಿತ್‌ ಪಟೇಲ್‌ ರಾಜಿನಾಮೆ ನೀಡಿದ್ದು ಭಾರಿ ಚರ್ಚೆಗೆ ಕಾರಣವಾಯಿತು.

ಶಬರಿಯರಿಗಿಲ್ಲ ಅಯ್ಯಪ್ಪ ದರ್ಶನ

ಸೆಪ್ಟೆಂಬರ್‌ನಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿತು. ಆದರೆ, ಈ ತೀರ್ಪಿನ ವಿರುದ್ಧ ಕೇರಳದಲ್ಲಿ ಭಾರಿ ವಿರೋಧವಾಯಿತು. ಹಿಂದೂಪರ ಸಂಘಟನೆಗಳು ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವುದನ್ನು ವಿರೋಧಿಸಿ ಪ್ರತಿಭಟಿಸಿದರು. ಆದೇಶದ ಹೊರತಾಗಿಯೂ ಇಂದಿಗೂ ಮಹಿಳೆಯರು ದೇಗುಲ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು.

'ಮೇಕೆದಾಟು'ವುದು ಯಾವಾಗ?

ತಮಿಳುನಾಡು-ಕರ್ನಾಟಕದ ಗಡಿಯ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಬೇಕೆಂಬುದು ರಾಜ್ಯದ ಬೇಡಿಕೆ. ಆದರೆ, ಇದಕ್ಕೆ ತಮಿಳುನಾಡು ಸರಕಾರ ವಿರೋಧಿಸುತ್ತಲೇ ಬಂದಿದೆ. ಇದರ ಮಧ್ಯೆ, ಕೇಂದ್ರ ಸರಕಾರ, ಅಣೆಕಟ್ಟು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಡಿಪಿಆರ್‌ಗೆ ಸೂಚಿಸಿದ. ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ತಮಿಳುನಾಡು ತೀಪ್ರ ಪ್ರತಿಭಟನೆ ನಡೆಸಿದೆ. ಸಂಸತ್ತಿನಲ್ಲೂ ಗದ್ದಲ ಮಾಡಿದೆ.

ಮಹದಾಯಿ ತೀರ್ಪು

ಉತ್ತರ ಕರ್ನಾಟಕದ ಕುಡಿಯುವ ನೀರಿನ ಬವಣೆ ನಿವಾರಿಸಲಿರುವ ಮಹದಾಯಿ ನದಿ ಜೋಡಣೆ ಕುರಿತು ಮಹದಾಯಿ ನದಿ ನೀರು ನ್ಯಾಯಾಧಿಕರಣವು ಆಗಸ್ಟ್‌ನಲ್ಲಿ ತನ್ನ ತೀರ್ಪು ಪ್ರಕಟಿಸಿತು. ನದಿ ಜೋಡಣೆ ಸಂಬಂಧ ಉತ್ತರ ಕರ್ನಾಟಕದಲ್ಲಿ ವರ್ಷಗಳಿಂದ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಮಾಡಿಕೊಂಡು ಬರಲಾಗಿತ್ತು. ನ್ಯಾಯಾಧಿಕರಣವು ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀರು ನಿಗದಿಪಡಿಸಿದೆ. ಆದರೆ ಕರ್ನಾಟಕ 20 ಟಿಎಂಸಿ ನೀರು ಕೇಳಿತ್ತು.

ನಿಲ್ಲದ ಟ್ರಂಪ್‌ ರಂಪಾಟ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2018ರಲ್ಲೂ ಸದ್ದು ಮಾಡುತ್ತಲೇ ಇದ್ದರು. ಅವರು, ಮಾಧ್ಯಮಗಳ ವಿರುದ್ಧದ ಎಂದಿನ ಸಿಟ್ಟನ್ನು ಈ ವರ್ಷವೂ ಬಿಟ್ಟುಕೊಡಲಿಲ್ಲ! ಸುದ್ದಿಗೋಷ್ಠಿಯಲ್ಲಿ ಸಿಎನ್‌ಎನ್‌ ಪತ್ರಕರ್ತ ಜಿಮ್‌ ಅಕೋಸ್ಟಾ ವಿರುದ್ಧ ಹರಿಹಾಯ್ದಿದ್ದರು. ಬಳಿಕ, ಆ ಪತ್ರಕರ್ತನ ವೈಟ್‌ಹೌಸ್‌ ಪ್ರವೇಶದ ಅನುಮತಿ ಪತ್ರವನ್ನೇ ರದ್ದು ಮಾಡಿದ್ದರು. ಟ್ರಂಪ್‌ನ ಈ ನಡೆಗೆ ಅಮೆರಿಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಸೌದಿ ಪತ್ರಕರ್ತ ಕಶೋಗಿ ಕೊಲೆ

ಸೌದಿ ಅರೇಬಿಯಾ ಆಡಳಿತದ ಕಡು ಟೀಕಾಕಾರ, ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಪತ್ರಕರ್ತ ಜಮಾಲ್‌ ಕಶೋಗಿ ಅವರು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಗೆ ತೆರಳಿದ್ದರು. ಆದರೆ, ಅಲ್ಲಿಂದ ಮತ್ತೆ ಪತ್ತೆಯಾಗಲಿಲ್ಲ. ಈ ವಿಷಯ ಅಂತಾರಾಷ್ಟ್ರೀಯವಾಗಿ ಭಾರಿ ಸದ್ದು ಮಾಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ-ಸೌದಿ ಅರೇಬಿಯಾ ದ್ವಿಪಕ್ಷೀಯ ಸಂಬಂದಕ್ಕೂ ಹಿನ್ನಡೆಯಾಯಿತು.

ಕೆಜಿಎಫ್‌ ಹವಾ

ಇದೇ ಮೊದಲ ಬಾರಿಗೆ ಯಶ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ 'ಕೆಜಿಎಫ್‌' ಇಡೀ ದೇಶಾದ್ಯಂತ ಅಬ್ಬರಿಸಿ ಬೊಬ್ಬಿಡುತ್ತಿದೆ. ಸಿನಿಮಾ ಪ್ರದರ್ಶನವಾಗುತ್ತಿರುವ ರೀತಿ ನೋಡಿದರೆ, ಕನ್ನಡದ ಮೊದಲ 100 ಕೋಟಿ ರೂ. ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆಗಳಿವೆ. ಕರ್ನಾಟಕದ ಮಟ್ಟಿಗೆ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ್ದು ಕೆಜಿಎಫ್‌ ಎಂದು ಘಂಟಾಘೋಷವಾಗಿ ಹೇಳಬಹುದು.

ಅಮೆರಿಕ ಪ್ರಜೆಯ ಕೊಲೆ

ಹೊರಜಗತ್ತಿನ ಸಂಪರ್ಕವೇ ಇಲ್ಲದ ಅಂಡಮಾನ್‌ನ ಬುಡಕಟ್ಟು ಜನಾಂಗ 'ಸೆಂಟಿನೆಲೀಸ್‌' ಈ ವರ್ಷ ಸುದ್ದಿಯಲ್ಲಿತ್ತು. ಅಮೆರಿಕದ ಪ್ರಜೆ 27 ವರ್ಷದ ಅಲೆನ್‌ ಚಾವು ಕೊಲೆ ಇದಕ್ಕೆ ಕಾರಣ. ಅಂಡಮಾನ್‌ ಮತ್ತು ನಿಕೋಬಾರ್‌ನ ನಾರ್ತ್‌ ಸೆಂಟಿನೆಲ್‌ ದ್ವೀಪದಲ್ಲಿರುವ ಬುಡಕಟ್ಟು ಜನಾಂಗದವರ ಸಂಪರ್ಕ ಸಾಧಿಸಲು, ಕ್ರೈಸ್ತ ಮಿಷನರಿ ಸಂಘಟನೆ ಹಿನ್ನೆಲೆಯಿದ್ದ ಈ ಅಲೆನ್‌ ಚಾವು ಹೋಗಿದ್ದ. ಇದಕ್ಕಾಗಿ ಮೀನುಗಾರರ ಸಂಪರ್ಕ ಪಡೆದುಕೊಂಡಿದ್ದ. ನಾಗರಿಕತೆಯ ಅರಿವೇ ಇಲ್ಲದೇ ಬದುಕುತ್ತಿರುವ ಸೆಂಟಿನೆಲ್‌ ದ್ವೀಪವಾಸಿಗಳು ಈತನನ್ನು ಕೊಲೆ ಮಾಡುವುದನ್ನು ನೋಡಿರುವುದಾಗಿ ಮೀನುಗಾರರು ಹೇಳಿಕೊಂಡಿದ್ದರು.

- ವರ್ಷದ ವೈಶಿಷ್ಟ್ಯಗಳು-

ಜಾತಿಪತ್ರ: ಹನುಮಾನ್‌ ಯಾವ ಜಾತಿಗೆ ಸೇರಿದವನೆಂಬ ಚರ್ಚೆ. ಹನುಮಾನ್‌ ದಲಿತ ಎಂದು ಯುಪಿ ಸಿಎಂ ಯೋಗಿ ಹೇಳಿಕೆಯಿಂದ ಚರ್ಚೆಗೆ ಶ್ರೀಕಾರ
ಬಹಿರಂಗ: ರಾಹುಲ್‌ ಗಾಂಧಿಯ ಗೋತ್ರ
ಪರಾರಿ: ನೀರವ್‌ ಮೋದಿ, ಮೆಹುಲ್‌ ಚೋಕ್ಸಿ
ವರ್ಷದ ಪದ: ಮಿ ಟೂ
ಸಾಧನೆ: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವು
ಸೋಲು: 'ಥಗ್ಸ್‌ ಆಫ್‌ ಹಿಂದೂಸ್ತಾನ್‌'. ದಯನೀಯವಾಗಿ ಸೋತ ಹಿಂದಿ ಸಿನಿಮಾ.
ಅಚ್ಚರಿ: ಕೆಜಿಎಫ್‌.
ತಲೆದಂಡ: ಎಂ.ಜೆ.ಅಕ್ಬರ್‌
ಅಚ್ಚರಿ ಸರಕಾರ: ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸರಕಾರ
ಬಿಗ್‌ ಕ್ಯಾಚ್‌: ಕ್ರಿಶ್ಚಿಯನ್‌ ಮೈಕೆಲ್‌, ಆಗಸ್ಟಾ ವೆಸ್ಟ್‌ಲಾಂಡ್‌ ಹಗರಣ
ಶಿಕ್ಷೆ: ಸಜ್ಜನ್‌ಕುಮಾರ್‌, ಸಿಖ್ಖರ ಹತ್ಯೆ
ಮದುವೆ: ಇಶಾ ಅಂಬಾನಿ ಮತ್ತು ಅನಂತ್‌ ಪಿರಮಾಳ್‌
ಪತ್ರಿಕಾಗೋಷ್ಟಿ: ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ

ಈ ಸುದ್ದಿಗಳೂ ಸದ್ದು ಮಾಡಿದವು...

- ಸಿನಿಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ತೀರ್ಪು ನೀಡಿದ ಸುಪ್ರೀ ಕೋರ್ಟ್‌
- ಮೊದಲ ಮಹಿಳಾ ಎಸ್‌ಡಬ್ಲ್ಯೂಎಟಿ(ಸ್ವಾಟ್‌) ಟೀಂ ಹೊಂದಿದ ಭಾರತ
- ಅವನಿ ಚತುರ್ವೇದಿ, ಭಾರತದ ಮೊದಲ ಮಹಿಳಾ ಫೈಟರ್‌ ಪೈಲೆಟ್‌
- ಅಂಧರ ಕ್ರಿಕೆಟ್‌ ವರ್ಲ್ಡ್‌ಕಪ್‌ ಗೆದ್ದ ಭಾರತೀಯ ತಂಡ
- ಕ್ರಿಕೆಟರ್‌ ಮೊಹಮ್ಮದ್‌ ಶಮಿ ಮತ್ತು ಪತ್ನಿ ಹಸಿನ್‌ ಜಹಾನ್‌ ಜಗಳ
- ಐಸಿಐಸಿಐ ಬ್ಯಾಂಕಿನ ಸಿಇಒ ಚಂದಾ ಕೋಚರ್‌ ರಾಜೀನಾಮೆ. ಅವರು ತಮ್ಮ ಪತಿಯ ಕಂಪನಿಗಳಿಗೆ ಲಾಭವಾಗುವ ರೀತಿಯಲ್ಲಿ ಸಾಲ ನೀಡಿದ್ದರೆಂಬ ಆರೋಪವಿತ್ತು.
- ಚೀನಾದ ಜತೆಗಿನ ಡೋಕ್ಲಾಮ್‌ ವಿವಾದ ಭಾರಿ ಗಮನ ಸೆಳೆದಿತ್ತು.
- ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ 12 ಮಕ್ಕಳು ಮತ್ತು ಫುಟ್‌ಬಾಲ್‌ ಕೋಚ್‌ನ ರಕ್ಷ ಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ