ಮಾಯಾ ಲಾಂದ್ರ: ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!
ಎಂಥಾ ಪಾಪಿ ನಾನು. ಒಂದು ದಿನವೂ ದುರ್ಯೋಧನನ ಕೆನ್ನೆ ಹಿಂಡಲಿಲ್ಲ; ದುಶ್ಯಾಸನನ ಜೊಲ್ಲು ಒರೆಸಲಿಲ್ಲ...
* ಮಾಯಾ ಲಾಂದ್ರ: ರಾಘವೇಂದ್ರ ಜೋಶಿ
ಅದೊಂದು ಕೋಣೆ. ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಇದ್ದಂತೆ ಕಾಣಲಿಲ್ಲ . ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ. ಸುಗಂಧರಾಜದ ಪುಷ್ಪಹಾರ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ. ಪರಶಿವನ ಮುಂದೆ ಕುಳಿತಿರುವ ಆಕೆ ಸುಮ್ಮನೇ ಒಮ್ಮೆ ತಲೆಯೆತ್ತಿ ಮೇಲಕ್ಕೆ ನೋಡುತ್ತಾಳೆ. ಥಟ್ ಅಂಥ ಕಣ್ಣೀರಿನ ಒಂದು ಹನಿ ಆಕೆಯ ಕೆನ್ನೆಗುಂಟ ಕೆಳಕ್ಕೆ ಧುಮುಕುತ್ತದೆ.
ಅದು ಈ ಜಗತ್ತು ಕಂಡ ಆಕೆಯ ಮೊಟ್ಟಮೊದಲ ಕಣ್ಣೀರಿನ ಹನಿ! ಇಷ್ಟುದಿನ ಆಕೆ ಸುರಿಸುತ್ತಿದ್ದ ಕಣ್ಣೀರನ್ನೆಲ್ಲ ಆಕೆ ಕಟ್ಟಿಕೊಂಡಿದ್ದ ಕಪ್ಪು ಪಟ್ಟಿಯೇ ತಿಂದು ಹಾಕುತ್ತಿತ್ತು. ಇವತ್ತು ಆ ಪಟ್ಟಿಯನ್ನು ತೆಗೆದುಹಾಕಿದ್ದಾಳೆ. ತಾನು ನಂಬಿದ ಪರಶಿವನ ಮುಂದೆ ಅಸಹಾಯಕಳಾಗಿ ಮಾತಿಗಿಳಿದಿದ್ದಾಳೆ. ಆಕೆ ಗಾಂಧಾರಿ!
ಹೇ ಪ್ರಭೂ.. ನಾನೀಗ ಎಣ್ಣೆ ತೀರಿದ ನಂದಾದೀಪ. ನಿನ್ನ ಹಣೆಗೊಂದು ತಿಲಕವಿಡಬೇಕೆಂದರೂ ಕೂಡ ನನ್ನ ಕೈಯಲ್ಲಿರುವ ಕೊರಡಿನಲ್ಲಿ ಗಂಧವಿಲ್ಲ! ನನ್ನವರೆನಿಸಿಕೊಂಡಿದ್ದ ಎಲ್ಲರೂ ಸತ್ತು ಹೋಗಿದ್ದಾಗಿದೆ. ನಿನ್ನೆ ಮುಗಿದ ಕುರು ಮಹಾಯುದ್ಧ ನನ್ನ ಸಮಸ್ತ ಸಂಕುಲವನ್ನೆಲ್ಲ ತಿಂದು ಕುಳಿತಿದೆ. ಇಳಿಗಾಲದ ಈ ವಯಸ್ಸಿನಲ್ಲಿ ಇಂಥದ್ದನ್ನೆಲ್ಲ ನಾನು ನೋಡಬೇಕಾಗಿ ಬಂತೆ? ಎಷ್ಟೊಂದು ಪೂಜಿಸಿದೆನಲ್ಲ ತಂದೆ!ಎಷ್ಟು ಮಂತ್ರ? ಎಷ್ಟು ಜಪ? ಅದೆಷ್ಟು ಭಜನೆಗಳು..
ನೀನೇ ಹೇಳು, ಈ ಸೌಭಾಗ್ಯಕ್ಕಾಗಿಯೇ ನಾನು ಕಣ್ಣಿದ್ದೂ ಕುರುಡಿಯಾಗಬೇಕಾಯಿತೆ? ಇರಲಿಬಿಡು ತಂದೆ, ನಿನಗೆ ಗೊತ್ತಿಲ್ಲದ್ದು ಏನಿದೆ? ಪುತ್ರಶೋಕಂ ನಿರಂತರಂ! ಪತಿವ್ರತೆಯ ಈ ಪಟ್ಟ ನನ್ನ ತಾಯ್ತನವನ್ನೇ ಕೊಂದು ಹಾಕಿತು. ಎಂಥಾ ಪಾಪಿ ನಾನು. ಒಂದು ದಿನವೂ ಮಕ್ಕಳ ಬಾಲ್ಯದಾಟ ನೋಡಲಿಲ್ಲ. ದುರ್ಯೋಧನನ ಕೆನ್ನೆ ಹಿಂಡಲಿಲ್ಲ; ದುಶ್ಯಾಸನನ ಜೊಲ್ಲು ಒರೆಸಲಿಲ್ಲ. ಇನ್ನು ದುರ್ಮುಖ, ದುರ್ಮದ, ದುರಾಧರರೆಲ್ಲ ತಾಯಿಯಿದ್ದೂ ತಬ್ಬಲಿಯಾಗಿಯೇ ಬೆಳೆದರು. ಹೋಗಲಿ, ನನ್ನ ಕೊನೇ ಮಗಳು ದುಶ್ಯಲೆ? ಪಾಪದ ಕೂಸದು. ಆಕೆಯ ಮದುವೆಯ ದಿನ ಅವಳ ಕಣ್ಣಿನ ಹೊಳಪನ್ನೂ ಕೂಡ ಈ ಪಾಪಿ ಕಣ್ಣುಗಳು ನೋಡಲಿಲ್ಲ. ಇವತ್ತು ಹೀಗೆ ನಿನ್ನ ಮುಂದೆ ಗೋಳಿಡುತ್ತಿದ್ದೇನೆæ..
ನಂಗೊತ್ತು ದೇವ, ಹೀಗೆ ನಿನ್ನ ಮುಂದೆ ಕುಳಿತು ಮಾತನಾಡುವುದನ್ನು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ. ಆದರೆ ನಿಜ ಹೇಳು: ನನ್ನ ಮಕ್ಕಳು ಅಷ್ಟೊಂದು ಕೆಟ್ಟವರಾ? ಕೃಷ್ಣನ ಪ್ರಕಾರ ದುರ್ಯೋಧನ, ದುಶ್ಯಾಸನರೆಲ್ಲ ಕಾಮುಕರಂತೆ. ಅಧರ್ಮಿಗಳಂತೆ. ಹಾಗಿದ್ದರೆ ಮೊನ್ನೆಯ ಯುದ್ಧದಲ್ಲಿ ಪಾಂಡವರಿಗೆ ಹೋಲಿಸಿದರೆ ಅದರ ಎರಡುಪಟ್ಟು ಸೈನ್ಯ ನನ್ನ ಮಗನ ಪರವಾಗಿ ಯಾಕೆ ನಿಂತಿರುತ್ತಿತ್ತು? ಅಧರ್ಮಿಗಳಾಗಿದ್ದರೆ ಭೀಷ್ಮ, ದ್ರೋಣರೇಕೆ ದುರ್ಯೋಧನನ ಪಕ್ಕ ನಿಂತಿದ್ದರು?
ನೀನು ಏನೇ ಹೇಳು ಭಗವಾನ್, ಆ ವಿದುರ ಪರಮದ್ರೋಹಿ. ತಿಂದ ಮನೆಯ ಗಳ ಹಿರಿಯುವ ಜಾತಿ ಅವನದು. ಅವನ ನಾಲಿಗೆ ನಮ್ಮದೇ ಅಡುಗೆ ಮನೆಯಲ್ಲಿದ್ದರೂ ಕೂಡ ಆತನ ತಲೆ ಮಾತ್ರ ಯಾವತ್ತೂ ಪಾಂಡವರ ಪರವಾಗಿಯೇ ಕೆಲಸ ಮಾಡುತ್ತಿತ್ತು. ಈ ಪಾಂಡವರೇನು ಕಡಿಮೆಯೇ? ಹಿಂದೆ ಇದೇ ಪಾಂಡವರು ಅರಗಿನ ಅರಮನೆಯಿಂದ ಓಡಿ ಹೋಗುವಾಗ ಅಲ್ಲಿ ಸುಮ್ಮನೆ ಮಲಗಿದ್ದ ಅದ್ಯಾರೋ ಆರು ಜನ ಅಮಾಯಕರ ಸಮೇತ ಅರಗಿನರಮನೆಯನ್ನು ಸುಟ್ಟು ಹಾಕಿದರಲ್ಲ? ಪಾಪ, ಅವರೇನು ದ್ರೋಹ ಬಗೆದಿದ್ದರು?
ಜೀವ ಕೊಡುವ ತಂದೆ ನೀನು! ಅಂಥಾದ್ದರಲ್ಲಿ ಆ ಅಮಾಯಕರ ಜೀವ ತೆಗೆಯುವ ಹಕ್ಕನ್ನು ಯಾರು ನೀಡಿದರು ಈ ಪಂಚರಿಗೆ? ಇನ್ನು ಹಿರಿಯಜ್ಜ ಭೀಷ್ಮ. ಚಿಕ್ಕವನಿದ್ದಾಗ ಇದೇ ಅರ್ಜುನ ಈ ಅಜ್ಜನ ಮೇಲೆ ಒಂದಾದ ಮೇಲೊಂದು ಉಚ್ಚೆ ಸುರಿಸುತ್ತಿದ್ದಾಗ ಒದ್ದೆ ಪಂಚೆಯಲ್ಲೇ ಈ ಅಜ್ಜ ಆತನಿಗೆ ಮುದ್ದು ಮಾಡುತ್ತಿದ್ದುದು ನನಗಿನ್ನೂ ನೆನಪಿದೆ.
ಅಂಥ ಅರ್ಜುನ ಏನು ಮಾಡಿದ ನೋಡಿದೆಯಾ? ತುಂಡು ಭೂಮಿಯ ಆಸೆಗಾಗಿ ಸ್ವಂತ ತಾತನನ್ನೇ ಬಾಣಗಳ ಮೇಲೆ ಮಲಗಿಸಿಬಿಟ್ಟ! ಆತನ ದುರಾಸೆ ವಿದ್ಯೆ ಕಲಿಸಿದ ಗುರುವಿಗೇ ತಿರುಮಂತ್ರ ಹೇಳಿಸಿತು.
ಈಗ ಹೇಳು ತಂದೆ, ಅಧರ್ಮಿಗಳು ಕೌರವರಾ? ಪಾಂಡವರಾ? ನಂಗೊತ್ತು, ಇದೆಲ್ಲ ಕೃಷ್ಣನದೇ ಕುತಂತ್ರ. ದೇವಮಾನವನಂತೆ ಈ ಕೃಷ್ಣ. ನನ್ನ ಪಾಲಿಗೆ ಆತ ಮಹಾನ್ ಭ್ರಷ್ಟ. ಏನೇನೋ ಹೇಳಿ ನನ್ನ ಮಗನ ತಲೆ ಕೆಡಿಸಿ ಕಳಿಸಿಬಿಟ್ಟ. ಆವತ್ತು ದುರ್ಯೋಧನನಿಗೆ ಅದೆಷ್ಟು ಪ್ರೀತಿಯಿಂದ ಹೇಳಿದ್ದೆ: ಮಗನೇ, ಇವತ್ತು ನಿನ್ನನ್ನು ಹುಟ್ಟುಡುಗೆಯಲ್ಲಿ ನೋಡುವ ಆಸೆಯಾಗಿದೆ ಬಾ ಅಂತ.. ನಂಗೊತ್ತಿತ್ತು, ಇಷ್ಟುದಿನ ಒಂದೇಸಮ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರಿಂದ ನನ್ನ ಅಕ್ಷಿಗೊಂದು ಅದ್ಭುತಶಕ್ತಿ ಬಂದುಬಿಟ್ಟಿತ್ತು. ಅದೊಂದು ವಜ್ರಶಕ್ತಿ. ಮೊಟ್ಟಮೊದಲ ಬಾರಿಗೆ ಕಣ್ಣಿನ ಪಟ್ಟಿ ತೆಗೆದಾಗ ಯಾವ ವಸ್ತುವಿನ ಮೇಲೆ ನಿನ್ನ ದೃಷ್ಟಿ ಬೀಳುವದೋ, ಆ ವಸ್ತು ವಜ್ರಕಾಯವಾಗಲಿ! ಹಾಗಂತ ನೀನೇ ವರ ಕೊಟ್ಟಿದ್ದೆಯಲ್ಲ ಸ್ವಾಮೀ.. ಅದಕ್ಕೆಂದೇ ನನ್ನ ಮಗನಿಗೆ ಬೆತ್ತಲೆಯಾಗಿ ನನ್ನೆದುರಿಗೆ ಬಾ ಎಂದಿದ್ದೆ.
ಅಂತೆಯೇ ಆವತ್ತು ನನ್ನ ಮಗ ಬಂದಿದ್ದ. ನನ್ನೆದುರಿಗೆ ನಿಂತಿದ್ದ. ನಾನು ಮಾತ್ರ ಮೊಟ್ಟಮೊದಲ ಬಾರಿಗೆ ಕಣ್ಣ ಪಟ್ಟಿ ತೆಗೆಯುತ್ತಲೇ ಹುಚ್ಚಳಂತೆ ಚೀರತೊಡಗಿದ್ದೆ: ಅಯ್ಯೋ ಮಗನೇ.. ನೀನೊಬ್ಬ ಹಸೀ ದಡ್ಡ. ಹುಂಬ ತಲೆಯ ಒಡ್ಡ!
ಹೌದು ತಂದೆ, ಆವತ್ತು ನನ್ನ ಮಗ ನನ್ನ ಕೋಣೆಗೆ ಬೆತ್ತಲೆಯಾಗಿಯೇ ಬರುತ್ತಿದ್ದನಂತೆ. ಆದರೆ ಅಷ್ಟೊತ್ತಿಗೆ
ಕೃಷ್ಣ ಎದುರಾಗಿ ಯಥಾಪ್ರಕಾರ ಶಂಖ ಊದತೊಡಗಿದಂತೆ: ಇದೇನು ದುರ್ಯೋಧನ?ಅಮ್ಮ ಹೇಳಿದಳು ಅಂತ ನೀನು ಈ ಅವತಾರದಲ್ಲಿ ಹೋಗುತ್ತಿರುವೆ? ನಿನ್ನಮ್ಮ ಮಹಾಮುಗ್ಧೆ. ನಿನ್ನನ್ನು ಒಮ್ಮೆಯೂ ನೋಡಿಲ್ಲವಾದ್ದರಿಂದ ನೀನಿನ್ನೂ ಚಿಕ್ಕಮಗುವೆಂದು ತಿಳಿದಿದ್ದಾಳೆ.
ನಿನಗಾದರೂ ಬುದ್ಧಿ ಬೇಡವಾ? ಯಕಶ್ಚಿತ್ ಕೌಪೀನವಾದರೂ ಧರಿಸಿಕೊಂಡು ಹೊಗಬಾರದೇ..? ಅಂತೆಲ್ಲ ದುರ್ಯೋಧನನ ತಲೆಕೆಡಿಸಿ ಕಳಿಸಿದನಂತೆ. ಅದೇ ಗುಂಗಿನಲ್ಲಿ ಈ ಒಡ್ಡ ಲಂಡ ಚೊಣ್ಣ ಧರಿಸಿಕೊಂಡು ನನ್ನ ಮುಂದೆ ನಿಂತಿದ್ದ. ಪರಿಣಾಮವಾಗಿ ನನ್ನ ದೃಷ್ಟಿ ಬಿದ್ದ ಆತನ ಇಡೀ ದೇಹ ವಜ್ರಕಾಯವೇನೋ ಆಯಿತು. ಆದರೆ ತೊಡೆಯವರೆಗೂ ಧರಿಸಿದ್ದ ಆತನ ಲಂಗೋಟಿಯನ್ನು ಮಾತ್ರ ನನ್ನ ದೃಷ್ಟಿ ಬೇಧಿಸಲಾಗಲಿಲ್ಲ. ನಿನ್ನೆ ಆ ಕೃಷ್ಣ ಭೀಮನಿಗೆ ಸಂಜ್ಞೆ ಮಾಡಿ ಸರಿಯಾಗಿ ಅದೇ ಜಾಗಕ್ಕೆ ಹೊಡೆಸಿದನಂತೆ. ಭ್ರಷ್ಟ ಕೃಷ್ಣ! ಅವನ ಜಾತಿಯೇ ಹಾಗೆ. ಅವನಪ್ಪ ವಸುದೇವನಿಗೆ ಹದಿನಾಲ್ಕು ಹೆಂಡಂದಿರು. ಇವನಿಗೆ ಹದಿನಾರು ಸಾವಿರ! ನೀನೇ ಹೇಳು ದೊರೆಯೇ, ಕಾಮುಕ ದುರ್ಯೋಧನನಾ? ಅಥವಾ ಕೃಷ್ಣನಾ?
ಇಲ್ಲ, ಇಲ್ಲ. ನನ್ನ ನೂರು ಮಕ್ಕಳನ್ನು ಕೊಂದವನು ಕೃಷ್ಣನೇ. ಭಗವಾನ್, ನಿನ್ನ ಮೇಲಾಣೆ. ನನ್ನ ಪಾತೀವ್ರತದ ಮೇಲಾಣೆ. ಈ ಕೃಷ್ಣ ಹೇಗೆ ಕುರುವಂಶದ ದಾಯಾದಿಗಳು ತಮ್ಮತಮ್ಮಲ್ಲೇ ಕಚ್ಚಾಡುವಂತೆ ಪ್ರೇರೇಪಿಸಿದನೋ, ಅದೇ ಥರ ಈ ಕೃಷ್ಣನ ಯಾದವೀ ವಂಶವೂ ಪರಸ್ಪರ ಗುದ್ದಾಡಿ ಸಾಯುವಂತಾಗಲಿ. ಆ ಕಳ್ಳ ಕೃಷ್ಣನನ್ನು ತೀರ ಸೂತಜಾತಿಯ ಮನುಷ್ಯನೊಬ್ಬ ಕೊಲ್ಲುವಂತಾಗಲಿ. ಶಿವನೇ, ನಾನು ದಿನನಿತ್ಯ ನಿನಗೆ ಅರ್ಪಿಸುತ್ತಿದ್ದ ಪೂಜೆಯಲ್ಲಿ ಒಂಚೂರಾದರೂ ಕೊಸರಿದ್ದರೆ ಈ ನನ್ನ ಶಾಪ ಸೊರಗಿ ಹೋಗಲಿ..
*
ಹಾಗಂತ ಶಪಿಸತೊಡಗಿದ ಗಾಂಧಾರಿ ಹುಚ್ಚಳಂತೆ ಬಡಬಡಿಸತೊಡಗುತ್ತಾಳೆ: ''ಅಯ್ಯೋ ವಿಧಿಯೇ, ಎಂಥ ಪಾಪಿ ನಾನು? ಒಂದು ದಿನವೂ ನನ್ನ ಮಗ ದುರ್ಯೋಧನನ ಕೆನ್ನೆ ಹಿಂಡಲಿಲ್ಲ. ದುಶ್ಯಾಸನನ ಜೊಲ್ಲು...''