ಆ್ಯಪ್ನಗರ

ಜೆಟ್‌ನಿಂದ ಇಳಿದ ನರೇಶ್‌

ಧೂಳಿನಿಂದ ಮೇಲೆದ್ದು, ಆಕಾಶದಲ್ಲಿ ವಿಹರಿಸಿ, ಮತ್ತೀಗ ಪುನಃ ನೆಲಕ್ಕಿಳಿದಿರುವ ನರೇಶ್‌ ಗೋಯಲ್‌ ಅವರ ಬದುಕು ಹಾವು- ಏಣಿಯಾಟದಂತಿದೆ...

Vijaya Karnataka Web 31 Mar 2019, 5:00 am
ಹರೀಶ್‌ ಕೇರ
Vijaya Karnataka Web Naresh-Goyal


ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಜೆಟ್‌ ಏರ್‌ವೇಸ್‌ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬಿದ್ದಿದ್ದಾರೆ. ಮಲ್ಯರ ಕಿಂಗ್‌ಫಿಷರ್‌ನಂತೆ ಹಣಕಾಸಿನ ಪಾತಾಳದತ್ತ ಮುಖ ಮಾಡಿದ್ದ ಜೆಟ್‌ ಏರ್‌ವೇಸ್‌ಗೆ ಜೀವ ನೀಡಲು ಈಗ ಕೆಲವು ಬ್ಯಾಂಕ್‌ಗಳು ಮುಂದೆ ಬಂದಿವೆ. 25 ವರ್ಷಗಳ ಹಿಂದೆ ಜೆಟ್‌ ಏರ್‌ವೇಸ್‌ ಸಂಸ್ಥೆಯನ್ನು ಸ್ಥಾಪಿಸಿ ಒಮ್ಮೆ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ನರೇಶ್‌ ಗೋಯಲ್‌ಗೆ, ಈ ಬ್ಯಾಂಕ್‌ಗಳು, ''ನೀವು ಸಂಸ್ಥೆಯಿಂದ ಹೊರಬಿದ್ದರೆ ಮಾತ್ರ ಇದರ ಉದ್ಧಾರ ಸಾಧ್ಯ,'' ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದವು. ಜೆಟ್‌ನ ಈ ಪರಿಸ್ಥಿತಿಗೆ ಕಾರಣವಾದದ್ದು ಕಿಂಗ್‌ಫಿಷರ್‌ನಂತೆ ಒಡೆಯನ ವಿಲಾಸಿ ಜೀವನವಲ್ಲ; ದುರದೃಷ್ಟ ಮತ್ತು ಕೆಲವು ತಪ್ಪು ನಿರ್ಧಾರಗಳು ಅಷ್ಟೇ.

ನರೇಶ್‌ ಗೋಯಲ್‌ ಅವರ ಕತೆ 'ತಿಪ್ಪೆಯಿಂದ ಉಪ್ಪರಿಗೆಗೆ' ಅನ್ನುತ್ತಾರಲ್ಲ; ಅದಕ್ಕೆ ಉದಾಹರಣೆಯಂತೆಯೇ ಇದೆ. ನರೇಶ್‌ ಹುಟ್ಟಿ ಬೆಳೆದಿದ್ದು ಪಂಜಾಬ…ನ ಸಂಗೂರ್‌ನಲ್ಲಿರುವ ಅಕ್ಕಸಾಲಿಗರ ಕುಟುಂಬದಲ್ಲಿ. ಕುಟುಂಬ ದಿವಾಳಿಯಾದ ಬಳಿಕ ನರೇಶ್‌ ತಮ್ಮ ತಾಯಿಯ ಚಿಕ್ಕಪ್ಪನ ಜತೆ ಬೆಳೆದರು. ಓದಿಸುವುದು ಕಷ್ಟವಾಗಿತ್ತು. ಮನೆಯಲ್ಲಿ ಕರೆಂಟ್‌ ಕೂಡ ಇರಲಿಲ್ಲ; ಬೀದಿ ದೀಪದ ಬೆಳಕಿನಲ್ಲೇ ಕುಳಿತು ಓದಬೇಕಿತ್ತು. ನರೇಶ್‌ಗೆ ಚಾರ್ಟರ್ಡ್‌ ಅಕೌಂಟೆಂಟ್‌ ಆಗಬೇಕೆಂದು ಆಸೆ. ಹಣಕಾಸಿನ ಅಡಚಣೆಯಿಂದ ಬಿಕಾಂಗೆ ಶಿಕ್ಷಣ ನಿಂತಿತು. 1967ರಲ್ಲಿ ಪದವಿ ಮುಗಿಸಿ ತಮ್ಮ ಚಿಕ್ಕಪ್ಪನ ಟ್ರಾವೆಲ್‌ ಏಜೆನ್ಸಿಯಲ್ಲಿ ಕ್ಯಾಶಿಯರ್‌ ಆಗಿ ಕೆಲಸಕ್ಕೆ ಸೇರಿಕೊಂಡರು. ತಿಂಗಳಿಗೆ 300 ರೂಪಾಯಿ ಸಂಬಳ.

ನರೇಶ್‌ ಎಂಥ ಕಠಿಣ ದುಡಿಮೆಯ ಹುಡುಗನಾಗಿದ್ದನೆಂದರೆ, ಅದೃಷ್ಟದ ಬಾಗಿಲುಗಳು ಬೇಗನೇ ತೆರೆಯುತ್ತ ಹೋದವು. 1969ರಲ್ಲಿ ಅವರು ಇರಾಕಿ ಏರ್‌ವೇಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡರು. 1971ರಿಂದ 74ರ ನಡುವೆ ಅಲಿಯಾ ಮತ್ತು ರಾಯಲ್‌ ಜಾರ್ಡಿಯನ್‌ ಏರ್‌ಲೈನ್‌ನ ಪ್ರಾದೇಶಿಕ ಮ್ಯಾನೇಜರ್‌ ಆಗಿ ಕೆಲಸ ಮಾಡಿದರು. ಈ ಸಮಯದಲ್ಲಿ ದೇಶ ವಿದೇಶ ಸುತ್ತಿ ವಿಮಾನಯಾನ ಉದ್ಯಮದ ಬಗ್ಗೆ ಸಾಕಷ್ಟು ಅನುಭವ ಪಡೆದರು. 1974ರಲ್ಲಿ ಸ್ವಂತ ಉದ್ಯಮ ಆರಂಭಿಸಲು ಮುಂದಾಗಿ, ತಾಯಿಯ ಬಳಿ ಸ್ವಲ್ಪ ಹಣ ಪಡೆದು 'ಜೆಟ್‌ ಏರ್‌' ಎಂಬ ಟ್ರಾವೆಲ್‌ ಏಜೆನ್ಸಿ ತೆರೆದರು. 1991ರಲ್ಲಿ ಭಾರತದ ವಾಯುಯಾನ ಉದ್ಯಮ ಜೂಮ್‌ನಲ್ಲಿತ್ತು. 1993ರಲ್ಲಿ ನರೇಶ್‌ ತಮ್ಮ ಟ್ರಾವೆಲ್‌ ಏಜೆನ್ಸಿಯನ್ನು ವಿಸ್ತರಿಸಿ ಜೆಟ್‌ ಏರ್‌ವೇಸ್‌ ಹೆಸರಿನಲ್ಲಿ ವಿಮಾನಯಾನಕ್ಕೆ ಇಳಿಸಿದರು. 2004ರಲ್ಲಿ ಜೆಟ್‌ ಏರ್‌ವೇಸ್‌ನಿಂದ ಮೊದಲ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಆರಂಭವಾಯಿತು. 2007ರಲ್ಲಿ ಏರ್‌ ಸಹಾರಾ ಸಂಸ್ಥೆಯನ್ನು ಜೆಟ್‌ ಏರ್‌ವೇಸ್‌ ಖರೀದಿಸಿತು. 2010ರ ವೇಳೆಗೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಂಡಿತ್ತು ಜೆಟ್‌. 2013ರಲ್ಲಿ ಒಮ್ಮೆ ಆರ್ಥಿಕ ಸಮಸ್ಯೆ ಜೆಟ್‌ನ್ನು ಕಾಡಿತು. ಆ ಸಂದರ್ಭದಲ್ಲಿ ಅಬುಧಾಬಿಯ ಎತಿಹಾದ್‌ ಏರ್‌ವೇಸ್‌, ಜೆಟ್‌ನ 24% ಷೇರುಗಳನ್ನು ಖರೀದಿಸಿ ಸಹಾಯ ಮಾಡಿತು. ನಂತರ ಒಂದೆರಡು ವರ್ಷ ಜೆಟ್‌ ತನ್ನ ಉಚ್ಛ್ರಾಯ ಸ್ಥಿತಿಯನ್ನು ಕಾದುಕೊಂಡಿತು. 2016ರ ಹೊತ್ತಿಗೆ ಜೆಟ್‌ನ ಸ್ಥಾನ ಎರಡಕ್ಕಿಳಿಯಿತು. ಆ ವರ್ಷ ಫೋರ್ಬ್ಸ್‌ ಪತ್ರಿಕೆ ಪ್ರಕಟಿಸಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದರು ನರೇಶ್‌. ಅಲ್ಲಿಂದಾಚೆಗೆ ವಿಮಾನಯಾನ ಉದ್ಯಮದ ಬಿಕ್ಕಟ್ಟುಗಳು ಒಂದೊಂದಾಗಿ ನರೇಶ್‌ರನ್ನು ಹಣಿಯತೊಡಗಿದವು.

ಅಗ್ಗದ ದರದಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಹಲವಾರು ಕಂಪನಿಗಳು ಒಂದೊಂದಾಗಿ ಹುಟ್ಟಿಕೊಂಡವು. ಈ ವಿಮಾನಗಳು ಸಣ್ಣ ಗಾತ್ರದ್ದಾಗಿದ್ದವು. ಮಧ್ಯಮವರ್ಗದವರು ಈ ವಿಮಾನಗಳಲ್ಲಿ ಓಡಾಡತೊಡಗಿದರು. ನರೇಶ್‌ ಅನಿವಾರ್ಯವಾಗಿ ತಮ್ಮ ವಿಮಾನಗಳ ಟಿಕೆಟ್‌ ದರವನ್ನು ಇಳಿಸಬೇಕಾಯಿತು. ಜೆಟ್‌ನ ಹೆಚ್ಚಿನ ವಿಮಾನಗಳು ದೊಡ್ಡದಾಗಿದ್ದು, ಹೆಚ್ಚಿನ ನಿರ್ವಹಣೆ ವೆಚ್ಚವನ್ನು ಬೇಡುತ್ತಿತ್ತು. ಆಗುತ್ತಿದ್ದ ಖರ್ಚಿಗೂ ಬರುತ್ತಿದ್ದ ಆದಾಯಕ್ಕೂ ತಾಳೆಯಾಗಲಿಲ್ಲ. ಹಲವಾರು ಸಣ್ಣ, ಸ್ಥಳೀಯ ವಿಮಾನಯಾನ ಸಂಸ್ಥೆಗಳು ಹುಟ್ಟಿಕೊಂಡು ಆಕರ್ಷಕ ರೀತಿಯಲ್ಲಿ ತಮ್ಮ ಸೇವೆಯನ್ನು ವಿನ್ಯಾಸಗೊಳಿಸಿಕೊಂಡು ಜೆಟ್‌ಗೆ ಪ್ರಬಲ ಪ್ರತಿಸ್ಪರ್ಧೆ ನೀಡಿದವು. ನಿಗದಿತ ಶುಲ್ಕದಲ್ಲಿ ಮೇಲ್ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರನ್ನು ಪ್ರಧಾನವಾಗಿ ಇರಿಸಿಕೊಂಡು ಸೇವೆ ನೀಡುತ್ತಿದ್ದ ಜೆಟ್‌ ತನ್ನ ಉದ್ಯಮ ವಿನ್ಯಾಸವನ್ನೇ ಬದಲಾಯಿಸಿಕೊಳ್ಳಬೇಕಾಯಿತು. ಈ ಪೈಪೋಟಿಯಲ್ಲಿ ಹಲವಾರು ಹಳೆಯ ವಿಮಾನಯಾನ ಸಂಸ್ಥೆಗಳು ನೆಲಕಚ್ಚಿಯೇ ಹೋದವು(ಉದಾಹರಣೆಗೆ ಏರ್‌ಡೆಕ್ಕನ್‌, ಸ್ಪೈಸ್‌ಜೆಟ್‌ ಇತ್ಯಾದಿ). ಆದರೆ ಈ ಪ್ರಬಲ ಪೈಪೋಟಿಯ ನಡುವೆಯೂ ಜೆಟ್‌ ಹಲ್ಲು ಕಚ್ಚಿ ಹೋರಾಡುತ್ತಾ ಜೀವ ಉಳಿಸಿಕೊಂಡಿತು.

ಆದರೂ ಸುಮಾರು 50ಕ್ಕೂ ಹೆಚ್ಚಿನ ವಿಮಾನಗಳ ಓಡಾಟವನ್ನು ಜೆಟ್‌ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಪೈಲಟ್‌ಗಳಿಗೆ ಸಂಬಳ ಕೊಡಲು ದುಡ್ಡಿಲ್ಲದೆ, ಪೈಲಟ್‌ಗಳು ಮುಷ್ಕರ ಹೂಡಿದ್ದಾರೆ. ಸುಮಾರು 7 ಸಾವಿರ ಕೋಟಿ ರೂ. ಸಾಲ ಸಂಸ್ಥೆಯ ಮೇಲಿದೆ. ಜೆಟ್‌ನ ಈ ಸ್ಥಿತಿಯಲ್ಲಿ ನರೇಶ್‌ ಪಾಲು ಎಷ್ಟು? ಕಾಲಕ್ಕೆ ತಕ್ಕ ಬದಲಾವಣೆ ಮಾಡುವಲ್ಲಿ ವಿಳಂಬಿಸಿದ್ದು. ಜೆಟ್‌ ಸಂಸ್ಥೆಯನ್ನು ಸಾಲಮುಕ್ತಗೊಳಿಸಲು ನರೇಶ್‌ ತಮ್ಮಿಂದ ಸಾಧ್ಯವಿದ್ದ ಪ್ರಯತ್ನವನ್ನೆಲ್ಲ ಮಾಡಿದ್ದರು. ಆದರೆ ಸೋತಿದ್ದರು. ಈಗ ನರೇಶ್‌ ತಮ್ಮ ಬಳಿಯಿದ್ದ ಜೆಟ್‌ನ 51% ಷೇರನ್ನು ಬಿಟ್ಟುಕೊಟ್ಟಿದ್ದಾರೆ. ಜೆಟ್‌ನ ಸಾಲಗಳನ್ನು ಪೂರ್ತಿಯಾಗಿ ನರೇಶ್‌ ಅವರ ಷೇರಿನಿಂದ ತುಂಬಿಕೊಂಡ ಬಳಿಕ, ಸಿಬ್ಬಂದಿ ಕಡಿತ, ಸಂಸ್ಥೆಯ ಮಾರಾಟ ಇತ್ಯಾದಿಗಳ ಬಗ್ಗೆ ಬ್ಯಾಂಕ್‌ಗಳು ನಿರ್ಧರಿಸಲಿವೆ. ನರೇಶ್‌ ಮುಂದಿನ ಹಾದಿ? ಅದು ಅವರಿಗೂ ತಿಳಿದಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ