ಚೆನ್ನುಡಿ ಅಂಕಣ
ಈ ಪ್ರಪಂಚದಲ್ಲಿ ಮಾತೆಯೇ ಮಾನವನಿಗೆ ಮೊದಲ ಮಹಾ ಗುರು. ಸಣ್ಣ ಮಗುವಾಗಿರುವಾಗ ಆಹಾರ, ನಿದ್ರೆ, ನಾನಾ ಬಗೆಯ ಕರ್ತವ್ಯಗಳ ಬಗ್ಗೆ ಆಕೆಯೇ ಸೂಕ್ತ ಮಾರ್ಗದರ್ಶನ ನೀಡುತ್ತಾಳೆ. ಮಾತೆ ನೀಡುವ ಮಾರ್ಗದರ್ಶನದ ಉಪದೇಶಗಳು ಸಮಗ್ರ ಮಾನವ ಜನಾಂಗಕ್ಕೇ ಸೂಕ್ತ ಪಥ ದರ್ಶನ ಮಾಡಿಸಬಲ್ಲವು ಎಂಬುದನ್ನು ನಿರೂಪಿಸುವ ಒಂದು ಹೃದಯಸ್ಪರ್ಶಿ ಪ್ರಸಂಗ ಇಲ್ಲಿದೆ.
ಉತ್ತರ ಪ್ರದೇಶದಲ್ಲಿ ಸುಪ್ರಸಿದ್ಧ ಚಕ್ರವರ್ತಿಯಾಗಿದ್ದ ರಾಜಾ ಗೋಪಿಚಂದ್ರನು ಗುರು ಶ್ರೀ ಗೋರಖನಾಥರ ಉಪದೇಶಗಳಿಂದ ಪ್ರಭಾವಿತನಾಗಿ ಸಂಸಾರದಿಂದ ವಿರಕ್ತನಾಗಿಬಿಟ್ಟ. ತನ್ನ ಮಾತೆಯ ಅನುಮತಿ ಪಡೆದು ಸನ್ಯಾಸಿಯಾಗಿ ಬಿಟ್ಟ. ಪುಣ್ಯಕ್ಷೇತ್ರ, ಅರಣ್ಯ, ಪರ್ವತ ಪ್ರದೇಶಗಳಲ್ಲಿ ವಿಹರಿಸುತ್ತಾ ಅನೇಕ ದಿನ, ವಾರಗಳ ಬಳಿಕ, ಮತ್ತೆ ತನ್ನ ರಾಜ್ಯಕ್ಕೆ ಹಿಂತಿರುಗಿದ. ಕೈಯಲ್ಲೊಂದು ಭಿಕ್ಷಾ ಪಾತ್ರೆ ಹಿಡಿದು, ಅರಮನೆಯ ಬಾಗಿಲ ಬಳಿ ನಿಂತು 'ಅಲಖ್ ನಿರಂಜನ್' ಎಂದು ಜೋರಾಗಿ ಘೋಷಿಸಿದ. ಈ ಘೋಷಣೆಯನ್ನು ಆಲಿಸಿದ ಆತನ ತಾಯಿ ಭಿಕ್ಷೆ ನೀಡಲೆಂದು ಅರಮನೆಯಿಂದ ಹೊರಗೆ ಬಂದರು.
ಆಗ ಗೋಪಿಚಂದ್ರನು ತನ್ನ ಭಿಕ್ಷಾ ಪಾತ್ರೆಯನ್ನು ತಾಯಿಯ ಎದುರು ಚಾಚಿ, 'ಅಮ್ಮಾ ತಾಯೀ, ನನಗೆ ಭಿಕ್ಷೆ ನೀಡಿ' ಎಂದು. ಆ ತಾಯಿ ತಮ್ಮ ಸೀರೆಯ ಸೆರಗಿನಿಂದ ಆರಿಸಿದ ಮೂರು ಅಕ್ಕಿಯ ಕಾಳುಗಳನ್ನು ಆತನ ಭಿಕ್ಷಾ ಪಾತ್ರೆಯೊಳಗೆ ಪ್ರೀತಿಪೂರ್ವಕವಾಗಿ ಹಾಕಿದಳು. ಗೋಪಿಚಂದ್ರನು ಕಾರಣ ಕೇಳಿದಾಗ, ಆ ಮಾತೆಯು ಹೀಗೆ ವಿವರಿಸಿದರು- 'ನಾನು ನಿನ್ನ ತಾಯಿಯಾಗಿದ್ದೇನೆ. ನಾನು ನಿನಗೆ ನೀಡಿದ ಮೂರು ಕಾಳುಗಳೆಂದರೆ ಮೂರು ಅಮೂಲ್ಯ ವಚನಗಳಾಗಿವೆ. ನೀನು ಅವುಗಳ ಪಾಲನೆ ಮಾಡಬೇಕಾಗಿದೆ. ಮೊದಲನೆಯದಾಗಿ ನೀನು ಎಲ್ಲೇ ಇದ್ದರೂ ಈ ಮನೆಯಲ್ಲಿದ್ದಂತೆಯೇ ಸುರಕ್ಷಿತನಾಗಿರಬೇಕು. ಎರಡನೆಯದಾಗಿ ನೀನು ಅರಮನೆಯಷ್ಟೇ ರುಚಿಕರ-ಭೋಜನ ಮಾಡಬೇಕು. ಮೂರನೆಯದಾಗಿ ನೀನು ಅರಮನೆಯಷ್ಟೇ ಸೌಕರ್ಯದ ಹಾಸಿಗೆಯಲ್ಲಿ ಮಲಗತಕ್ಕದ್ದು.
ಗೋಪಿಚಂದ್ರನಿಗೆ ತಾಯಿಯ ಮಾತಿನ ರಹಸ್ಯ ತಿಳಿಯಲಿಲ್ಲ. ಆತ ಪ್ರಶ್ನಿಸಿದ- 'ಅಮ್ಮಾ, ಅದು ಹೇಗೆ ಸಾಧ್ಯವಮ್ಮಾ? ನಾನೀಗ ರಾಜನಲ್ಲವಷ್ಟೆ'. ಆಗ ತಾಯಿ ಆತನಿಗೆ ಹೇಳಿದರು- 'ನೋಡು ಮಗನೇ, ನಾನಂದ ವಚನಗಳನ್ನು ಪಾಲನೆ ಮಾಡಲು ನಿನಗೆ ಸೇವಕರ ಅಗತ್ಯವಿಲ್ಲ. ನಿನ್ನನ್ನು ಕ್ರೋಧ, ಲೋಭ, ಮಾಯೆ, ಗರ್ವ, ಕಪಟವೆಂಬ ಶತ್ರುಗಳು ಆಕ್ರಮಿಸಿದಾಗ, ಅವರನ್ನು ಸೋಲಿಸಲು ಸತ್ಸಂಗ, ಸದ್ವಿಚಾರ ಮತ್ತು ಸದಾಚಾರಗಳನ್ನು ಇರಿಸಿಕೊಳ್ಳಬೇಕು'.
ಗೋಪಿಚಂದ್ರನು ಮತ್ತೆ ಪ್ರಶ್ನಿಸಿದ- 'ಕಾಡಿನಲ್ಲಿ ನನಗೆ ಒಳ್ಳೆಯ ಊಟ ತಯಾರಿಸುವವರು ಯಾರು?' ಆಗ ಮಾತೆ ನುಡಿದರು- 'ನೀನು ಧ್ಯಾನ ಮತ್ತು ಯಾಗದಲ್ಲಿ ಇಡೀ ದಿನ ಕಳೆದಾಗ ಜೋರಾಗಿ ಹಸಿವಾಗುವುದು, ಆಗ ದೊರೆತ ಊಟವೇ ರುಚಿಕರವೆನಿಸುವುದು. ದುಡಿದು ದಣಿದ ನೀನು ಎಲ್ಲೇ ಮಲಗಿದರೂ ಸುಖ ನಿದ್ರೆ ಆವರಿಸುವುದು'.
ಮಾತೆ ನೀಡಿದ ಈ ಮೂರು ಅಮೂಲ್ಯ ವಚನಗಳಿಂದ ಗೋಪಿಚಂದ್ರನ ಜ್ಞಾನಚಕ್ಷ ುಗಳು ತೆರೆದುಕೊಂಡವು. ಆತ ಜ್ಞಾನಾರಾಧನೆಯ ಪಥದಲ್ಲಿ ಹೊರಟೇ ಬಿಟ್ಟ.
ಮಾನವನ ಬದುಕಿನ ಸಾಫಲ್ಯದ ರಹಸ್ಯವಿಲ್ಲಿದೆ. ನಾನಾ ಬಗೆಯ ಕರ್ತವ್ಯಗಳಿಂದ ದಣಿವಾದಾಗ ಆಹಾರ ರುಚಿಕರವೆನಿಸುವುದು ಸಹಜ. ದಿನವಿಡೀ ದುಡಿದವನಿಗೆ ಎಲ್ಲೇ ಮಲಗಿದರೂ ಆಯಾಸದಿಂದ ಒಳ್ಳೆಯ ನಿದ್ರೆ ಬರುವುದೂ ಸಹಜ. ಸತ್ಸಂಗ, ಸದ್ವಿಚಾರ, ಸದಾಚಾರಗಳಿದ್ದಾಗ ಆತಂಕ, ಶತ್ರುಗಳಿಗೆ ಅಂಜಬೇಕಾಗಿಲ್ಲ. ಮಾತೆಯ ಇಂತಹ ಅಮೂಲ್ಯ ಉಪದೇಶಗಳಿಂದ ಜೀವನ ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ.
-ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ